ಅಜರ್ ಹಾದಿಯಲ್ಲಿ ಜಡೇಜಾ : ಬಿಸಿಸಿಐ - ಕೇಂದ್ರ ಸರ್ಕಾರಕ್ಕೆ ನೋಟಿಸು
ನವದೆಹಲಿ : ಕ್ರಿಕೆಟ್ ಮೋಸದಾಟದ ಕಳಂಕ ಹೊತ್ತಿರುವ ಅಜಯ್ ಜಡೇಜಾ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಾಗೂ ಬಿಸಿಸಿಐಗೆ ದೆಹಲಿ ಹೈಕೋರ್ಟ್ ನೋಟಿಸ್ ಕಳುಹಿಸಿದೆ.
ಮಾರ್ಚ್ 29, 2001 ಗಡುವಿನೊಳಗೆ ಬಿಸಿಸಿಐ ಹಾಗೂ ಸರ್ಕಾರ ಪ್ರತಿಕ್ರಿಯೆ ನೀಡುವಂತೆ ನ್ಯಾಯಮೂರ್ತಿ ವಿಜೇಂದರ್ ಜೈನ್ ಗಡುವು ಗೊತ್ತು ಪಡಿಸಿದ್ದಾರೆ. ಬಿಸಿಸಿಐ ತಮ್ಮ ಕ್ರಿಕೆಟ್ ಕೆರಿಯರ್ ಮೇಲೆ ವಿಧಿಸಿರುವ 5 ವರ್ಷಗಳ ನಿಷೇಧ ಹಾಗೂ ಸಿಬಿಐ ತನಿಖೆ ಹೊರಿಸಿರುವ ಮೋಸದಾಟ ಕಳಂಕದ ಹಿನ್ನೆಲೆಯಲ್ಲಿ ಅರ್ಜುನ ಪ್ರಶಸ್ತಿಯನ್ನೇಕೆ ವಾಪಸ್ಸು ಪಡೆಯಬಾರದು ಎನ್ನುವ ಸರ್ಕಾರದ ನೊಟೀಸ್ಗಳನ್ನು ಪ್ರಶ್ನಿಸಿ, ಫೆ. 7 ರಂದು ಜಡೇಜಾ ಕೋರ್ಟ್ ಕಟ್ಟೆ ಹತ್ತಿದ್ದರು.
ಈ ಮುನ್ನ ಬಿಸಿಸಿಐನಿಂದ ಆಜೀವ ಬಹಿಷ್ಕಾರಕ್ಕೊಳಗಾಗಿರುವ ಮಾಜಿ ಕ್ರಿಕೆಟ್ ತಾರೆ ಅಜರುದ್ದೀನ್ ಕೂಡ, ತಮಗೆ ಅನ್ಯಾಯವಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿರುವುದನ್ನು ಇಲ್ಲಿ ಸ್ಮರಿಸಬಹುದು. ಮೋಸದಾಟ ಪ್ರಕರಣದಲ್ಲಿ ಆಪಾದನೆ ಹೊತ್ತಿದ್ದ ನಾಲ್ವರು ಆಟಗಾರರಲ್ಲಿ ಇಬ್ಬರು ಸರ್ಕಾರ- ಬಿಸಿಸಿಐ ತೀರ್ಮಾನವನ್ನು ಪ್ರಶ್ನಿಸಿ ನ್ಯಾಯಾಲಯದ ಕಟ್ಟೆ ಹತ್ತಿದಂತಾಯಿತು. ಇನ್ನುಳಿದಿರುವುದು ಮನೋಜ್ ಪ್ರಭಾಕರ್, ಅಜಯ್ ಶರ್ಮ ಮಾತ್ರ.
(ಯುಎನ್ಐ)