ಸೆ.16 ರಿಂದ 5 ದಿನ ಬೆಂಗಳೂರಿನಲ್ಲಿ ಆಟೋ ಫೇರ್ -2000
ಬೆಂಗಳೂರು : ಮಾನವನ ಬದುಕಿನಲ್ಲಿ ವಾಹನಗಳು ಅವಿಭಾಜ್ಯ ಅಂಗವಾಗಿ ಹೋಗಿವೆ. ವಾಹನಗಳೇ ಇಲ್ಲದ ಪರಿಸ್ಥಿತಿಯನ್ನು ಇಂದು ಊಹಿಸಿಕೊಳ್ಳುವುದೂ ಕಷ್ಟ. ಆಧುನಿಕ ಬದುಕಿಗೆ ಅನುಗುಣವಾಗಿ ಆವಿಷ್ಕಾರವಾಗಿರುವ ನೂರಾರು ಬಗೆಯ ವಾಹನಗಳು ಇಂದು ನಮ್ಮ ನಿಮ್ಮೊಡನಿವೆ.
ವಾಹನಗಳ ಬಗ್ಗೆ ಹೆಚ್ಚು ತಿಳಿಯ ಬೇಕು, ಹೊಸ ಬಗೆಯ ವಾಹನಗಳ ನೋಡಬೇಕು ಎನ್ನುವ ಆಸೆಯಿದ್ದರೂ ಅವಕಾಶ ಇರುವುದಿಲ್ಲ. ಈಗ ಆ ಸುಯೋಗ ಬೆಂಗಳೂರಿಗರಿಗೆ ಕೂಡಿ ಬಂದಿದೆ. ಶನಿವಾರದಿಂದ ಬೆಂಗಳೂರು ಅರಮನೆಯ ಅಂಗಳದಲ್ಲಿ ಆಟೋಫೇರ್ -2000 ಆರಂಭಗೊಳ್ಳಲಿದೆ.
ಸೆ.16ರಿಂದ 20ರವರೆಗೆ ಐದು ದಿನಗಳ ಕಾಲ ನಡೆಯುವ ಈ ಪ್ರದರ್ಶನದಲ್ಲಿ ಬಜಾಜ್, ಎಲ್ಎಂಎಲ್, ಟೊಯಾಟಾ, ಮಹೇಂದ್ರ, ಟಿವಿಎಸ್, ಹುಂಡೈ ಸೇರಿದಂತೆ 100ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿವೆ. ಪ್ರದರ್ಶಕ್ಕಾಗಿ ಅರಮನೆಯ ಆವರಣದಲ್ಲಿ 35 ಲಕ್ಷ ರುಪಾಯಿಗಳ ವೆಚ್ಚದಲ್ಲಿ ವೇದಿಕೆ ಸಿದ್ಧವಾಗಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಒಕ್ಕೂಟದ ಅಧ್ಯಕ್ಷ ತಲ್ಲಂ ವೆಂಕಟೇಶ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಧನಂಜಯ ಕುಮಾರ್ ಮೇಳವನ್ನು ಉದ್ಘಾಟಿಸಲಿದ್ದಾರೆ. ರಾಜ್ಯ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಸಮಾರಂಭದ ಅಧ್ಯಕ್ಷತೆ ವಹಿಸುವರು. ವಾಹನಗಳ ಬಿಡಿ ಭಾಗಗಳು, ವಿಶೇಷ ನಮೂನೆಯ ವಾಹನಗಳು ಪ್ರದರ್ಶನದಲ್ಲಿ ಜನರ ಕಣ್ಮನ ಸೆಳೆಯಲಿವೆ. ರಾಷ್ಟ್ರದ ಆರ್ಥಿಕ ಉದಾರೀಕರಣ ನೀತಿಯಿಂದಾಗಿ ವಿದೇಶೀ ವಾಹನ ಉತ್ಪಾದನಾ ಕಂಪನಿಗಳು ಕೂಡ ರಾಷ್ಟ್ರಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ವಾಹನಗಳ ವಿನ್ಯಾಸ, ಅವುಗಳ ಸಾಮರ್ಥ್ಯ ವರ್ಧನೆಗೆ ಅವಕಾಶ ಆಗಿದೆ.
ವಾಹನಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ಮೇಳದಲ್ಲಿ ನಡೆಯುವ ವಿಚಾರ ಸಂಕಿರಣದಲ್ಲಿ ಗ್ರಾಹಕರಿಗೆ ಲಭ್ಯ. ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯ - ಶಬ್ದಮಾಲಿನ್ಯದ ಬಗ್ಗೆ ಕೂಡ ಈ ಮೇಳದಲ್ಲಿ ಚರ್ಚೆ ನಡೆಯಲಿದೆ.