ಒಳ್ಳೆಯ ಯೋಚನೆ! ಆದರೆ ಹೇಗೆ?
ಕಗ್ಗತ್ತಲ ರಾತ್ರಿ, ಒಂದು ನರಪಿಳ್ಳೆಯೂ ಇಲ್ಲದ ನಿರ್ಜನ ಪ್ರದೇಶ. ತಲೆಯ ಮೇಲೇ ರೆಕ್ಕೆ ಬಡಿಯುತ್ತಾ ಹಾರಿಹೋಗುತ್ತಿರುವ ನಿಶಾಚರಿ. ತಡೆದು ತಡೆದು ಕೇಳಿಬರುತ್ತಿರುವ ಜೀರುಂಡೆಯೊಂದರ ನಾದದ ಹೊರತಾಗಿ ಇಡೀ ಪ್ರದೇಶ ನೀರವ... ನನ್ನ ಮಾಧವಿ ಹೇಳುವಂತೆ ಇದು ದೆವ್ವಗಳ ಸಂಚಾರಕ್ಕೆ ಹೇಳಿಮಾಡಿಸಿದಂಥ ಸಮಯ!
'ದೆವ್ವ" ಎಂಬ ಪದ ಮನದಲ್ಲಿ ಮೂಡಿದಂತೇ ತಂತ್ರವೊಂದು ಮಿಂಚಿನಂತೆ ಹೊಳೆಯಿತು. ಮಾಧವಿಯನ್ನು ಮೂರ್ಖಳನ್ನಾಗಿಸಲು ದೆವ್ವದ ಕಥೆಯೊಂದನ್ನೇಕೆ ಸೃಷ್ಟಿಸಬಾರದು?
ಎರಡು ಕ್ಷಣದಲ್ಲಿ ಇಡೀ ಪ್ಲಾನ್ ತಯಾರಾಯಿತು. ಅದು ಯಶಸ್ವಿಯಾಗಬೇಕಾದರೆ ಮಧುವಿನ ಸಹಕಾರ ಅಗತ್ಯ. ಅದ್ಭುತ ಯೋಜನೆಯೊಂದನ್ನು ರೂಪಿಸಲು ನೆರವಾದ ಹಾರಿಹೋದ ಹಕ್ಕಿ, ಮರೆಯಾಗಿ ಹೋದ ಚಂದ್ರ- ಎರಡಕ್ಕೂ ಮನಸ್ಸಿನಲ್ಲೇ ಕೃತಜ್ಞತೆ ಹೇಳುತ್ತಾ ಮಧುವಿನ ಮೊಬೈಲ್ನ ಅಂಕೆಗಳನ್ನೊತ್ತಿದೆ. ನಿಮಿಷದ ನಂತರ ಅತ್ತಲಿಂದ ಅವನ ನಿದ್ದೆ ತುಂಬಿದ ದನಿ ಕೇಳಿಬಂತು. ''ಎಲ್ಲಿಂದ ಮಾತಾಡ್ತಿದೀರಿ ಭಾವಾಜೀ"" ಎಂದು ಅರಚಿದ.
''ಮೆಲ್ಲಗೆ ಮಾತಾಡೋ ಮಾರಾಯಾ."" ಗೋಗರೆದೆ. ''ನೋಡಪ್ಪಾ ಈವತ್ತು ಏಪ್ರಿಲ್ ಒಂದು. ನಿಮ್ಮಕ್ಕನ್ನ ಫೂಲ್ ಮಾಡಿದ್ರೆ ಹೇಗೆ?"" ಪ್ರಶ್ನಿಸಿದೆ.
ಅವನ ನಿದ್ದೆ ಹಾರಿಹೋದಂತೆ ಕಂಡಿತು. ಆತುರಾತುರವಾಗಿ ದನಿ ಹೊರಡಿಸಿದ. ''ಹ್ಞೂ ಒಳ್ಳೇ ಯೋಚ್ನೆ. ಹೇಗೆ ಮಾಡೋದು?""
''ನಾನೊಂದು ಪ್ಲಾನ್ ಮಾಡಿದ್ದೀನಿ. ನೀನು ಯಾವ್ದಾದ್ರೂ ನೆಪ ಹೇಳಿ ಮಾಧವಿಯನ್ನ ಎಬ್ಬಿಸಿ ಅಂಗಳಕ್ಕೆ ಕರೆತಂದು ಕೂರಿಸಿ ಅದೂ ಇದೂ ಮಾತಾಡ್ತಾ ಇರು. ನಾನು ಇನ್ನು ಹತ್ತು ನಿಮಿಷದಲ್ಲಿ ಅಲ್ಲಿಗೆ ಬರ್ತೀನಿ. ಬರೋನು ಸುಮ್ನೆ ಬರೋದಿಲ್ಲ. ದೆವ್ವವನ್ನ ನೋಡಿದೋನ ಹಾಗೆ, ಅದರ ಕಾಟಕ್ಕೆ ಸಿಕ್ಕಿದೋನ ಹಾಗೆ ಏದುಸಿರು ಬಿಡ್ತಾ ಓಡಿ ಬರ್ತೀನಿ. ಹೆದರಿ ಹಿಪ್ಪೇಕಾಯಿ ಆಗಿರೋನ ಥರಾ ನಡುಗ್ತಾ 'ದೆವ್ವ ದೆವ್ವಾ" ಅಂತ ತೊದಲ್ತೀನಿ. ನಾನು ನಿಜವಾಗ್ಯೂ ದೆವ್ವಾನ ನೋಡಿದ್ದೀನಿ ಅಂತ ಮಾಧವಿ ತಿಳೀತಾಳೆ. 'ನೋಡಿದ್ರಾ ಈಗ್ಲಾದ್ರೂ ದೆವ್ವ ಇದೆ ಅಂತ ಗೊತ್ತಾಯ್ತಲ್ಲಾ" ಅಂತ ನನ್ನನ್ನ ಅಣಕಿಸ್ತಾಳೆ. ಆಗ ನಾನು 'ಏಪ್ರಿಲ್ ಫೂಲ್ ಏಪ್ರಿಲ್ ಫೂಲ್" ಅಂತ ಕೂಗಿ ನಕ್ಕುಬಿಡ್ತೀನಿ. ನನ್ನ ಜತೆ ನೀನೂ ದನಿ ಸೇರ್ಸು. ಅವಳು ಫೂಲ್ ಆಗಿಹೋಗ್ತಾಳೆ. ಹೇಗಿದೆ ಐಡಿಯಾ?"" ನನ್ನ ದನಿಯಲ್ಲಿ ಹೆಮ್ಮೆಯಿತ್ತು.
''ಯೆಸ್ ಭಾವಾಜೀ, ಭರ್ಜರಿ ಐಡಿಯಾ!"" ಮಧು ಮೆಚ್ಚುಗೆ ತೋರಿದ. ""ಅಕ್ಕನ್ನ ಎಬ್ಬಿಸ್ಕೊಂಡು ಅಂಗಳದಲ್ಲಿ ಕಾಯ್ತಾ ಇರ್ತೀನಿ."" ಆಶ್ವಾಸನೆ ಇತ್ತ.
ಚಂದ್ರ ಒಮ್ಮೆ ಮೋಡದ ಹಿಂದಿನಿಂದ ಹೊರ ಇಣುಕಿ ಮತ್ತೆ ಮರೆಯಾಗಿಹೋದ. ನಾನು ನಡೆಯತೊಡಗಿದೆ. ಮದುವೆಗೆ ಮೊದಲು ಒಂದೆರಡು ಸಲ ಇಲ್ಲಿ ಹಗಲಿನಲ್ಲಿ ನಡೆದಿದ್ದೆ. ಮದುವೆಯಾದ ಮೇಲೆ ನಡೆಯುವ ಪ್ರಸಂಗವೇ ಒದಗಿರಲಿಲ್ಲ. ಮಧು ಹಾಗೂ ಅವನ ಬೈಕ್ ನನ್ನ ಸೇವೆಗೆ ಸದಾ ಸಿದ್ಧವಾಗಿರುತ್ತಿದ್ದವು. ರಸ್ತೆ ನನಗೆ ಸಾಕಷ್ಟು ಪರಿಚಯವಾಗಿಹೋಗಿತ್ತು. ಆದರೂ ಈ ಕಾಳರಾತ್ರಿಯಲ್ಲಿ ಒಂಟಿಯಾಗಿ ನಡೆಯುವಾಗ ಎದೆ ತುಸು ಅಳುಕಿತು. ಬ್ಯಾಗಿನಿಂದ ಟಾರ್ಚ್ ಹೊರತೆಗೆದು ಅತ್ತಿತ್ತ ಬೆಳಕು ಹಾಯಿಸುತ್ತಾ ನಡೆಯತೊಡಗಿದೆ.
ರಸ್ತೆಯ ಬಲಕ್ಕೆ ಐದಡಿ ಅಗಲದ ಒಣ ಕಾಲುವೆ. ಅದರಾಚೆ ಬಟಾಬಯಲು. ಅವೆಲ್ಲಾ ಕೊಯ್ಲು ಮುಗಿದಿದ್ದ ಭತ್ತದ ಗದ್ದೆಗಳು. ಎಡಕ್ಕೆ ಏರಿಹೋಗಿದ್ದ ಗುಡ್ಡ ಕರೀ ಕಂಬಳಿ ಹೊದ್ದ ದೈತ್ಯನಂತೆ ಕಾಣುತ್ತಿತ್ತು. ಗುಡ್ಡದ ಆ ಬದಿಯಲ್ಲಿ ಒಂದು ವಿಶಾಲ ಕೆರೆ ಇದೆ ಎಂದು ನನಗೆ ಗೊತ್ತಿತ್ತು. ಗುಡ್ಡವನ್ನು ದಾಟಿ ಮುಂದುವರೆದರೆ ಎಡಕ್ಕೆ ಸ್ಮಶಾನ, ಅದರಾಚೆ ಮಾವಿನ ತೋಪು. ಅದರ ಆಚೆ ಬದಿಯಲ್ಲಿ ಏನಿದೆಯೆಂದು ನನಗೆ ಗೊತ್ತಿಲ್ಲ. ಮಾವಿನ ತೋಪು ದಾಟಿದ ಮೇಲೆ ರಸ್ತೆ ಬಲಕ್ಕೆ ಹೊರಳಿಕೊಳ್ಳುತ್ತಿತ್ತು. ಆ ರಸ್ತೆ ಹಳ್ಳಿಗೆ ಹೋಗುತ್ತದೆ. ಆದರೆ ಅದನ್ನು ಬಿಟ್ಟು ನೇರಕ್ಕಿದ್ದ ಪುಟ್ಟ ಹಾದಿಯಲ್ಲಿ ಎರಡು ನಿಮಿಷ ನಡೆದರೆ ನಮ್ಮ ಮಾವನವರ ತೋಟದ ಮನೆ ಸಿಗುತ್ತದೆ. ನಮ್ಮ ಮದುವೆಗೆ ಒಂದು ತಿಂಗಳ ಹಿಂದೆ ಹೊಸದಾಗಿ ಕಟ್ಟಿಸಿದ ವಿಶಾಲ ಭವನ ಅದು.
ನಡೆಯುತ್ತಾ ಹೋದಂತೆ ಎದೆಯಲ್ಲಿ ಮೂಡಿದ್ದ ಭಯ ಕರಗಿ ಮನಸ್ಸು ಮಾಧವಿಯತ್ತ ತಿರುಗಿತು. ನನ್ನನ್ನು ನೋಡಿದೊಡನೇ ಅವಳಿಗಾಗುವ ಅಚ್ಚರಿ, ನನ್ನ ದೆವ್ವದ ಕಥೆಗೆ ಅವಳ ಪ್ರತಿಕ್ರಿಯೆ, ನಂತರದ ಫೂಲ್ ಆದಾಗಿನ ಅವಳ ಮುಖಭಾವ- ಎಲ್ಲವನ್ನೂ ಕಲ್ಪಿಸಿಕೊಳ್ಳುತ್ತಾಹೋದಂತೇ ತುಟಿಯಂಚಿನಲ್ಲಿ ನಸುನಗೆ ಮೂಡಿತು. ಅವಳನ್ನು ನಂಬಿಸಲು ಹೇಗೆ ನಟಿಸಿದರೆ ಚೆನ್ನ, ಯಾವ ಡೈಲಾಗ್ ಹೊಡೆದರೆ ಅವಳು ಹಳ್ಳಕ್ಕೆ ಬೀಳುತ್ತಾಳೆ ಎಂದು ಲೆಕ್ಕ ಹಾಕುತ್ತಾ ಹೆಜ್ಜೆ ಸರಿಸಿದೆ.
ಗುಡ್ಡ ದಾಟಿ ಸ್ಮಶಾನ ಸಮೀಪಿಸಿದೆ. ಎತ್ತರದ ಮುಂಡುಗಳ್ಳಿ ಬೇಲಿಯಾಚೆ ನನಗೇನೂ ಯಾವ ಸಮಾಧಿಯೂ ಕಾಣುವಂತಿರಲಿಲ್ಲ. ಆದರೂ ಅಲ್ಲಿ ಸತ್ತವರನ್ನು ಸುಟ್ಟ, ಹೂಳಿದ ಸಮಾಧಿಗಳಿವೆ; ಅದರ ಪಕ್ಕ ನಾನು ಒಂಟಿಯಾಗಿ ನಡೆಯುತ್ತಿದ್ದೇನೆ ಎಂಬ ಅರಿವು ನನ್ನೆದೆಯಲ್ಲಿ ತುಸು ಅಳುಕನ್ನುಂಟುಮಾಡಿತು.
ಸ್ಮಶಾನ ದಾಟುತ್ತಿದ್ದಂತೇ ಮುಂದೆ ತುಸು ದೂರದಲ್ಲಿ ದಾರಿ ಅಸಹಜವಾಗಿದ್ದಂತೆ ಗೋಚರಿಸಿತು. ನಿಂತು ಟಾರ್ಚ್ನ ಬೆಳಕನ್ನು ಅತ್ತ ಹಾಯಿಸಿದೆ. ಆಗ ಕಂಡದ್ದು ರಸ್ತೆಗೆ ಅಡ್ಡವಾಗಿ ಸುರಿದಿದ್ದ ಕೆಂಪುಮಣ್ಣಿನ ರಾಶಿ. ಹತ್ತಿರ ಹೋಗಿ ನೋಡಿದಾಗ ಅಲ್ಲೇನು ನಡೆಯುತ್ತಿದೆ ಎಂದು ಅರ್ಥವಾಯಿತು.