ಸರ್.ಎಂ. ವಿಶ್ವೇಶ್ವರಯ್ಯ ಜಿಲ್ಲೆಯಾಗಲಿದೆಯಂತೆ ಚಿಕ್ಕಬಳ್ಳಾಪುರ
ಬೆಂಗಳೂರು : 19 ಜಿಲ್ಲೆಗಳನ್ನೊಳಗೊಂಡಿದ್ದ ಕರ್ನಾಟಕದಲ್ಲೀಗ 27 ಜಿಲ್ಲೆಗಳಿವೆ. ರಾಜ್ಯದಲ್ಲಿ ಮತ್ತೊಂದು ಜಿಲ್ಲೆ ತಲೆ ಎತ್ತುವ ಸಾಧ್ಯತೆ ಇದೆ ಎಂಬ ವಿಚಾರ ಈಗ ಬಹಿರಂಗಗೊಂಡಿದೆ. ಉಪ ವಿಭಾಗ ಕೇಂದ್ರವಾದ ಚಿಕ್ಕಬಳ್ಳಾಪುರವನ್ನು ವಿಶ್ವೇಶ್ವರಯ್ಯ ಜಿಲ್ಲೆಯನ್ನಾಗಿ ಮಾಡವ ಆಶ್ವಾಸನೆಯನ್ನು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನೀಡಿದ್ದಾರಂತೆ. ಈ ವಿಷಯವನ್ನು ಕ್ಷೇತ್ರದ ಶಾಸಕಿ ಅನಸೂಯಮ್ಮ ತಿಳಿಸಿದ್ದಾರೆ.
ತಾಲೂಕು ಅಭಿವೃದ್ಧಿಗಾಗಿ ಮಂಜೂರಾಗಿರುವ ಹಲವು ಯೋಜನೆಗಳ ಬಗ್ಗೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಅವರು, ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ಸಹ ಅನುಮತಿ ದೊರೆತಿದೆ ಎಂದು ತಿಳಿಸಿದರು. ವಿಶ್ವೇಶ್ವರಯ್ಯನವರ 140ನೇ ಜನ್ಮದಿನದಂದು ಅವರಾಡಿರುವ ಮಾತುಗಳು ನನಸಾಗುತ್ತದೆಯೇ ಎಂದು ಕಾದು ನೋಡಬೇಕು. ಈಗಿರುವ ಜಿಲ್ಲೆಗಳ ಪುನರ್ವಿಂಗಡಣೆ ಪುನಾ ಆಗಬೇಕೆ ಎನ್ನುವುದು ಬೇರೆ ಪ್ರಶ್ನೆ. ಆದರೆ, ಒಂದೊಮ್ಮೆ ಚಿಕ್ಕಬಳ್ಳಾಪುರಕ್ಕೆ ಜಿಲ್ಲೆಯ ಸ್ಥಾನ ಮಾನ ದೊರೆತರೆ, ಆ ಕೀರ್ತಿ ನಾವೆಲ್ಲ ಇಂದು ಮರೆತು ಕೂತ ಮುದ್ದೇನಹಳ್ಳಿಗೇ ಸಲ್ಲಬೇಕು.
ಎಂಜಿನಿಯರುಗಳಿಗೆ ಪ್ರಶಸ್ತಿ : ಶುಕ್ರವಾರ ನಾಡಿನಾದ್ಯಂತ ವಿಶ್ವೇಶ್ವರಯ್ಯನವರ ಜನ್ಮ ದಿನವನ್ನು ಆಚರಿಸಲಾಯಿತು. ಲೋಕೋಪಯೋಗಿ ಮತ್ತು ನೀರಾವರಿ ಇಲಾಖೆ ಸಹ ಇಂದು ವಿಶ್ವೇಶ್ವರಯ್ಯನವರ 140ನೇ ಜನ್ಮದಿನವನ್ನು ಆಚರಿಸಿತು.
ರಾಜ್ಯದ ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಎಚ್.ಕೆ. ಪಾಟೀಲ್ ಸರ್ಎಂವಿ ದಿನಾಚರಣೆಯನ್ನು ಉದ್ಘಾಟಿಸಿದರು. ಮುಂದಿನ ವರ್ಷದಿಂದ ರಾಜ್ಯ ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ ಐವರು ಎಂಜಿನಿಯರ್ಗಳಿಗೆ ವಿಶ್ವೇಶ್ವರಯ್ಯನವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಅರ್ಹ ಎಂಜಿನಿಯರ್ಗಳನ್ನು ಆಯ್ಕೆ ಮಾಡುವ ನೀತಿ ನಿಯಮಗಳನ್ನು ರೂಪಿಸಲು ಸಮಿತಿಯಾಂದನ್ನು ರಚಿಸಲಾಗುವುದು ಎಂದು ತಿಳಿಸಿದರು. ಮುಖಪುಟ / ಇವತ್ತು... ಈ ಹೊತ್ತು...