ಕಳಾಹೀನ ಕೃಷಿ : ಹೊಸ ಶೋಧಗಳಿಗೆ ನಬಾರ್ಡ್ ಅಧ್ಯಕ್ಷರ ಕರೆ
ಧಾರವಾಡ : ಕೃಷ್ಯುತ್ಪನ್ನಗಳ ಪ್ರಮಾಣದಲ್ಲಿ ಕುಸಿತ ಹಾಗೂ ಕೃಷಿಯಲ್ಲಿ ಲಾಭಾಂಶ ಕುಸಿಯುತ್ತಿರುವ ವಿಷಯದ ಬಗ್ಗೆ ಗಮನ ಹರಿಸುವಂತೆ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ನ ಅಧ್ಯಕ್ಷ ಯೋಗೇಶ್ ನಂದ ಕೃಷಿ ವಿಜ್ಞಾನಿಗಳಿಗೆ ಕರೆ ನೀಡಿದ್ದಾರೆ.
ಶುಕ್ರವಾರ, ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಘಟಿಕೋತ್ಸವ ಭಾಷಣ ಮಾಡುತ್ತಿದ್ದ ಅವರು, ಹೆಚ್ಚಿನ ಆದಾಯ ಲಭ್ಯವಿರುವ ಪದ್ಧತಿಗಳನ್ನು ಹಾಗೂ ಅತ್ಯಧಿಕ ಇಳುವರಿ ಕೊಡುವ ತಳಿಗಳನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಬೇಕು ಎಂದರು. ವಿವಿಧ ಪರಿಸರಗಳಿಗೆ ಸರಿಹೊಂದುವ ಕೃಷಿ ಪದ್ಧತಿಗಳನ್ನು ಗುರ್ತಿಸುವಂತೆಯೂ ಅವರು ಕರೆ ನೀಡಿದರು.
ಗುಜರಾತಿನಲ್ಲಿ ಸಂಭವಿಸಿದ ಭೂಕಂಪ ಹಾನಿಯನ್ನು ಪ್ರಸ್ತಾಪಿಸಿದ ಅವರು- ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಜೀವ ಹಾಗೂ ಆಸ್ತಿ ಹಾನಿ ಸಂಭವಿಸದಂತೆ ತಡೆಗಟ್ಟುವ ಉಪಾಯಗಳನ್ನೂ ವಿಜ್ಞಾನಿಗಳು ಶೋಧಿಸಬೇಕು. ಸಾಗಾಣಿಕಾ ಮತ್ತು ಸಂಗ್ರಹಣ ಪದ್ಧತಿಗಳಲ್ಲಿ ಸೋರಿಕೆ ಉಂಟಾಗುವಂತಹ ಸಾಂಪ್ರದಾಯಿಕ ಪದ್ಧತಿಗಳಿಗೆ ಗುಡ್ಬೈ ಹೇಳಿ, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ನಷ್ಟವನ್ನು ತಡೆಗಟ್ಟಬೇಕು ಎಂದರು.
ವಿಶ್ವ ವ್ಯಾಪಾರ ಸಂಸ್ಥೆಯ (ಡಬ್ಲ್ಯೂಟಿಓ) ಒಪ್ಪಂದ ಕುರಿತಾದ ವಿಷಯಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕು. ಇದರಿಂದಾಗಿ, ಡಬ್ಲ್ಯೂಟಿಓ ಬಗ್ಗೆ ತಿಳಿವಳಿಕೆ ಮೂಡಿಸಲು ಅನುಕೂಲವಾಗುತ್ತದೆ ಎಂದು ಡಬ್ಲ್ಯೂಟಿಓ ಕುರಿತು ಕೇಳಿಬರುತ್ತಿರುವ ಟೀಕೆಗಳ ಹಿನ್ನೆಲೆಯಲ್ಲಿ ಅವರು ಹೇಳಿದರು. ಮಾಹಿತಿ ತಂತ್ರಜ್ಞಾನದ ಎಲ್ಲಾ ಸಾಧ್ಯತೆಗಳನ್ನು ಕೃಷಿ ಕ್ಷೇತ್ರದಲ್ಲಿ ಬಳಸಿಕೊಳ್ಳುವಂತೆ ಅವರು ಕರೆ ನೀಡಿದರು.
ರಾಜ್ಯಪಾಲರಿಂದ ಪದವಿ ಪ್ರದಾನ : ಕೃಷಿ ವಿಜ್ಞಾನಗಳ 15 ನೇ ಘಟಿಕೋತ್ಸವ ಸಂದರ್ಭದಲ್ಲಿ ರಾಜ್ಯಪಾಲೆ ವಿ.ಎಸ್. ರಮಾದೇವಿ 615 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನಗಳನ್ನೂ ವಿತರಿಸಲಾಯಿತು. ರಾಜ್ಯ ಕೃಷಿ ಸಚಿವ ಟಿ.ಬಿ. ಜಯಚಂದ್ರ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಹಾಜರಿದ್ದರು.
(ಯುಎನ್ಐ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...