ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೂವು ನಾರು ಸ್ವರ್ಗದ ಕಥೆ ಹೇಳಲೆ ?

By Super
|
Google Oneindia Kannada News

ಲೇಖನಗಳು ಹೇಗೆ ಇರಬೇಕೆಂದು, ಹೇಗೆ ಆಹ್ವಾನಿಸುವುದೆಂದು ಸಂಪಾದಕ- ವರ್ಗದ ನಾವು ಹತ್ತೊಂಬತ್ತು ಮಂದಿ ಕರೆದು , ಬರೆದು ಸಮಾಲೋಚಿಸಿದೆವು. ನಿಯಮಾವಳಿಗಳನ್ನು ರೂಪಿಸಿಕೊಂಡೆವು. ಈ ಸ್ಮರಣ ಸಂಚಿಕೆಯಲ್ಲಿರುವ ಶೇಕಡಾ ತೊಂಬತ್ತೆೈದು ಪಾಲು ಲೇಖನಗಳು, ಪ್ರತಿಯಾಬ್ಬರನ್ನೂ ನಾವು ಹಲವು ವಿಧಗಳಲ್ಲಿ ವೈಯಕ್ತಿಕವಾಗಿ ಸಂಪರ್ಕಿಸಿದ ನಂತರವೇ ಬಂದ ಹೂವುಗಳು. ಆದರೆ ಒಂದೊಂದೂ, ಒಂದೊಂದು ಬಣ್ಣ ದ ಹೂವು. ಪರಿಪರಿಯ ಪರಾಗಗಳು, ವಿಧವಿಧದ ಮಕರಂದ, ಏನೆಲ್ಲ ಬಗೆ ಬಗೆಯ ಪರಿಮಳ, ಒಟ್ಟಾರೆ ಗ್ರಂಥ ನಿಜಕ್ಕೂ ವೈವಿಧ್ಯಪೂರ್ಣವಾಗಿದೆ. ಜಗತ್ತಿನ ಎಲ್ಲೆಡೆಯಿಂದ ಬಂದ ಲೇಖನಗಳು ಇಲ್ಲಿವೆ. ಪ್ರಕಾರಗಳನ್ನೇ ನೋಡಿ. ಕವನಗಳು (46), ಕತೆಗಳು( 23), ಅನುಭವಗಳು (8), ಹಾಸ್ಯ, ವಿಡಂಬನೆ, ಹರಟೆ(13)ನಾಟಕ(1), ಪ್ರಬಂಧಗಳು(31) -ಹೀಗೆ ಎಲ್ಲ ಅಭಿರುಚಿಗೆ ಆಹಾರವಾಗುವ ಸವಿಗನ್ನಡ ಸಾಮಾಗ್ರಿ ಇಲ್ಲಿದೆ. ವಿ- ಅಂಚೆಗಳು ಹಾರಾಡಿದವು.

ಸಂಪಾದಕ ಮಂಡಲಿಯವರು ಸಮಾಲೋಚಿಸಿ ಲೇಖನಗಳನ್ನು ಬೇಕು-ಬಹುದು-ಬೇಡಗಳ ಲಕ್ಷ್ಮಣ ರೇಖೆಗಳ ಒಳಗೆ ಮೊದಲ ಸುತ್ತಿನಲ್ಲಿ ಒರೆ ಹಚ್ಚಿದೆವು. ವಾಷಿಂಗ್ಟನ್‌ ಡಿ.ಸಿಯಲ್ಲಿ ಪುಣ್ಯಾತ್ಮ ಎಸ್‌. ಕೃಷ್ಣಮೂರ್ತಿಗಳ ಆತಿಥ್ಯದ ನೆರಳಿನಲ್ಲಿ, ಮೂರುದಿನಗಳ ಕಾಲ ಬೆಳಗ್ಗೆಯಿಂದ ರಾತ್ರಿಯವರೆಗೂ ದಿನವಿಡೀ ಸಂಪಾದಕೀಯ ಮಂಡಳಿ ಸಭೆ ನಡೆಸಿತು. ಮೂಲಭೂತ ನಿಯಮಾವಳಿಗಳನ್ನು ರಚಿಸಿಕೊಂಡು, ಡಾ. ನಟರಾಜ್‌, ಡಾ. ಅಶ್ವತ್ಥ ಮತ್ತು ವಿಮಲಾ ಚನ್ನಬಸಪ್ಪ ಅವರೊಡನೆ ನಾನೂ ಸೇರಿ, ಬಂದ ಎಲ್ಲಾ ಒಟ್ಟು ಲೇಖನಗಳನ್ನು ಒಂದೊಂದಾಗಿ ಪರಿಶೀಲಿಸಿ, ಮೌಲ್ಯಮಾಪನ ಮಾಡಿ, ಆಯ್ಕೆ ಮಾಡಿಕೊಂಡೆವು. ಲೇಖನಗಳ ಆಯ್ಕೆಗಾಗಿ ನಮಗೆ ಇದ್ದ ಉದ್ದೇಶಗಳು ಬಹು ಸರಳ, ನೇರ. ಎಲ್ಲ ಬಗೆಯ ಉತ್ಸಾಹದ ಸಸಿಗಳಿಗೂ ನೀರೆರೆಯಬೇಕೆಂಬುದು ಮೊದಲನೆಯದು. ಪ್ರಾದೇಶಿಕ ಪ್ರಾತಿನಿಧ್ಯ ಇರುವಂತೆ ನೋಡಿಕೊಳ್ಳುವುದು, ಎರಡನೆಯದು. ಒಬ್ಬರದೇ ಹಲವಾರು ಲೇಖನಗಳು ಬಂದಿದ್ದರೆ, ಸ್ಥಳಾವಕಾಶದ ಪರಿಧಿಯಾಳಗೆ, ಪುಟಮಿತಿ-ಪ್ರಕಾರಮಿತಿಯ ಚೌಕಟ್ಟಿನೊಳಗೆ ಒಂದೆರಡನ್ನು ಆರಿಸಿಕೊಳ್ಳುವುದು. ಎಲ್ಲೆಲ್ಲೂ ಉತ್ತಮಿಕೆಗೇ ಪ್ರಾಧಾನ್ಯಕೊಡುವುದು.

ಒಟ್ಟಾರೆ, ಸಂಚಿಕೆಯ ಸಾಹಿತ್ಯ ಮೌಲ್ಯ ಮೇಲ್ಮಟ್ಟದ್ದಾಗಿದ್ದು, ಓದುಗರ ಮೆಚ್ಚುಗೆ ಗಳಿಸುವಂತೆ ಇರಬೇಕೆಂಬುದೇ ಎಲ್ಲವನ್ನೂ ಮೆಟ್ಟಿ ನಿಂತ ನಮ್ಮ ಮುಖ್ಯ ಗುರಿಯಾಗಿತ್ತು. ಈ ಉಬ್ಬು ತಗ್ಗಿನ ದಾರಿಯಲ್ಲಿ ನಾವೇನಾದರೂ ಎಡವಿದದ್ದರೆ, ಲೇಖಕರೂ, ಓದುಗರೂ ನಮ್ಮನ್ನು ಮನ್ನಿಸಬೇಕು.

ಇಷ್ಟೆಲ್ಲಾ ಹೇಳಿದರೂ , ನಾವು ಮಾಡಿರುವುದು ಸರಿಯೇ, ನಮ್ಮ ಉದ್ದೇಶ ಫಲಿಸಿತೇ ಎಂಬುದನ್ನು ಸಹೃದಯ ಓದುಗರೇ ಒರೆ ಹಚ್ಚಿ ಹೇಳಬೇಕು. ಈ ಮಾತುಗಳನ್ನು ಬರೆಯುವಾಗ ಮತ್ತು ಲೇಖನಗಳ ಒಂದು ಹಕ್ಕಿ ನೋಟವನ್ನು ನಿಮಗೆ ಒದಗಿಸುವ ಮುನ್ನ, ನಾನು ಇನ್ನೊಂದು ಮಾತನ್ನು ಈಗಲೇ ಹೇಳಿಬಿಡಬೇಕು. ನಾವು ಇನ್ನೊಂದು ದರ್ಶನ ಉದ್‌ಗ್ರಂಥವನ್ನು ಹೊರತರುತ್ತಿದ್ದೇವಲ್ಲ, ಅದಕ್ಕೆಂದು ಆಹ್ವಾನಿಸಿ ತರಿಸಿಕೊಂಡ ಸುಮಾರು ಐವತ್ತು ವಿದ್ವತ್‌ಪೂರ್ಣ ಲೇಖನಗಳಲ್ಲಿ ಆರು ಲೇಖನಗಳನ್ನು ಈ ಸ್ಮರಣ ಸಂಚಿಕೆಯಲ್ಲಿಯೂ ಪುನರಾವರ್ತಿಸುತ್ತಿದ್ದೇವೆ. ಇದು ಏಕೆ ಎಂದು ಕೆಲವರು ಕೇಳಬಹುದು. ಒಂದು ಕಾರಣ : ಆ ಗ್ರಂಥದಲ್ಲಿನ ಲೇಖನಗಳು ಹೇಗಿರುತ್ತವೆ ಎಂಬುದಕ್ಕೆ ಇಲ್ಲಿ ಒಂದೆರಡು ಸ್ಯಾಂಪಲ್‌ ಇವೆ ಎನ್ನಲೇ ?

ಹೂವು-ನಾರು-ಸ್ವರ್ಗದ ಕತೆ ಹೇಳಲೇ? ಆ ಗ್ರಂಥವನ್ನೇ ಓದಲಿ, ಇದನ್ನೇ ಕೈಗೆ ತೆಗೆದುಕೊಳ್ಳಲಿ, ಕನ್ನಡದ ನುಡಿ-ನಾಡು- ನಡೆಗಳಿಗೆ ಸಂಬಂಧಿಸಿದ ಈ ಲೇಖನಗಳನ್ನಂತೂ ನೀವು ಓದಲೇ ಬೇಕು ಎಂದು ನಾವು ನಿಮ್ಮನ್ನು ಒತ್ತಾಯಿಸುವ ಒಂದು ವಿನೂತನ ಸಂಚು ಇದೆಂದು ಸಮಜಾಯಿಷಿ ಹೇಳಲೇ ? ಉತ್ತರ ಹೇಳಿ, ನಿಮ್ಮ ಊಹೆಗೆ ಕಡಿವಾಣ ಹಾಕಲಾರೆ ! ಮೇಲೆ ಹೇಳಿದ ಲೇಖನಗಳಲ್ಲದೆ, ಈ ಸ್ಮರಣ ಸಂಚಿಕೆಯ ಉಳಿದ ಲೇಖನಗಳನ್ನು ಬರೆದವರು ಬಹುತೇಕ ಹವ್ಯಾಸಿ ಬರಹಗಾರರು. ಆದರೆ, ಇವರೆಲ್ಲ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಪ್ರತಿಭಾವಂತ ಕನ್ನಡಿಗರು. ಒಬ್ಬಿಬ್ಬರ ಉದಯೋನ್ಮುಖ ಬರಹಗಳನ್ನು ಬಿಟ್ಟರೆ, ಉಳಿದ ಎಲ್ಲರದ್ದೂ ಕನ್ನಡನಾಡಿನ ಪಳಗಿದ ಕೈಯಂತೆಯೇ ಇವರ ಲೇಖನಿಗಳೂ, ಅವರಂತೆಯೆಯೆುೕ ಇವರ ಲೇಖನಗಳೂ. ಇಲ್ಲಿ ಸೊಗಸಾದ ಕತೆಗಳಿವೆ , ಮನೋಜ್ಞವಾದ ಕವಿತೆಗಳಿವೆ, ನವಿರಾದ ಹಾಸ್ಯ ಪ್ರಸಂಗಗಳಿವೆ. ಹೆಗಲನ್ನು ಮುಟ್ಟಿ ನೋಡಿಕೊಳ್ಳುವ -ವಿಡಂಬನೆಗಳಿವೆ, ಚಿಂತನೀಯ ವಿಷಯಗಳ ಸಾರ್ಥಕ ವಿಶ್ಲೇಷಣೆಯ ಪ್ರಬಂಧಗಳಿವೆ, ಹೊಟ್ಟೆ ಹುಣ್ಣಾಗಿಸುವ ನಗೆ ನಾಟಕವಿದೆ. ಅನುಭವವೂ ಅದರ ನೆನಪೂ ಸವಿಯೆನ್ನಿಸುವ ನೆನಪಿನ ಬುತ್ತಿಗಳಿವೆ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಹೊಕ್ಕು ಟೊಪ್ಪಿಗೆಗೆ ಸಿಕ್ಕಿಸಿಕೊಳ್ಳುವ ಪುಕ್ಕವೆಂದೆನಿಸಬಲ್ಲ ಬರಹಗಳ, ಬೆಳ್ಳಿ ತಟ್ಟೆಯ ಬಿಸಿಬಿಸಿ ಊಟ - ಇದೋ ನಿಮ್ಮ ಮುಂದೆ ಇದೆ.

English summary
world kannada sammelana commorative volumes
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X