ಬಯಲು ಆಲಯದೊಳಗೆ ಕಟೀಲು ದುರ್ಗಾ ಪರಮೇಶ್ವರಿ
*ರಾಜು ಮಹತಿ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರ ಕಟೀಲು ಈಗ ವಿವಾದ ಕೇಂದ್ರ. ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಈ ಕ್ಷೇತ್ರಕ್ಕೆ ಪ್ರಸ್ತುತ ಮಂಗಳೂರು ಸಹಾಯಕ ಕಮಿಷನರ್ ಶಂಕರಪ್ಪನವರನ್ನು ಸರಕಾರ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ.
ಈ ನಡುವೆ ಕಾನೂನು ಸಮರವೂ ಮುಂದುವರೆದಿದೆ. ಕಳೆದ ಎರಡು ವರ್ಷಗಳಿಂದ ಇಲ್ಲಿ ಪೂಜಾಧಿಕಾರಕ್ಕಾಗಿ ದಾಯಾದಿ ಅರ್ಚಕರ ನಡುವೆ ಮುಸುಕಿನ ಗುದ್ದಾಟ ನಡೆದೇ ಇತ್ತು. ಆದರೆ ಮಂಗಳವಾರ ನಡೆಯಿತೆನ್ನಲಾದ ಹೊಡೆದಾಟದಿಂದ ಕಟೀಲು ದೇವಾಲಯದ ವಿವಾದ ಮತ್ತೆ ವಿಕೋಪಕ್ಕೆ ತಿರುಗಿದೆ. ದಾಯಾದಿ ಅರ್ಚಕರ ನಡುವಿನ ಹೊಡೆದಾಟದಿಂದ ಕಳೆದ ಎರಡು ದಿನಗಳ ಕಾಲ ಕಟೀಲಿನಲ್ಲಿ ಬಂದ್ ಆಚರಿಸಲಾಯಿತು.
ಹೊಡೆದಾಟಗಳ ಸಾಲು ದೂರುಗಳು - ಮಂಗಳವಾರದ ಹೊಡೆದಾಟದಲ್ಲಿ ಗಾಯಗೊಂಡಿರುವ ಹಿರಿಯ ಅರ್ಚಕ ಲಕ್ಷ್ಮಿ ನಾರಾಯಣ ಆಸ್ರಣ್ಣ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅವರ ವಿರೋಧಿ ಹರಿನಾರಾಯಣ ಆಸ್ರಣ್ಣ ಹೊಡೆದಾಟ ನಡೆದೇ ಇಲ್ಲ ಎನ್ನುತ್ತಾರೆ. ದೇವಸ್ಥಾನದ ಆಡಳಿತಾಧಿಕಾರಿ ಶಂಕರಪ್ಪ ಇದೊಂದು ಪ್ರಹಸನ ಎಂದು ಬಣ್ಣಿಸುತ್ತಾರೆ.
ಈ ನಡುವೆ ಲಕ್ಷ್ಮಿ ನಾರಾಯಣ ಆಸ್ರಣ್ಣರ ಬೆಂಬಲಿಗರು ತಮಗೆ ಹೊಡೆದರು ಎಂದು ಹರಿನಾರಾಯಣ ಆಸ್ರಣ್ಣರು ಪ್ರತಿ ದೂರು ನೀಡಿದ್ದಾರೆ. ಇದರಿಂದಾಗಿ ಬಜಪೆ ಪೊಲೀಸ್ ಠಾಣೆಯಲ್ಲಿ ಅರ್ಚಕರ ಎರಡೂ ಬಳಗಗಳ ದೂರುಗಳು ದಾಖಲುಗೊಂಡಿವೆ. ಮಂಗಳವಾರದ ಜಗಳದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಮತ್ತು ಅನುವಂಶಿಕ ಮೊಕ್ತೇಸರ ಲಕ್ಷ್ಮಿ ನಾರಾಯಣ ಆಸ್ರಣ್ಣರು ತಮಗೆ ಗಾಯವಾಗಿದೆ. ತಮ್ಮ ಮೇಲೆ ಹರಿನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ ಮತ್ತು ವಾಸುದೇವ ಆಸ್ರಣ್ಣರ ಗುಂಪು ಹಲ್ಲೆ ನಡೆಸಿತು ಎಂದು ದೂರಿದ್ದಾರೆ.
ಇದಕ್ಕೆ ಪ್ರತಿಯಾಗಿ ಹರಿನಾರಾಯಣ ಆಸ್ರಣ್ಣ ಅದೇ ಠಾಣೆಗೆ ನೀಡಿರುವ ದೂರಿನಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು, ವಾದಿರಾಜ ಭಟ್, ಎ.ಕೆ. ಪ್ರಸಾದ್ ಮತ್ತು ಈಶ್ವರ ಕಟೀಲು ತಮ್ಮ ಮೇಲೆ ಹಲ್ಲೆಗೆ ಪ್ರಯತ್ನಿಸಿದರು ಎಂದು ಹೇಳಿದ್ದಾರೆ. ನನ್ನ ಪೂಜೆಯ ಪಾಳಿಯಲ್ಲಿ ಬಂದ ಲಕ್ಷ್ಮಿನಾರಾಯಣ ಆಸ್ರಣ್ಣ ತಾವೇ ಪ್ರಸಾದ ವಿತರಿಸುವುದಾಗಿ ಹೇಳಿದರು. ಇದನ್ನು ನಾನು ಆಕ್ಷೇಪಿಸಿದೆ. ನಂತರ ಮಾತಿನ ಚಕಮಕಿ ನಡೆಯಿತು. ಆಗ ನನ್ನ ಮೇಲೆ ಹಲ್ಲೆ ನಡೆಸಲಾಯಿತು ಎಂದು ಹರಿನಾರಾಯಣ ಆಸ್ರಣ್ಣ ಹೇಳಿದ್ದಾರೆ.
ಜಗಳದ ಹಿಂದೆ ಇರಬಹುದಾದ ವ್ಯಾಪಾರೀ ಕಾರಣಗಳು - ಈ ಜಗಳದ ಹಿಂದೆ ಕಟೀಲು ಪೇಟೆಯ ಅಂಗಡಿ ಮಾಲಕರ ಕುಮ್ಮಕ್ಕು ಇದೆ. ದೇವಾಲಯಕ್ಕೆ ಕನಿಷ್ಠ ಬಾಡಿಗೆ ನೀಡಿ ಅಂಗಡಿ ನಡೆಸುತ್ತಿರುವ ಮಾಲಕರಿಗೆ ಬಾಡಿಗೆ ಹೆಚ್ಚಿಸುವ ಬಗ್ಗೆ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದರು. ಇಲ್ಲವೇ ಹರಾಜು ಹಾಕುವ ಮೂಲಕ ಅಂಗಡಿ ಕೊಳ್ಳುವಂತೆಯೂ ಆದೇಶಿಸಿದ್ದರು. ಇದರಿಂದ ವಿಚಲಿತರಾದ ವ್ಯಾಪಾರಿಗಳು ದಾಂಧಲೆಗೆ ಪ್ರೇರಣೆ ನೀಡಿದರು ಎನ್ನಲಾಗುತ್ತಿದೆ. ಲಕ್ಷಾಂತರ ರೂಪಾಯಿ ಆದಾಯವಿರುವ ದೇವಾಲಯದ ಮೇಲೆ ಹಿಡಿತ ಸಾಧಿಸಲು ಅರ್ಚಕ ಬಣಗಳು ನಡೆಸುತ್ತಿರುವ ಕಾದಾಟದಿಂದ ಈಗ ಕಟೀಲು ದೇವಸ್ಥಾನದ ಪರಿಸ್ಥಿತಿ ಪೂರಾ ಹದಗೆಟ್ಟಿದೆ.
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...