ವಾಟಾಳ್ ಅಧ್ಯಕ್ಷತೆಯಲ್ಲಿ ಗಡಿನಾಡು ಕನ್ನಡ ಹಿತರಕ್ಷಣಾ ಮಂಡಳಿ
ಬೆಂಗಳೂರು : ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಅಧ್ಯಕ್ಷತೆಯಲ್ಲಿ ಗಡಿನಾಡು ಕನ್ನಡ ಹಿತರಕ್ಷಣಾ ಮಂಡಳಿ ಅಸ್ತಿತ್ವಕ್ಕೆ ಬಂದಿದ್ದು , ಗಡಿನಾಡು ಹಾಗೂ ಹೊರನಾಡು ಕನ್ನಡಿಗರ ಸಮಸ್ಯೆಗಳನ್ನು ಕುರಿತು ಮಂಡಳಿ ಅಧ್ಯಯನ ನಡೆಸುವುದು.
ಮಂಡಳಿಗೆ ಹಸಿರು ನಿಶಾನೆ ತೋರಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಾಟಾಳ್ ಮಾತನಾಡುತ್ತಿದ್ದರು. ಅಧ್ಯಯನದ ಸಮಗ್ರ ವರದಿಯನ್ನು ಮಂಡಳಿ ಸರ್ಕಾರಕ್ಕೆ ಸಲ್ಲಿಸುವುದು. ಮಂಡಳಿಗೆ 50 ಜನ ಸದಸ್ಯರನ್ನು ನೇಮಕ ಮಾಡಲಾಗುವುದು. ಅವರು ಗಡಿ ಪ್ರದೇಶಗಳ ಕನಿಷ್ಠ ಸಾವಿರ ಹಳ್ಳಿಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಅಧ್ಯಯನ ನಡೆಸುವರು. ಮಾರ್ಚ್ 3 ರಂದು ಬೆಳಗಾವಿ ಜಿಲ್ಲೆಯ ಕಾರ್ಯಕ್ಷೇತ್ರದಲ್ಲಿ ಮಂಡಳಿಯ ಕಾರ್ಯ ಚಟುವಟಿಕೆ ಪ್ರಾರಂಭಗೊಳ್ಳುವುದು ಎಂದರು.
ಸಂಪೂರ್ಣ ವರದಿ ನೀಡುವ ಮೊದಲೇ ಗಡಿನಾಡು ಅಧ್ಯಯನ ಆಯೋಗವನ್ನು ರದ್ದು ಪಡಿಸುವ ಮೂಲಕ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಜನತೆಯ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಆಯೋಗಕ್ಕೆ ಅಧ್ಯಕ್ಷರನ್ನು ಬದಲಿಸಬೇಕು ಎಂದು ಅವರಿಗನ್ನಿಸಿದ್ದರೆ ಬದಲಿಸಬಹುದಿತ್ತು . ಸರ್ಕಾರ ಕೇವಲ ಮಧ್ಯಂತರ ವರದಿಗೇ ತೃಪ್ತಿಗೊಳ್ಳುವ ಬದಲು ಪೂರ್ಣ ವರದಿ ತರಿಸಿಕೊಳ್ಳಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟರು. ಮಧ್ಯಂತರ ವರದಿಯನ್ನು ಸರ್ಕಾರ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಗಡಿನಾಡ ಮುಖಂಡ ಹಾಗೂ ಬೆಳಗಾವಿಯ ಮಾಜಿ ಮೇಯರ್ ಸಿದ್ದನಗೌಡ ಪಾಟೀಲ್, ಸುಧೀಂದ್ರರಾವ್ ಕಸಬೆ, ಎಸ್.ವಿ. ಪಾಟೀಲ್, ಕಸಾಪ ಅಧ್ಯಕ್ಷ ಎನ್. ಬಸವಾರಾಧ್ಯ, ಕಸಾಪದ ಮಾಜಿ ಅಧ್ಯಕ್ಷ ಜಿ. ನಾರಾಯಣ ಹಾಗೂ ಕನ್ನಡ ಚಳವಳಿಕಾರ ಪ್ರಭಾಕರ ರೆಡ್ಡಿಯವರನ್ನು ವಾಟಾಳ್ ನಾಗರಾಜ್ ಸನ್ಮಾನಿಸಿದರು.
(ಇನ್ಫೋ ವಾರ್ತೆ)