ಕಟೀಲು ಅರ್ಚಕರ ಹಾದಿರಂಪ ಬೀದಿರಂಪ
ಮಂಗಳೂರು : ಪುಣ್ಯ ಕ್ಷೇತ್ರ ಕಟೀಲುವಿನ ಶ್ರೀದುರ್ಗಾಪರಮೇಶ್ವರಿ ದೇವಾಲಯದ ಅರ್ಚಕರು ಜುಟ್ಟು - ಜನಿವಾರ ಹಿಡಿದು ಹೊಡೆದಾಡಲು ಬೀದಿಗಳಿದಾಗ ವಿಧಿಯಿಲ್ಲದೇ ಪೊಲೀಸರು ಲಾಠಿ ಪ್ರಹಾರ ನಡೆಸಿದರಂತೆ. ಇಲ್ಲಿನ ದೇವಸ್ಥಾನದ ಅರ್ಚಕರ ನಡುವೆ ಬಹಳ ದಿನಗಳಿಂದ ದ್ವೇಷ ಕುದಿಯುತ್ತಲೇ ಇದೆ. ಮೊನ್ನೆ ಈ ಜಗಳ ಕದನಕ್ಕೆ ತಿರುಗಿದೆ. ದುರ್ಗಾಪರಮೇಶ್ವರಿಯ ರಥೋತ್ಸವ ನಡೆಯುತ್ತಿದ್ದಾಗ ಹಾದಿರಂಪ ಬೀದಿ ರಂಪ ಶುರುವಾಯಿತು. ರಥೋತ್ಸವದಲ್ಲಿ ಸೇರಿದ್ದ ಜನರು ಇದನ್ನು ಕಂಡು ಉದ್ರಿಕ್ತರಾದರು, ಈ ಹಂತದಲ್ಲಿ ಪೊಲೀಸರು ಲಾಠಿ ಪ್ರಹಾರ ಮಾಡಿ ಗುಂಪನ್ನು ಚದುರಿಸಿದರು.
ಗಲಾಟೆ ಮಾಡಿದವರು ಯಾರೋ, ಲಾಠಿ ಏಟು ತಿಂದವರು ಯಾರೋ, ಆದರೂ ಪಾಪ ದುರ್ಗಾಪರಮೇಶ್ವರಿ ಇದನ್ನೆಲ್ಲ ನೋಡುತ್ತಾ ಕಲ್ಲಾಗಿಯೇ ಕುಳಿತಿದ್ದಳಂತೆ.
ಅರ್ಚಕರ ಜಗಳದಿಂದ ಕುಪಿತರಾದ ಭಕ್ತರು ಗುಂಪುಗೂಡಿ ಪ್ರತಿಭಟಿಸಿದಾಗ, ಜಾತ್ರೆಯಲ್ಲಿ ಅಹಿತಕರ ಘಟನೆಗಳು ನಡೆಯಬಾರದೆಂಬ ಮುನ್ನೆಚ್ಚರಿಕೆಯಿಂದ ಪೊಲೀಸರು ಲಾಠಿ ಪ್ರಹಾರ ಮಾಡಿದರೆಂದು ತಿಳಿದು ಬಂದಿದೆ.
ಕೆಲವು ತಿಂಗಳುಗಳಿಂದ ಈ ದೇವಾಲಯದ ಅಧಿಕಾರಕ್ಕಾಗಿ ಅರ್ಚಕರ ನಡುವೆ ಶೀತಲ ಸಮರ ನಡೆದೇ ಇದೆ.