AB de Villiers: ಐಪಿಎಲ್ 2026 ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಆರ್ಸಿಬಿ ಬಗ್ಗೆ ಆತಂಕ ವ್ಯಕ್ತಪಡಿಸಿದ ಎಬಿ ಡಿವಿಲಿಯರ್ಸ್
IPL 2026 Final: ಐಪಿಎಲ್ 2026ರ ಭವ್ಯ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಕ್ವಾಲಿಫೈಯರ್ 1ರಲ್ಲಿ ಜಿಟಿ ತಂಡವನ್ನು 92 ರನ್ಗಳ ಅಂತರದಿಂದ ಮಣಿಸಿದ್ದ ಆರ್ಸಿಬಿ ಈ ಪಂದ್ಯದಲ್ಲಿ ಹಾಟ್ ಫೇವರಿಟ್ ಆಗಿ ಕಣಕ್ಕಿಳಿಯುತ್ತಿದೆ. ಇದಕ್ಕೂ ಮುನ್ನವೇ ಇದೇ ತಂಡದ ಮಾಜಿ ಸ್ಟಾರ್ ಪ್ಲೇಯರ್ ಮಿಸ್ಟರ್ 360 ಅಂತಲೇ ಖ್ಯಾತಿಯಾಗಿರುವ ಎಬಿ ಡಿವಿಲಿಯರ್ಸ್ ಎಚ್ಚರಿಕೆ ಸಂದೇಶವೊಂದನ್ನು ರವಾನೆ ಮಾಡಿದ್ದಾರೆ.
ಅಭಿಮಾನಿಗಳು ಆರ್ಸಿಬಿ ಸತತ ಎರಡನೇ ಬಾರಿ ಟ್ರೋಫಿ ಗೆಲ್ಲುವುದು ಖಚಿತ ಎಂದು ಸಂಭ್ರಮಿಸುತ್ತಿರುವ ಬೆನ್ನಲ್ಲೇ ಎಬಿ ಡಿವಿಲಿಯರ್ಸ್ ಅವರು ಆರ್ಸಿಬಿ ತಂಡದ ಮುಂದಿರುವ ಒಂದು ದೊಡ್ಡ ಸವಾಲಿನ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಎಬಿ ಡಿವಿಲಿಯರ್ಸ್ ಎಚ್ಚರಿಕೆ ಸಂದೇಶ
'ಆರ್ಸಿಬಿ ಸದ್ಯ ಉತ್ತಮ ಫಾರ್ಮ್ನಲ್ಲಿದೆ ಮತ್ತು ಡಿಫೆಂಡಿಂಗ್ ಚಾಂಪಿಯನ್ ಆಗಿ ಆಡುತ್ತಿದೆ ನಿಜ. ಆದರೆ ಫೈನಲ್ನಂತಹ ದೊಡ್ಡ ಪಂದ್ಯಗಳಲ್ಲಿ ಫೇವರಿಟ್ ಹಣೆಪಟ್ಟಿ ಹೊರುವುದು ಕೆಲವೊಮ್ಮೆ ಒತ್ತಡವನ್ನು ಹೆಚ್ಚಿಸುತ್ತದೆ. ಕ್ವಾಲಿಫೈಯರ್ 1ರ ದೊಡ್ಡ ಗೆಲುವಿನ ನಂತರ ತಂಡದಲ್ಲಿ ಅತಿಯಾದ ಆತ್ಮವಿಶ್ವಾಸವಿದ್ದರೆ, ಅದು ಫೈನಲ್ನಲ್ಲಿ ದೊಡ್ಡ ಹೊಡೆತ ನೀಡಬಹುದು. ಏಕೆಂದರೆ ಫೈನಲ್ ಪಂದ್ಯದಲ್ಲಿ ಹೊಸ ದಿನ, ಹೊಸ ಒತ್ತಡ ಇರುತ್ತದೆ,' ಎಂದು ಅವರು ಎಚ್ಚರಿಸಿದ್ದಾರೆ.
ಫೈನಲ್ ಪಂದ್ಯ ಅಹಮದಾಬಾದ್ನಲ್ಲಿ ನಡೆಯುತ್ತಿದೆ. ಇದು ಗುಜರಾತ್ ಟೈಟಾನ್ಸ್ ತಂಡದ ತವರು ಮೈದಾನವಾಗಿದೆ. ಆದ್ದರಿಂದ ಅವರಿಗೆ ಈ ಪಿಚ್ ಮತ್ತು ಇಲ್ಲಿನ ದೊಡ್ಡ ಬೌಂಡರಿಗಳ ಬಗ್ಗೆ ಹೆಚ್ಚು ತಿಳಿದುಕೊಂಡಿರುತ್ತಾರೆ. ಕ್ವಾಲಿಫೈಯರ್ 1ರಲ್ಲಿ ಸೋತ ನಂತರ ಗುಜರಾತ್ ಕ್ವಾಲಿಫೈಯರ್ 2ರಲ್ಲಿ ಭರ್ಜರಿಯಾಗಿ ಕಂಬ್ಯಾಕ್ ಮಾಡಿದೆ. ಇನ್ನು ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಫೈನಲ್ ಪಂದ್ಯದಲ್ಲಿ ಆರ್ಸಿಬಿಗೆ ಕಠಿಣ ಸವಾಲು ಒಡ್ಡಬಲ್ಲದು ಎಂಬುದು ಎಬಿಡಿಯವರ ಎಚ್ಚರಿಕೆಯಾಗಿದೆ.
ಆರ್ಸಿಬಿಗೆ ಮಿಸ್ಟರ್ 360 ಮಹತ್ವದ ಸಲಹೆ
'ಫೈನಲ್ ಪಂದ್ಯಗಳಲ್ಲಿ ಪವರ್ಪ್ಲೇ ಮತ್ತು ಡೆತ್ ಓವರ್ಗಳು ಪಂದ್ಯದ ಗತಿಯನ್ನು ನಿರ್ಧರಿಸುತ್ತವೆ. ಈ ಹೈವೋಲ್ಟೇಜ್ ಸಮರದಲ್ಲಿ ಆರ್ಸಿಬಿ ಬೌಲರ್ಗಳು ಮತ್ತು ಬ್ಯಾಟರ್ಗಳು ಒತ್ತಡಕ್ಕೆ ಒಳಗಾಗದೆ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಮುಖ್ಯವಾಗುತ್ತದೆ. ಆರಂಭಿಕ ವಿಕೆಟ್ಗಳು ಬೇಗನೆ ಉರುಳಿದರೆ ಮಧ್ಯಮ ಕ್ರಮಾಂಕದಲ್ಲಿ ಬಂದವರು ಜವಾಬ್ದಾರಿಯುತವಾಗಿ ಆಡಬೇಕಾಗುತ್ತದೆ,' ಎಂದು ಮಹತ್ವದ ಸಲಹೆ ನೀಡಿದ್ದಾರೆ.
'ಆರ್ಸಿಬಿ ಈ ಸೀಸನ್ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುವ ಅತ್ಯಂತ ಬಲಿಷ್ಠ ತಂಡವಾಗಿ ಕಾಣಿಸಿಕೊಂಡಿದೆ. ಆದರೆ ಫೈನಲ್ ಪಂದ್ಯ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಹಿಂದಿನ ಗೆಲುವನ್ನು ಮರೆತು ಅಹಮದಾಬಾದ್ ಮೈದಾನದಲ್ಲಿ ಶೂನ್ಯದಿಂದ ಆಟ ಆರಂಭಿಸಬೇಕಿದೆ. ಜಿಟಿ ತಂಡವನ್ನು ಅವರದ್ದೇ ನೆಲದಲ್ಲಿ ಹಗುರವಾಗಿ ಪರಿಗಣಿಸಬಾರದು,' ಎಂದು ಕಿವಿಮಾತು ಹೇಳಿದ್ದಾರೆ.
ಒಟ್ಟನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಹಿಂದಿನ ತಪ್ಪುಗಳಿಂದ ಪಾಠ ಕಲಿತು ಒತ್ತಡವನ್ನು ಮೆಟ್ಟಿ ನಿಂತರೆ ಮತ್ತೊಮ್ಮೆ ಚಾಂಪಿಯನ್ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಎಬಿ ಡಿವಿಲಿಯರ್ಸ್ ಹೇಳಿಕೆಯ ಅರ್ಥವಾಗಿದೆ. ಈ ಪಂದ್ಯ ವೀಕ್ಷಣೆ ಮಾಡಲು ಬರೀ ಕರ್ನಾಟಕ ಅಷ್ಟೇ ಅಲ್ಲದೆ ಇಡೀ ದೇಶಾದ್ಯಂತ ಅಭಿಮಾನಿಗಳು ಕಾರತರದಿಂದ ಕಾಯುತ್ತಿದ್ದಾರೆ.












Click it and Unblock the Notifications