ಬಿಸಿಸಿಐನಿಂದ ಹೊಸ ಕ್ರಿಕೆಟ್ ನೀತಿ ಸಂಹಿತೆ ಜಾರಿ
ಬೆಂಗಳೂರು : ಭಾನುವಾರ ನಡೆದ ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆ ಹೊಸ ನೀತಿ ಸಂಹಿತೆ ಕರಡಿಗೆ ಅಂತಿಮ ರೂಪು ನೀಡಿದ್ದು, ಸಂಹಿತೆಯು ಭಾನುವಾರದಿಂದಲೇ ಅಸ್ತಿತ್ವಕ್ಕೆ ಬಂದಿದೆ.
ಸಭೆಯ ನಂತರ ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಬಿಸಿಸಿಐ ಅಧ್ಯಕ್ಷ ಎ.ಸಿ. ಮುತ್ತಯ್ಯ ಈ ವಿಷಯ ತಿಳಿಸಿದರು. ಪ್ರಾಯೋಗಿಕವಾಗಿ ಈ ನೀತಿ ಸಂಹಿತೆ ಇಂದಿನಿಂದಲೇ ಅಸ್ತಿತ್ವಕ್ಕೆ ಬರಲಿದೆ. ಸೆಪ್ಟೆಂಬರ್ನಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಸಂಹಿತೆಯನ್ನು ಕಾನೂನುಬದ್ಧವಾಗಿ ಅಂಗೀಕರಿಸಲಾಗುವುದು ಎಂದು ಹೇಳಿದರು.
ನೀತಿ ಸಂಹಿತೆ ನಿಯಮಾವಳಿಗಳು :
- ಕೋಚ್ ಮತ್ತು ನಾಯಕನನ್ನು ಹೊರತುಪಡಿಸಿ ಬೇರಾವ ಅಧಿಕಾರಿಯಾಗಲೀ, ಆಟಗಾರರಾಗಲೀ ಮಾಧ್ಯಮಗಳಿಗೆ ತಮ್ಮ ಅಭಿಪ್ರಾಯ ತಿಳಿಸಕೂಡದು
- ಪಂದ್ಯದ ವೇಳೆ ಆಟಗಾರರಿಗೆ ಅನಾರೋಗ್ಯವಿದ್ದಲ್ಲಿ ಅದನ್ನು ಮುಚ್ಚಿಡದೆ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ತರಬೇತುದಾರರಿಗೆ ತಿಳಿಸಬೇಕು
- ವಿದೇಶಗಳಲ್ಲಿ ಗಳಿಸುವ ಹಣ (ದಿನದ ಭತ್ಯೆ ಹೊರತು ಪಡಿಸಿ) ವನ್ನು ಬಿಸಿಸಿಐ ಲೆಕ್ಕಕ್ಕೆ ಜಮಾ ಮಾಡಬೇಕು. ಇದರಲ್ಲಿ ಬಹುಮಾನದ ಮೊತ್ತವೂ ಸೇರಿರುತ್ತದೆ. ಹಣವನ್ನು ರುಪಾಯಿಗೆ ಪರಿವರ್ತಿಸಿ ಆಯಾ ಆಟಗಾರರಿಗೆ ಬಿಸಿಸಿಐ ನೀಡುತ್ತದೆ
- ಕ್ರಿಕೆಟಿಗರಾಗಲೀ, ಅಧಿಕಾರಿಗಳಾಗಲೀ ಪಂದ್ಯದ ಮೇಲೆ ಬಾಜಿ ಕಟ್ಟಕೂಡದು. ಒಂದು ವೇಳೆ ಮೋಸದಾಟದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಲ್ಲಿ ಆಜೀವ ನಿಷೇಧ ವಿಧಿಸಿ, ದಾಖಲೆಗಳನ್ನು ಅಳಿಸಿ ಹಾಕಲಾಗುವುದು
- ಸೆಲ್ಫೋನುಗಳನ್ನು ಕ್ರೀಡಾಂಗಣಕ್ಕೆ ಒಯ್ಯುವಂತಿಲ್ಲ
- ಆಟಗಾರರು ತಮ್ಮ ಪತ್ನಿಯನ್ನು ಬಿಟ್ಟು ಬೇರೆ ಯಾವುದೇ ಗೆಳೆಯರನ್ನು ಕ್ರೀಡಾಂಗಣಕ್ಕೆ ಕರೆದೊಯ್ಯುವಂತಿಲ್ಲ. ಪತ್ನಿಯನ್ನು ಕರೆದುಕೊಂಡು ಹೋಗಲೂ ಬಿಸಿಸಿಐನ ಅನುಮತಿ ಪಡೆಯಬೇಕು
- ಯಾವುದಾದರೂ ಬುಕ್ಕಿ ಸಂಪರ್ಕಿಸಿದಲ್ಲಿ, ತಕ್ಷಣವೇ ಸ್ಥಳೀಯ ಪೊಲೀಸರಿಗೆ ಆಟಗಾರರು ದೂರು ಕೊಡಬೇಕು
ರಾಷ್ಟ್ರೀಯ ಟೂರ್ನಿ ಕಡ್ಡಾಯ : ರಾಷ್ಟ್ರೀಯ ಮಟ್ಟದ ಟೂರ್ನಿಗಳಿಗೆ ಒತ್ತು ನೀಡಲು ಮಂಡಳಿ ನಿರ್ಧರಿಸಿದೆ. ಟೆಸ್ಟ್ ಆಡುವ ಪ್ರತಿಯಾಬ್ಬ ಕ್ರಿಕೆಟಿಗ ಕಡ್ಡಾಯವಾಗಿ ರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸಬೇಕು. ಇಲ್ಲವಾದಲ್ಲಿ ಅಂಥ ಆಟಗಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ನೇಮಕ : ಸಭೆಯಲ್ಲಿ ಬಿಸಿಸಿಐನ ಕಮಿಷನರ್ ಹಾಗೂ ಕ್ಯುರೇಟರ್ಗಳನ್ನೂ ಆಯ್ಕೆ ಮಾಡಲಾಯಿತು. ಸಿಬಿಐನ ಜಂಟಿ ನಿರ್ದೇಶಕ ಮಾಧವನ್ ಅವರನ್ನು ಬಿಸಿಸಿಐನ ಕಮಿಷನರ್ ಆಗಿ ನೇಮಕ ಮಾಡಿದರೆ, ಪಿಚ್ಗಳ ಗುಣಮಟ್ಟ ಅಭಿವೃದ್ಧಿಗಾಗಿ ಕರ್ನಾಟಕದ ಡಾ. ಕಸ್ತೂರಿ ರಂಗನ್ ಅವರನ್ನು ಮುಖ್ಯ ಕ್ಯುರೇಟರ್ ಆಗಿ ಆರಿಸಲಾಗಿದೆ.