ರಾಷ್ಟ್ರೀಯ ಶಿಕ್ಷಣ ನೀತಿ 2020 : ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ನೇತೃತ್ವದಲ್ಲಿ ಕಾರ್ಯಪಡೆ
ಬೆಂಗಳೂರು, ಸೆ. 24: ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸಾಧಕ ಬಾಧಕ ಬಗ್ಗೆ ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ನೇತೃತ್ವದಲ್ಲಿ ಕಾರ್ಯ ಪಡೆ ರಚನೆ ಮಾಡಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಾಯೋಗಿಕವಾಗಿ ಅನುಷ್ಠಾನ ಮಾಡುವ ಬಗ್ಗೆ ವರದಿ ನೀಡುವಂತೆ ಈ ಕಾರ್ಯಪಡೆ ಸಮಿತಿಗೆ ಸೂಚಿಸಲಾಗಿದೆ.
ದಕ್ಷ ಅಧಿಕಾರಿ ಹೆಗಲಿಗೆ NEP ಜವಾಬ್ಧಾರಿ: ಆಹಾರ ನಾಗರಿಕ ಮತ್ತು ಪೂರೈಕೆ, ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಅನುಭವ ಹೊಂದಿರುವ ಮದನ್ ಗೋಪಾಲ್ ಅವರ ಜನ ಪ್ರೀತಿ ನೀತಿ- ತೀರ್ಮಾನಗಳಿಂದಲೇ ಖ್ಯಾತಿ ಗಳಿಸಿದ್ದಾರೆ. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಮದನ ಗೋಪಾಲ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವಿಚಾರವಾಗಿ ರಾಜ್ಯದಲ್ಲಿ ಕೈಗೊಂಡಿರುವ ತೀರ್ಮಾನಗಳನ್ನು ಆರೋಗ್ಯ ಕ್ಷೇತ್ರ ಸ್ಮರಿಸುತ್ತಿದೆ. ಇದೀಗ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಯನ್ನು ಜಾರಿಗೆ ತರುವ ಸಂಬಂಧ ಸರ್ಕಾರ 21 ಸದಸ್ಯರುಳ್ಳ ಕಾರ್ಯ ಪಡೆಯನ್ನು ರಚನೆ ಮಾಡಿದೆ. ಅದರ ಅಧ್ಯಕ್ಷತೆಯನ್ನು ನಿವೃತ್ತ ಐಎಎಸ್ ಅಧಿಕಾರಿ ಮದನ ಗೋಪಾಲ್ ಅವರಿಗೆ ವಹಿಸಿರುವುದು ಶಿಕ್ಷಣ ವಲಯದಲ್ಲಿ ಸಂತಸ ಮೂಡಿಸಿದೆ. ಕಾಲಮಿತಿಯೊಳಗೆ ಪ್ರಾಮಾಣಿಕ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಹೆಸರಾಗಿರುವ ದಕ್ಷ ಅಧಿಕಾರಿ ಮಕ್ಕಳ ಭವಿಷ್ಯಕ್ಕೆ ಸಂಬಂಧಿಸಿದ ಶಿಕ್ಷಣ ನೀತಿಯ ಅನುಷ್ಠಾನದ ಕಾರ್ಯಪಡೆ ಮುಖ್ಯಸ್ಥರನ್ನಾಗಿ ಮಾಡಿರುವುದು ಚರ್ಚೆಗೆ ನಾಂದಿ ಹಾಡಿದೆ.
ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ನೇತೃತ್ವ
ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಸಂಬಂಧ ಕಾರ್ಯಪಡೆ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಸಂಬಂಧ ಒನ್ಇಂಡಿಯಾ ಕನ್ನಡ ಜತೆ ಪ್ರತಿಕ್ರಿಯೆ ನೀಡಿದ ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್, ರಾಷ್ಟ್ರೀಯ ಶಿಕ್ಷಣ ನೀತಿ 2020 ಅನುಷ್ಠಾನದ ಕರಡು ಚೌಕಟನ್ನು ತಯಾರಿಸುವುದು, ನೀತಿಯ ಕರುಡು ದಾಖಲೆ ಪರಿಶೀಲಿಸಿ ಅಂತಿಮ ಗೊಳಿಸುವುದು ಸೇರಿದಂತೆ ಹಲವು ಮಹತ್ವದ ಜವಾಬ್ಧಾರಿಯನ್ನು ವಹಿಸಲಾಗಿದೆ. ಪೂರ್ವ ಪ್ರಾಥಮಿಕ ತರಗತಿಗಳಿಂದ ದ್ವಿತೀಯ ಪಿಯುಸಿ ವರೆಗಿನ ತರಗತಿಗಳಿಗೆ ಯಾವ ಹಂತದಲ್ಲಿ ಎನ್ಇಪಿ ಅನುಷ್ಠಾನ ಮಾಡಬೇಕು. ಪಠ್ಯ ವಸ್ತು, ಅದರ ಚೌಕಟ್ಟು ಮತ್ತಿತರ ವಿಚಾರದ ಬಗ್ಗೆ ವರದಿ ನೀಡುವುದು ಕಾರ್ಯಪಡೆಯ ಜವಾಬ್ಧಾರಿ. ಮೊದಲ ಸಭೆ ಸೇರಿ ಚರ್ಚೆ ನಡೆಸಿದ ಬಳಿಕ ಸಂಪೂರ್ಣ ಚಿತ್ರಣ ಗೊತ್ತಾಗಲಿದೆ ಎಂದರು.
NEP ಜಾರಿ ಕಾರ್ಯಪಡೆ ಆದೇಶ
ರಾಜ್ಯದಲ್ಲಿ ಈಗಾಗಲೇ ಪದವಿ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಸಕ್ತ ಸಾಲಿನಿಂದಲೇ ಜಾರಿಗೆ ತರಲಾಗಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಂತದಲ್ಲಿ ಮುಂದಿನ ವರ್ಷದಿಂದ NEP- 2020 ಜಾರಿಗೆ ತರಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪರಿಚಯಿಸಿರುವ ಕಾರಣದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ರಾಜ್ಯದ 65 ಸಾವಿರ ಅಂಗನವಾಡಿ ಕೇಂದ್ರಗಳು, 1.25 ಲಕ್ಷ ಅಂಗನವಾಡಿ ನೌಕರರ ಭವಿಷ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಿತ್ತು. ಈ ಕುರಿತು ಒನ್ಇಂಡಿಯಾ ಕನ್ನಡ ವಿಶೇಷ ವರದಿಯನ್ನು ಪ್ರಕಟಿಸಿತ್ತು. "ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದ್ರೆ ರಾಜ್ಯದಲ್ಲಿ 65 000 ಅಂಗನವಾಡಿಗಳಿಗೆ ಪೆಟ್ಟು" ಅಡಿ ಬರಹದಡಿ ವರದಿ ಪ್ರಕಟಿಸಿತ್ತು. ಈ ಎಲ್ಲಾ ಸಮಸ್ಯೆಗಳು ತಲೆದೋರುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಪಡೆ ರಚನೆಗೆ ನಿರ್ದೇಶಿಸಿ ಮದನ ಗೋಪಾಲ್ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಅದರಂತೆ 21 ಸದಸ್ಯರ ಕಾರ್ಪಪಡೆ ನೇಮಕಕ್ಕೆ ಅಧಿಸೂಚನೆ ಹೊರಡಿಸಿ ಸರ್ಕಾರ ಆದೇಶ ಹೊರಡಿಸಿದೆ.
ಕಾರ್ಯಪಡೆ ಸದಸ್ಯರ ವಿವರ
ರಾಜ್ಯದಲ್ಲಿ ಒಂದನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೆ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನುಷ್ಠಾನ ಮಾಡುವ ಸಂಬಂಧ ವರದಿ ನೀಡಲು ಸರ್ಕಾರ ಕಾರ್ಯಪಡೆ ಸಮಿತಿ ರಚನೆ ಮಾಡಿದ್ದು, ಅದರಲ್ಲಿ 21 ಸದಸ್ಯರಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಮದನ ಗೋಪಾಲ್ ಅಧ್ಯಕ್ಷರಾಗಿದ್ದಾರೆ. ಉಳಿದಂತೆ, ಅಜೀಂಪ್ರೇಮ್ ಜಿ ಪ್ರತಿಷ್ಠಾನದ ರಿಷಿಕೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನೀಲ್ ಆರ್., ರಾಜ್ಯ ಯೋಜನಾ ಆಯೋಗದ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು, ಶಿಕ್ಷಣ ತಜ್ಞ ಡಾ. ಪ್ರವೀಣ್ ಕುಮಾರ್ ಸಯ್ಯಪ್ಪ ರಾಜ್, ನಿವೃತ್ತ ಪ್ರಾಂಶುಪಾಲ ಗಣೇಶ್ ಭಟ್, ನಿವೃತ್ತ ಪ್ರಾಧ್ಯಾಪಕ ಪ್ರೊ. ರಾಜು, ಶಿಕ್ಷಣ ತಜ್ಞೆ ಡಾ. ಪದ್ಮಾವತಿ, ಎಂ.ಎನ್.ಬೇಗ್, ರಾಷ್ಟ್ರೀಯ ಕೌಶ್ಯ ಆಯೋಗದ ರಾಜ್ಯ ಅಧಿಕಾರಿ ಕ್ಯಾಪ್ಟನ್ ಕೌಸ್ತುವನಾಥ್, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮರಿಸ್ವಾಮಿ, ಶಿಕ್ಷಣ ತಜ್ಞ ಶೇಷಗಿರಿ ಮಧುಸೂಧನ್, ಶಿಕ್ಷಣ ತಜ್ಞೆ ಡಾ. ಸುಪರ್ಣಾ ದಿವಾಕರ್, ಬೆಂಗಳೂರು ವಿವಿ ನಿವೃತ್ತ ಕುಲಪತಿ ಶಕುಂತಲಾ ಪತ್ರೆ ಮತ್ತಿತರರು ಕಾರ್ಯಪಡೆ ಸದಸ್ಯರಾಗಿದ್ದಾರೆ.
ಕಾರ್ಯ ಪಡೆ ಕೆಲಸವೇನು?
ರಾಷ್ಟ್ರೀಯ ಶಿಕ್ಷಣ ನೀತಿ 2020 ಅನುಷ್ಠಾನ ಕರಡು ಚೌಕಟ್ಟು ತಯಾರಿಸುವುದು, ನೀತಿಯ ಕರಡು ದಾಖಲೆ ಪರಿಶೀಲಿಸಿ ಅಂತಿಮಗೊಳಿಸವುದು. ಎಲ್ಲರೊಂದಿಗೆ ಸೇರಿ ಕರಡು ಚೌಕಟ್ಟು ಸ್ವಚ್ಛವಾಗಿ ನಿರ್ವಹಣೆ ಮಾಡುವುದು. ಪೂರ್ವ ಪ್ರಾಥಮಿಕ ಹಾಗೂ 1 ರಿಂದ 12 ನೇ ತರಗತಿ ವರೆಗಿನ ರಾಜ್ಯ ಪಠ್ಯ ವಸ್ತು ಚೌಕಟ್ಟು ತಯಾರಿಸುವುದು, ಮಾರ್ಗದರ್ಶನ ನೀಡುವುದು. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಗೊಳಿಸಲು ಅಗತ್ಯ ಇರುವ ಕಾರ್ಯಗಳನ್ನು ಹಂಚುವುದು, ಅವುಗಳ ಮೇಲುಸ್ತುವಾರಿ ನೋಡುವುದು, ಅಂತರ ಗುರುತಿಸಿ ಅವುಗಳ ನಿವಾರಣೆಗೆ ಅಗತ್ಯ ನೀತಿ ರೂಪಿಸುವುದು, ಸಾಮಾಜಿಕ ನ್ಯಾಯ ಮತ್ತು ಸಮಾನ ಶಿಕ್ಷಣ ಮಂತ್ರಗಳನ್ನು ಪಾಲನೆ ಕುರಿತ ಕಾರ್ಯತಂತ್ರ ರೂಪಿಸುವುದು. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕಾಗಿ ಶಾಶ್ವತ ನೀತಿ ಜಾರಿ ಮಾಡುವುದು. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಪರಿಣಾಮಗಳನ್ನು ವಿಶ್ಲೇಷಣೆ ಮಾಡಿ ಮಾರ್ಗದರ್ಶನ ಮಾಡುವುದು. ಇದು ಕಾರ್ಯಪಡೆಗೆ ವಹಿಸಿರುವ ಜವಾಬ್ಧಾರಿಗಳು.
ಅಂಗನವಾಡಿಗಳಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣ ಉಳಿವಿಗೆ ಹೋರಾಟ
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉಲ್ಲೇಖಿಸಿದಂತೆ ಶಿಕ್ಷಣ ಇಲಾಖೆ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಉತ್ಸುಕವಾಗಿರುವ ಬೆನ್ನಲ್ಲೇ ರಾಜ್ಯದ 65 ಸಾವಿರ ಅಂಗನವಾಡಿ ನೌಕರರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅದರ ಸಾಧಕ ಬಾದಕಗಳ ಬಗ್ಗೆ ಚರ್ಚೆ ನಡೆದಿದೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅಡಿ ಈಗಾಗಲೇ "ಆಟ, ಪಾಠ, ಓಟ ಜತೆಗೆ ಊಟ" ನೀಡಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿಗಳಲ್ಲಿ ಉಳಿಸಿಕೊಳ್ಳಲು ಮಕ್ಕಳಿಗೆ ಗುಣಮಟ್ಟದ ಪಾಠ ಹೇಳಿಕೊಡುವ ಬಗ್ಗೆ ಅಂಗನವಾಡಿ ಶಿಕ್ಷಕರಿಗೆ ತರಬೇತಿ ಕೊಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಿದೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಈಗಾಗಲೇ ಇಸಿಸಿ( Early childhood Education) ಅಸ್ತಿತ್ವದಲ್ಲಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಲು ಅಂಗನವಾಡಿ ನೌಕರರನ್ನು ಸಜ್ಜುಗೊಳಿಸಲಾಗುತ್ತಿದೆ. ಆದರೆ ಸಾರ್ವಜನಿಕ ಶಿಕ್ಷಣ ಇಲಾಖೆಯೇ ಪೂರ್ವ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಲು ತೆರೆಮರೆಯಲ್ಲಿ ಕಸರತ್ತು ನಡೆಸಿದೆ. ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿಗಳಲ್ಲಿಯೇ ಉಳಿಸಿಕೊಳ್ಳಲು ಸಕಲ ತಯಾರಿ ನಡೆಸಿರುವ ಅಂಗನವಾಡಿ ನೌಕರರು ಅಗತ್ಯ ಬಿದ್ದರೆ ದೊಡ್ಡ ಮೊಟ್ಟದಲ್ಲಿ ಬೀದಿಗೆ ಇಳಿಯಲು ತೀರ್ಮಾನಿಸಿದ್ದಾರೆ. ಕೆಲವೇ ದಿನಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ದೊಡ್ಡ ಹೋರಾಟಕ್ಕೆ ನಾಂದಿ ಹಾಡುವ ಮನ್ಸೂಚನೆ ನೀಡಿದೆ.