ದೀನ್ದಾರ್ ಅಂಜುಮನ್ ನಿಷೇಧ ಬೇಡಿಕೆ ಪರಿಶೀಲನೆಗೆ ಅಡ್ವಾನಿ ಒಪ್ಪಿಗೆ
ನವದೆಹಲಿ : ಕರ್ನಾಟಕ ಮತ್ತು ಆಂಧ್ರಪ್ರದೇಶದ ಚರ್ಚ್ಗಳಲ್ಲಿ ನಡೆದಿರುವ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದೆ ಎಂದು ಶಂಕಿಸಲಾಗಿರುವ ದೀನ್ದಾರ್ ಅಂಜುಮನ್ ಸಂಘಟನೆಯನ್ನು ನಿಷೇಧಿಸುವ ಬೇಡಿಕೆ ಕುರಿತು ಕೇಂದ್ರ ಸರ್ಕಾರ ಉಭಯ ರಾಜ್ಯ ಸರ್ಕಾರಗಳ ಜೊತೆ ಸಮಾಲೋಚನೆ ನಡೆಸಲಿದೆ.
ಕೇಂದ್ರ ಗೃಹ ಸಚಿವ ಎಲ್.ಕೆ. ಅಡ್ವಾಣಿ ಗುರುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಕೇಂದ್ರೀಯ ಸಂಸ್ಥೆಗಳು ಮತ್ತು ಉಭಯ ರಾಜ್ಯಗಳ ಸರ್ಕಾಗಳು ನಡೆಸಿದ ತನಿಖೆಯಿಂದ ಬಾಂಬ್ ಸ್ಫೋಟಗಳಲ್ಲಿ ದೀನ್ದಾರ್ ಅಂಜುಮನ್ ಕೈವಾಡವಿರುವುದು ದೃಢಪಟ್ಟಿದೆ ಎಂದು ರಾಜ್ಯಸಭೆಯಲ್ಲಿ ಸೂಚನೆ ಕೊಡಲಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಡ್ವಾಣಿ, ಉಭಯ ಸರ್ಕಾರಗಳ ಜೊತೆ ಚರ್ಚಿಸುವುದಾಗಿ ಹೇಳಿದರು.
ಐಎಸ್ಐನ ಭಾಗ : ದೀನ್ದಾರ್ ಸಂಘಟನೆ ಪಾಕಿಸ್ತಾನದ ಐಎಸ್ಐನ ಭಾಗವಾಗಿದ್ದು, ದೇಶದಲ್ಲಿ ಧಾರ್ಮಿಕ ಏಕತೆಗೆ ಭಂಗ ತರಲು ಐಎಸ್ಐ ಉಪಯೋಗಿಸುತ್ತಿರುವ ಅಸ್ತ್ರವಾಗಿದೆ. ಸ್ಫೋಟ ಘಟನೆಗಳಿಗೆ ಯಾವುದೇ ಒಂದು ನಿರ್ದಿಷ್ಟ ಸಮುದಾಯವನ್ನು ದೂರುವುದು ಸರಿಯಲ್ಲ. ಆದರೆ ತನಿಖೆಯಿಂದ ದೀನ್ದಾರ್ ಅಂಜುಮನ್ ಸಂಘಟನೆಯ ಕೈವಾಡವಿರುವುದು ದೃಢ ಪಟ್ಟಿರುವುದರಿಂದ ಅದನ್ನು ನಿಷೇಧಿಸುವ ಬಗ್ಗೆ ಗಂಭೀರವಾಗಿ ಸಮಾಲೋಚಿಸಬೇಕಿದೆ ಎಂದರು.