ಶ್ರೀಲಂಕಾಕ್ಕೆ ಓಡಿಹೋಗಲು ಪ್ರಯತ್ನಿಸಿ ಸಿಕ್ಕಿಬಿದ್ದ ಮಾರನ್
ಚಾಮರಾಜನಗರ : ತಮಿಳು ಉಗ್ರ ಮಾರನ್ ಬಂಧನದಿಂದಾಗಿ ವೀರಪ್ಪನ್ ತಮಿಳು ಉಗ್ರರೊಂದಿಗೆ ಶ್ರೀಲಂಕಾಕ್ಕೆ ಪರಾರಿಯಾಗಲು ಸಿದ್ಧತೆ ನಡೆಸಿರುವುದು ಸ್ಪಷ್ಟವಾಗಿದೆ.
ಫೆ. 2 ರಂದು ಪೊಲೀಸರೊಂದಿಗೆ ನಡೆದ ಗುಂಡಿನ ಮುಖಾಮುಖಿಯ ನಂತರ ವೀರಪ್ಪನ್ನೊಂದಿಗೆ ಉಂಟಾದ ಮನಸ್ತಾಪದಿಂದ ಬೇರ್ಪಟ್ಟು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಗಿ ತಮಿಳು ಉಗ್ರ ಮಾರನ್ ಹೇಳಿದ್ದಾನೆ. ಕೇರಳ ಮೂಲಕ ಶ್ರೀಲಂಕಾಕ್ಕೆ ಪರಾರಿಯಾಗುವುದು ಮಾರನ್ ಯೋಜನೆ. ಆದರೆ, ಕೇರಳ ಅರಣ್ಯ ಪ್ರವೇಶಿಸಿದರೆ ಅಪಾಯ ಖಚಿತ ಎಂದು ವೀರಪ್ಪನ್ ಎಚ್ಚರಿಕೆ ನೀಡಿದರೂ, ಮಾರನ್ ಬಲವಂತದ ನಂತರವೇ ವೀರಪ್ಪನ್ ಕೇರಳದ ಕಾಡನ್ನು ಪ್ರವೇಶಿಸಿದ. ಇದೇ ಸಂದರ್ಭದಲ್ಲಿ ಪೊಲೀಸರ ಕಣ್ಣಿಗೆ ಬಿದ್ದು ಗುಂಡಿನ ಪೆಟ್ಟನ್ನೂ ತಿಂದ.
ಈ ಘಟನೆಯಲ್ಲಿ ವೀರಪ್ಪನ್ ಹಾಗೂ ಸೇತುಕುಳಿ ಗೋವಿಂದನ್ ಗಾಯಗೊಂಡಿರುವುದಾಗಿ ಮಾರನ್ ತಿಳಿಸಿದ್ದಾನೆ. ಈ ಘಟನೆಗೆ ನೀನೇ ಕಾರಣ ಎಂದು ವೀರಪ್ಪನ್ ಮಾರನ್ ಮೇಲೆ ಕೋಪಗೊಂಡು ತನ್ನ ಅನುಚರರೊಂದಿಗೆ ಮಾರನ್ ಸಂಬಂಧ ಕಡಿದುಕೊಂಡು ಹೊರಟು ಹೋಗಿದ್ದಾನೆ. ಈ ಸಂದರ್ಭದಲ್ಲಿಯೇ ಮಾರನ್ ಪೊಲೀಸರ ಅತಿಥಿಯಾಗಿದ್ದಾನೆ.
ಕಾರ್ಯಾಚರಣೆ ನಿಲ್ಲುವುದಿಲ್ಲ : ನರಹಂತಕ ವೀರಪ್ಪನ್ ಬಂಧನದೊಂದಿಗೇ ಎಸ್ಟಿಎಫ್ ಕಾರ್ಯಾಚರಣೆ ಕೊನೆಗೊಳ್ಳುವುದು. ಆವರೆಗೆ ಕಾರ್ಯಾಚ ರಣೆ ನಿಲ್ಲುವುದಿಲ್ಲ ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಮೊನ್ನೆಯ ಕಾರ್ಯಾಚರಣೆಯಲ್ಲಿ ವೀರಪ್ಪನ್ ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದಾನೆ. ಕಾಡುಗಳ್ಳನ ತಂಡ ವಿಭಜನೆಗೊಂಡಿದ್ದು, ಅನುಚರರು ವೀರಪ್ಪನ್ನಿಂದ ದೂರವಾಗಿದ್ದಾರೆ ಎಂದು ಮಂಗಳವಾರ ಗುಲ್ಬರ್ಗಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ ಹೇಳಿದರು. ಬಂಧಿತ ತಮಿಳು ಉಗ್ರ ಮಾರನ್, ವೀರಪ್ಪನ್ ಬಂಧನಕ್ಕೆ ಹಾಗೂ ಆವನು ಬಚ್ಚಿಟ್ಟಿರುವ ಸಂಪತ್ತನ್ನು ಪತ್ತೆ ಹಚ್ಚಲು ತಮಿಳುನಾಡು ಪೊಲೀಸರಿಗೆ ನೆರವು ನೀಡಲಿದ್ದಾನೆ ಎಂದರು.
ರಾಜ್ ಬಿಡುಗಡೆಗೆ ಹಣ ಕೊಟ್ಟಿಲ್ಲ : ಕಾಡುಗಳ್ಳ ವೀರಪ್ಪನ್ಗೆ ಹಣ ಸಂದಾಯ ಮಾಡಿ ರಾಜ್ರನ್ನು ಬಿಡಿಸಿಕೊಳ್ಳಲಾಗಿದೆ ಎಂದು ನ್ಯಾಯಾಂಗ ಬಂಧನದಲ್ಲಿರುವ ಮಾರನ್ ಹೇಳಿದ್ದಾನೆ ಎನ್ನುವ ವರದಿಗಳನ್ನು ತಮಿಳುನಾಡು ಪೊಲೀಸ್ ಮಹಾ ನಿರ್ದೇಶಕ ಆರ್. ರಾಜಗೋಪಾಲ್ ನಿರಾಕರಿಸಿದ್ದಾರೆ.
ಮಂಗಳವಾರ ಬಿಡುಗಡೆಯಾದ ಹೇಳಿಕೆಯಾಂದರಲ್ಲಿ ರಾಜಗೋಪಾಲ್ ಈ ವಿಷಯ ತಿಳಿಸಿದ್ದಾರೆ. ಇಂಥಾ ಕಪೋಲ ಕಲ್ಪಿತ ಹಾಗೂ ಸತ್ಯಕ್ಕೆ ದೂರವಾದ ವದಂತಿಗಳಿಂದ ನ್ಯಾಯಾಂಗ ಕಾರ್ಯಕ್ಕೆ ಅಡ್ಡಿ ಉಂಟಾಗಬಹುದೆಂದು ಎಂದು ಅವರು ಹೇಳಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ
/
ವೀರಪ್ಪನ್
ಶಿಕಾರಿ