23 ಪ್ರಶ್ನೆಗಳ ಸಹಸ್ರಮಾನದ ಮೊದಲ ಜನಗಣತಿ ಪ್ರಾರಂಭ
ಬೆಂಗಳೂರು : ಒಂದು ಲಕ್ಷ 16 ಸಾವಿರ ಸರ್ಕಾರಿ ನೌಕರರು ಹೊಸ ಸಹಸ್ರಮಾನದ ಮೊದಲ ಜನಗಣತಿ ಕಾರ್ಯಕ್ಕೆ ಶುಕ್ರವಾರ ರಸ್ತೆಗಿಳಿದರು. ಮುಖ್ಯಮಂತ್ರಿ ಎಸ್. ಎಂ.ಕೃಷ್ಣ ಹಾಗೂ ರಾಜ್ಯಪಾಲರಾದ ವಿ.ಎಸ್.ರಮಾದೇವಿ ಕುಟುಂಬ ವರ್ಗದವರಿಂದಲೂ ಮಾಹಿತಿ ಸಂಗ್ರಹಿಸಲಾಯಿತು.
ಶುಕ್ರವಾರ ಮುಂಜಾನೆ ಪ್ರಾರಂಭವಾಗಿರುವ ಜನಗಣತಿ ಕಾರ್ಯ ಯಾವುದೇ ಹಿಚಿಕಿಚಿಯಿಲ್ಲದೆ ಮುಂದುವರೆದಿದೆ. ನಗರಸಭಾ ಆಯುಕ್ತ ಶಂತನು ಕನ್ಸಲ್ ಹಾಗೂ ಜನಗಣತಿ ನಿರ್ದೇಶನಾಲಯ ನಿರ್ದೇಶಕ ಎಚ್.ಶಶಿಧರ್ ಮುಖ್ಯಮಂತ್ರಿ ಕೃಷ್ಣ ಅವರ ನಿವಾಸ ಅನುಗ್ರಹಕ್ಕೆ ಭೇಟಿ ನೀಡಿ, 23 ಪ್ರಶ್ನೆಗಳನ್ನು ಕುಟಿುಂಬದ ಎಲ್ಲಾ ಸದಸ್ಯರಿಗೆ ಕೇಳಿ ಮಾಹಿತಿ ದಾಖಲಿಸಿದರು. ನಂತರ ರಾಜ್ಯಪಾಲರ ಮನೆಗೆ ಭೇಟಿ ಕೊಟ್ಟು ಅವರ ಹಾಗೂ ಕುಟುಂಬ ವರ್ಗದ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಎರಡನೇ ಹಂತದ ಈ ಜನಗಣತಿ ಪ್ರಕ್ರಿಯೆ ರಾಜ್ಯದಲ್ಲಿ ಫೆಬ್ರವರಿ 28ರವರೆಗೆ ನಡೆಯಲಿದೆ. ಅಂಗವಿಕಲರ ಬಗ್ಗೆ ಇದೇ ಪ್ರಥಮ ಬಾರಿಗೆ ಹೆಚ್ಚು ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ವೀರಶೈವ ಎಂಬ ಹೊಸ ಜಾತಿ ಕಾಲಂನ್ನು ಜನಗಣತಿ ಪಟ್ಟಿಯಲ್ಲಿ ಸೇರಿಸಬೇಕೆಂಬ ಕೆಲವರ ಒತ್ತಾಯಕ್ಕೆ ಸರ್ಕಾರ ಸೊಪ್ಪು ಹಾಕಲಿಲ್ಲ.
ಜನಗಣತಿ ಕಾರ್ಯದಲ್ಲಿ ತೊಡಗಿರುವವರ ಪೈಕಿ ಶೇ. 40ರಷ್ಟು ಮಹಿಳೆಯರಿದ್ದಾರೆ. ಆರ್ಥಿಕ, ಸಾಮಾಜಿಕ ಹಾಗೂ ಆರೋಗ್ಯದ ಒಟ್ಟಾರೆ ಚಿತ್ರಣವನ್ನು ಈ ಜನಗಣತಿ ನೀಡಲಿದೆ.
ಫೆಬ್ರವರಿ 9, ಜನಗಣತಿ ದಿನ : ಈ ಸಹಸ್ರಮಾನದ ಮೊದಲ ಜನಗಣತಿ ಪ್ರಾರಂಭವಾಗಿರುವ ಫೆಬ್ರವರಿ 9ನ್ನು ಜನಗಣತಿ ದಿನ ಎಂದು ಆಚರಿಸುವಂತೆ ಕೇಂದ್ರ ಸರ್ಕಾರ ಕರೆ ನೀಡಿದ್ದು, ಇದು ಶುಕ್ರವಾರದಿಂದಲೇ ಜಾರಿಗೆ ಬಂದಿದೆ ಎಂದು ಎಚ್.ಶಶಿಧರ್ ತಿಳಿಸಿದ್ದಾರೆ.
(ಯುಎನ್ಐ/ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...