ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪವಾಡಕ್ಕೆ ಇನ್ನು ಆಸ್ಪದವಿಲ್ಲ, ಅವಶೇಷದಡಿ ಸಿಗುವುದೆಲ್ಲಾ ಶವವೇ

By Staff
|
Google Oneindia Kannada News

ಭುಜ್‌ : ಇಂದಿಗೆ ಭೂಕಂಪ ಸಂಭವಿಸಿ 6 ದಿನಗಳೇ ಆಗಿ ಹೋಗಿವೆ. ಅಂತಾರಾಷ್ಟ್ರೀಯ ನೆರವು ತಂಡಗಳು, ಬಿ.ಎಸ್‌.ಎಫ್‌, ಸೇನಾಪಡೆ ಹಾಗೂ ಸ್ವಯಂ ಸೇವಕರು ಅತ್ಯಾಧುನಿಕ ಉಪಕರಣಗಳ ನೆರವಿನಿಂದ ಅಹೋರಾತ್ರಿ ಪರಿಹಾರ ಕಾಮಗಾರಿಯಲ್ಲಿ ತೊಡಗಿದ್ದರೂ ಕೂಡ ಕುಸಿದ ಅರ್ಧದಷ್ಟು ಕಟ್ಟಡಗಳಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯಲು ಸಾಧ್ಯವಾಗಿಲ್ಲ.

ಹೀಗಾಗಿ ಇನ್ನು ಮುಂದೆ ಕಟ್ಟಡಗಳ ಅಡಿ ಬದುಕುಳಿದಿರುವವರ ಸಾಧ್ಯತೆ ಸಂಪೂರ್ಣ ಕ್ಷೀಣಿಸಿದ್ದು, ಕೇವಲ ಶವಗಳನ್ನಷ್ಟೇ ಹೊರತೆಗೆಯಬೇಕು ಎಂದೂ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು ಹೇಳಿದ್ದಾರೆ. ಈ ಮಧ್ಯೆ ಇಡೀ ಗುಜರಾತ್‌ ರಾಜ್ಯದೆಲ್ಲೆಡೆ ಕೊಳೆತ ಶವಗಳ ವಾಸನೆ ಹಬ್ಬುತ್ತಿದೆ. ಬಾಯಿಗೆ ಬಟ್ಟೆ ಕಟ್ಟಿಕೊಂಡು ಶವಗಳನ್ನು ಹೊರ ತೆಗೆಯುತ್ತಿರುವ ಸೇನಾಪಡೆಯ ಯೋಧರೂ ಸಾಂಕ್ರಾಮಿಕ ರೋಗದ ಭೀತಿಯಿಂದ ಹೆದರಿದ್ದಾರೆ. ಅವಿರತ ಕೆಲಸದಿಂದ ಬಳಲಿದ್ದಾರೆ.

ಭೀಕರ ಭೂಕಂಪ ಸಂಭವಿಸಿದ 80 ಗಂಟೆಗಳ ತರುವಾಯವೂ ಪವಾಡ ಸದೃಶವಾಗಿ ಹಲವರು ಬದುಕುಳಿದಿದ್ದಾರೆ. ಕುಸಿದ ಕಟ್ಟಡಗಳ ಭಗ್ನಾವಶೇಷಗಳಡಿಯಿಂದ ಎಳೆ ಕಂದಮ್ಮನಿಂದ ಹಿಡಿದು ವೃದ್ಧರವರೆಗೆ ಹಲವರನ್ನು ಪರಿಹಾರ ಕಾರ್ಯಪಡೆ ಯೋಧರು ರಕ್ಷಿಸಿದ್ದಾರೆ. ಆದರೆ, ಇನ್ನು ಪವಾಡಕ್ಕೆ ಆಸ್ಪದವಿಲ್ಲ, ಭಗ್ನಾವಶೇಷಗಡಿ ದೊರಕುವುದೆಲ್ಲಾ ಶವಗಳೇ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ ಮಂಗಳವಾರ ಬೆಳಗ್ಗೆ ಸತತ ಪರಿಶ್ರಮದಿಂದಾಗಿ ಸೇನಾ ಪಡೆ ಯೋಧರು ಏಳು ಜನರನ್ನು ಸಾವಿನ ದವಡೆಯಿಂದ ಪಾರುಮಾಡಿದ್ದರು. 6 ದಿನಗಳ ನಂತರವೂ ಬದುಕುಳಿದಿರುವವರನ್ನು ಪಾರು ಮಾಡಲು ಬ್ರಿಟನ್‌, ಜರ್ಮನ್‌, ರಷ್ಯ ಹಾಗೂ ಭಾರತೀಯ ಕಾರ್ಯತಂಡಗಳು ತಮ್ಮ ಕಾರ್ಯಾಚರಣೆ ಮುಂದುವರಿಸಿವೆ.

ಸಾವಿನ ಸಂಖ್ಯೆ ಹೆಚ್ಚಲು ಬಹುಮಹಡಿ ಕಟ್ಟಡಗಳೇ ಕಾರಣ : ಸುಧಾರಿತ ವಿನ್ಯಾಸದ ಬದಲಾಗಿ ಸಾಂಪ್ರದಾಯಿಕ ಮಾದರಿಯಲ್ಲಿ ಕಟ್ಟಿದ ಬಹುಮಹಡಿ ಕಟ್ಟಡಗಳು ಹಾಗೂ ಕಳಪೆ ಕಾಮಗಾರಿಯೇ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಭುಜ್‌ ಹಿಂದಿನಿಂದಲೂ ಭೂಕಂಪ ಪೀಡಿತ ಪ್ರದೇಶವಾಗಿದ್ದು, ಇಲ್ಲಿ ಭೂಕಂಪ ನಿರೋಧಕ ವಿನ್ಯಾಸದಿಂದ ಕಟ್ಟಡ ನಿರ್ಮಿಸಿದ್ದರೆ, ಇಷ್ಟು ಭಾರಿ ಅನಾಹುತ ಸಂಭವಿಸುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X