ಹೊಸ ಬಣ್ಣವಿಲ್ಲದ ಬಿಸಿಲಬಿಲ್ಲು
ನಿನ್ನೆ ಹುಣ್ಣಿಮೆ ಆಗಿ ಹೋಯಿತು. ಟೆರೇಸಿನ ವೈರುಗಳೆಡೆಯಲ್ಲಿ, ಅಂಗಳದ ಚಟ್ಟಿ ಹೂವು- ಎಲೆಗಳ ನಡುವೆ ಬೆಳದಿಂಗಳು ಬರೆದ ಚಿತ್ತಾರವನ್ನು ಇನ್ನೊಂದೆರಡು ದಿನ ಮಾತ್ರ ನೋಡಬಹುದು. ಮತ್ತೆ ಹತ್ತು ದಿನವಾದರೂ ಕಾಯಬೇಕು.
ಎಲ್ಲಿಂದಲೋ ಕೈಯ್ಯಲ್ಲೊಂದು ಕೆಲಸದ ಆರ್ಡರ್ ಹಿಡಿದುಕೊಂಡು ಬೆಂಗಳೂರಿನಂತಹ ಮೆಗಾಸಿಟಿಗಳಿಗೆ ವಲಸೆ ಬಂದವರ ಮನೆಬಾಗಿಲಿನಲ್ಲಿ ಪತ್ರಗಳು ಬಿದ್ದಿವೆ. ಊರಿನಲ್ಲಿ ಜಾತ್ರೆ, ಧ್ವಜಾರೋಹಣ, ಭೂತ ಕೋಲ, ನೇಮ... ಹೀಗೆ. ಬದಿಯಲ್ಲಿ ತುರುಕಿಟ್ಟ ಸೂಟ್ಕೇಸ್ ಊರಿಗೆ ಹೋಗಲು ರೆಡಿಯಾಗುತ್ತಿದೆ. ಆ ಊರಿನ ಪುಟ್ಟ ಪುಟ್ಟಿಯರು ಬೆಂಗಳೂರು ಮಾಮ ಜಾತ್ರೆಗೆ ಬರುವ ದಾರಿ ನೋಡುತ್ತಿದ್ದಾರೆ.
ಹಾಗೆ ಬೆಂಗಳೂರಿನಲ್ಲಿ ಟೆಂಪರೇಚರ್ 21ಕ್ಕೆ ಧಾವಿಸಿ ಮತ್ತೆ ತನ್ನ ಉಸಿರು ತಗ್ಗಿಸಿದೆ. ಆದರೆ ಸೆಕೆಗಾಲ ಬಂದದ್ದಂತೂ ಸುಳ್ಳಲ್ಲ . ಸ್ವೆಟರ್, ಶಾಲು, ಸ್ಕಾರ್ಫ್ಗಳು ಕಪಾಟಿನಡಿಯಲ್ಲಿ ಸುಮ್ಮನೇ ಕುಳಿತಿವೆ - ಕೆಲಸವಿಲ್ಲದೆ. ಬರೀ ಒಣ ಹವೆಯ ವಿಜಯದ ಸುದ್ದಿಗೆ ಹೊಸ ಬಣ್ಣವೇನಿಲ್ಲ .
ಶುಕ್ರವಾರದ ಹವಾ : ದಿನದ ಕನಿಷ್ಠ ಉಷ್ಣಾಂಶ 10 ಡಿಗ್ರಿ ಸೆಲ್ಷಿಯಸ್ ಗುಲ್ಬರ್ಗಾದಲ್ಲಿ ದಾಖಲಾಗಿತ್ತು . ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ತಾಪಮಾನ ಕುಸಿತ ಕಂಡಿದ್ದರೆ, ಉಳಿದಂತೆ ಒಣಹವೆಯಲ್ಲಿ ಯಾವುದೇ ಬದಲಾವಣೆಗಳಿರಲಿಲ್ಲ . ಮುಂದಿನ ಎರಡೂ ದಿನಗಳಲ್ಲೂ ಒಣಹವೆ ಬದಲಾಗುವ ಯಾವುದೇ ಲಕ್ಷಣಗಳಿಲ್ಲ . ಶನಿವಾರ, ಬೆಂಗಳೂರಿನಲ್ಲಿ ಶುಭ್ರಾಕಾಶ. ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಷಿಯಸ್ ಆಸುಪಾಸಿನಲ್ಲಿ .