ರಾಜ್ ಆಡಿದ ಮಾತುಗಳ ಪೂರ್ಣ ಪಾಠ ಇಲ್ಲಿದೆ....
ಫ್ಲಾಷ್ಗಳ ಮಿಂಚಿನ ಬೆಳಕು ಒಮ್ಮಿಂದೊಮ್ಮೆಲೆ ಸಂಚರಿಸಿತು. ನೂರಾರು ಟಿ.ವಿ. ಕ್ಯಾಮರಾಗಳು ಕಾರ್ಯಪ್ರವೃತ್ತವಾಗಿದ್ದವು. ರಾಜ್ರನ್ನು ಹಾಗೂ ನಾಗೇಶ್ ಅವರನ್ನು ಬರಮಾಡಿಕೊಂಡು ಸ್ವಾಗತಿಸುತ್ತೇವೆ ಎಂದು ಮಾತು ನಿಲ್ಲಿಸಿ, ರಾಜ್ರಿಗೆ ಮಾತನಾಡುವಂತೆ ಕೋರಿದರು.... ಬಳಲಿದ್ದ ರಾಜ್ ಕುಳಿತೇ ಮಾತನಾಡಿದರು. ತಮ್ಮ ಮನದಾಳದ ಮುಗ್ಧ ಮಾತುಗಳಿಂದ ಹತ್ತಾರು ಬಾರಿ ಸುದ್ದಿಗೋಷ್ಠಿಯಲ್ಲಿ ನೆರೆದಿದ್ದ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು.
ಅವರಾಡಿದ ಆ ನಾಲ್ಕು ಮಾತುಗಳು ಇವು: ಮಾನ್ಯ ಮುಖ್ಯಮಂತ್ರಿ ಕೃಷ್ಣ ಅವರೇ, ಪತ್ರಿಕಾ ಬಂಧುಗಳೇ, ನಾನು ಯಾವಾಗಲೂ ಹೇಳುವ, ನೆನೆಯುವ ನನ್ನ ಅಭಿಮಾನಿ ದೇವರುಗಳೇ ನಾನು ಇವತ್ತು ನಿಮ್ಮ ಎದುರು ಬಂದು ಕೂತಿದ್ದೇನೆ ಅಂದ್ರೆ ನನಗೇ ಆಶ್ಚರ್ಯ - ಆನಂದ, ಇನ್ನೊಂದುಕಡೆ ದುಃಖ ಎದೆ ತುಂಬಿ ಬರ್ತಾ ಇದೆ. ಈ ವಾತಾವರಣ ಅಪರೂಪದ ವಾತಾವರಣ. ಹೊಸದೇನನ್ನೋ ನೋಡಿದಂತೆ ಆಕ್ತಾ ಇದೆ. ಹೊಸ ಪ್ರಪಂಚ ನೋಡ್ತಾ ಇದೀನೋ ಅಥವಾ ಹೊಸ ಪ್ರಪಂಚದಲ್ಲಿ ಬಂದು ಇಳಿದಿದ್ದೇನೆಯೋ ಅನ್ನಿಸ್ತಾ ಇದೆ. ಇಷ್ಟು ತಿಂಗಳು ಅದು ಹ್ಯಾಗೆ ಕಾಲ ಕಳೆದೆ ಎಂದು ನೆನೆಸಿ ಕೊಂಡರೆ ರೋಮಾಂಚನ ಆಗತ್ತೆ.
ಅದು ಬರಿ ಕಾಡು, ಊರಿಲ್ಲ...ಜನ ಇಲ್ಲ. ಜನ ಸಂಪರ್ಕ ಇಲ್ಲ. ಆಗಾಗ ಆನೆ ಬರ್ತಾ ಇದ್ದು, ಆನೆ ನೋಡ್ಬೋದಾಗಿತ್ತು. ವೀರಪ್ಪ ಮತ್ತೆ ಅವನ ಸಿಬ್ಬಂದಿ ನೋಡಬೇಕಿತ್ತು. ವೀರಪ್ಪ, ಅವರ ಸಹಚರರೇ ಅಲ್ಲಿ ನಮ್ಮ ಬಂಧುಗಳು, ಬಂಧು ಎಂದೆ ವಿಧಿ ಇಲ್ಲ. ಅವರೂ ನಮ್ಮನ್ನ ಹಾಗೇ ನೋಡ್ಕೋತಿದ್ರು, ಅದೇ ಮುಖ್ಯವಾದ ವಿಷಯ. ಮಕ್ಳು ಮರಿ, ಮೊಮ್ಮಕ್ಕಳನ್ನ ನೆನೆಸಿಕೊಂಡಾಗ ಒಂದೊಂದು ದಿನ ತಳ್ಳೋವಾಗ ಪ್ರಾಯಾಸ ಆಕ್ತಿತ್ತು. ಇದರಿಂದ ಪಾರಾಗೋದು ಹ್ಯಾಗಪ್ಪ . ಏಕೆ ಬೆಳಕಾಗತ್ತೋ, ಏಕೆ ರಾತ್ರಿ ಆಗತ್ತೋ, ರಾತ್ರಿ ಕಳೆಯೋದು ಹ್ಯಾಗೆ. ಏಕೆ ಈ ಸೂರ್ಯ ಹುಟ್ಟುತ್ತಾನೋ, ಅದ್ಯಾಕೆ ಮುಳುಗುತ್ತಾನೋ ಹೇಗೆ ಇವತ್ತು ರಾತ್ರಿ ಕಳೆಯೋದು ಅಂದ್ಕೋತಿದ್ದೆ, ಹೀಗೆ ಮೂರು ತಿಂಗ್ಳು ಕಳೆದೇ ಬಟ್ವಿ. (ರಾಜ್ ನೋವಿನಲ್ಲೂ ನಕ್ಕರು)
12 ದಿನದಲ್ಲೇ ನಾಡಿಗೆ ಬರ್ತೀನಿ ಅಂದ್ಕೋಡಿದ್ದೆ: ಮುಖ್ಯಮಂತ್ರಿಗಳು - ಸರಕಾರ ಪ್ರಯಾಸಪಟ್ಟು ಪ್ರಯತ್ನ ಮಾಡ್ತಿದ್ದಾಗ 12 ದಿನಕ್ಕೆಲ್ಲಾ ಬಂದೇ ಬಡ್ತೀವಿ ಅಂದ್ಕೊಂಡಿದ್ದೆ. ಬಿಡುಗಡೆ ಆಗತ್ತೆ ಅನ್ನೋ ಆಶೋತ್ತರ ಇಟ್ಕೊಂಡಿದ್ದೆ.
ರೇಡಿಯೋದಲ್ಲಿ ಬರ್ತಿದ್ದ ಸುದ್ದಿ ಸಮಾಚಾರ ಬಿಟ್ಟು ಬೇರೆ ಏನೂ ಇರಲಿಲ್ಲ. ಗಿಡ ಮರ ನೋಡ್ಬೇಕಾಗಿತ್ತು. ರೇಡಿಯೋದಲ್ಲಿ ಸುದ್ದಿ ಕೇಳಿದಾಗ, ಸಂದೇಶಗಳು ಬಂದಾಗ ನವಚೈತನ್ಯ ಮೂಡ್ತಿತ್ತು. ನಮ್ಮ ಬಿಡುಗಡೆ ಇವತ್ತೋ ನಾಳೇನೋ ಆಗತ್ತೆ ಅನ್ನಿಸ್ತಿತ್ತು.