ವೀರಪ್ಪನ್ ಬೇಡಿಕೆಗಳು ಮತ್ತು ಸರ್ಕಾರದ ಪ್ರತಿಕ್ರಿಯೆ
ಚೆನ್ನೈ : ಕರ್ನಾಟಕ ಹಾಗೂ ತಮಿಳುನಾಡಿನ ಮುಖ್ಯಮಂತ್ರಿಗಳು ವೀರಪ್ಪನ್ನ 10 ಬೇಡಿಕೆಗಳ ಪೈಕಿ ಕೆಲವನ್ನು ಈಡೇರಿಸಲು ಒಪ್ಪಿದ್ದಾರೆ. ಹತ್ತೂ ಬೇಡಿಕೆಗಳ ಬಗೆಗೆ ಪ್ರತಿಕ್ರಿಯೆಯನ್ನು ಗೋಪಾಲ್ಗೆ ತಲುಪಿಸಿ, ಆ ಮೂಲಕ ವೀರಪ್ಪನ್ಗೆ ಮುಟ್ಟಿಸಲಾಗುವುದು. ಭಾನುವಾರ ಸಂಜೆ ಎರಡೂ ಸರ್ಕಾರಗಳ ಮಾರುತ್ತರವನ್ನು ಇನ್ನೊಬ್ಬ ದೂತನ (ನಕ್ಕೀರನ್ ಪತ್ರಿಕಾ ಬಳಗದವ) ಮೂಲಕ ವೀರಪ್ಪನ್ಗೆ ಕಳಿಸಿಕೊಡಲಾಗುವುದು.
ಈಗಾಗಲೇ ಜನಿಜನಿತವಾಗಿರುವ ಕ್ಷಮಾದಾನ ಮತ್ತು 50 ಕೋಟಿ ರುಪಾಯಿ ಬೇಡಿಕೆಯನ್ನು ವೀರಪ್ಪನ್ ಮಂಡಿಸಿಲ್ಲ.
ಹತ್ತು ಬೇಡಿಕೆ, ಹತ್ತು ಉತ್ತರ :
ಬೇಡಿಕೆ 1 : ತಮಿಳುನಾಡಿಗೆ 205 ಟಿಎಂಸಿ ನೀರನ್ನು ತಕ್ಷಣ ಬಿಡುಗಡೆ ಮಾಡಬೇಕು. ಈ ವಿಷಯದಲ್ಲಿ ಭವಿಷ್ಯದಲ್ಲಿ ಯಾವುದೇ ಕಿರಿಕಿರಿ ಉಂಟಾಗಬಾರದು
ಉತ್ತರ : ಕಾವೇರಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪನ್ನು ಜಾರಿಗೊಳಿಸಲು ಪ್ರಧಾನಮಂತ್ರಿಗಳು ಅಧ್ಯಕ್ಷರಾಗಿರುವ ಕಾವೇರಿ ನದಿ ನೀರು ಪ್ರಾಧಿಕಾರ ರಚಿಸಲಾಗಿದೆ. 205 ಟಿಎಂಸಿ ನೀರು ಬಿಡುಗಡೆಯಲ್ಲಿ ಸಮಸ್ಯೆಗಳೇನಾದರೂ ಇದ್ದರೆ ಪ್ರಾಧಿಕಾರ ಕ್ರಮ ಕೈಗೊಳ್ಳುತ್ತದೆ. ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪು ಶೀಘ್ರದಲ್ಲೇ ಬರಲಿದೆ.
ಬೇಡಿಕೆ 2 : 1991ನೇ ಕಾವೇರಿ ಗಲಭೆಯಲ್ಲಿ ನೊಂದ ಎಲ್ಲ ತಮಿಳು ಸಂತ್ರಸ್ಥರಿಗೆ ಸಮರ್ಪಕ ಮತ್ತು ನ್ಯಾಯಯುತ ಪರಿಹಾರ ನೀಡಬೇಕು.
ಉತ್ತರ : 12 ತಿಂಗಳ ಒಳಗಾಗಿ ಈ ವಿಚಾರಣೆ ಮುಗಿಯಬೇಕಾಗಿತ್ತು. ಆದರೆ ಹೆಚ್ಚು ಕೆಲಸದ ಒತ್ತಡದಿಂದಾಗಿ ವಿಚಾರಣಾ ಅವಧಿಯನ್ನು ವಿಸ್ತರಿಸಲಾಗಿದೆ. 31 ಮೇ 2001ರವರೆಗೆ ಅವಧಿ ವಿಸ್ತರಿಸಿ ಸರ್ವೋಚ್ಚ ನ್ಯಾಯಾಲಯ ಅನುಮತಿ ನೀಡಿದೆ.
ಬೇಡಿಕೆ 3 : ಕರ್ನಾಟಕದಲ್ಲಿ ಕನ್ನಡಿಗರು ಬಿಟ್ಟರೆ ತಮಿಳರೇ ಬಹುಸಂಖ್ಯಾತರು. ಆದ ಕಾರಣ ತಮಿಳು ಭಾಷೆಯನ್ನು ಹೆಚ್ಚುವರಿ ಆಡಳಿತ ಭಾಷೆಯನ್ನಾಗಿ ಕರ್ನಾಟಕ ಸರ್ಕಾರ ಅಂಗೀಕರಿಸಬೇಕು.
ಉತ್ತರ : ಭಾಷಾ ಅಲ್ಪ ಸಂಖ್ಯಾತರ ಪ್ರಮಾಣ ಶೇ. 15ಕ್ಕಿಂತ ಹೆಚ್ಚಾಗಿದ್ದಲ್ಲಿ ಸರ್ಕಾರದ ಪ್ರಕಟಣೆಗಳು, ಆಜ್ಞೆಗಳು, ನೀತಿ- ನಿಯಮಾವಳಿಗಳು ಆಯಾ ಅಲ್ಪ ಸಂಖ್ಯಾತ ಭಾಷೆಯಲ್ಲೇ ಇರಬೇಕು ಎನ್ನುವುದು ಕೇಂದ್ರ ಸರ್ಕಾರ ಕೊಟ್ಟಿರುವ ಸೂಚನೆ (ಕೇಂದ್ರ ಸರ್ಕಾರದ ಆಜ್ಞೆ ನಂ. ಡಿಪಿಎಆರ್ 15- ಎಲ್ಎಂಎಲ್ 99 ತಾರೀಖು 20-05-1999). ಈ ನಿಯಮವು ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ಎಲ್ಲ ರಾಜ್ಯಗಳಿಗೂ ಅನ್ವಯಿಸುತ್ತದೆ.
ಬೇಡಿಕೆ 4 : ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಬೇಕು.
ಉತ್ತರ : ತಿರುವಳ್ಳುವರ್ ಮತ್ತು ಸರ್ವಜ್ಞನ ಪ್ರತಿಮೆಯನ್ನು ಬೆಂಗಳೂರು ಹಾಗೂ ಚೆನ್ನೈನಲ್ಲಿ ಸ್ಥಾಪಿಸಲು ಉಭಯ ರಾಜ್ಯಗಳ ಮುಖ.್ಯಮಂತ್ರಿಗಳೂ ಒಪ್ಪಿಕೊಂಡಿದ್ದಾರೆ.
ಬೇಡಿಕೆ 5 : ಕರ್ನಾಟಕ ಮತ್ತು ತಮಿಳುನಾಡಿನ ವಿಶೇಷ ಕಾರ್ಯ ಪಡೆ ಎಸಗಿರುವ ದೌರ್ಜನ್ಯ ಕುರಿತ ವಿಚಾರಣಾ ಆಯೋಗದ (ನ್ಯಾಯಮೂರ್ತಿ ಸದಾಶಿವ ಆಯೋಗ) ವರದಿ ತಕ್ಷಣ ಬಹಿರಂಗವಾಗಬೇಕು.
ಉತ್ತರ : ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಶಿಫಾರಸುಗಳನ್ನು ಗಮನದಲ್ಲಿಟ್ಟುಕೊಂಡು ಈ ವಿಚಾರಣೆಯನ್ನು ಅಖೈರುಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯ ಪ್ರವೃತ್ತವಾಗುತ್ತಿದೆ.
ಬೇಡಿಕೆ 6 : ಕರ್ನಾಟಕದ ಜೈಲುಗಳಲ್ಲಿ ಕೊಳೆಯುತ್ತಿರುವ ನಿರಪರಾಧಿಗಳನ್ನು ತಕ್ಷಣ ಬಿಡುಗಡೆ ಮಾಡಬೇಕು.
ಉತ್ತರ : ಟಾಡಾ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳಲಾಗುವುದು. ಖೈದಿಗಳನ್ನು ಬಿಡುಗಡೆ ಮಾಡಲಾಗುವುದು.
ಬೇಡಿಕೆ 7 : ಹತ್ಯಾಕಾಂಡವೊಂದರಲ್ಲಿ ಸಾವಿಗೀಡಾಗಿರುವ 9 ಪರಿಶಿಷ್ಟ ಜಾತಿ ಮತ್ತು ವರ್ಗದ ಕುಟುಂಬಗಳಿಗೆ ಸಮರ್ಪಕ ಪರಿಹಾರ ಕೊಡಬೇಕು.
ಉತ್ತರ : ಈ ಬಗೆಗೆ ಕೂಲಂಕಷ ವಿವರಗಳನ್ನು ಪಡೆದುಕೊಂಡ ನಂತರ ಪರಿಹಾರ ನೀಡುವುದರ ಬಗ್ಗೆ ಪರಿಶೀಲಿಸಲಾಗುವುದು.
ಬೇಡಿಕೆ 8 : ನೀಲಗಿರಿಯ ಚಹಾ ಬೆಳೆಗಾರರ ಹಿತದೃಷ್ಟಿಯಿಂದ ಹಸುರು ಎಲೆ ಖರೀದಿಯ ಕನಿಷ್ಠ ಬೆಲೆಯನ್ನು 15 ರುಪಾಯಿಗೆ ಏರಿಸಬೇಕು(ಈಗಿ-ನ ಕನಿ-ಷ್ಠ ಬೆಲೆ 9.50 ರುಪಾ-ಯಿ).
ಉತ್ತರ : ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರ ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಂಡಿವೆ.
ಬೇಡಿಕೆ 9 : ತಮಿಳುನಾಡು ಜೈಲಿನಲ್ಲಿರುವ 5 ಮಂದಿಯನ್ನು ಬಿಡುಗಡೆಗೊಳಿಸಬೇಕು.
ಉತ್ತರ : ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಶೀಲಿಸಲಾಗುವುದು.
ಬೇಡಿಕೆ 10 : ಮಂಜು ಅಲೈ ಎಸ್ಟೇಟ್ ಕಾರ್ಮಿಕರ ಸಮಸ್ಯೆ ನಿವಾರಿಸಬೇಕು. ಅವರ ಕನಿಷ್ಠ ವೇತನವನ್ನು 150 ರುಪಾಯಿಗೆ ನಿಗದಿಗೊಳಿಸಬೇಕು(ಈಗಿ-ರು-ವ ಕನಿ-ಷ್ಠ -ವೇ-ತ-ನ 139 ರುಪಾ-ಯಿ).
ಉತ್ತರ : ಕನಿಷ್ಠ ವೇತನ ಏರಿಕೆ ಬಗೆಗೆ ಪರಸ್ಪರ ಸಮಾಲೋಚಿಸಿ ಇತ್ಯರ್ಥಗೊಳಿಸಲಾಗುವುದು