ಇಣುಕದ ಮಳೆ, ಸುಡುತ್ತಿದೆ ಇಳೆ
ಬೆಂಗಳೂರು : ರಾಜ್ಯದಲ್ಲಿ ಮಳೆ ಇನ್ನೂ ಇಣುಕಿಲ್ಲ. ಬಿಸಿಲಿನ ಪಾರುಪತ್ಯವೇ ಮುಂದುವರಿದಿದೆ. ಕಾದಿರುವ ಇಳೆಗೆ ತಂಪೆರೆವ ಮಳೆಗಾಗಿ ಜನ ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಈ ಮಧ್ಯೆ ರಾಜ್ಯದ ಜಲಾಶಯಗಳ ನೀರಿನ ಮಟ್ಟವೂ ಕೊಂಚ ಕೊಂಚವಾಗಿ ಕ್ಷೀಣಿಸುತ್ತಿದೆ.
ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರದಲ್ಲಿ ನೀರಿನ ಮಟ್ಟ ಇಳಿಮುಖವಾಗುತ್ತಿದೆ. ನೀರಿನಲ್ಲಿ ಮುಳುಗಿರುವ ವೇಣುಗೋಪಾಲ ಸ್ವಾಮಿ ದೇವಾಲಯದ ಮೇಲ್ಗೋಪುರ ಮತ್ತೆ ಕಾಣುತ್ತಿದೆ. ಈ ಮಧ್ಯೆ ರಾಜ್ಯದಲ್ಲಿ ಒಣಹವೆ ಮುಂದುವರಿದಿದೆ.
ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಅನೇಕ ಕಡೆಗಳಲ್ಲಿ ಗರಿಷ್ಠ ಉಷ್ಣಾಂಶ ಸಾಮಾನ್ಯ ಮಟ್ಟಕ್ಕಿಂತಲೂ ಹೆಚ್ಚಾಗಿತ್ತು. ರಾಜ್ಯದ ಅತಿ ಹೆಚ್ಚು ಉಷ್ಣಾಂಶ 41 ಡಿಗ್ರಿ ಸೆಲ್ಸಿಯಸ್ ರಾಯಚೂರಿನಲ್ಲೂ ಕನಿಷ್ಠ ಉಷ್ಣಾಂಶ 19.6 ಡಿಗ್ರಿ ಸೆಲ್ಸಿಯಸ್ ಬೆಳಗಾವಿಯಲ್ಲೂ ದಾಖಲಾಗಿತ್ತು.
ಮುನ್ಸೂಚನೆಯಂತೆ ರಾಜ್ಯದೆಲ್ಲೆಡೆ ಒಣಹವೆ ಮುಂದುವರಿಯಲಿದೆ. ಬಿಸಿಲು ಸುಡಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನಿರ್ಮಲವಾದ ಆಕಾಶ ಇದ್ದು ಗರಿಷ್ಠ ತಾಪಮಾನ 36 ಡಿಗ್ರಿಯನ್ನೂ ದಾಟುವ ಸಾಧ್ಯತೆ ಇದೆ ಎಂದಿದೆ ಹವಾಮಾನ ವೀಕ್ಷಣಾಲಯದ ವರದಿ.