ಸರ್ಕಾರಿ ಶಾಲೆಯೇ ಸಾಕು: ಮಾದರಿಯಾದರು ಈ ಮಹಿಳಾ ಜಿಲ್ಲಾಧಿಕಾರಿ
Recommended Video

ತಿರುನೆಲ್ವೇಲಿ, ಜನವರಿ 10: ರಾಜಕಾರಣಿಗಳು, ಸಾಹಿತಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಸಲಹೆ ನೀಡುತ್ತಾ, ತಮ್ಮ ಮಕ್ಕಳನ್ನು ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಾರೆ ಎನ್ನುವುದು ಸಾಮಾನ್ಯ ಆರೋಪ.
ಆದರೆ, ಇಲ್ಲೊಬ್ಬರು ಜಿಲ್ಲಾಧಿಕಾರಿ ಈ ಎಲ್ಲ ಆಡಂಬರಗಳು ಬೇಕಾಗಿಲ್ಲ. ತಮ್ಮ ಮಗುವೂ ಎಲ್ಲರಂತೆ ಸಾಮಾನ್ಯವಾಗಿ ಬೆಳೆಯಲಿ ಎಂದು ತೀರ್ಮಾನ ತೆಗೆದುಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಮಾತ್ರವಲ್ಲ, ಇತರರಿಗೂ ಮಾದರಿಯಾಗಿದ್ದಾರೆ.
ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಮೊದಲ ಮಹಿಳಾ ಜಿಲ್ಲಾಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಶಿಲ್ಪಾ ಪ್ರಭಾಕರ್ ಸತೀಶ್, ತಮ್ಮ ಮಗಳನ್ನು ಕಾನ್ವೆಂಟ್ಗೆ ಸೇರಿಸದೆ ಸರ್ಕಾರದ ಸಾಮಾನ್ಯ ಅಂಗನವಾಡಿಗೆ ಸೇರಿಸಿದ್ದಾರೆ.
2009ರ ಐಎಎಸ್ ಬ್ಯಾಚ್ ಅಧಿಕಾರಿಯಾಗಿರುವ ಅವರು ಕಳೆದ ವರ್ಷದ ಮೇ ತಿಂಗಳಿನಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಮತ್ತೊಂದು ವಿಶೇಷವೆಂದರೆ ಇವರು ಕರ್ನಾಟಕದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಲ್ಎಲ್ಬಿ ಪದವಿ ಪಡೆದಿದ್ದಾರೆ.
ಸರ್ಕಾರಿ ಶಾಲೆಗಳ ಕುರಿತಾದ ಅವರ ಪ್ರೀತಿಯ ಬಗ್ಗೆ 'ದಿ ನ್ಯೂಸ್ ಮಿನಿಟ್' ಜಾಲತಾಣದಲ್ಲಿ ಪ್ರಕಟವಾದ ವರದಿ ವಿವರ ಇಲ್ಲಿದೆ.

ಒಂಟಿಯಾದ ಮಗಳಿಗಾಗಿ
ಅವರ ಪುಟಾಣಿ ಮಗಳಿಗೆ ಕಚೇರಿಯ ಕ್ಯಾಂಪ್ನಲ್ಲಿ ಮಾತನಾಡಲು, ಆಟವಾಡಲು ಯಾರೂ ಇಲ್ಲ. ಜಿಲ್ಲಾಧಿಕಾರಿ ಅಮ್ಮನಿಗೆ ಬಿಡುವಿಲ್ಲದ ಕೆಲಸ. ಅಲ್ಲೆಲ್ಲೂ ಸುತ್ತಮುತ್ತ ಆಕೆಯ ವಯಸ್ಸಿನ ಮಕ್ಕಳೂ ಇಲ್ಲ. ಅಲ್ಲದೆ ಸುತ್ತಮುತ್ತ ಇರುವ ಶಾಲೆಗಳಲ್ಲಿ ಮೂರು ವರ್ಷ ದಾಟಿದ ಮಕ್ಕಳಿಗೆ ಮಾತ್ರ ಪ್ರವೇಶ ಇರುವುದು. ಮಗಳು ಒಂಟಿಯಾಗುತ್ತಾಳೆ ಎಂಬುದನ್ನು ಅರಿತ ಶಿಲ್ಪಾ, ಮಗಳನ್ನು ಅಂಗನವಾಡಿಗೆ ಸೇರಿಸಲು ನಿರ್ಧರಿಸಿದರು.

ಉತ್ತಮ ಅಂಗನವಾಡಿಗಳಿವೆ
ಜಿಲ್ಲೆಯಲ್ಲಿ ಉತ್ತಮ ಮೂಲಸೌಕರ್ಯವುಳ್ಳ ಉತ್ತಮ ಅಂಗನವಾಡಿಗಳಿವೆ. ನನ್ನ ನಿವಾಸದ ಸಮೀಪ ಇರುವ ಅಂಗನವಾಡಿಯಲ್ಲಿ ನನ್ನ ಮಗಳ ವಯಸ್ಸಿನ ಮಕ್ಕಳಿಗೆ ಬೇಕಾದ ಎಲ್ಲ ಸವಲತ್ತುಗಳಿವೆ. ಈ ಕೇಂದ್ರಗಳು ಶಿಕ್ಷಣದ ಜತೆಗೆ ಮಕ್ಕಳಲ್ಲಿ ಉತ್ತಮ ಗುಣಗಳನ್ನೂ ಬೆಳೆಸುತ್ತವೆ ಎಂದು ಶಿಲ್ಪಾ ಹೇಳಿದ್ದಾರೆ.
ಮಗುವಿನ ಪೌಷ್ಟಿಕಾಂಶಯುತ ಆಹಾರ, ಆರೋಗ್ಯ ದಾಖಲೆಗಳ ನಿರ್ವಹಣೆ, ಮಕ್ಕಳ ಅಗತ್ಯಗಳಿಗೆ ಅನುಗುಣವಾಗಿ ಪೋಷಕರಿಗೆ ಸಲಹೆಗಳನ್ನು ನೀಡುವಂತಹ ಕಾರ್ಯಗಳನ್ನೂ ಮಾಡುತ್ತಾರೆ. ಒಂದು ಮಗುವಿಗೆ ಇದಕ್ಕಿಂತ ಇನ್ನೇನು ಬೇಕು? ಎಂದು ಅವರು ಪ್ರಶ್ನೆ ಮುಂದಿಡುತ್ತಾರೆ.

ಸರ್ಕಾರಿ ಶಾಲೆ, ಅಂಗನವಾಡಿಗೆ ಸೇರಿಸಿ
'ಅವಳಿಗೆ (ಮಗು) ಅಂಗನವಾಡಿ ತುಂಬಾ ಇಷ್ಟವಾಗಿದೆ. ಬೇರೆ ಮಕ್ಕಳನ್ನು ಭೇಟಿ ಮಾಡುವುದು ಆಕೆಗೆ ಎಲ್ಲಿಲ್ಲದ ಖುಷಿ. ಅವರೊಂದಿಗೆ ಬೆರೆತು ತಮಿಳನ್ನು ಕಲಿಯುತ್ತಿದ್ದಾಳೆ. ಆಕೆಗೆ ಭಾಷೆ ಅರ್ಥವಾಗುತ್ತದೆ. ಸ್ವಲ್ಪ ಮಾತನಾಡಬಲ್ಲಳು ಕೂಡ. ಎಲ್ಲ ಪೋಷಕರೂ ತಮ್ಮ ಅಂತಸ್ತು, ಗೌರವ ಎಂಬುದನ್ನು ಬಿಟ್ಟು ತಮ್ಮ ಮಕ್ಕಳನ್ನು ಅಂಗನವಾಡಿಗಳಿಗೆ ಕಳುಹಿಸಲು ಮುಂದಾಗಬೇಕು' ಎಂದು ಸಲಹೆ ನೀಡಿದ್ದಾರೆ.

ಇಂಗ್ಲಿಷ್ ಕಲಿಕೆಗೆ ಯೋಜನೆ
ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಪೋಷಕರನ್ನು ಉತ್ತೇಜಿಸುವುದರ ಜತೆಗೆ, ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಇಂಗ್ಲಿಷ್ ಜ್ಞಾನವನ್ನು ವೃದ್ಧಿಸುವ ನಿಟ್ಟಿನಲ್ಲಿ ವೈಯಕ್ತಿಕವಾಗಿ ಯೋಜನೆಯೊಂದನ್ನು ಆರಂಭಿಸಿದ್ದಾರೆ.
ಚೆನ್ನೈ ಪಾಲಿಕೆಯ ಶಿಕ್ಷಣ ಇಲಾಖೆಯ ಮಾಜಿ ಉಪ ಆಯುಕ್ತರಾಗಿದ್ದ ಶಿಲ್ಪಾ, ಜಿಲ್ಲೆಯಲ್ಲಿನ ಮಕ್ಕಳ ಶಿಕ್ಷಣ ಗುಣಮಟ್ಟ ಅಭಿವೃದ್ಧಿಗೆ ಸರ್ಕಾರೇತರ ಸಂಸ್ಥೆಗಳ ನೆರವು ಪಡೆದುಕೊಳ್ಳುತ್ತಿದ್ದಾರೆ.
'ಯೋಕ್ ಎಂಬ ಎನ್ಜಿಒದ ಸಹಭಾಗಿತ್ವದಲ್ಲಿ ಜಿಲ್ಲೆಯಲ್ಲಿ ಎಂಟರಿಂದ ಹತ್ತು ವರ್ಷದವರೆಗಿನ ಮಕ್ಕಳಿಗೆ ಇಂಗ್ಲಿಷ್ ತರಗತಿಗಳನ್ನು ನಡೆಸಲಾಗುತ್ತಿದೆ. ಅವರೊಳಗೆ ಭಾಷೆಯ ಬಗ್ಗೆ ಪ್ರೀತಿ ಮೂಡಿಸುತ್ತೇವೆ ಎಂಬ ವಿಶ್ವಾಸ ನಮಗಿದೆ. ಖಾಸಗಿ ಶಾಲೆಗಳೊಂದಿಗೆ ಪೈಪೋಟಿ ನಡೆಸಲು ಅವರನ್ನು ಸಜ್ಜುಗೊಳಿಸಲಾಗುತ್ತಿದೆ' ಎಂದು ತಿಳಿಸಿದ್ದಾರೆ.

ಯಶಸ್ವಿಯಾದರೆ ಎಲ್ಲೆಡೆ ಜಾರಿ
'ಚೆನ್ನೈನಲ್ಲಿ ಅನೇಕ ಎನ್ಜಿಓಗಳು ನನ್ನ ಬಳಿಯೇ ಬಂದಿದ್ದವು. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಸ್ವಯಂ ಇಚ್ಛೆಯಿಂದ ಈ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರ ಬಗ್ಗೆ ಹೆಚ್ಚಿನವರಿಗೆ ತಿಳಿವಳಿಕೆ ಇಲ್ಲ. ಕೋಡುಧನಲ್ಲೂರ್ನಲ್ಲಿ ಏಳು ತಿಂಗಳಿನಿಂದ ಯೋಜನೆಯೊಂದನ್ನು ನಡೆಸುತ್ತಿದ್ದೇವೆ. ಇದು ಯಶಸ್ವಿಯಾದರೆ ಇದನ್ನು ಜಿಲ್ಲೆಯಾದ್ಯಂತ ಜಾರಿಗೊಳಿಸಲು ಬಯಸುತ್ತೇನೆ' ಎಂದು ಶಿಲ್ಪಾ ಹೇಳಿದ್ದಾರೆ.












Click it and Unblock the Notifications