ಕೆಲಸವೆಂಬೋ ಉನ್ಮಾದಕ್ಕೆ ಬಿದ್ದವರಿಗೆ ಕಿವಿಮಾತು
'ದುಡಿಮೆಯ ನಂಬಿ ಬದುಕು... ನಿನ್ನ ಬಾಳಲಿ ಬರುವುದು ಬೆಳಕು', 'ಕಾಯಕವೇ ಕೈಲಾಸ' ಎಂಬ ಮಾತೆಲ್ಲಾ ದುಡಿಮೆಯ ಮಹತ್ವ ಹೇಳುತ್ತವೆ. ಆದರೆ ಆಧುನಿಕ ಮನುಷ್ಯನಿಗೆ ಈಗ ಎಷ್ಟು ದುಡಿಯಬೇಕು, ಎಷ್ಟು ಬದುಕಬೇಕು ಎಂಬುದನ್ನು ತುರ್ತಾಗಿ ಕಲಿಸಿಕೊಡಬೇಕಾಗಿದೆ. ದುಡಿಮೆಯ ತಿರುಗುಣಿಗೆ ಬಿದ್ದ ಮನುಷ್ಯ ಬದುಕನ್ನು, ಬದುಕುವುದನ್ನು ಮರೆತಿದ್ದಾನೆ. ದುಡಿಮೆಯ ಧಾವಂತಕ್ಕೆ ಬಿದ್ದ ಮನುಷ್ಯ ಬದುಕನ್ನು ಆಸ್ವಾದಿಸುವುದನ್ನೇ ಮರೆತಿದ್ದಾನೆ.
ಮೊನ್ನೆ ಜಪಾನ್ನಿಂದ ಬಂದ ಸುದ್ದಿಯನ್ನೆ ನೋಡಿ. ಅಲ್ಲಿ ವಿವಾಹಿತ ಮಹಿಳೆಯರಿಗೆ ಮಕ್ಕಳು ಬೇಡವಂತೆ. ಕಾರಣ ಬಸಿರು, ಬಾಣಂತನ ಎಂದು ರಜೆ ಮೇಲೆ ಹೋದರೆ, ಬಡ್ತಿಯ ಅವಕಾಶ ತಪ್ಪಿ ಹೋಗುತ್ತದೆ. ಅವರಿಗೆ ಉದ್ಯೊಗದಲ್ಲಿ ಹಿಂದೆ ಬೀಳುವ ಭಯ. ಜಪಾನಿನಲ್ಲಿ ಇದೊಂದು ರಾಷ್ಟ್ರೀಯ ಸಮಸ್ಯೆಯಾಗಿ, ಜನಸಂಖ್ಯೆ ಕ್ಷೀಣಿಸುತ್ತಿದೆ. ಈಗ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸಮಸ್ಯೆಯನ್ನು ಬಗೆಹರಿಸಲು ಸರ್ಕಾರವೇ ಮುಂದಾಗಿದೆ.

ಕೆಲಸದ ಒತ್ತಡ, ಪೈಪೋಟಿ ಕೇವಲ ಐ.ಟಿ, ಬಿ.ಟಿ. ಕ್ಷೇತ್ರದಲ್ಲಿ ಮಾತ್ರವಲ್ಲ ಎಲ್ಲಾ ಕ್ಷೇತ್ರದಲ್ಲೂ ಇದೆ. ಕನ್ನಡದ ಪ್ರಖ್ಯಾತ ಪತ್ರಕರ್ತನ ಉದಾಹರಣೆಯನ್ನೇ ನೋಡಿ. ತಾನು ಆಫೀಸಿನಲ್ಲೇ ಮಲಗುವ ಬಗ್ಗೆ, ವಾರಕ್ಕೆ ಒಮ್ಮೆ ಮಾತ್ರ ಮನೆಗೆ ಹೋಗುವ ಬಗ್ಗೆ, ದಿನಕ್ಕೆ ಹದಿನೆಂಟು ಗಂಟೆ ಕೆಲಸ ಮಾಡುವ ಬಗ್ಗೆ ತುಂಬಾ ಹೆಮ್ಮೆಯಿಂದ, ತನ್ನ ಕೆಲಸದ ಒತ್ತಡದ ಬಗ್ಗೆ ರೊಮ್ಯಾಂಟಿಕ್ಕಾಗಿ ಹೇಳಿಕೊಳ್ಳುತ್ತಿದ್ದರು, ಬರೆದುಕೊಳ್ಳುತ್ತಿದ್ದರು. ಆದರೆ ಅವರ ಜೀವನದ ಫಸ್ಟ್-ಹಾಫ್ ಕಳೆಯುವಷ್ಟರಲ್ಲಿ ಕುಸಿದು ಕುಳಿತು, ಆರೋಗ್ಯ ಕೈ ಕೊಟ್ಟು ಕೋಮಾಗೆ ಹೋಗಿ, ಆಸ್ಪತ್ರೆ ಸೇರಿದ್ದಾರೆ. (ಬೇಗ ಗುಣಮುಖರಾಗಲಿ ಎಂಬುದು ನಮ್ಮ ಹಾರೈಕೆ).
ಜಗತ್ತಿನಾದ್ಯಂತ ಅನೇಕ ವೈವಾಹಿಕ, ಕೌಟುಂಬಿಕ ಸಂಬಂಧಗಳು ಹಳಸಿ ಹೋಗುತ್ತಿರುವುದಕ್ಕೆ ಮುಖ್ಯ ಕಾರಣ ದಂಪತಿಗಳು ಪರಸ್ಪರ ಜೊತೆಯಾಗಿ ಹೆಚ್ಚು ಕಾಲ ಕಳೆಯುತ್ತಿಲ್ಲಾ ಎಂಬುದೇ ಆಗಿದೆ. ಎಲ್ಲರೂ ಓಡುತ್ತಿದಾರೆ, ನಿಂತು ಸುಧಾರಿಸಿಕೊಳ್ಳಲು ಭಯ, ತಾವೆಲ್ಲಿ ಓಟದಲ್ಲಿ ಹಿಂದೆ ಬೀಳುತ್ತೇವೊ ಎಂದು. ಎಲ್ಲರೂ ಹೆಚ್ಚು ಹೆಚ್ಚು ಸಮಯ ಆಫೀಸಿನಲ್ಲಿ ಕಳೆಯುತ್ತಿದ್ದಾರೆ. ಎಷ್ಟೋ ಜನ ಸೂರ್ಯಾಸ್ತ, ಸೂರ್ಯೋದಯವನ್ನೆ ನೋಡಿಲ್ಲ. ಯಾರಾದರೂ ಆಫೀಸಿನಿಂದ ಬೇಗ ಬಂದರೆ, ಆತಂಕವಾಗುವಂತಿದೆ; ಒಂದೋ ಕೆಲಸ ಕಳೆದುಕೊಂಡಿರಬೇಕು ಅಥವಾ ಏನೋ ಅನಾಹುತವಾಗಿರಬೇಕು ಎಂದು ಯೋಚಿಸುವಷ್ಟರ ಮಟ್ಟಿಗೆ.
ಹಾಗೆಂದು ಕೆಲಸ ಬಿಟ್ಟು ಕೂಡುವಂತಿಲ್ಲ. ಹಾಗೇನಾದರು ಕೂತರೆ ನಮ್ಮ ಮನೆ-ಕಾರುಗಳ ಇ.ಎಮ್.ಐ-ಗಳು, ಸಾಲಗಳು, ಕ್ರೆಡಿಟ್ ಕಾರ್ಡ್ ಬಿಲ್ಲುಗಳು, ಮೋಬೈಲ್ ಬಿಲ್ಲು, ಕರೆಂಟ್ ಬಿಲ್ಲು, ದಿನಸಿ ಬಿಲ್ಲು, ನಮ್ಮ ತಿಂಗಳ ತಿಂಗಳ ಕಮಿಟ್-ಮೆಂಟು ನಮ್ಮನ್ನು ಅಟ್ಟಿಸಿಕೊಂಡು ಬರುತ್ತವೆ.
ಹಾಗಾದರೆ ನಮಗೆ ಯಾಂತ್ರಿಕ ಬದುಕೇ ಗಟ್ಟೀನಾ? ನಾವು ಯಂತ್ರವಾಗಿ ಹೋಗುತ್ತೇವಾ? ಈ ಚಕ್ರವ್ಯೂಹದಿಂದ ಹೊರಬರುವ ಬಗೆ ಹೇಗೆ? ಎಂದು ತಲೆ ಕೆಡಿಸಿಕೊಂಡು ಕೂತಾಗ ಸಿಕ್ಕಿದ್ದು ಬ್ರಯಾನ್ ಡೈಸನ್-ನ ಪುಟ್ಟ ಭಾಷಣ. ಆ ಮಹಾನುಭಾವ ಬದುಕುವ ಬಗ್ಗೆ, ಬದುಕುವ ಕಲೆ ಬಗ್ಗೆ ತುಂಬಾ ಸೊಗಸಾಗಿ ಕೇವಲ ಮೂವತ್ತು ಕ್ಷಣದಲ್ಲಿ ಹೇಳಿದ್ದಾನೆ. ಓದಿಕೊಳ್ಳಿ.
ಅಂದಹಾಗೆ ಬ್ರಯಾನ್ ಡೈಸನ್ ಕೋಕ-ಕೋಲ ಕಂಪನಿಯ ಮಾಜಿ ಸಿ.ಇ.ಓ. ಅವನ ಅನುಭವವನ್ನ ಅವನ ಮಾತನ್ನ ನಾವು ಪೂರ್ತಿ ನಂಬದಿದ್ದರೂ, ನಮ್ಮ ಬದುಕಲ್ಲಿ ಅಳವಡಿಸಿಕೊಳ್ಳದಿದ್ದರೂ, ಖಂಡಿತ ಒಮ್ಮೆ ಪರಿಶೀಲನೆ ಮಾಡಬಹುದು, ಯಾವುದೇ ಮುಲಾಜಿಲ್ಲದೆ.












Click it and Unblock the Notifications