ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಬಿಕರಿ, ಮರು ಪರೀಕ್ಷೆನಡೆಸಲು ಪೋಷಕರ ಒತ್ತಾಯ
ಬೆಂಗಳೂರು : ಜೀವನದ ಮೊದಲ ಮಜಲು ಎನ್ನಬಹುದಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಇಂಗ್ಲಿಷ್ ಮತ್ತು ವಿಜ್ಞಾನ ಪತ್ರಿಕೆಗಳು ಒಂದು ಸಾವಿರ ರುಪಾಯಿಗೂ ಹೆಚ್ಚು ಬೆಲೆಗೆ ಬಿಕರಿಯಾಗಿವೆ. ಪರೀಕ್ಷೆಯಲ್ಲಿ ಕೊಡಲಾದ ಪ್ರಶ್ನೆ ಪತ್ರಿಕೆಯ ಯಥಾವತ್ತು ಪ್ರಶ್ನೆಗಳು ಕೊಂಡ ಪ್ರಶ್ನೆ ಪತ್ರಿಕೆಗಳಲ್ಲೂ ಇದ್ದವಂತೆ. ಪ್ರಶ್ನೆ ಪತ್ರಿಕೆ ಬಯಲಾಗಿರುವ ಸುದ್ದಿ ರಾಜ್ಯದ ತುಂಬೆಲ್ಲ ಹಬ್ಬಿದ್ದು, ಪೋಷ ಕರು ಮರು ಪರೀಕ್ಷೆಗೆ ಒತ್ತಾಯಿಸುತ್ತಿದ್ದಾರೆ.
ಬಿಕರಿಯಾದ ಪ್ರಶ್ನೆ ಪತ್ರಿಕೆಗಳನ್ನು ಕೈಯಲ್ಲಿ ಬರೆಯಲಾಗಿತ್ತು. ಕೆಲವು ಪೋಷಕರು ಮಾಧ್ಯಮಗಳಿಗೂ ಪರೀಕ್ಷೆ ಪ್ರಾರಂಭವಾಗುವ ಮುನ್ನವೇ ಪ್ರಶ್ನೆ ಪತ್ರಿಕೆಗಳನ್ನೂ ಒದಗಿಸಿ, ಅ ಬಯಲಾಗಿರುವ ವಿಷಯವನ್ನು ಪ್ರಕಟಿಸುವಂತೆ ಆಗ್ರಹಿಸಿದ್ದಾರೆ. ಇಂಡಿಯಾಇನ್ಫೋಗೆ ದೂರವಾಣಿ ಮಾಡಿದ ಬೆಂಗಳೂರಿನ ರಮೇಶ್, ಇಂಗ್ಲಿಷ್ ಹಾಗೂ ವಿಜ್ಞಾನ ಪ್ರಶ್ನೆ ಪತ್ರಿಕೆಗಳು, ಬಿಕರಿಯಾಗಿದ್ದ ಪ್ರಶೆಪತ್ರಿಕೆಗಳಲ್ಲಿನ ಪ್ರಶ್ನೆಗಳನ್ನೇ ಒಳಗೊಂಡಿದ್ದವು. ಎಲ್ಲೋ ಕೆಲವು ಪದಗಳು ಮಾತ್ರ ಬದಲಾಗಿದ್ದವು ಎಂದು ತಿಳಿಸಿದರು. ಅಷ್ಟೇ ಅಲ್ಲದೆ ಸರ್ಕಾರ ಮರು ಪರೀಕ್ಷೆ ನಡೆಸಲೇಬೇಕು. ಇಲ್ಲವಾದರೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಮಕ್ಕಳಿಗೆ ಅನ್ಯಾಯವಾಗಲಿದೆ ಎಂದು ಅಲವತ್ತುಕೊಂಡರು.
ವಿಶ್ವನಾಥ್ ಮುಗುಮ್ಮು : ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಚ್.ವಿಶ್ವನಾಥ್ ಜನರ ಈ ಆಗ್ರಹಕ್ಕೆ ಸೊಪ್ಪು ಹಾಕುತ್ತಿಲ್ಲ. ಸೂಕ್ಷ್ಮ ಪರೀಕ್ಷಾ ಕೇಂದ್ರಗಳಲ್ಲಿ ಕೆಮೆರಾ ಇಟ್ಟಿದ್ದೇವೆ. ಸಿಬ್ಬಂದಿ ಕೂಡಾ ತೀವ್ರ ನಿಗಾ ಇಟ್ಟಿದ್ದಾರೆ. ಯಾರೋ ಕೈಯಲ್ಲಿ ಬರೆದು ಮಾರುಕಟ್ಟೆಯಲ್ಲಿ ಮಾರಿದ ಪ್ರಶ್ನೆಪತ್ರಿಕೆಗಳನ್ನು ಮುಂದಿಟ್ಟುಕೊಂಡು ಮರು ಪರೀಕ್ಷೆ ನಡೆಸಿ ಎನ್ನುವುದು ಸರಿಯಲ್ಲ ಎಂಬುದು ವಿಶ್ವನಾಥ್ ವಾದ.
ಮುಂದಿನ ವರ್ಷದಿಂದ ಹೊಸ ಪದ್ಧತಿ : ಬಿಕರಿಯಾದ ಪ್ರಶ್ನಪತ್ರಿಕೆಗಳು ಕೈಯಲ್ಲಿ ಬರೆಯಲ್ಪಟ್ಟವು ಎಂಬ ಒಂದೇ ಕಾರಣಕ್ಕೆ ಸರ್ಕಾರ ಪ್ರಶ್ನೆಪತ್ರಿಕೆ ಬಹಿರಂಗವಾಗಿಲ್ಲ ಎನ್ನುತ್ತಿದೆ. ಇದು ಸರಿಯಲ್ಲ ಎಂಬ ಪ್ರಶ್ನೆ ಗುರುವಾರ ವಿಧಾನಸಭೆಯಲ್ಲೂ ಪ್ರತಿಧ್ವನಿಸಿತು. ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಆಗುವ ಅನ್ಯಾಯ ತಪ್ಪಿಸುವಂತೆ ಆಗ್ರಹ ಹೊರಬಿತ್ತು. ಈ ಕಾರಣಕ್ಕಾಗೇ ಮುಂದಿನ ವರ್ಷದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೊಸ ಪದ್ಧತಿ ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಕೃಷ್ಣ ಹೇಳಿದರು.
ಆದರೆ ಈಗ ಆಗಿರುವ, ಆಗುತ್ತಿರುವ ಅನ್ಯಾಯಕ್ಕೆ ವಿಶ್ವನಾಥ್ ಏನಾದರೂ ಮಾಡಲೇಬೇಕಲ್ಲವೇ? ಅವರಿಂದ ಉತ್ತಿ ಸಿಕ್ಕುತ್ತಿಲ್ಲ.
(ಇನ್ಫೋ ವಾರ್ತೆ)