ಕರ್ನಾಟಕದಲ್ಲಿ "ಬಂದ್" ಆಗಿರುವ ಪೂರ್ವ ಪ್ರಾಥಮಿಕ ಶಾಲೆಗಳ ಗತಿಯೇನು?
ಬೆಂಗಳೂರು, ನ. 08: ಕೊರೊನಾ ಸೋಂಕಿನಿಂದ ಕಳೆದ 20 ತಿಂಗಳಿನಿಂದ ಸ್ಥಗಿತಗೊಂಡಿದ್ದ ಪೂರ್ವ ಪ್ರಾಥಮಿಕ ಶಾಲೆಗಳು ರಾಜ್ಯದಲ್ಲಿ ಇಂದಿನಿಂದ ಆರಂಭವಾಗಲಿವೆ. ಕೊರೊನಾ ಮಾರ್ಗಸೂಚಿ ಪಾಲನೆ ಷರತ್ತಿನೊಂದಿಗೆ ಅಂಗನವಾಡಿ ಕೇಂದ್ರಗಳ ಆರಂಭಕ್ಕೆ ಅವಕಾಶ ಕೊಟ್ಟ ಬೆನ್ನಲ್ಲೇ ಪೂರ್ವ ಪ್ರಾಥಮಿಕ ಶಾಲೆಗಳು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಇಂದಿನಿಂದ ಪೂರ್ವ ಪ್ರಾಥಮಿಕ ಶಾಲೆಗಳು ಕಾರ್ಯಾರಂಭವಾಗಲಿವೆ. ಕೆಲವು ಶಾಲೆಗಳು ಪೂರ್ವ ಪ್ರಾಥಮಿಕ ಭೌತಿಕ ತರಗತಿ ಪ್ರಾರಂಭಕ್ಕೆ ಉತ್ಸಾಹ ತೋರಿದ್ದರೆ, ಕೆಲವು ಶಾಲೆಗಳು ಪೋಷಕರ ಒಪ್ಪಿಗೆಯಿಲ್ಲ ಎಂಬ ಕಾರಣಕೊಟ್ಟು ತೆರೆಯದಿರಲು ಚಿಂತನೆ ನಡೆಸಿವೆ.
ರಾಜ್ಯದಲ್ಲಿ ಪೂರ್ವ ಪ್ರಾಥಮಿಕ ಶಾಲೆ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಅದರಂತೆ ಕೊರೊನಾ ಮಾರ್ಗಸೂಚಿ ಅನ್ವಯ ಇಂದಿನಿಂದ ಪೂರ್ವ ಪ್ರಾಥಮಿಕ ಶಾಲೆಗಳು ರಾಜ್ಯದಲ್ಲಿ ಕಾರ್ಯರಂಭವಾಗಲಿವೆ. ಮೂರ ರಿಂದ ಆರು ವರ್ಷ ವಯಸ್ಸಿನ ಮಕ್ಕಳು ಕಳೆದ 20 ತಿಂಗಳಿನಿಂದ ನಿರಂತರ ಕಲಿಕೆಯಿಂದ ದೂರ ಉಳಿದಿದ್ದಾರೆ. ಎಲ್ಲಾ ಶಾಲೆಗಳು ಕಡ್ಡಾಯವಾಗಿ ಪೂರ್ವ ಪ್ರಾಥಮಿಕ ಭೌತಿಕ ತರಗತಿ ಪ್ರಾರಂಭಿಸಲಿವೆ. ಈ ಮಕ್ಕಳಿಗೆ ಆಗಿರುವ ಅನ್ಯಾಯ ಸರಿಪಡಿಸಲು ಅಸಾಧ್ಯ. ಹೀಗಾಗಿ ಈ ವಾಸ್ತವ ಅರಿತು ಪೋಷಕರು ಮಕ್ಕಳನ್ನು ಧೈರ್ಯವಾಗಿ ಶಾಲೆಗೆ ಕಳಿಸಬೇಕು. ಮಕ್ಕಳ ಸುರಕ್ಷತೆ ಬಗ್ಗೆ ಸರ್ಕಾರ ಪೋಷಕರಿಗೆ ಅಭಯ ನೀಡಿ ಮಕ್ಕಳ ನಿರಂತರ ಕಲಿಕೆಗೆ ಅವಕಾಶ ಕಲ್ಪಿಸಬೇಕು. ರಾಜ್ಯ ಸಲಹಾ ಸಮಿತಿಯ ಮೂಲ ಶಿಫಾರಸು ಕೂಡ ಚಿಕ್ಕ ಮಕ್ಕಳ ಕಲಿಕೆಗೆ ಮೊದಲ ಆದ್ಯತೆ ನೀಡಿತ್ತು. ಇದನ್ನು ಪೋಷಕರಿಗೆ ಸರ್ಕಾರ ಮನವರಿಕೆ ಮಾಡಿಕೊಟ್ಟು ಪೂರ್ವ ಪ್ರಾಥಮಿಕ ಶಾಲೆಗಳ ಭೌತಿಕ ತರಗತಿಗಳ ಯಶಸ್ಸಿಗೆ ಮುಂದಾಗಬೇಕು ಎಂದು ಕ್ಯಾಮ್ಸ್ ಮನವಿ ಮಾಡಿದೆ.
10 ರಿಂದ 20 ಲಕ್ಷ ಮಕ್ಕಳ ವಸ್ತುಸ್ಥಿತಿ
ಕೊರೊನಾ ಸೋಂಕು ಹಿನ್ನೆಲೆಯಲ್ಲಿ 2020 ಫೆಬ್ರವರಿಯಲ್ಲಿಯೇ ಶಾಲೆಗಳ ಭೌತಿಕ ತರಗತಿಗಳನ್ನು ರದ್ದು ಪಡಿಸಲಾಗಿತ್ತು. ಒಂದೂವರೆ ವರ್ಷದ ಬಳಿಕ ಶಾಲೆಗಳ ಪುನರಾರಂಭಕ್ಕೆ ಅವಕಾಶ ಕಲ್ಪಿಸಲಾಗಿತ್ತು. 2020 ಡಿಸೆಂಬರ್ನಲ್ಲಿ ವಿದ್ಯಾಗಮ ಮೂಲಕ ಹೈಸ್ಕೂಲ್ ಮಕ್ಕಳು ಕನಿಷ್ಠ ಕಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ 20 ತಿಂಗಳಿನಿಂದ ರಾಜ್ಯದಲ್ಲಿ ಸುಮರು 10 ರಿಂದ 20 ಲಕ್ಷ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಕಲಿಕೆಯಿಂದ ಸಂಪುರ್ಣ ದೂರ ಉಳಿದಿದ್ದಾರೆ. ಕೆಲವು ಶಾಲೆಗಳು ಆನ್ಲೈನ್ ತರಗತಿ ನಡೆಸಿದರೂ, ಬಹುತೇಕರು ಮಕ್ಕಳು ಮೊಬೈಲ್ನಿಂದ ದೂರ ಇರಲಿ ಎಂಬ ಕಾರಣಕ್ಕೆ ಆನ್ಲೈನ್ ತರಗತಿ ಹಾಜರಿಗೆ ಅವಕಾಶ ಕೊಟ್ಟಿಲ್ಲ. ಇನ್ನೂ ಬಹುತೇಕ ಪೋಷಕರು ಶಾಲೆ ತೆರೆಯದ ಹೊರತು ಯಾಕೆ ಶುಲ್ಕ ಕಟ್ಟಬೇಕು ಎಂಬ ಮನೋಭಾವನೆಯಿಂದ ಮಕ್ಕಳನ್ನು ಶಾಲೆಗೆ ಸೇರಿಸಿಲ್ಲ. ನರ್ಸರಿ, ಎಲ್ಕೆಜಿ ಹಾಗೂ ಯುಕೆಜಿಯಲ್ಲಿ ಪ್ರತಿ ವರ್ಷ 10 ರಿಂದ 25 ಲಕ್ಷ ವಿದ್ಯಾರ್ಥಿಗಳು ದಾಖಲಾತಿ ಆಗುತ್ತಾರೆ. ಸರ್ಕಾರದ ದಾಖಲಾತಿಗೆ ಲೆಕ್ಕ ಸಿಗದ ಮಕ್ಕಳು. ಈ ವರ್ಷ ಶೇ. 05 ರಷ್ಟು ಮಕ್ಕಳು ದಾಖಲಾತಿ ಆಗಿಲ್ಲ. ಇದರ ನಡುವೆ ರಾಜ್ಯದಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳು ಪ್ರಾರಂಭವಾಗುತ್ತಿವೆ.
ಕಾರ್ಪೋರೇಟ್ ಶಾಲೆಗಳ ಚಿತ್ರಣ
ಶ್ರೀಮಂತ ವರ್ಗದ ಮಕ್ಕಳು ವ್ಯಾಸಂಗ ಮಾಡುವ ಬಹುತೇಕ ಕಾರ್ಪೋರೇಟ್ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಮಕ್ಕಳು ದಾಖಲಾತಿ ಆಗಿದ್ದಾರೆ. ಯಾವುದೇ ಅಡೆತಡೆ ಇಲ್ಲದೇ ಆನ್ಲೈನ್ ತರಗತಿಗಳನ್ನು ನಡೆಸುತ್ತಿವೆ. ಸರ್ಕಾರ ಅನುಮತಿ ನೀಡಿರುವ ನಿಟ್ಟಿನಲ್ಲಿ ಭೌತಿಕ ತರಗತಿ ಪ್ರಾರಂಭ ಮಾಡಲು ಆಸಕ್ತಿ ತೋರಿವೆ. ಈ ವರ್ಗದ ಶಾಲೆಗಳು ನಾಳೆಯಿಂದ ಪೂರ್ವ ಪ್ರಾಥಮಿಕ ಶಾಲೆ ತೆರೆಯಲು ಮುಂದಾಗಿವೆ. ಆದರೆ ಕೇವಲ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಸೀಮಿತವಾಗಿರುವ ಕಿಡ್ಸೀ, ಕಿಂಡರ್ ಗಾರ್ಡನ್, ಯುರೋ ಕಿಡ್ಸ್ ನಂತಹ ಕಾರ್ಪೋರೇಟ್ ಪೂರ್ವ ಪ್ರಾಥಮಿಕ ಶಾಲೆಗಳು ಈಗಾಗಲೇ ಬಾಗಿಲು ಮುಚ್ಚಿದ್ದು ನಿಜವಾಗಿಯೂ ಶಾಲೆ ಆರಂಭಿಸುತ್ತವೆಯೇ ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.
ಸಿಬಿಎಸ್ಸಿ ಶಾಲೆಗಳ ಸ್ಥಿತಿಗತಿ
ರಾಜ್ಯದಲ್ಲಿ ಸಿಬಿಎಸ್ಸಿ ಪಠ್ಯಕ್ರಮದ ಸಾವಿರಾರು ಶಾಲೆಗಳಿವೆ. ಆದರೆ ಸಿಬಿಎಸ್ಸಿ ಬೋರ್ಡ್ನ ಮಾರ್ಗಸೂಚಿಗಳ ಅನ್ವಯ ಅವು ಕಾರ್ಯ ನಿರ್ವಹಿಸುತ್ತಿದ್ದು, ಸಿಬಿಎಸ್ಸಿ, ಐಸಿಎಸ್ಸಿ ಪಠ್ಯಕ್ರಮ ಶಾಲೆಗಳು ಬಹುತೇಕ ಆರಂಭವಾಗಿವೆ. ಕೆಲವು ಶಾಲೆಗಳು ಬಹುತೇಕ ವಾಹನ ಆಧಾರತ ಹೊಂದಿರುವ ಮಕ್ಕಳಿಗೆ ದಾಖಲಾತಿ ಕೊಟ್ಟಿದ್ದಾರೆ. ಈಗಾಗಲೇ ಶಾಲಾ ಶುಲ್ಕ ಕಟ್ಟಿಸಿಕೊಂಡಿದ್ದು ಆನ್ಲೈನ್ ತರಗತಿ ನಡೆಸುತ್ತಿವೆ. ಭೌತಿಕ ತರಗತಿಗಳು ಆರಂಭಿಸಿದರೆ, ವಾಹನ ಸೌಲಭ್ಯ ಕಲ್ಪಿಸುವ ಕಾರಣ ಆರ್ಥಿಕ ಹೊರೆ ಬೀಳಲಿದ್ದು, ಅದರಿಂದ ತಪ್ಪಿಸಿಕೊಳಳುವ ಭಾಗವಾಗಿ ಮಕ್ಕಳ ಸುರಕ್ಷತೆ ಹೆಸರಿನಲ್ಲಿ ಪೂರ್ವ ಪ್ರಾಥಮಿಕ ಶಾಲೆ ಭೌತಿಕ ತರಗತಿ ಪ್ರಾರಂಭಿಸಲು ಹಿಂದೇಟು ಹಾಕುತ್ತಿವೆ. ಟ್ರಾನ್ಸ್ ಪೋರ್ಟ್ ಹೊರೆಯಿಂದ ತಪ್ಪಿಸಿಕೊಳ್ಳುವ ಸಂಚಿನ ಭಾಗವಾಗಿ ಪೋಷಕರ ಅನುಮತಿ ನೆಪದಲ್ಲಿ ಕೆಲ ಆಡಳಿತ ಮಂಡಳಿಗಳು ಪೂರ್ವ ಪ್ರಾಥಮಿಕ ಶಾಲೆ ತೆರೆಯದಿರಲು ಚಿಂತನೆ ನಡೆಸಿವೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಮಧ್ಯಮ ವರ್ಗದ ಶಾಲೆಗಳ ದುಸ್ಥಿತಿ
ಗ್ರಾಮೀಣ ಭಾಗದ ಹಾಗೂ ಪಟ್ಟಣ ಪ್ರದೇಶದ ರಾಜ್ಯ ಪಠ್ಯ ಕ್ರಮ ಅಳವಡಿಸಿಕೊಂಡಿರುವ ಪೂರ್ವ ಪ್ರಾಥಮಿಕ ಶಾಲೆಗಳದ್ದು ಬೇರೆಯದ್ದೇ ಸಮಸ್ಯೆ. ಪೂರ್ವ ಪ್ರಾಥಮಿಕ ಶಾಲೆಗಳಿಗೆ ಶೇ. 5 ರಷ್ಟು ದಾಖಲಾತಿ ಹೊಂದಿಲ್ಲ. ನಗರ ಪ್ರದೇಶದಲ್ಲಿ ಒಂದಷ್ಟು ದಾಖಲಾತಿ ಆಗಿದ್ದರೂ, ಗ್ರಾಮೀಣ ಭಾಗದಲ್ಲಿ ಶಾಲೆಗಳಿಗೆ ಪೂರ್ವ ಪ್ರಾಥಮಿಕ ಓದುತ್ತಿರುವ ಮಕ್ಕಳು ದಾಖಲಾತಿಯೇ ಆಗಿಲ್ಲ. ಇದೀಗ ಶಾಲೆಗಳ ಭೌತಿಕ ತರಗತಿಗಳು ಆರಂಭವಾಗಿದ್ದು, ಉಳಿದ ಆರು ತಿಂಗಳಿಗಾಗಿ ಯಾಕೆ ಶುಲ್ಕ ಕಟ್ಟಬೇಕು. ಮುಂದಿನ ವರ್ಷವೇ ದಾಖಲಾತಿ ಮಾಡಿಸೋಣ ಎಂಬ ಮನಸ್ಥಿತಿಯಲ್ಲಿ ಬಹುತೇಕ ಪೋಷಕರು ಮುಳಗಿದ್ದಾರೆ. ಇನ್ನು ದಾಖಲಾತಿ ಆಗಿರುವ ನಾಲ್ಕೈದು ಮಕ್ಕಳು ಇದ್ದರೂ ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ನಡೆಸಲೇಬೇಕು. ಹೀಗಾಗಿ ಕೆಲವು ಶಾಲೆಗಳಿಗೆ ಆರ್ಥಿಕ ಹೊಡೆತ ಬೀಳಬಹುದು. ಆದರೆ, ಮಕ್ಕಳ ಕಲಿಕೆ ಹಿತದೃಷ್ಟಿಯಿಂದ ಶಾಲೆಗಳ ಆರಂಭಕ್ಕೆ ಅವಕಾಶ ನೀಡಿರುವ ಸರ್ಕಾರದ ತೀರ್ಮಾನ ಮುಖ್ಯ. ನಾವು ಕಡ್ಡಾಯವಾಗಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆಯುತ್ತೇವೆ ಎಂದು ರಾಜ್ಯ ಪಠ್ಯ ಕ್ರಮ ಶಾಲಾ ಆಡಳಿತ ಮಂಡಳಿಗಳು ಒನ್ಇಂಡಿಯಾ ಕನ್ನಡಕ್ಕೆ ಸ್ಪಷ್ಟಪಡಿಸಿವೆ.
ಸರ್ಕಾರದ ಸೂಚನೆ
ಕೊರೊನಾ ಭೀತಿ ನಡುವೆ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಅವಕಾಶ ನೀಡಲಾಗಿದೆ. ಜನರಲ್ಲಿ ಪೂರ್ಣ ಪ್ರಮಾಣದಲ್ಲಿ ಕೊರೊನಾ ಭೀತಿ ದೂರವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಶಾಲಾ ಆಡಳಿತ ಮಂಡಳಿಗಳು ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಕ್ಕಳ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ನೀಡಿರುವ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಶಿಕ್ಷಣ ಇಲಾಖೆ ನಿರ್ದೇಶಿಸಿದೆ. ಹಲವು ಸಮಸ್ಯೆಗಳ ನಡುವೆ ರಾಜ್ಯದಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳು ಆರಂಭವಾಗುತ್ತಿದ್ದು, ಒಂದು ವಾರದ ಬಳಿಕ ಅಸಲಿ ಚಿತ್ರಣ ಗೊತ್ತಾಗಲಿದೆ.