ಅರ್ಧದಲ್ಲಿ ಶಾಲೆ ಬಿಟ್ಟಿರುವ ಮಕ್ಕಳಿಗೆ ರಾಜ್ಯ ಮಟ್ಟದ ಪಠ್ಯ ಸಂಪರ್ಕ ಕೋರ್ಸು
ಬೀದರ್ : ದೇಶದಲ್ಲಿಯೇ ಪ್ರಥಮ ಬಾರಿಗೆ, ಅರ್ಧದಲ್ಲಿಯೇ ಶಾಲೆಯನ್ನು ಬಿಟ್ಟಿರುವ ಸುಮಾರು ಮೂರು ಲಕ್ಷ ಮಕ್ಕಳಿಗೆ ರಾಜ್ಯ ಮಟ್ಟದ ಪಠ್ಯ ಸಂಪರ್ಕ ಕೋರ್ಸು ಕಾರ್ಯಕ್ರಮವನ್ನು ಗುಲ್ಬರ್ಗಾದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಹೆಚ್. ವಿಶ್ವ ನಾಥ್ ಹೇಳಿದ್ದಾರೆ.
ಭಾನುವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಬರುವ ವರ್ಷ ಮಾರ್ಚ್ನಲ್ಲಿ ಪಠ್ಯ ಸಂಪರ್ಕ ಕೋರ್ಸು ಕಾರ್ಯಕ್ರಮ ನಡೆಯುವುದು ಎಂದರು. ಎಲ್ಲ ಮಕ್ಕಳಿಗೂ ಪ್ರಾಥಮಿಕ ಶಿಕ್ಷಣ ನೀಡುವ ದೃಷ್ಠಿಯಿಂದ ಸರಕಾರವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಶಾಲೆಗೆ ಸೇರಿದ ನಂತರ ಹಲವು ಅಡೆತಡೆಗಳಿಂದ ಓದು ಮುಂದುವರಿಸಲಾಗದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳನ್ನು ಮತ್ತೆ ಶಾಲೆಗೆ ಸೇರಿಸುವ ಕೆಲಸವನ್ನು ಶಿಕ್ಷಣ ಇಲಾಖೆ ಕೈಗೆತ್ತಿಕೊಂಡಿದೆ. ಶಾಲೆಯನ್ನು ಅರ್ಧದಲ್ಲಿಯೇ ಬಿಟ್ಟ ಮಕ್ಕಳ ಸಮೀಕ್ಷೆ ಕಾರ್ಯ ನಡೆಯುತ್ತಿದೆ ಎಂದು ಸಚಿವರು ಹೇಳಿದರು.
ಏಳನೆಯ ತರಗತಿವರೆಗಿನ ಎಲ್ಲ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಒದಗಿಸಲಾಗುತ್ತಿದೆ. ಬಾಲಕಿಯರಿಗೆ ಪದವಿ ಪೂರ್ವ ಶಿಕ್ಷಣದ ವರೆಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಬರುವ ವರ್ಷದಿಂದ ಬಾಲಕರಿಗೂ ಉಚಿತ ಶಿಕ್ಷಣ ನೀಡಲು ಪ್ರಯತ್ನಿಸಲಾಗುವುದು ಎಂದು ಅವರು ವಿವರಿಸಿದರು.
(ಇನ್ಫೋ ವಾರ್ತೆ)