ವಿಶೇಷ ಲೇಖನ : ಜಾದೂ ಸಾಮ್ರಾಟ್ ಪಿ.ಸಿ. ಸರ್ಕಾರ್
ಫೆಬ್ರವರಿ 23 ಇಂದ್ರಜಾಲ ವಿದ್ಯೆ ಪ್ರದರ್ಶಿಸುವವರಿಗೆ, ಜಾದೂ ಇಷ್ಟಪಡುವವರಿಗೆ ಸ್ಮರಣೀಯ ದಿನ. ಈ ದಿನವನ್ನು ಜಾದೂಗಾರರ ದಿನವೆಂದು ಆಚರಿಸಲಾಗುತ್ತಿದೆ. ಏಕೆಂದರೆ, ಈ ದಿನ ಭಾರತ ಕಂಡ ಮಹಾನ್ ಜಾದೂಗಾರ ಪ್ರೊತುಲ್ ಚಂದ್ರ ಸರ್ಕಾರ್ (ಪಿ.ಸಿ. ಸರ್ಕಾರ್) ಅವರು ಹುಟ್ಟಿದ ದಿನವಿದು. ಪಿ.ಸಿ. ಸರ್ಕಾರ್ (23 ಫೆಬ್ರವರಿ 1913 - 6 ಜನವರಿ 1971) ಅವರು ಬಂಗಾಳದ ಕಲ್ಕತ್ತಾ ನಗರದಲ್ಲಿ ಜನಿಸಿದರು. ಸರ್ಕಾರ್ ಹುಟ್ಟುಹಬ್ಬದ ನಿಮಿತ್ತ ಈ ವಿಶೇಷ ಲೇಖನ.
ಮುಖ್ಯ ಘಟನೆಗಳು : 1937ರಲ್ಲಿದ್ದ ಬಂಗಾಳದ ಸಮ್ಮಿಶ್ರ ಸರ್ಕಾರದ ಪ್ರಧಾನ ಮಂತ್ರಿ ಮತ್ತು ಎಲ್ಲಾ ಮಂತ್ರಿಗಳ ಹಸ್ತಾಕ್ಷರ ಪಡೆದು ಆ ಪತ್ರವನ್ನು ರಾಜಿನಾಮೆ ಪತ್ರವನ್ನಾಗಿಸಿ ಇಡೀ ದೇಶದಲ್ಲಿ ಸಂಚಲನ ತಂದು ಬೆಳಗಾಗುವುದರೊಳಗೆ ಖ್ಯಾತ ನಾಮರಾದವರೇ ಜಾದೂ ಸಾಮ್ರಾಟ್ ಪಿ.ಸಿ. ಸರ್ಕಾರ್, ಹಸ್ತಾಕ್ಷರ ಹಾಕಿದವನೆಂದರೆ ಸಚಿವರಾದ ಫಜಲುಲ್ ಹಕ್, ಸುಹ್ರಾವಾರ್ಡಿ, ನಜೀಮುದ್ದೀನ್. ಮಾರನೇ ದಿನ ಮುಖಪುಟದಲ್ಲಿ ಕ್ಯಾಬಿನೇಟ್ನಲ್ಲಿ ವಿಚಿತ್ರ ಮಾಡಿ ಸಚಿವರಿಂದ ರಾಜೀನಾಮೆ ಪಡೆದ ಪಿ.ಸಿ. ಸರ್ಕಾರ್ ಎಂದು ಪ್ರಕಟವಾಗಿತ್ತು. (ಸ್ವಾತ್ರಂತ್ರ್ಯ ಪೂರ್ವದಲ್ಲಿ ಅಂದಿನ ರಾಜ್ಯ ಮುಖ್ಯಮಂತ್ರಿಗಳಿಗೆ ಪ್ರಧಾನ ಎಂದೇ ಸಂಭೋದಿಸಲ್ಪಡುತ್ತಿತ್ತು). [ಪ್ರಹ್ಲಾದ್ ಆಚಾರ್ಯ ಸಿಂಗಪುರದಲ್ಲಿ ಸೃಷ್ಟಿಸಿದ ಇಂದ್ರಜಾಲ]
ಮತ್ತೊಂದು ಭಯಾನಕ ಜಾದೂವೆಂದರೆ ಚೈನಾದೇಶದಲ್ಲಿ ಸರ್ಕಾರ್ರವರಿಗೆ ಕೈಕೋಳ ಹಾಕಿ ರೈಲ್ವೆ ಹಳಿಗಳ ಮೇಲೆ ಕಟ್ಟಿಹಾಕಲಾಗಿತ್ತು. ಅದೇ ಮಾರ್ಗವಾಗಿ ಕೆಲ ನಿಮಿಷಗಳಲ್ಲಿ ಎಕ್ಸ್ಪ್ರೆಸ್ ರೈಲು ಬಂಡಿ ಹಾದು ಹೋಗುವುದಿತ್ತು. ತನ್ನ ಕೈಕೋಳ ಹಾಗೂ ಹಗ್ಗದ ಬಂಧನದಿಂದ ತಪ್ಪಿಸಿಕೊಂಡು ಹಳಿದಾಟಿದ ಕೆಲವೇ ಕ್ಷಣದಲ್ಲಿ ಭಯಂಕರ ಶಬ್ದಮಾಡುತ್ತಾ ರೈಲು ಬಂಡಿ ಹಾದು ಹೋಯಿತು! ಬ್ರಿಟಿಷ್ ಮಾಧ್ಯಮಗಳು ಅಂದೆ ಜಾದೂಗಾರ ಹೌದಿನಿ ನಂತರದ ಚತುರ ಜಾದೂಗಾರನೆಂದು ಪಿ.ಸಿ.ಸರ್ಕಾರ್ ರವರನ್ನು ಹೊಗಳಿತು.
1950ರಲ್ಲಿ ಜಗತ್ತನ್ನು ಮತ್ತೊಮ್ಮೆ ಕೌತುಕ ಮಯ ಮಾಡಿದರು. ಅದೇನೆಂದರೆ ಪ್ಯಾರಿಸ್ ನಗರದ ಪ್ರಸಿದ್ಧ ಸ್ಥಳವಾದ ಪ್ಯಾಲೇಸ್ ಡೆ ಒಪೇರದ ಅತ್ಯಂತ ಜನನಿಬಿಡ ರಸ್ತೆಯಲ್ಲಿ ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊಂಡು ಸೈಕಲ್ ಸವಾರಿ ಮಾಡಿದರು. ಆಗ ಲಕ್ಷಾಂತರ ಅಭಿಮಾನಿ ಬಳಗ ಹುಟ್ಟಿಕೊಂಡಿತು.
ಪಿ.ಸಿ. ಸರ್ಕಾರ್ರವರು ತಮ್ಮ ಇಡೀ ಜೀವನವನ್ನು ಇಂದ್ರಜಾಲವಿದ್ಯೆಗೆ ಮೀಸಲಿಟ್ಟರು. ತಮ್ಮ ಹೆಚ್ಚಿನ ಜಾದೂ ಪ್ರಯೋಗಗಳು ರಂಗಪರಿಕರಗಳೊಂದಿಗೆ ಭ್ರಮಾಲೋಕ ಸೃಷ್ಟಿಸುತ್ತಿದ್ದರು. ಇದರೊಂದಿಗೆ ವಿಜ್ಞಾನ, ಮನೋವಿಜ್ಞಾನ ಮತ್ತು ನಾಟಕವನ್ನು ಬೆಸೆದು ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಅಳಿವಿನ ಅಂಚಿನಲ್ಲಿದ್ದ ಈ ವಿದ್ಯೆಯನ್ನು ಮೇಲ್ತರಲು ಬಹಳ ಕಷ್ಟಪಡಬೇಕಾಯಿತು. ಆಗಿನ ಕಾಲದಲ್ಲಿ ಜಾದೂ ಎಂದರೆ ಮಾಟ-ಮಂತ್ರವಿರಬಹುದೆಂದು ಪೋಷಕರ್ಯಾರು ಮುಂದೆ ಬರಲಿಲ್ಲ. ಇತರ ರಸ್ತೆ ಬದಿಯ ಜಾದೂಗಾರರು ಬಡತನದಿಂದ ಹಾಗೂ ಸಮಾಜದ ನಿರ್ಲಕ್ಷದಿಂದ ಈ ಕಲೆ ಬೆಳೆಯದಾದಾಗ, ಸರ್ಕಾರ್ರವರು ಒಂಟಿಯಾಗಿ ನಿಂತು ಹಗಲು ರಾತ್ರಿ ಕಷ್ಟಪಟ್ಟು ದಂತ ಕಥೆಯೇ ಆದರು. ಪಾತಾಳದಲ್ಲಿದ್ದ ಈ ವಿದ್ಯೆಯನ್ನು ಉತ್ತುಂಗದ ಶಿಖರಕ್ಕೆ ಕೊಂಡೊಯ್ದು ಪ್ರಸಿದ್ಧ ಕಲೆಗಳಾದ ಸಂಗೀತ, ನಾಟಕ, ನಾಟ್ಯ ಮತ್ತು ಚಿತ್ರಕಲೆಯ ಸಾಲಿಗೆ ತಂದ ಕೀರ್ತಿ ಇವರದು. ತಮ್ಮ ಅಂತರಾಳದ ಜ್ಞಾನದಿಂದ ಜಾದೂ ವಿದ್ಯೆಯನ್ನು, ವೈಜ್ಞಾನಿಕ ದೃಷ್ಟಿಕೋನದಿಂದ ಅದ್ಭುತ ಪ್ರದರ್ಶನಗಳಿಂದ ಭಾರತದ ಜಾದೂ ಅಮರವಾಯಿತು. ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯಿತು.
ಜಾದೂ ಸಾಮ್ರಾಟ್ ಪಿ.ಸಿ. ಸರ್ಕಾರ್ರವರು ಕಲಾ ರಾಯಭಾರಿಯಾಗಿ ನಮ್ಮ ದೇಶದ ಹೆಮ್ಮೆಯಾದರು. 1962ರಲ್ಲಿ ನಮ್ಮ ಭಾರತ ಸರ್ಕಾರ ಪದ್ಮಶ್ರೀ ಬಿರುದು ಕೊಟ್ಟು ಸನ್ಮಾನಿಸಿದರು ಮತ್ತು ಅವರು ನಿಧನರಾದ 8 ವರ್ಷದ ಬಳಿಕ ಅವರು ವಾಸಿಸುತ್ತಿದ್ದ ರಸ್ತೆಗೆ ಇವರ ಹೆಸರನ್ನಿಡಲಾಯಿತು. ಹಾಗೂ ಫೆಬ್ರವರಿ 2010ರಂದು ಇವರ ಭಾವಚಿತ್ರವಿರುವ ಅಂಚೆ ಚೀಟಿಯನ್ನು ಭಾರತ ಸರ್ಕಾರದ ಅಂಚೆ ಇಲಾಖೆ ಬಿಡುಗಡೆ ಮಾಡಿತು. ಈ ಗೌರವಾರ್ಥ ಬರಿ ಪಿ.ಸಿ. ಸರ್ಕಾರ್ಗೆ ಸಂದ ಗೌರವವಾಗದೆ ಇಡೀ ಭಾರತದ ಎಲ್ಲಾ ಜಾದೂಗಾರರಿಗೂ ಹೆಮ್ಮೆಯ ವಿಷಯವಾಗಿದೆ.
ಎಸ್.ಪಿ.
ನಾಗೇಂದ್ರ
ಪ್ರಸಾದ್
ಅಧ್ಯಕ್ಷರು
ಮ್ಯಾಜಿಕ್
ಸರ್ಕಲ್
ಆಫ್
ಬೆಂಗಳೂರು
98450
72042