ಭಾಷಣ ಮೊಟಕುಗೊಳಿಸಿ ನಾ ಡಿಸೋಜಾಗೆ ಅವಮಾನ
ಮಡಿಕೇರಿ, ಜ. 7 : ಇಪ್ಪತ್ನಾಲ್ಕು ಪುಟಗಳ ಸುದೀರ್ಘ ಭಾಷಣವನ್ನು ಮೊಟಕುಗೊಳಿಸಿರೆಂದು ಹೇಳಿ 80ನೇ ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜಕರು ಅಧ್ಯಕ್ಷ ನಾ. ಡಿಸೋಜಾ ಅವರಿಗೆ ಅವಮಾನ ಮಾಡಿರುವ ಸಂಗತಿ ಮಡಿಕೇರಿಯಲ್ಲಿ ಜರುಗಿದೆ. ಮೊದಲ ದಿನವೇ ಈ ಘಟನೆಯಿಂದಾಗಿ ಸಮ್ಮೇಳನಕ್ಕೆ ಕಪ್ಪು ಚುಕ್ಕೆ ಇಟ್ಟಂತಾಗಿದೆ.
ಪಂಜೆ ಮಂಗೇಶರಾಯರ ಕವನ ವಾಚನದೊಂದಿಗೆ ನಾ. ಡಿಸೋಜಾ ಅವರು ಆರಂಭಿಸಿದ ಭಾಷಣ ಬಹು ಸುದೀರ್ಘವಾಗಿತ್ತು. ಸುಮಾರು ಹದಿನೆಂಟು ಪುಟಗಳಷ್ಟು ಭಾಷಣವನ್ನು ಅವರು ಓದಿದ್ದರು. ಅಷ್ಟರಲ್ಲಿ ಆಯೋಜಕರು ಬಂದು ಭಾಷಣವನ್ನು ಮೊಟಕುಗೊಳಿಸಬೇಕೆಂದು ಸಮ್ಮೇಳನಾಧ್ಯಕ್ಷರನ್ನು ಆಗ್ರಹಿಸಿದ್ದಾರೆ.
ಇಂಥ ಘಟನೆ ಮತ್ತೆ ಯಾವತ್ತೂ ಮರುಕಳಿಸಬಾರದು, ಇಂಥ ಅವಮಾನ ಯಾರಿಗೂ ಆಗಬಾರದು ಎಂದು 76 ವರ್ಷ ವಯಸ್ಸಿನ ಖ್ಯಾತ ಕಾದಂಬರಿಕಾರ ಮನನೊಂದು ನುಡಿದಿದ್ದಾರೆ. ಇನ್ನುಳಿದ ಪುಟಗಳಲ್ಲಿನ ಪ್ರಮುಖ ಅಂಶಗಳನ್ನು ಮಾತ್ರ ಓದುವುದಾಗಿ ಅವರು ಮನವಿ ಮಾಡಿಕೊಂಡರೂ ಆಯೋಜಕರು ಕೇಳಿಲ್ಲ. [ಡಿಸೋಜಾ ಭಾಷಣದ ಪೂರ್ಣಪಾಠ]
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು, ನಾ ಡಿಸೋಜಾ ಅವರ ಭಾಷಣ ಮೊಟಕುಗೊಳಿಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನು ಮುಂದಾದರೂ ಯಾವ ಸಂದರ್ಭದಲ್ಲಿ ಅಧ್ಯಕ್ಷ ಭಾಷಣದ ಕಾರ್ಯಕ್ರಮ ಆಯೋಜಿಸಬೇಕು ಎಂಬ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಬೇಕಾಗಿದೆ ಎಂದು ಹಾಲಂಬಿ ಅವರು ನುಡಿದಿದ್ದಾರೆ.
ನಾ ಡಿಸೋಜಾ ಅವರು ಭಾಷಣ ಮಾಡುತ್ತಿದ್ದಾಗ ಸಭಿಕರೆಲ್ಲ ವಿಪರೀತ ಹಸಿದಿದ್ದರು, ಸಭಾಂಗಣ ಹೆಚ್ಚೂ ಕಡಿಮೆ ಖಾಲಿಯಾಗಿತ್ತು. ಅಲ್ಲದೆ, ಭಾಷಣವೂ ಸುದೀರ್ಘವಾಗಿದ್ದರಿಂದ ಗತ್ಯಂತರವಿಲ್ಲದೆ ಮೊಟಕುಗೊಳಿಸಬೇಕಾಯಿತು ಎಂದು ಹೇಳಿರುವ ಅವರು, ಇದರಿಂದಾಗಿ ಡಿಸೋಜಾ ಅವರು ನೊಂದಿದ್ದರೆ ಅವರ ಕ್ಷಮೆ ಕೇಳುವುದಾಗಿ ಹೇಳಿದ್ದಾರೆ.
ಒಟ್ಟಿನಲ್ಲಿ ಕನ್ನಡ ಹಸಿವಿಗಿಂತ ಹೊಟ್ಟೆಯ ಹಸಿವೇ ಹೆಚ್ಚಾಯಿತೆ ಎಂದು ಕನ್ನಡ ಪ್ರೇಮಿಗಳು ಆಡಿಕೊಳ್ಳುವಂತೆ ಈ ನಡೆಯಬಾರದ ಘಟನೆ ನಡೆದಿದೆ. ಮೆರವಣಿಗೆಯಲ್ಲಿ ಭಾಗವಹಿಸಿದ ನಂತರ ಕನ್ನಡಿಗರು ದಣಿದಿದ್ದರೆಂಬುದೇನೋ ನಿಜ. ಆದರೆ, ಭಾಷಣದ ಬಗ್ಗೆ ಆಯೋಜಕರು ಮೊದಲೇ ಚಿಂತಿಸಬೇಕಾಗಿತ್ತು. ಹಾಗೆಯೆ, ಸುದೀರ್ಘ ಭಾಷಣ ಮಾಡಬೇಕೋ ಬೇಡವೋ ಎಂಬ ಬಗ್ಗೆಯೂ ಡಿಸೋಜಾ ಅವರು ನಿರ್ಧರಿಸಬೇಕಾಗಿತ್ತು ಎಂದು ಸಮ್ಮೇಳನದಲ್ಲಿ ಭಾಗವಹಿಸಿದ ಕನ್ನಡಿಗರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.