ಶುಭಸಂಕಲ್ಪ : ಪುಟ್ಟಕಥೆಗಳ ಹೊಸ ಅಂಕಣ ಆರಂಭ
ಇಡೀ ವಾರ ದುಡಿದ ದೇಹಕ್ಕೆ ಒಂದು ದಿನವಾದರೂ ಆರಾಮ ಬೇಕಾಗಿರುತ್ತದೆ, ಮನಸ್ಸು ಹಿತವಾದ ಅನುಭವ ಬಯಸುತ್ತದೆ. ಇಂಥ ಅನುಭವ ನೀಡಲು ಕಾದು ಕುಳಿತಿರುವ ಭಾನುವಾರದಂದು ನಾವು ಏನನ್ನೂ ಮಾಡಲು ಬಯಸುವುದಿಲ್ಲ. ಸ್ವಲ್ಪ ರೆಸ್ಟು, ಬೇಕಿದ್ದರೆ ವಿಹಾರ, ಬಂಧುಗಳೊಡನೆ ಹರಟೆ ಇತ್ಯಾದಿ. ಮನಸ್ಸಿಗೆ ಮುದನೀಡುವಂತಹದ್ದು ಏನಾದರೂ ಇದೆಯಾ ಎಂದು ಅಕ್ಷರಗಳ ಪುಟಗಳನ್ನು ತಿರುವಿಹಾಕಿದರೆ, ಮತ್ತೆ ಅದೇ ರೇಜಿಗೆ ಹುಟ್ಟಿಸುವ ಸುದ್ದಿಗಳು.
ಪ್ರತಿ ಭಾನುವಾರದಂತೆ ಕುತೂಹಲದಿಂದ ಕಾಯುವಂತಹ ಅಂಕಣವೊಂದು ನಿಮ್ಮ ಮುಂದೆ ತಂದಿದ್ದೇವೆ. ಕಚೇರಿಯಲ್ಲಿ ದುಡಿಯುವ ಗಂಡಸರಿಗೆ, ಮನೆಯಲ್ಲಿ ದುಡಿಯುವ ಹೆಂಗಸರಿಗೆ, ನೀತಿಕತೆ ಕೇಳುವ ಮಕ್ಕಳಿಗೆ, ಪುಟಾಣಿಗಳಿಗೆ ಇಷ್ಟವಾಗುವಂತಹ ಕಥೆ ಹೆಣೆಯುವ ಅಜ್ಜಅಜ್ಜಿಯರು ಕಾದುಕುಳಿತು ಓದುವಂತಹ, ಮನಸ್ಸಿಗೆ ಮುದ ನೀಡುವಂತಹ, ಚಿಂತನೆಗೆ ಹಚ್ಚುವಂತಹ, ಸ್ಫೂರ್ತಿದಾಯಕ ಪುಟ್ಟಪುಟ್ಟ ಕಥೆಗಳ ಸರಣಿ ಆರಂಭ. ಅಂಕಣದ ಹೆಸರು : 'ಶುಭಸಂಕಲ್ಪ' (ನೋವೆ ಅನಾರೋಗ್ಯ ಸಂತೋಷವೇ ಆರೋಗ್ಯ, ಶುಭಸಂಕಲ್ಪದೊಂದಿಗೆ ಗುಣಮುಖರಾಗುವುದೇ ಭಾಗ್ಯ!)
ಹಿರಿಯರಿರಲಿ, ಕಿರಿಯರಿರಲಿ ಎಲ್ಲರಿಗೂ ಇಷ್ಟವಾಗುತ್ತದೆಂಬ ಆಶಯದೊಂದಿಗೆ ಈ ಕಥಾಸರಣಿ ನಿಮ್ಮ ಮುಂದೆ ಇಡುತ್ತಿದ್ದೇವೆ. ನಿಮ್ಮ ಕಲ್ಪನೆಗೆ, ಕ್ರಿಯಾಶೀಲತೆಗೆ, ಸೃಜನಶೀಲತೆಗೆ ಇಂಬು ನೀಡಲು ಎಂಬ ಆಶಯದೊಂದಿಗೆ 'ಶುಭಸಂಕಲ್ಪ' ಅಂಕಣವನ್ನು ಪ್ರಸ್ತುತಪಡಿಸುತ್ತಿದ್ದೇವೆ. ವಿಶಿಷ್ಟ, ವಿಭಿನ್ನ ಕಥೆಗಳನ್ನು ಹಂಚಿಕೊಳ್ಳುವವರು ಗುಣಮುಖ. ಈ ಲೇಖನಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಿರಿ. ಕಥೆಗಳನ್ನೂ ನೀವೂ ಓದಿರಿ, ಇತರರೊಂದಿಗೂ ಹಂಚಿಕೊಳ್ಳಿರಿ. - ಸಂಪಾದಕ.
***
ತೆನಾಲಿರಾಮನ ಬೆಕ್ಕು ಮತ್ತು ನಮ್ಮ ಮನಸು!
ಶ್ರೀ ಕೃಷ್ಣದೇವರಾಯ ಒಮ್ಮೆ ತನ್ನ ಆಸ್ಥಾನದಲ್ಲಿ ಎಲ್ಲರಿಗು ಒಂದು ಬೆಕ್ಕು ಕೊಟ್ಟು, ಯಾರು ಚೆನ್ನಾಗಿ ಸಾಕುತ್ತಾರೋ ಅವರಿಗೆ ಬಹುಮಾನ ಘೋಷಿಸಿದ. ಎಲ್ಲರೂ ದಂಡಿಯಾಗಿ ಹಾಲು-ಮೊಸರು ಹಾಕಿ ಬೆಕ್ಕನ್ನು ಭರ್ಜರಿಯಾಗಿ ಸಾಕತೊಡಗಿದರು. ಬಡ ತೆನಾಲಿ ರಾಮನಿಗೆ ಬಹಳ ಫಜೀತಿಯಾಯಿತು. ಸಹಜವಾಗಿ ಇಲಿ ಹಿಡಿಯಬೇಕಾದ ಬೆಕ್ಕು, ಮನೆಯಲ್ಲಿರುವ ಎಲ್ಲಾ ಹಾಲನ್ನು ಕದ್ದು ಕುಡಿಯಾಲಾರಂಭಿಸಿತು. ಮನೆಮಂದಿಗೆ ಮಕ್ಕಳಿಗೆ ಹಾಲಿಲ್ಲದಂತಾಯಿತು.
ಅದಕ್ಕೆ ಉಪಾಯ ಮಾಡಿದ ತೆನಾಲಿ ರಾಮ, ಒಂದು ದಿನ ಬೆಕ್ಕಿಗೆ ಉಪವಾಸ ಹಾಕಿ ನಂತರ ಚೆನ್ನಾಗಿ ಕಾಯಿಸಿದ ಬಿಸಿ ಹಾಲನ್ನು ಅದರ ಮುಂದಿಟ್ಟ. ಮೊದಲೇ ಚೆನ್ನಾಗಿ ಹಸಿದಿದ್ದ ಬೆಕ್ಕು, ಯಾವುದೇ ವಿವೇಚನೆ ಇಲ್ಲದೇ ಬಿಸಿ ಹಾಲಿಗೆ ಬಾಯಿ ಹಾಕಿ ಬಾಯಿ ಸುತ್ತು ಕೊಂಡಿತು. ಒಮ್ಮೆ ಬಾಯಿ ಸುಟ್ಟುಕೊಂಡ ಬೆಕ್ಕು ಅಂದಿನಿಂದ ಹಾಲನ್ನು ಕಂಡರೆ ಓಡಿಹೊಗತೊಡಗಿತು. ನಂತರ ಇಲಿಗಳ ಬೇಟೆಯಾಡಿ ದಷ್ಟಪುಷ್ಟವಾಗಿ ಬೆಳೆದು ತೆನಾಲಿ ರಾಮನಿಗೆ ಬಹುಮಾನ ತಂದು ಕೊಟ್ಟಿತು. ಆದರೆ ಜೀವನ ಪೂರ್ತಿ ಯಾವುದೇ ಕಾರಣಕ್ಕೆ ಅದು ಹಾಲು ಕುಡಿಯಲಿಲ್ಲ.
ಇದೇ ತರದ ರಷ್ಯಾದ ವಿಜ್ಞಾನಿ ಐವನ್ ಪಾವ್ಲಾವ್ ನಾಯಿಯ ಮೇಲೆ ಪ್ರಯೋಗ ಮಾಡಿದ. ಸಮಯಕ್ಕೆ ಸರಿಯಾಗಿ ಗಂಟೆ ಸದ್ದು ಮಾಡಿ ಊಟ ಕೊಡತೊಡಗಿದ. ಕೆಲದಿನಗಳ ನಂತರ ನಾಯಿ ಗಂಟೆ ಸದ್ದು ಕೇಳಿದರೆ ಹಾಕು ಜೊಲ್ಲು ಸುರಿಸತೊಡಗಿತು. ಇದಕ್ಕೆ ಮಾನಶಾಸ್ತ್ರದಲ್ಲಿ ಕಂಡಿಶನಿಂಗ್ ಅಂತಾರೆ. ಒಂದು ಕ್ರಿಯೆಗೆ ಒಂದು ಪ್ರತಿಕ್ರಿಯೆಗೆ ಮನಸನ್ನು ಹದಮಾಡುವುದು.
ನಮ್ಮ ಮನುಸುಗಳು ಅದೇ ಥರವಲ್ಲವೇ? ಒಂದು ಸೋಲು, ಒಂದು ನಿರಾಸೆ, ಬದುಕಲ್ಲಿ ಜರುಗಿದ ದುರಂತ, ಒಂದು ನಿರಾಕರಣೆ, ಒಂದು ಕಹಿ ಘಟನೆ ನಮ್ಮನ್ನು ಖಿನ್ನತೆಯೆಡೆಗೆ ತಳ್ಳಿ, ಎಂದು ಮಾಯದ ಆರದ ಗಾಯವಾಗಿ ಬಿಡುತ್ತವೆ. ಮೇಲಿನ ಕತೆ ಕೇಳಿ ಬೆಕ್ಕಿನ ಮೂರ್ಖತನದ ಬಗ್ಗೆ ನಕ್ಕು ಬಿಡುತ್ತೇವೆ. ಆದರೆ ನಮ್ಮ ಬಗ್ಗೆ, ಬದುಕಿನ ಬಗ್ಗೆ, ಬೇರೆಯವರ ಬಗ್ಗೆ ನಾವು ಒಂದು ಸಿದ್ಧ ಅಭಿಪ್ರಾಯದೊಂದಿಗೆ ಜೀವನದಾದ್ಯಂತ ಬದುಕಿ ಬಿಡುತ್ತದೆ. ಅದೇ ರೀತಿ ನಮ್ಮ ಸಮಾಜವು ಸಂಕುಚಿತ ಅಭಿಪ್ರಾಯ ರೂಡಿಸಿಕೊಂಡು ಬಿಟ್ಟಿದೆ. (once bitten twice shy ಎಂಬ ಗಾದೆಮಾತೂ ಇದೆ).
ಬನ್ನಿ ಇಂದಿನಿಂದ ನಾವೆಲ್ಲಾ ನಮ್ಮನು, ನಮ್ಮ ಅಭಿಪ್ರಾಯಗಳನ್ನು, ನಮ್ಮ ಸಿದ್ಧ ನಂಬಿಕೆಗಳನ್ನು ಮತ್ತೊಮ್ಮೆ ಪರಿಶೀಲಿಸಿ ಮೀರುವ ಪ್ರಯತ್ನ ಮಾಡೋಣ. ನಮ್ಮ ಮನಸ್ಸನ್ನು ಸುಟ್ಟ 'ಬಿಸಿ ಹಾಲನ್ನು’ ಗುರುತಿಸಿ ಹೊಸ ದೃಷ್ಟಿಕೋನದಲ್ಲಿ ನೋಡೋಣ. [ಲೇಖಕರ ಈಮೇಲ್ : [email protected]]