ಕೇಂದ್ರದ ಹಣಕಾಸು ನೆರವಿಗೆ ಮನವಿ ಸಲ್ಲಿಸಲು ಸಲಹೆ
ಬೆಂಗಳೂರು : ರಾಜ್ಯಾದ್ಯಂತ ಅತಿವೃಷ್ಟಿಯಿಂದ ಹಾನಿಗೊಂಡಿರುವ 60 ತಾಲ್ಲೂಕುಗಳಲ್ಲಿ ಪರಿಹಾರ ಕೈಗೊಳ್ಳಲು ಕೇಂದ್ರದಿಂದ ಹಣಕಾಸು ನೆರವು ಪಡೆಯಲು ಮನವಿ ಸಲ್ಲಿಸುವಂತೆ ಸಂಯುಕ್ತ ಜನತಾದಳದ ನಾಯಕ ಪಿ. ಜಿ. ಆರ್ ಸಿಂಧ್ಯಾ ಅವರು ರಾಜ್ಯ ಸರಕಾರಕ್ಕೆ ಸಲಹೆ ಮಾಡಿದ್ದಾರೆ.
ಅಧಿವೇಶನದ ಪ್ರಶ್ನೋತ್ತರ ವೇಳೆ ನಂತರ ಮಾತನಾಡಿದ ಸಿಂಧ್ಯಾ ಅವರು, ಸತತವಾಗಿ ಬಿದ್ದ ಮಳೆಯಿಂದ ಒಂದು ಲಕ್ಷ ಮನೆಗಳು ಸೇರಿದಂತೆ 2ಲಕ್ಷ 50 ಸಾವಿರ ಎಕರೆ ಪ್ರದೇಶದಲ್ಲಿನ ಬೆಳೆಗಳು ಹಾನಿಗೊಳಗಾಗಿವೆ. 2500 ಕೆರೆಗಳು ಅಪಾಯದಲ್ಲಿವೆ ಇಷ್ಟೆಲ್ಲಾ ಸಮಸ್ಯೆಗಳನ್ನಿಟ್ಟುಕೊಂಡು ರಾಜ್ಯ ಸರಕಾರ ನಿಷ್ಕಿೃಯಗೊಂಡಿದೆ ಅಧಿಕಾರಿಗಳಲ್ಲಿ ಹೊಂದಾಣಿಕೆ ಇಲ್ಲದೆ ಸಮಸ್ಯೆಗಳು ಹೆಚ್ಚಾಗುತ್ತಲೇ ಇವೆ ಎಂದು ಸಿಂಧ್ಯಾ ಟೀಕಿಸಿದ್ದಾರೆ.
ಹಾನಿಗೊಂಡಿರುವ ಮನೆಗಳು ಮತ್ತು ರಸ್ತೆ ರಿಪೇರಿಗೆ ಪ್ರಸಕ್ತ ವರ್ಷದಲ್ಲೇ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 50 ಲಕ್ಷ ರುಪಾಯಿ ಹಣ ಮಂಜೂರು ಮಾಡಬೇಕು. ನೆರೆ ಪರಿಹಾರ ಕಾರ್ಯಕ್ರಮಕ್ಕೆ ನಿಧಿ ಸ್ಥಾಪನೆ ಮತ್ತು ನೆರೆ ಪರಿಸ್ಥಿತಿ ಅವಲೋಕಿಸಲು ಮಾಹಿತಿ ಕೇಂದ್ರಗಳನ್ನು ತೆರೆಯಬೇಕೆಂದು ಅವರು ಆಗ್ರಹಿಸಿದ್ದಾರೆ.
ಕುಡಿವ ನೀರಿನ ಕಾಮಗಾರಿಗೆ ವೀಕ್ಷಣೆ : ನೆದರ್ಲ್ಯಾಂಡ್ನ 70 ಕೋಟಿ ರುಪಾಯಿ ಹಣಕಾಸು ನೆರವಿನ ಕುಡಿವ ನೀರಿನ ಯೋಜನೆಗಳ ಕಾಮಗಾರಿ ವೀಕ್ಷಣೆ ಕೈಗೊಳ್ಳುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಎಂ. ವೈ. ಘೋರ್ಪಡೆ ತಿಳಿಸಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಪ್ರಶ್ನೆಯಾಂದಕ್ಕೆ ಉತ್ತರಿಸಿದ ಸಚಿವರು ಇನ್ನೂ ಕೆಲವು ಜಿಲ್ಲೆಗಳ ಕುಡಿಯುವ ನೀರಿನ ಯೋಜನೆಗಳ ಅನುಷ್ಟಾನಕ್ಕೆ 900 ಕೋಟಿ ರುಪಾಯಿ ವಿಶ್ವಬ್ಯಾಂಕ್ ನೆರವು ಪಡೆಯಲು ಯತ್ನಿಸಲಾಗುತ್ತಿದ್ದು, ಮಾತುಕತೆ ನೆಡೆದಿದೆ ಎಂದು ತಿಳಿಸಿದ್ದಾರೆ.
ಕುಡಿಯುವ ನೀರಿನ ಯೋಜನೆಯ ಅನುಷ್ಟಾನ ಸಮರ್ಪಕವಾಗಿ ನಡೆಯುತ್ತಿಲ್ಲ. ಎಂದು ಬಿಜೆಪಿಯ ಶಿವಾನಂದ ಪಾಟೀಲ್ ಮತ್ತು ಸಂಯುಕ್ತ ಜನತಾದಳದ ಸಿಂಧ್ಯಾ ಅವರು ಯೋಜನೆಯನ್ನು ಆಂಧ್ರಪ್ರದೇಶದ ಗುತ್ತಿಗೆದಾರರು ವಹಿಸಿಕೊಂಡಿದ್ದು ಸಾಕಷ್ಟು ಅವ್ಯವಹಾರಗಳು ನಡೆಯುತ್ತಿವೆ ಎಂದು ಆಪಾದಿಸಿದ್ದರು.
364 ಉಪನ್ಯಾಸಕರ ಭರ್ತಿ : ರಾಜ್ಯಾದ್ಯಂತ 692 ಉಪನ್ಯಾಸಕ ಹುದ್ದೆಗಳು ಖಾಲಿ ಇದ್ದು, ಇನ್ನು ಒಂದೂವರೆ ತಿಂಗಳೊಳಗೆ ವಿದ್ಯಾರ್ಥಿ ಮತ್ತು ಉಪನ್ಯಾಸಕರ ಅನುಪಾತದನ್ವಯ 364 ಹುದ್ದೆಗಳನ್ನು ತುಂಬುವುದಾಗಿ ಸಚಿವ ಡಾ. ಜಿ. ಪರಮೇಶ್ವರ್ ವಿಧಾನಸಭೆಯಲ್ಲಿ ಹೇಳಿದ್ದಾರೆ.
300 ವೈದ್ಯರ ನೇಮಕ : ಗುತ್ತಿಗೆ ಆಧಾರದ ಮೇಲೆ 300 ಸರಕಾರಿ ವೈದ್ಯರ ಹುದ್ದೆ ತುಂಬಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿರುವುದಾಗಿ ಆರೋಗ್ಯ ಸಚಿವ ಮಲಕರೆಡ್ಡಿ ತಿಳಿಸಿದ್ದಾರೆ.
1998ರಿಂದ ವೈದ್ಯರ ನೇಮಕ ಆಗಿಲ್ಲ. ಆದ್ದರಿಂದ ವೈದ್ಯರ ಕೊರತೆಯಿದೆ. ಪ್ರಸ್ತುತ 5097 ವೈದ್ಯರು ಸರಕಾರಿ ಸೇವೆಯಲ್ಲಿದ್ದು, 2648 ವೈದ್ಯರು ಗ್ರಾಮಾಂತರ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸಚಿವರು ಅಂಕಿ ಅಂಶ ನೀಡಿದ್ದಾರೆ.