ಯಕ್ಷರಂಗದ 'ಚಾರ್ಲೀ ಚಾಪ್ಲಿನ್' ಸೀತಾರಾಮ್ ಕುಮಾರ್ ಕಟೀಲ್
ಗಂಭೀರ ಪಾತ್ರಗಳಲ್ಲಿ ಹಾಸ್ಯವನ್ನು ತುರುಕಿಸಿ ಚಪ್ಪಾಳೆಗಾಗಿ ಇನ್ನಿಲ್ಲದ ಸಾಹಸ ಮಾಡುವ ಕಲಾವಿದರಿಗೆ ಹೋಲಿಸಿದ್ರೆ ನಮ್ಮ 'ಚಾಪ್ಲಿನ್' ಹಾಸ್ಯ ಪಾತ್ರಗಳ ಮೂಲಕ ಗಂಭೀರ ಚಿಂತನೆಗಳನ್ನು ಪ್ರಯೋಗ ಮಾಡಿ ಯಕ್ಷವಿದ್ವಾಂಸರೇ ತಲೆದೂಗುವಂತೆ ಮಾಡಿದ ಹಾಸ್ಯಗಾರ. ಸದ್ಯ ಯಕ್ಷಗಾನದ ವಿವಿಧ ಮಜಲುಗಳಲ್ಲಿ ಅನುಭವದ ಜೋಳಿಗೆ ಭರ್ತಿ ಮಾಡಿಕೊಂಡ ವಿದ್ವಾಂಸ, ವಿವಿಧ ಪಾತ್ರಗಳನ್ನು ಲೀಲಾಜಾಲವಾಗಿ ನಿಭಾಯಿಸಬಲ್ಲ ನಿಷ್ಣಾತ.
ವಿಜಯ, ಮಕರಂದ, ಶ್ರೀನಿವಾಸನ ಸಖ, ಪೌಂಡ್ರಕನ ಚಾರ, ಮಾಲಿನಿದೂತ, ರುಕ್ಮಿಣಿಯ ಗುರು, ನಕ್ಷತ್ರಿಕ, ನಂದಿಶೆಟ್ಟಿ, ಕಾಶಿಮಾಣಿ, ವೃಧ್ಧಬ್ರಾಹ್ಮಣ, ಮಂತ್ರವಾದಿ, ರಾಕ್ಷಸ ದೂತ, ಅರಬ್ ಕುದುರೆ ವ್ಯಾಪಾರಿ ಮೊದಲಾದ ಪಾತ್ರಗಳು ಈ ಕಲಾವಿದನಿಗೇ ಬ್ರಾಂಡ್ ಆಗಿವೆ. ಯಕ್ಷಗಾನ ಮುಗಿದರೂ ಈ ಪಾತ್ರಗಳ ಗುಂಗಿನಿಂದ ಪ್ರೇಕ್ಷಕ ಹೊರಬಂದಿರೋದಿಲ್ಲ.
ಈ ಬ್ರ್ಯಾಂಡ್ ಕಲಾವಿದ ಮತ್ತಿನ್ಯಾರೂ ಅಲ್ಲ, ರಂಗದಲ್ಲಿ ಪಾದರಸದಂತೆ ಚುರುಕು. ಇವರ ರಂಗಪ್ರವೇಶವಾದಾಗ ಚಪ್ಪಾಳೆಗಳ ಸುರಿಮಳೆ, ಮಾತಾಡಲು ಶುರುಮಾಡಿದ್ರೆ ನಾನ್ ಸ್ಟಾಪ್ ಮಾತು. ಯಕ್ಷರಂಗದ ತೆಂಕು - ಬಡಗು ಉಭಯತಿಟ್ಟುಗಳ ಸುಪ್ರಸಿದ್ಧ ಹಾಸ್ಯ ಕಲಾವಿದ, ಯಕ್ಷರಂಗದ 'ಚಾರ್ಲೀ ಚಾಪ್ಲಿನ್' ಸೀತಾರಾಮ್ ಕುಮಾರ್ ಕಟೀಲ್.
ಸೀತಾರಾಮರು ಜನಿಸಿದ್ದು ಅಕ್ಟೋಬರ್ 10, 1955ರಲ್ಲಿ. ಇವರ ತಂದೆ ಶ್ರೀನಿವಾಸ, ತಾಯಿ ಕಲ್ಯಾಣಿ. ಸದ್ಯ ಸೀತಾರಾಮರು ಹೊಸನಗರ, ಹನುಮಗಿರಿ ಮೇಳದ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ನಿರಂತರವಾಗಿ ರಂಜಿಸುತ್ತಿದ್ದಾರೆ.

ಗುರುತಿಸಿಕೊಂಡಿದ್ದು ಹಾಸ್ಯ ಪಾತ್ರದ ಮೂಲಕ
ಬಾಲ್ಯದಲ್ಲೆ ಯಕ್ಷಗಾನದಲ್ಲಿ ಇವರಿಗೆ ಅತೀವ ಆಸಕ್ತಿ. ಸೀತಾರಾಮರನ್ನು ಯಕ್ಷಗಾನ ಮೇಳಕ್ಕೆ ತಂದದ್ದು ದಿ. ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟರು. ಮೊದಲಿಗೆ ಚೆನ್ನಪ್ಪ ಶೆಟ್ಟರು ಕದ್ರಿ ಮೇಳದಲ್ಲಿ ಗುರುತಿಸಿಕೊಂಡರು. ಸೀತಾರಾಮರು ಹಾಸ್ಯ ಕಲಾವಿದನಾಗಿ ಗುರುತಿಸಿಕೊಂಡಿದ್ದು "ಮದ್ರೆಂಗಿ ಮದ್ಮಲ್" ತುಳುಪ್ರಸಂಗದ ಪಾತ್ರದ ಮೂಲಕ. ನಂತರ ವಾಸುದೇವ ಸಾಮಗರ ಉಪ್ಪಣ್ಣ ದೀಕ್ಷಿತರ ಮಗ ಹೆಡ್ಡ ಸ್ವಭಾವದ ಜನ್ನಮಾಣಿ ಎಂಬ ಹಾಸ್ಯ ಪಾತ್ರ ಅವರಿಗೆ ವೃತ್ತಿಯಲ್ಲಿ ಬ್ರೇಕ್ ನೀಡಿದ ಪಾತ್ರ.

ಮೇಳದ ಟಿಆರ್ಪಿ ಹೆಚ್ಚಿಸಿದ ಹೆಗ್ಗಳಿಕೆ
ಮುಂದೆ ಹಾಸ್ಯ ಪಾತ್ರ ಪೋಷಣೆಯಲ್ಲಿ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಮೇಳದ ಪ್ರಧಾನ ಹಾಸ್ಯಗಾರರಾಗಿ ಮೇಳದ ಟಿಆರ್ ಪಿ ಹೆಚ್ಚಿಸಿದರು. ಬೇಡಿಕೆಯ ಹಾಸ್ಯನಟರಾಗಿ ಗುರುತಿಸಿಕೊಂಡರು. ಸೀತಾರಾಮರ ಯಕ್ಷಗಾನದ ಎರಡನೆ ಮಜಲು ಬಡಗು ತಿಟ್ಟಿನಲ್ಲೂ ಅವರ ವಿರಾಟ ಪ್ರತಿಭೆಯನ್ನು ಅನಾವರಣಗೊಳಿಸಲು ಕಾರಣವಾಯಿತು. ಚೆನ್ನಪ್ಪ ಶೆಟ್ಟರ ನಿರ್ದೇಶನದಂತೆಯೇ ಸೀತಾರಾಮರು ಪೆರ್ಡೂರು ಮೇಳ ಸೇರಿದರು. ಅಲ್ಲೂ ತಮ್ಮ ಚಮತ್ಕಾರೀ ಹಾಸ್ಯದ ಮೂಲಕ ಡಿಮಾಂಡ್ ಕ್ರಿಯೇಟ್ ಮಾಡಿಕೊಂಡರು.

ಹಾಸ್ಯ ಕಲಾ ಸಮುದ್ರ ಬಿರುದು
ಸೀತಾರಾಮ್ ಕುಮಾರ್ ಕಟೀಲ್ ಅವರ ಅಭಿಮಾನಿ ಬಳಗ ಅಪಾರ. ಜನ ಅವರಿಗೆ ಪ್ರೀತಿಯಿಂದ ನೀಡಿದ ಬಿರುದು 'ಹಾಸ್ಯ ಕಲಾ ಸಮುದ್ರ'. ಅದರಂತೆಯೇ ಇವರೊಬ್ಬ ಅನುಭವಗಳ ಸಾಗರವೇ ಹೌದು. ಯಕ್ಷಗಾನದಲ್ಲಿ ಹಾಸ್ಯ ಪಾತ್ರವನ್ನು ಪ್ರಧಾನ ಪಾತ್ರವನ್ನಾಗಿ ಚಿತ್ರಿಸಿದ ಹಿರಿಮೆ ಸೀತಾರಾಮರದು.
ಸೀತಾರಾಮರ ಹೊಸತನದ ಹಾಸ್ಯ. ಬಣ್ಣಗಾರಿಕೆ, ಸಂಭಾಷಣೆ, ವಾದ ಸಂವಾದಗಳಲ್ಲಿ ತೋರುವ ಪ್ರತ್ಯುತ್ಪನ್ನಮತಿ, ಸೃಜನಶೀಲತೆಯ ಶುದ್ಧ ಹಾಸ್ಯ ಇವರನ್ನು ಶ್ರೇಷ್ಠ ಹಾಸ್ಯಗಾರರೆಂದು ಎತ್ತರಕ್ಕೇರಿಸಿದ ಅಂಶಗಳು.

ನಿರರ್ಗಳವಾಗಿ ಶ್ಲೋಕ, ವರ್ಣನೆ, ಹೊಗಳಿಕೆ
ಸೀತಾರಾಮರು ನಿರರ್ಗಳವಾಗಿ ಶ್ಲೋಕ, ವರ್ಣನೆ, ಹೊಗಳಿಕೆಯನ್ನು ಹೇಳುವಲ್ಲಿ ಸಿದ್ದಹಸ್ತರು. ಮಹರ್ಷಿ ಅಗಸ್ತ್ಯ ಪ್ರಸಂಗದಲ್ಲಿ ಸೀತಾರಾಮರ ಮಂತ್ರವಾದಿಯ ಪಾತ್ರ ಬಹಳ ಆಕರ್ಷಣೆಯ ಪಾತ್ರವೆಂದೇ ಹೇಳಬಹುದು. ವಾಮಾಚಾರದ 300ಕ್ಕೂ ಅಧಿಕ ಪೂಜಾಸಾಮಾಗ್ರಿಗಳನ್ನು ಪುಂಖಾನುಪುಂಖವಾಗಿ ಹೇಳುವ ಕಲೆ ಅವರಿಗೆ ಮಾತ್ರ ಸಿದ್ದಿಸಿದೆ. ಶ್ರೀಕೃಷ್ಣನನ್ನು ಸ್ತುತಿಸುವಾಗ ಪಟಪಟನೇ ನೂರಕ್ಕೂ ಹೆಚ್ಚು ಹೆಸರನ್ನು ಹೇಳುವ ಮೂಲಕ ಅಚ್ಚರಿ ಮೂಡಿಸ್ತಾರೆ.

ಇವರನ್ನು ನೋಡುವುದಕ್ಕಾಗೇ ಪ್ರೇಕ್ಷಕರು ಬರ್ತಾರೆ
ಶ್ವೇತಕುಮಾರ ಚರಿತ್ರೆಯಲ್ಲಿ ಪ್ರೇತವಾಗಿ ಕಂಬ, ಮರದಲ್ಲಿ ತಲೆಕೆಳಗಾಗಿ ನೇತಾಡುವ ದೃಶ್ಯ, "ಶ್ರೀದೇವೀ ಮಹಾತ್ಮೆ"ಯ ರಕ್ತೇಶ್ವರಿಯ ಪಾತ್ರಿ ಹಲ್ಲಿನಿಂದ ಸೀಯಾಳವನ್ನು ಕಚ್ಚಿ ಕುಡಿಯುವ ದೃಶ್ಯಗಳನ್ನು ನೋಡುವುದಕ್ಕಾಗಿಯೇ ಪ್ರೇಕ್ಷಕರು ಮುಗಿಬೀಳ್ತಾರೆ. ಯಕ್ಷಗಾನದ ಹಾಸ್ಯಗಳಿಗೆ ಹೊಸ ಭಾಷ್ಯ ಬರೆದ ಸೀತಾರಾಂ ಕುಮಾರ್ ಕಟೀಲ್ ಅವರನ್ನರಸಿ ಅನೇಕ ಮಾನ ಸನ್ಮಾನ ಪ್ರಶಸ್ತಿಗಳು ಬಂದಿವೆ. 2018ರ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಸ್ಯಚತುರ ಸೀತಾರಾಮ್ ಕಟೀಲ್ ರ ಮುಡಿಯೇರಿದೆ. ಹಾಸ್ಯ ಕಲಾವಿದರಿಗೆ ಅಭಿನಂದನೆಗಳು. ಅವರನ್ನು ಇನ್ನಷ್ಟು ಪ್ರಶಸ್ತಿಗಳು ಹುಡುಕಿಕೊಂಡು ಬರಲಿ.












Click it and Unblock the Notifications