ಕರ್ಫ್ಯೂ ವಿಧಿಸಿದ ದಿನ
- ಜಾನಕೀಸುತ(ಸೌಜನ್ಯ ಎಚ್.ಪಿ.)
ಬೆಳಬೆಳಗ್ಗಿನವಿವಾಹಿತರ ರಸಿಕತೆಗೆ,
ವಿವಾಹೇತರರ ಕನಸಿಗೆ
ರಸಭಂಗ ತಂದೊಡ್ಡುವ
ಕಾಮಧೇನುವಿನ ವರ್ತಕನ ಸದ್ದಿಲ್ಲ.
ಸುದ್ದಿ ಹಂಚುವ ಪ್ರವರ್ತಕನ
ಸುದ್ದಿಯೇ ಇಲ್ಲ!
ಸದ್ದುಗಳಿಲ್ಲ ಎನ್ನುವಂತಿಲ್ಲ
ಇವೆ,
ಗಡಿಭದ್ರತಾ ಪಡೆಗಳ, ವಿಶೇಷ
ಪೋಲೀಸ್ ರೆಜಿಮೆಂಟ್ಗಳ
ಬೂಟುಗಳ ಶಬ್ದ.
ಎಲ್ಲೋ ದೂರದಲ್ಲಿ
ಗುಂಡು ಹಾರಿದೊಡನೆ
ಅವು ಕೂಡ ನಿಶ್ಯಬ್ದ!
ಇನ್ನೂ ಆರಿಲ್ಲ ಅಂತರಾಳದೊಳಗಿನ
ಕೋಮು ದಳ್ಳುರಿಯ ಕೊಂಡ,
ಸದ್ಯಕ್ಕೀಗ ಅದು
ಬೂದಿ ಮುಚ್ಚಿದ ಕೆಂಡ!
ದಿಕ್ಕು ತಪ್ಪಿ ಇತ್ತ ಬೀಸಿದರೆ ಗಾಳಿ,
ಕಿಡಿ, ಕಿಡಿ ಸ್ಫೋಟಿಸಿ
ಅದು ದಹದಹಿಸಲು ಸಿದ್ಧ.
ಅದಕ್ಕೆ ತುಪ್ಪ ಸುರಿಯಲು
ಕೆಲವರು ಸದಾ ಸನ್ನದ್ಧ.
ಹತ್ತುರಿದರೆ ಪ್ರಕಾಶಮಾನ ಜ್ವಾಲೆ,
ಹಲವರು ಪತಂಗಗಳಾಗಲು ಬದ್ಧ!
ರಸ್ತೆ ಪೂರಾ ನಿರ್ಜನ
ಅಲ್ಲಲ್ಲಿ ನಿಂತು,
ಮೆಷಿನ್ ಗನ್ ಹೊತ್ತು
ಗಸ್ತು ತಿರುಗುವ
ಪಹರೆಯ ಜನ!
ಸಂತ್ರಸ್ತ ಸಂಸಾರಗಳ,
ಸಮಾಧಿಗಳೇ ತುಂಬಿದ
ಸ್ಮಶಾನದಲ್ಲಿ ಶಾಂತಿ,
ನೆಲೆಸಿದ ಭ್ರಾಂತಿ!
(ಸಂಕ್ರಮಣ ಪ್ರಕಾಶನದವರು ನಡೆಸುವ ರಾಜ್ಯ ಮಟ್ಟದ ಸಂಕ್ರಮಣ ಕಾವ್ಯ-2003ರ ಸ್ಫರ್ಧೆಯಲ್ಲಿ ಬಹುಮಾನ ಪಡೆದ ಕವಿತೆ)












Click it and Unblock the Notifications