ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ವಂಡರ್‌’ ವೈಯೆನ್ಕೆ - ಭಾಗ 2

By Staff
|
Google Oneindia Kannada News

Happy birthday YNKವೈಯೆನ್ಕೆ ಐವತ್ತು ವರ್ಷಗಳ ಕಾಲ ಗಂಡು ಹಾಕಿದರೂ, ಅವರು ‘ಕುಡುಕ’ ಎಂಬ ಬಿರುದನ್ನು ಪಡೆಯಲಿಲ್ಲ . ಅನೇಕ ಸಾಹಿತಿಗಳು, ಪತ್ರಕರ್ತರು, ಕವಿಗಳು, ನಟರು, ಬುದ್ಧಿಜೀವಿಗಳು ವೈಯೆನ್ಕೆ ಅವರೊಂದಿಗೆ ಗುಂಡು ಹಾಕಲು ಹಾತೊರೆಯುತ್ತಿದ್ದರು. ಇವರಲ್ಲಿ ಕೆಲವರ ಮನೆಯಲ್ಲಿ ಅವರ ಹೆಂಡಂದಿರು, ತಮ್ಮ ಗಂಡಂದಿರು ಕುಡಿಯುವುದನ್ನು ವಿರೋಧಿಸುತ್ತಿದ್ದರೂ, ವೈಯೆನ್ಕೆ ಮನೆಯಲ್ಲಿ ಕುಡಿದು ಬಂದರೆ ಏನೂ ಹೇಳುತ್ತಿರಲಿಲ್ಲ . ಹೀಗಾಗಿ ಅವರೊಂದಿಗಿನ ಪಾನಗೋಷ್ಠಿಗೆ ‘ಒಪ್ಪಿಗೆ ಮುದ್ರೆ’ ಸಿಗುತ್ತಿತ್ತು.

ವೈಯನ್ಕೆ ಕುಡಿತಕ್ಕೆ ಒಂದು ಅರ್ಥವಂತಿಕೆ, ಚೆಂದ ಹಾಗೂ ಕಾರಣವನ್ನು ನೀಡಿದ ವ್ಯಕ್ತಿ. ಕುಡಿತದ ಬಗ್ಗೆ ಅನೇಕ ಕವನಗಳನ್ನು ಗೀಚಿದರು. ಕುಡಿತಕ್ಕೆ acceptance ಸೊಬಗನ್ನು ನೀಡಿದವರು. ಮದ್ಯಕ್ಕೆ ‘ಗುಂಡು’ ಎಂದು ನಾಮಕರಣ ಮಾಡಿ, ಅದನ್ನು ಸರ್ವಜನಪ್ರಿಯಗೊಳಿಸಿದವರು. ಒಂದನೆ ಪೆಗ್‌ಗೆ ನವೋದಯ, ಎರಡನೆ ಪೆಗ್‌ಗೆ ನವ್ಯ, ಮೂರನೆ ಪೆಗ್‌ಗೆ ಬಂಡಾಯ ಎಂದು ತುಂಟ ತುಂಟ ಪದ್ಯ ಬರೆದವರು.

ವೈಯೆನ್ಕೆ ತಿಕ್ಕಾಟ, ದ್ವಂದ್ವಗಳ ಸಂಗಮ. ‘ಎಲ್ಲರ ವ್ಯಕ್ತಿತ್ವದಲ್ಲೂ ದ್ವಂದ್ವ ಇರಲೇಬೇಕು. ದ್ವಂದ್ವ ತಿಕ್ಕಾಟ ಇಲ್ಲದಿದ್ದರೆ ವ್ಯಕ್ತಿ ಬೆಳೆಯಲಾರ’ ಎನ್ನುತ್ತಿದ್ದ ವೈಯೆನ್ಕೆ , ನಮ್ಮಲ್ಲಿ ಪಿತೃವಾಕ್ಯ ಪರಿಪಾಲನೆಯೇ ಜೀವ ಎನ್ನುತ್ತಿದ್ದ ಶ್ರೀರಾಮಚಂದ್ರನೂ ಇದ್ದ. ತಂದೆಯ ಮಾತನ್ನು ಧಿಕ್ಕರಿಸಿದ ಪ್ರಹ್ಲಾದನೂ ಇದ್ದ. ಇವೆರಡೂ ವೈರುಧ್ಯಗಳನ್ನು ಒಪ್ಪಿಕೊಂಡವರು ನಾವು. ಯಾವತ್ತೂ ಇವೇ ಸರಿ ಎನ್ನುವಂತಿಲ್ಲ... ಕಾಲಕ್ಕೆ ತಕ್ಕಂತೆ ನಮ್ಮ ಅಭಿಪ್ರಾಯಗಳನ್ನು ಬದಲಿಸಿಕೊಳ್ಳಬೇಕಾಗುತ್ತದೆ’ ಎಂದು ವೈಯೆನ್ಕೆ ಪ್ರತಿಪಾದಿಸುತ್ತಿದ್ದರು.

ವೈಯೆನ್ಕೆ ತುಂಟತನ, ಲೇವಡಿ, ಹಾಸ್ಯ, ವಿಡಂಬನೆ, ಮೊನಚು, ವ್ಯಂಗ್ಯ - ಎಲ್ಲವೂ ವ್ಯಕ್ತವಾಗುತ್ತಿದ್ದುದು ಅವರ ಪನ್‌ಗಳಲ್ಲಿ, ಅವರ ಪನ್‌ ಮಿಶ್ರಿತ ಮಾತುಗಳಲ್ಲಿ. ಇರಾನ್‌ ಹಾಗೂ ಇರಾಕ್‌ ಯುದ್ಧವನ್ನು ವೈಯೆನ್ಕೆ ತಮ್ಮ ತೀಕ್ಷ್ಣವಾದ ಒಂದೇ ಮಾತಿನಲ್ಲಿ ಹೇಳಿದ್ದರು- ಸುಮ್ನೆ ಇರಾನ ಅಂದ್ರೆ ಇರಾಕ್‌ ಬಿಡಾಕಿಲ್ಲ.

ಚಿಕ್ಕ ಚಿಕ್ಕ ಘಟನೆ, ಸಂಗತಿಗಳನ್ನು ಒಪ್ಪಿಸುವ ವೈಯೆನ್ಕೆ ರೀತಿ ಮಾತ್ರ ಫೆಂಟಾಸ್ಟಿಕ್‌. ರಾಜ್ಯದ ಮುಖ್ಯಮಂತ್ರಿ ಒಬ್ಬರ ಮನೆಗೆ ಹೋದಾಗ ನಡೆದ ಘಟನೆಯನ್ನು ಅವರು 10 ವರ್ಷಗಳ ಬಳಿಕ ಅವರೊಂದಿಗೆ ನೆನಪಿಸಿಕೊಂಡ ವೈಯೆನ್ಕೆ, ‘ಅಂದು ನಿಮ್ಮ ಮನೆಯಲ್ಲಿ ಕೊಟ್ಟ ಕೆಟ್ಟ ಕಾಫಿಯ ರುಚಿ ನನ್ನ ನಾಲಿಗೆಯಲ್ಲಿ ಇನ್ನೂ ನೆಲೆಸಿದೆ’ ಎಂದು ಹೇಳಿ ಇರುಸು ಮುರುಸು ಉಂಟು ಮಾಡಿದರು.

ಒಮ್ಮೆ ವೈಯೆನ್ಕೆಯಾಂದಿಗೆ ಉಪಾಹಾರ ಗೃಹಕ್ಕೆ ಹೋಗಿದ್ದೆ. ಅಲ್ಲೊಂದು ಬೋರ್ಡಿನಲ್ಲಿ ‘ಇಲ್ಲಿನ ಎಲ್ಲ ತಯಾರಿಕೆಯೂ ವಿದ್ಯುತ್‌ ನೆರವಿನಿಂದಲೇ ಆಗುತ್ತದೆ - Everything is electric here’ ಎಂದು ಬರೆದಿತ್ತು. ಇದಕ್ಕೆ ವೈಯೆನ್ಕೆ ಉತ್ತರ- Even the bill gives you a shock.

ಅದೇ ಹೋಟೆಲ್‌ನ ಮಾಲೀಕ ತನ್ನ ಹೋಟೆಲ್‌ ವೈಶಿಷ್ಟ್ಯಗಳ ಬಗ್ಗೆ ಒಂದೇ ಸಮನೆ ಬಡಾಯಿ ಕೊಚ್ಚತೊಡಗಿದ. ‘ನೋಡಿ ವೈಯೆನ್ಕೆ, ಎಷ್ಟೊಂದು ಜನ ಕಾಯುತ್ತಿದ್ದಾರೆ. ಇವರೆಲ್ಲ ಅರ್ಧ ಗಂಟೆ ವೈಟ್‌ ಮಾಡಿಯಾದರೂ ತಿಂಡಿ ತಿಂದು ಹೋಗುತ್ತಾರೆ’ ಅಂದ. ಅದಕ್ಕೆ ವೈಯೆನ್ಕೆ ಉವಾಚ ‘ನಿಮ್ಮ ಹೋಟೆಲ್‌ನಲ್ಲಿ Customers are the best waiters’

ಭಾರತೀಯ ವಿದ್ಯಾಭವನದಲ್ಲಿ ಒಂದು ಕಾರ್ಯಕ್ರಮದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಲಿ ಸಿಕ್ಕರು. ಉಭಯ ಕುಶಲೋಪರಿ ನಂತರ ಮೊಯ್ಲಿ ಹೇಳಿದರು ‘ಏನ್‌ ವೈಯೆನ್ಕೆ , ನಾನು ಬರೆದ ‘ ಕೊಟ್ಟ’ ಕಾದಂಬರಿ ನಿಮಗೆ ಕಳುಹಿಸಿ ಕೊಟ್ಟಿದ್ದೆ. ಓದಿದ್ದೀರಾ? ನಿಮ್ಮ ಅಭಿಪ್ರಾಯವೇನು ?’ ವೈಯೆನ್ಕೆ ನೀಡಿದ ಉತ್ತರ ಬಹಳ ಮಜವಾಗಿತ್ತು. ‘ ಮೊಯ್ಲಿಯವರೇ, ನಿಮ್ಮ ‘ ಕೊಟ್ಟ’ ಕನ್ನಡ ಸಾಹಿತ್ಯದಲ್ಲೊಂದು ಮೊಯ್ಲಿ (ಮೈಲಿ)ಗಲ್ಲು !’

ಯಾರೋ ಕವಿಮಿತ್ರರೊಬ್ಬರು ಇನ್ನೊಬ್ಬ ಕವಿಯ ಬಗ್ಗೆ ಮಾತಾಡ್ತಾ He is not a good poet ಎಂದರು. ಅದಕ್ಕೆ ವೈಯೆನ್ಕೆ - Good is not necessary.

ಒಮ್ಮೆ ಒಂದು ನಾಟಕಕ್ಕೆ ಜನರೇ ಬರೋಲ್ಲ, ನಾಟಕ ಬಹಳ ಚೆನ್ನಾಗಿದೆ. ಆದರೆ ಜನರ ಪ್ರತಿಕ್ರಿಯೆ ಮಾತ್ರ ನೀರಸ ಎಂದಾಗ ವೈಯೆನ್ಕೆ ಕೊಟ್ಟ ಉಪಾಯ, ‘ ಪ್ರವೇಶ ಫ್ರೀ ಮಾಡಿ, Exit ಗೆ ಟಿಕೆಟ್‌ ಹಾಕಲಿ. ಭರ್ಜರಿ ಕಾಸು ಮಾಡ್ತಾನೆ’.

ಪೇಪರ್‌ನಲ್ಲಿ ಒಂದು ಶೀರ್ಷಿಕೆ ಹೀಗಿತ್ತು - ನಾನು ಕಾಂಗ್ರೆಸ್‌ನಲ್ಲಿಯೇ ಇರುವೆ: ವೀರೇಂದ್ರ ಪಾಟೀಲ್‌ . ಇದಕ್ಕೆ ವೈಯೆನ್ಕೆ ಹೇಳಿದ್ದು, ‘ ಹೌದು ನಾನು ,ಕಾಂಗ್ರೆಸ್‌ನಲ್ಲಿಯೇ ಇರುವೆ. ಹಾಯಾಗಿ ಇರುವೆ. ಕಾಂಗ್ರೆಸ್‌ನ್ನು ಕಟ್ಟಿರುವೆ. ಅಲ್ಲಿಯೇ ಇದ್ದು ಕೆಟ್ಟಿರುವೆ.’

ವೈಯೆನ್ಕೆ ಅವರ ದಢೂತಿ ಸ್ನೇಹಿತರೊಬ್ಬರು ಮಾತಿನ ಮಧ್ಯೆ ಅನಗತ್ಯವಾಗಿ ಮಾತು ತೂರಿಸುತ್ತಿದ್ದರು. ಅವರಿಗೆ ಹೇಗೆ ತಿಳಿ ಹೇಳಬೇಕೆಂಬುದೇ ಅರ್ಥವಾಗುತ್ತಿರಲಿಲ್ಲ. ಅಷ್ಟೊತ್ತಿಗೆ ಅಲ್ಲಿಗೆ ಬಂದ ಮತ್ತೊಬ್ಬರು, ಈ ದಢೂತಿಯನ್ನು ನೋಡಿ ‘ಏನ್ರೀ, ಬಹಳ ಮೈ ಬಂದು ಬಿಟ್ಟಿದೆಯಲ್ಲ ನಿಮಗೆ . exercise ಮಾಡುವುದಿಲ್ಲವೇ ’ ಎಂದು ಕೇಳಿದರು. ಅದಕ್ಕೆ ವೈಯೆನ್ಕೆ ತಟ್ಟನೆ ‘ The only exercise he does is jumping into conclusion’ ದಢೂತಿ ಮಧ್ಯೆ ಬಾಯಿ ತೂರಿಸುವುದನ್ನು ನಿಲ್ಲಿಸಿದ.

ಸಿನೆಮಾ ಮಿತ್ರರೊಬ್ಬರು ಅವರನ್ನು ಮೊದಲ ಷೋ ತೋರಿಸಿ ಅಭಿಪ್ರಾಯ ಕೇಳಿದಾಗ, ಅದಕ್ಕೆ ವೈಯೆನ್ಕೆ ‘ಸಿನೆಮಾ ಚೆನ್ನಾಗಿದೆ. ಎಲ್ಲ ಪಾತ್ರದಲ್ಲೂ full of lifeಇದೆ. ಆದರೆ ಕೊನೆಯ ಸಾಯೋ ಸೀನ್‌ಗೆ ಜೀವ ತುಂಬಿ ’ ಎಂದಿದ್ದರು.

ನಾಟಕ ವಿಮರ್ಶೆಗೆ ಒಮ್ಮೆ ವೈಯೆನ್ಕೆಯವರನ್ನು ಆಮಂತ್ರಿಸಲಾಗಿತ್ತು. ನಿರ್ದೇಶಕ ಬಂದು ‘ನೀವು ನಾಟಕ ನೋಡದೇ ನಿದ್ದೆ ಮಾಡಿದಿರಲ್ಲ ’ ಎಂದಾಗ ‘ಹೌದು. ಅದೂ ಒಂದು ವಿಮರ್ಶೆಯೇ. Best insomnia cure- ನಿದ್ರಾ ನಾಶಕ್ಕೆ ರಾಮಬಾಣ’, ಎಂದು ಅವರ ಮುಖಕ್ಕೆ ಹೊಡೆದಂತೆ ಹೇಳಿದರು. ‘ ಬರೀ ಭ್ರಾಂತಿ ’ ಎಂಬ ನಾಟಕಕ್ಕೆ ವೈಯೆನ್ಕೆ ವಿಮರ್ಶೆ- ಈ ತಂಡದವರಿಗೆ ನಾಟಕ ಆಡಲು ಬರುತ್ತೆ ಎಂದುಕೊಂಡಿದ್ದರೆ ನಾಟಕ ಶೀರ್ಷಿಕೆಯೇ ಅದಕ್ಕೆ ಉತ್ತರ.

ಬೆಂಗಳೂರಿನ ಪತ್ರಿಕೆಯಾಂದರಲ್ಲಿ ದಶಕಗಳ ಹಿಂದೆ ಚಲನಚಿತ್ರ ವಿಮರ್ಶೆ ಬರೆಯುತ್ತಿದ್ದವರು - said to be a good filmಒಳ್ಳೆಯ ಚಿತ್ರ ಎಂದು ಹೇಳಲಾಗಿದೆ ಎಂದು ಬರೆದಿದ್ದಕ್ಕೆ ವೈಯೆನ್ಕೆ ಪ್ರತಿಕ್ರಿಯೆ : ‘ಬರೆದವರು said to be a critic ’...

ವೈಯೆನ್ಕೆ ಇಂಥ ಜೋಕ್‌ಫಾಲ್ಸ್‌ಗೆ ಕೊನೆ ಮೊದಲಿಲ್ಲ. ವೈಯೆನ್ಕೆ ನೆನಪಾದರೆ ಸಾಕು ಇವೆಲ್ಲ ಧಾರೆ ಧಾರೆ.

ವೈಯೆನ್ಕೆ, ವನ್ಸ್‌ ಅಗೇನ್‌ ಹ್ಯಾಪಿ ಬರ್ಥ್‌ ಡೇ !

Post Your Views

Previous Page ‘ವಂಡರ್‌’ ವೈಯೆನ್ಕೆ : ಅರಿತಷ್ಟೂ ನಿಗೂಢ ಏನಕೆ ?

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X