ಒಂದು ಕೊಡ ನೀರು ಕೊಡೋ ಭಗವಂತ!
ಬೇಸಿಗೆ ಬೇಗೆ ಸಾಕಪ್ಪಾ ಸಾಕು ಅನ್ನಿಸಿದೆ. ಹವಾನಿಯಂತ್ರಿತ ನಗರಿ ಬೆಂಗಳೂರಿನಲ್ಲೂ ಲೀಟರ್ಗಟ್ಟಲೇ ಬೆವರು ಸುರಿಸಬೇಕಾಗಿದೆ. ನಮಗೆ ಬೆವರು, ಬೇಗೆಯ ಚಿಂತೆ. ಆದರೆ ಬಡವರಿಗೆ? ನೀರಿಗಾಗಿ ಮೈಲುದ್ದ ಸವೆಸಿದ ಮಂದಿಗೆ, ಹನಿ ನೀರನ್ನು ಬಂಗಾರದಂತೆ ಸಂಗ್ರಹಿಸಿ, ಬಳಸಿದ ಮಂದಿಗೆ ಈ ಪದ್ಯ ಚೆನ್ನಾಗಿ ಅರ್ಥವಾಗುತ್ತದೆ!
- ಆಶಾ ಬಾಲಕೃಷ್ಣ, ಎಚ್ಎಸ್ಆರ್ ಬಡಾವಣೆ, ಬೆಂಗಳೂರು.
ಡಾಂಬರಿನ ಸು(ಅ)ವ್ಯವಸ್ಥೆಯಲ್ಲಿ,
ಕನಸ ಕಂಗಳ ಪುಟ್ಟ ಮಕ್ಕಳು
ಎಲ್ಲಾ ಆರರಿಂದ ಹನ್ನೆರಡೋ ಮತ್ತೆರಡೋ,
ಬೇಸಿಗೆಯ ಝಳ, ಬರಿಗಾಲು, ಇಲ್ಲ ತಲೆಗೆ
ಬಿಸಿಲ ರಕ್ಷಣೆಯ ಬಣ್ಣಬಣ್ಣದ ಟೋಪಿ
ಸೊಂಟದಲ್ಲೋ ತಲೆಯ ಮೇಲೋ ಒಂದೊಂದು ನೀರ ಕೊಡ
ಕೆಲವರಿಗೆ ಪುಟ್ಟ ಸೈಕಲಲ್ಲಿ ಎರಡೆರಡು,
ಮೈಲುಗಟ್ಟಲೆ ಪಾದ ಸವೆತ, ಜೊತೆಗೆ ಅದೆಷ್ಟೋ
ಹುಡುಕಾಟದ ಅಲೆತ.
ಇವರ ಹೆತ್ತವರೇ ನಮ್ಮ
ವಿತ್ತ ವಲ್ಲಭರು ಸುತ್ತ
ನೆಟ್ಟಿರುವ ಗಟ್ಟಿ ಮನೆಗಳ
ಕಂಬಗಳು, ಆಧಾರ ಸ್ತಂಭಗಳು
ಅಂಗುಲಂಗುಲಕ್ಕೂ ಇಟ್ಟಿಗೆ ಇಟ್ಟವರು,
ತಮ್ಮ ತಲೆಗಳ ಮೇಲೆ ಪ್ಲಾಸ್ಟಿಕ್
ಸೂರುಗಳ ಹೊತ್ತವರು.
ಕಾವೇರಿಗಾಗಿ ಹೋರಾಟ ಹಾರಾಟ
ರಾಜಕೀಯದ ಚದುರಂಗದಾಟ.
ಆದರಿವರಿಗಿದೋ ನೀರ ಹನಿಗಾಗಿ
ದಿನ ನಿತ್ಯ ಪರದಾಟ.
ತೆರಿಗೆಗಳ್ಳರೇ ಮುಕ್ಕಾಲು ಪಾಲು
ಸಂದ ಕಾಲರ ಮುಕ್ಕಾಲು,
ಯಾವುದೋ ಅಧಿಕಾರಿಗಳ, ರಾಜಕಾರಣಿಗಳ
ಜೇಬು ಪಾಲು, ಅಯ್ಯೋ ಪಾಪ!!
ಎಲ್ಲಿದೆ ಹಣ, ಅದರ ಹಿಂದಿನ ಮನ
ಬಡವರಿಗೆ ನೀರ ಕೊಳಾಯಿಯೊದಗಿಸಲು?












Click it and Unblock the Notifications