ನಿಂತಲ್ಲೆ ನಿಂತ ಪ್ರವಾಸೋದ್ಯಮ ದಿನಾಚರಣೆಯು
ಬೆಂಗಳೂರು :ಸಂಸ್ಕೃತಿ ಪರಂಪರೆಯ ನಾಡಾದ ಭಾರತದ ಎಲ್ಲ ರಾಜ್ಯಗಳಲ್ಲೂ ಇಂದು ವಿಶ್ವ ಪ್ರವಾಸೋದ್ಯಮದ ದಿನ ಆಚರಿಸುತ್ತಿದ್ದರೆ, ರಾಜ್ಯದ ಪ್ರವಾಸೋದ್ಯಮ ಇಲಾಖೆಗೆ ಮಾತ್ರ ರಜೆ.
ಆಶ್ಚರ್ಯ ಪಡಬೇಡಿ. ಇಂದು ಮಹಾಲಯ ಅಮಾವಾಸ್ಯೆ. ಸರಕಾರಿ ರಜೆ ಇರುವ ದಿನ ಸರ್ಕಾರಿ ಕಚೇರಿಗಳು ಬಾಗಿಲು ತೆರೆಯುವುದು ಉಂಟೆ ? ಪ್ರವಾಸೋದ್ಯಮ ದಿನದ ನಿಮಿತ್ತ ಯಾವುದೇ ಕಾರ್ಯಕ್ರಮ, ಜನಜಾಗೃತಿಯ ಸಭೆ - ಸಮಾರಂಭಗಳನ್ನು ನಡೆಸದಿದ್ದರೂ ಕೂಡ ಕೆಲವು ಪತ್ರಿಕೆಗಳಿಗೆ ಬಣ್ಣದ ಜಾಹೀರಾತು ನೀಡಿ ಇಲಾಖೆ ಕೈತೊಳೆದು ಕೊಂಡಿದೆ.
ಆದರೆ, ಎಫ್ಎಂಟಿಎಸ್ ಸಂಸ್ಥೆ ರಾಜ್ಯ ಯುವಕ ಕೇಂದ್ರದಲ್ಲಿ ಪ್ರವಾಸೋದ್ಯಮ ಕುರಿತ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಿತ್ತು. ಪ್ರವಾಸಿ ವೇದಿಕೆ ಸಜ್ಜನರಾವ್ ವೃತ್ತದ ಅಶಕ್ತ ಪೋಷಕ ಸಭಾದಲ್ಲಿ ಬುಧವಾರ ವೃದ್ಧಾಶ್ರಮ ನಿವಾಸಿಗಳಿಗೆ ಉಚಿತ ಪ್ರವಾಸ ಕಾರ್ಯಕ್ರಮ ಏರ್ಪಡಿಸಿತ್ತು.
ಇಷ್ಟು ಬಿಟ್ಟರೆ ನಗರದಲ್ಲಿ ಅಂತ ವಿಶೇಷವೇನೂ ಇರಲಿಲ್ಲ . ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಮೈಸೂರು ದಸರಾ 2000 ಮತ್ತು ವಿಶ್ವ ಪ್ರವಾಸ ದಿನವೆರಡೂ ಸೇರಿದಂತೆ ಒಂದು ಜಾಹೀರಾತಂತೂ ನೀಡಿದೆ.
ಶತಮಾನಗಳ ಪುರಾತನ ಪರಂಪರೆಯ ಪುನರುತ್ಥಾನ ಮತ್ತು 10 ದಿನಗಳ ಸೊಬಗು, ಪ್ರಜ್ವಲ ಮತ್ತು ವೈಭವದ ವಿಹಂಗಮ ನೋಟ ಎಂಬ ಶೀರ್ಷಿಕೆಯಡಿ ಪ್ರಕಟವಾಗಿರುವ ಈ ಜಾಹೀರಾತಿನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಬಗ್ಗೆಯೂ ಒಂದೆರಡು ಸಾಲಿದೆ.
ಇದು ನಮ್ಮ ಸಮೃದ್ಧ ಪರಂಪರೆಯ ವೈಭವವನ್ನು ಮನಗಾಣುವ ಮತ್ತು ಅದನ್ನು ಪುನರುಜ್ಜೀವನಗೊಳಿಸುವ ದಿನ. 10 ದಿನಗಳ ದಸರಾ ಉತ್ಸವದಲ್ಲಿ ಕರ್ನಾಟಕದ ಜನರ ಜೀವನ ಶೈಲಿ ಮತ್ತು ವೈಭವ ಅಭಿವ್ಯಕ್ತವಾಗುವುದು ಎಂದು ಹೇಳಲಾಗಿದೆ. ಆದರೆ, ವಿಶ್ವ ಪ್ರವಾಸ ದಿನ ಎಂದು ದೇಶ - ವಿದೇಶದ ಪ್ರವಾಸಿಗರು, ಕೆಂಪೇಗೌಡ ರಸ್ತೆಯಲ್ಲಿರುವ ಇಲಾಖೆಗೆ ಬಂದರೆ, ಖಾಲಿ ಕುರ್ಚಿಯ ಸ್ವಾಗತಕಾರರ ಕ್ಯಾಬಿನ್ ಇಲ್ಲವೇ ಬೀಗ ಹಾಕಿದ ಇಲಾಖೆಯ ದ್ವಾರವನ್ನು ಕಂಡು ಹಿಂತಿರುಗಬೇಕಷ್ಟೇ.
ವಿಶ್ವ ಪ್ರವಾಸಿಗರನ್ನು ಆಕರ್ಷಿಸುವ ಶಿಲ್ಪಕಲೆಯ ತವರು ಕರ್ನಾಟಕ ಎಂದು ಹೇಳಿಕೊಳ್ಳುವ ಪ್ರವಾಸೋದ್ಯಮ ಇಲಾಖೆ, ಕನಿಷ್ಠ ವಿಶ್ವ ಪ್ರವಾಸೋದ್ಯಮ ದಿನದಂದೂ ಖಾಳಜಿ ವಹಿಸದಿರುವುದು ವಿಷಾದದ ಸಂಗತಿ. ಅಂತೂ ತಂತ್ರಜ್ಞಾನ ಮತ್ತು ನಿಸರ್ಗ : ಇಪ್ಪತ್ತೊಂದನೇ ಶತಮಾನದ ಆರಂಭದಲ್ಲಿ ಪ್ರವಾಸೋದ್ಯಮಕ್ಕೆ ಎದುರಾಗಿರುವ ಎರಡು ಸವಾಲುಗಳು ಎಂದು ಆರಂಭವಾಗಿ... ಪ್ರಕೃತಿಯ ಜತೆ ನಿಕಟ ಬಾಂಧವ್ಯ ಅಜರಾಮರವಾಗಿರಲಿ, ದಸರಾ ಸಂಭ್ರಮದ ಸಂತಸ ಅನವರತ ಮೂಡಿಬರಲಿ ಎಂದು ಕೊನೆಗೊಳ್ಳುವ ಜಾಹೀರಾತನ್ನಾದರೂ ಇಲಾಖೆ ಕೆಲವು ಪತ್ರಿಕೆಗಳಿಗೆ ನೀಡಿದೆಯಲ್ಲ ಅಷ್ಟೇ ಕನ್ನಡಿಗರ ಪುಣ್ಯ.
ಮುಖಪುಟ / ಇವತ್ತು... ಈ ಹೊತ್ತು...