ಬಣ್ಣವಲ್ಲ, ಆಕಾರವಲ್ಲ, ಅಂತಃಸತ್ವ ಮುಖ್ಯ!
ಹೀಗೊಂದು ಊರಿನಲ್ಲಿ ಒಬ್ಬ ಬಲೂನ್ ವ್ಯಾಪಾರಿ. ಸಂತೆಯಲ್ಲಿ, ಜಾತ್ರೆಗಳಲ್ಲಿ ಬಲೂನ್ ಮಾರುವುದು ಅವನ ಕಾಯಕ. ಹೆಚ್ಚಾಗಿ ಮಕ್ಕಳೇ ಅವನ ಗ್ರಾಹಕರು. ಸಂತೆಯಲ್ಲಿ, ಜಾತ್ರೆಗಳಲ್ಲಿ ಮಕ್ಕಳನ್ನು ತನ್ನೆಡೆ ಆಕರ್ಷಿಸಲು ಆಗಾಗ ಹೀಲಿಯಂ ತುಂಬಿದ ಬಣ್ಣ ಬಣ್ಣದ ಬಲೂನ್ಗಳನ್ನು ಗಾಳಿಯಲ್ಲಿ ತೇಲಿ ಬಿಡುತಿದ್ದ. ಹೀಲಿಯಂ ಸಾಮಾನ್ಯ ಗಾಳಿಗಿಂತ ಹಗುರವಾದುದರಿಂದ ಬಲೂನ್ಗಳು ಗಾಳಿಯಲ್ಲಿ ತೇಲುತ್ತ ಮೇಲೇರುತಿದ್ದವು.
ಒಂದು ಸಂಜೆ ಅವನು ಗಾಳಿಯಲ್ಲಿ ತೇಲಿ ಬಿಟ್ಟ ಬಣ್ಣ ಬಣ್ಣದ ಬಲೂನ್ಗಳು ಸಂಜೆಯ ವರ್ಣಮಯ ಚಿತ್ತಾಕರ್ಷಕ ಆಕಾಶವನ್ನು ಅಲಂಕರಿಸುತ್ತಿದ್ದವು.
ಅವನ ಬಳಿ ಓರ್ವ ಪುಟ್ಟ ಬಾಲಕ ಬಂದು ಕುತೂಹಲದಿಂದ ಕೇಳಿದ “ಅಂಕಲ್.. ಬರೇ ಕೆಂಪು, ಬಿಳಿ, ಹಸಿರು ಬಣ್ಣದ ಬಲೂನ್ ಮಾತ್ರ ಮೇಲೆ ಹೋಗುತ್ತಾ? ಕಪ್ಪು ಬಣ್ಣದ ಬಲೂನ್ ಮೇಲೆ ಹೋಗಲ್ವಾ?”
ಆಗ ವ್ಯಾಪಾರಿ ನಕ್ಕು ಪ್ರೀತಿಯಿಂದ ನುಡಿದ “ಮಗು ಬಲೂನ್ ಒಳಗಡೆಯಿರುವ ಅಂತಃಸತ್ವ ಮುಖ್ಯ. ಅದೇ ಬಲೂನ್ ಮೇಲೆ ಹೋಗುವುದೋ ಇಲ್ಲವೋ ಎಂದು ನಿರ್ಧರಿಸುವುದು. ಬಲೂನಿನ ಬಣ್ಣವಲ್ಲ.” ಮಗು ಸಮಾಧಾನ ಸಿಕ್ಕ ಸಂತೋಷದಿಂದ ಓಡಿತು.
***

ನಮ್ಮ ಬದುಕಿನಲ್ಲಿ ನಾವು ಮೇಲೇರುವ ಮಟ್ಟವನ್ನು ನಿರ್ಧರಿಸುವುದು ನಮ್ಮ ಚರ್ಮದ ಬಣ್ಣ, ನಮ್ಮ ಆಕಾರವಲ್ಲ. ನಮ್ಮ ಒಳಗಿನ ಅಂತಃಸತ್ವವಲ್ಲವೇ? ಬದುಕಲ್ಲಿ ತಮ್ಮ ನ್ಯೂನತೆಯನ್ನು ಮೀರಿ ಬೆಳೆದ ಅನೇಕ ಸಾಧಕರು ನಮ್ಮ ನಡುವೆಯೇ ಇದ್ದಾರೆ. ಕುಳ್ಳಗಿರುವ ಸಚಿನ್ ಎಂಬ ವಾಮನ ಮೂರ್ತಿ, ಕಪ್ಪು ವರ್ಣದ ಒಬಾಮ, ಒಂದು ಕಣ್ಣೇ ಹೋದರೂ ಹುಲಿಯಂತೆ ಬಾಳಿ, ಕ್ರಿಕೆಟ್ ಆಡಿದ ಪಟೌಡಿ, ಉಬ್ಬು ಹಲ್ಲಿನ ಖ್ಯಾತ ಹಾಸ್ಯನಟ ನರಸಿಂಹರಾಜು, ಗರುಡ ಮೂಗಿನ ಡಾ. ರಾಜ್ಕುಮಾರ್... ಹೀಗೆ ಅನೇಕರು. ಆ ಪಟ್ಟಿಯಲ್ಲಿ ನಮ್ಮ ನಿಮ್ಮ ಹೆಸರು ಸೇರಿಕೊಳ್ಳಲಿ ಎಂದು ಆಶಿಸುತ್ತಾ, ಹಾರೈಸುತ್ತಾ...
***
ತಪನೆ!
ಒಮ್ಮೆ ಗ್ರೀಕ್ ತತ್ವಜ್ಞಾನಿ ಸಾಕ್ರೆಟಿಸ್ನನ್ನು ಓರ್ವ ಯುವಕ ಕೇಳಿದನಂತೆ “ಜೀವನದಲ್ಲಿ ಗುರಿ ಮುಟ್ಟಲು, ಯಶಸ್ವಿಯಾಗಲು ಏನು ಮಾಡಬೇಕು?” ಆಗ ಸಾಕ್ರೆಟಿಸ್ ಮರುದಿನ ಮುಂಜಾನೆ ನದಿಯ ತಟದಲ್ಲಿ ಸಿಗುವಂತೆ ಹೇಳಿದನಂತೆ.
ಯುವಕನಿಗೆ ಒಳಗಡೆ ಆಸೆ. ಸಾಕ್ರೆಟಿಸ್ ತತ್ವಜ್ಞಾನಿ, ಬುದ್ಧಿವಂತ, ಸಮಾಜದಲ್ಲಿ ಪ್ರಭಾವಿ. ಏನೋ ಗುಟ್ಟು, ತಂತ್ರ, ಮಂತ್ರ ಹೇಳಿಕೊಟ್ಟಾನು ಎಂಬ ಆಸೆ. ಯುವಕನ ಮನದೊಳಗೆ ಏನೋ ಪ್ರಲೋಭೆ. ಮರುದಿನ ಮುಂಜಾನೆ ನದಿಯ ತಟದಲ್ಲಿ ಸಾಕ್ರೆಟಿಸ್ನನ್ನು ಭೇಟಿಯಾದ. ಯುವಕನಿಗೆ ಹಿಂಬಾಲಿಸುವಂತೆ ಹೇಳಿ ನದಿಗಿಳಿದ. ಎದೆ ಮಟ್ಟದ ನೀರಿಗಿಳಿದ ಮೇಲೆ ಸಾಕ್ರೆಟಿಸ್ ಹಠಾತ್ತನೆ ಯುವಕನನ್ನು ನೀರಲ್ಲಿ ಮುಳುಗಿಸಿ ಅದುಮಿ ಹಿಡಿದ. ಹಠಾತ್ತನೆ ಆದ ದಾಳಿಗೆ ಯುವಕ ಕಂಗಾಲು. ಎಷ್ಟೇ ಪ್ರಯತ್ನಿಸಿದರೂ ಬಲಿಷ್ಠ ಸಾಕ್ರೆಟಿಸ್ನ ಹಿಡಿತ ತಪ್ಪಿಸಿಕೊಳ್ಳಲು ಆಗಲಿಲ್ಲ. ಇನ್ನೇನು ಉಸಿರು ಕಟ್ಟಿ ಯುವಕನ ಮುಖ ನೀಲಿಗಟ್ಟಬೇಕು... ಆಗ ಸಾಕ್ರೆಟಿಸ್, ಯುವಕನನ್ನು ನೀರಿನಿಂದ ಹೊರಗೆಳೆದು ಕೇಳಿದ “ನೀರಲ್ಲಿ ಮುಳುಗಿದ್ದಾಗ ಏನನ್ನು ಬಯಸಿದೆ, ಯಾವುದಕ್ಕಾಗಿ ಪರಿತಪಿಸಿದೆ?”
ಕುಡಿದ ನೀರನ್ನು ಕಕ್ಕುತ್ತಾ, ಕೆಮ್ಮುತ್ತಾ, ಗಟ್ಟಿಯಾಗಿ ಉಸಿರೆಳೆಯುತ್ತಾ ಆದ ಆಘಾತದಿಂದ ಚೇತರಿಸಿಕೊಳ್ಳುತ್ತ ಯುವಕ ನುಡಿದ “ಗಾಳಿ, ಉಸಿರು, ಉಸಿರಿಗಾಗಿ ವಿಲಿವಿಲಿಯಂದು ಪರಿತಪಿಸಿದೆ.”
ಆಗ ತತ್ವಜ್ಞಾನಿ ಸಾಕ್ರೆಟಿಸ್ ನಕ್ಕು ಶಾಂತ ಸ್ವರದಲ್ಲಿ ನುಡಿದ “ನೀನು ನೀರಲ್ಲಿ ಮುಳುಗಿದ್ದಾಗ ಉಸಿರಿಗೆ ಪರಿತಪಿಸಿದಂತೆ, ನಿನ್ನ ಗುರಿಗೆ, ಯಶಸ್ಸಿಗೆ ನಿನ್ನಲ್ಲಿ ಆದೇ ತೀವ್ರತೆಯ ಒಂದು ತಪನೆ ಹುಟ್ಟಿದರೆ ಸಾಕು, ನೀನು ಜೀವನದಲ್ಲಿ ಯಶಸ್ವಿಯಾಗುವೆ!”
ನನ್ನಲ್ಲಿ, ನಿಮ್ಮಲ್ಲಿ ಜೀವನದ ಗುರಿಯ ಬಗ್ಗೆ ಆ ರೀತಿಯದೊಂದು ಹಪಾಹಪಿ, ತ್ರಿವತೆಯ ತಪನೆ, ತಹತಹ ಹುಟ್ಟಲಿ ಎಂದು ಆಶಿಸುತ್ತಾ, ಹಾರೈಸುತ್ತಾ, ಕನಸುತ್ತಾ... (ಇದೇ ರೀತಿಯ ಕತೆ, ಸಮರ್ಥ ರಾಮದಾಸರು ದೇವರಿಗಾಗಿ ಹಂಬಲಿಸಿ ಬಂದ ಯುವಕಯನ್ನು ನೀರಲ್ಲಿ ಮುಳಗಿಸಿ, ತಪನೆಯ ಪಾಠ ಮಾಡಿದ್ದು ಕೇಳಿದ್ದೇನೆ) [ಲೇಖಕರ ಈಮೇಲ್ : [email protected]]












Click it and Unblock the Notifications