ಕಟೀಲು ಮೊಕ್ತೇಸರರ ಅಮಾನತು, ಆಡಳಿತಾಧಿಕಾರಿ ನೇಮಕ
ಮಂಗಳೂರು : ಕಳೆದಏಪ್ರಿಲ್ ತಿಂಗಳಿನಲ್ಲಿ ಕಟೀಲ್ ದೇವಸ್ಥಾನದ ಅರ್ಚಕರು ಹಾದಿರಂಪ ಬೀದಿ ರಂಪ ಮಾಡಿದ್ದು ನಿಮಗೂ ಗೊತ್ತಲ್ಲ. ಜುಟ್ಟು - ಜನಿವಾರ ಹಿಡಿದು ಬೀದಿಗಿಳಿದು ಅವರು ಹೊಡೆದಾಡಿದ್ದರು. ಈಗ ಮತ್ತೆ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತದ ವಿವಾದಕ್ಕೆ ಜೀವ ಬಂದಿದೆ.
ದೇವಾಲಯದಲ್ಲಿ ಅವ್ಯವಹಾರ ನಡೆಸಿದ ಆಪಾದನೆಯ ಮೇಲೆ ವಂಶಪಾರಂಪರ್ಯವಾಗಿ ಮೊಕ್ತೇಸರರಾಗಿದ್ದ ಲಕ್ಷ್ಮೀನಾರಾಯಣ ಅಸ್ರಣ್ಣ ಹಾಗೂ ಆಡಳಿತ ಮೊಕ್ತೇಸರ ದಯಾನಂದ ಶೆಟ್ಟಿ ಅವರನ್ನು ತತ್ಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ಧಾರ್ಮಿಕ ದತ್ತಿ ಆಯುಕ್ತರು ಈ ಸಂಬಂಧ ಆದೇಶ ಹೊರಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರು ನೀಡಿದ ವರದಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ದೇವಾಲಯಕ್ಕೆ ಅಗತ್ಯವಾದ ದಿನಸಿ ಖರೀದಿಸುವಾಗ ಟೆಂಡರ್ ಕರೆಯದೆ ಸ್ವೇಚ್ಛಾಚಾರದಿಂದ ಖರೀದಿ ಮಾಡಲಾಗಿದ್ದು, ದೇವಾಲಯಕ್ಕೆ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿಗಳು ಕಳೆದ ನವೆಂಬರ್ನಲ್ಲಿ ವರದಿ ಸಲ್ಲಿಸಿದ್ದರು.
ಮೊಕ್ತೇಸರರನ್ನು ಅಮಾನತುಗೊಳಿಸಿರುವ ಹಿನ್ನೆಲೆಯಲ್ಲಿ ಮಂಗಳೂರು ಉಪ ವಿಭಾಗಾಧಿಕಾರಿಗಳನ್ನು ದೇವಾಲಯದ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ. ಮೊಕ್ತೇಸರರು, ದೇವಾಲಯದ ನಿಯಮಾವಳಿ ಪಾಲಿಸದಿರುವುದು, ಅವ್ಯವಹಾರ ನಡೆಸಿರುವುದು , ಕಾನೂನು ಉಲ್ಲಂಘಿಸಿರುವುದು, ನಿರ್ಲಕ್ಷ್ಯ, ಬೇಜವಾಬ್ದಾರಿ ಆರೋಪಗಳು ಮೇಲು ನೋಟಕ್ಕೇ ಸಾಬೀತಾಗಿವೆ ಎಂದು ಆಯುಕ್ತರಾದ ಟಿ.ಎನ್. ಸೀತಾರಾಂ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ದೇವಾಲಯಕ್ಕೆ ಅಗತ್ಯವಾದ ದಿನಸಿ, ತರಕಾರಿ, ಬಾಳೆಹಣ್ಣು, ತೆಂಗಿನಕಾಯಿ, ಕಟ್ಟಿಗೆ, ಅರಳು, ಹಿಂಡಿ ಇತ್ಯಾದಿ ಖರೀದಿಸುವಾಗ ಕೊಟೇಷನ್ ಪಡೆಯದೆ ಖರೀದಿಸಲಾಗಿದೆ. ನಿಯಮಾನುಸಾರ ಏಲಂ ಮೂಲಕ ಮಳಿಗೆಗಳನ್ನು ಬಾಡಿಗೆ ನೀಡುವ ಬದಲು ತಮ್ಮ ಇಚ್ಛಾನುಸಾರ ಬಾಡಿಗೆ ನಿಗದಿ ಮಾಡುವ ಮೂಲಕ ದೇವಾಲಯಕ್ಕೆ ಲಕ್ಷಾಂತರ ರು. ನಷ್ಟ ಸಂಭವಿಸುವಂತೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಮುಖಪುಟ / ಊರು ಕೇರಿ