Get Updates
Get notified of breaking news, exclusive insights, and must-see stories!

ದೇಶದಲ್ಲಿ ಹಾರ್ಟ್ ಅಟ್ಯಾಕ್ ಹೆಚ್ಚಳ: ಸಂಶೋಧನೆ, ಸಂಶಯಗಳು - ರಾಜಕೀಯ ಭಾಷೆಯ ಪ್ರಶ್ನೆ ರಾಜಾರಾಂ ತಲ್ಲೂರು ಬರಹ

Heart Attack: ದೇಶದಲ್ಲಿ ಹಾರ್ಟ್ ಅಟ್ಯಾಕ್ ಸಂಖ್ಯೆ ಹೆಚ್ಚಳ: ಸಂಶೋಧನೆ, ಸಂಶಯಗಳು - ರಾಜಕೀಯ ಭಾಷೆಯ ಪ್ರಶ್ನೆಗಳ ಬಗ್ಗೆ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.

ಸಂಶೋಧನೆಗಳ ರಾಜಕೀಯ ಭಾಷೆ!

ಕೆಲ ಪತ್ರಿಕೆಗಳಲ್ಲಿ, ದೇಶದ ಒಳಗೆ ಹೃದಯಾಘಾತಗಳು ಹೆಚ್ಚುತ್ತಿರುವ ಬಗ್ಗೆ ಒಂದು ಸಂಶೋಧನೆ ನಡೆದ ವಿವರಗಳು ಪ್ರಕಟಗೊಂಡಿವೆ. ಸಾಮಾನ್ಯ ಹೃದಯ ತಪಾಸಣೆಗಳಲ್ಲಿ ಏನೂ ಐಬು ಕಾಣಿಸದಿದ್ದರೂ, ಅಪಾಯ ಪೂರಕ ಅಂಶಗಳು ಇಲ್ಲದಿದ್ದರೂ ಹೃದಯಾಘಾತ ಕಾಣಿಸಿಕೊಳ್ಳುತ್ತಿದೆ; ಇದಕ್ಕೆ ಪಾಶ್ಚಾತ್ಯ ತಪಾಸಣಾ ವಿಧಾನಗಳು ಕಾರಣ ಆಗಿರಬಹುದು. ಭಾರತೀಯ ಹೃದ್ರೋಗಿಗಳ ಅಪಾಯ ಪೂರಕ ಅಂಶಗಳು ಭಿನ್ನ. "South Asian Phenotype"ಗೆ ಸೂಕ್ತವೆನ್ನಿಸುವ ಭಾರತೀಯ ಅಪಾಯ ವಿಶ್ಲೇಷಣಾ ವಿಧಾನಗಳು ಅಭಿವೃದ್ಧಿಗೊಳ್ಳಬೇಕು ಎಂದು ಈ ಸಂಶೋಧನೆ ತೀರ್ಮಾನಕ್ಕೆ ಬಂದಿದೆ.

Heart Attack

ಇಂಡಿಯನ್ ಹಾರ್ಟ್ ಜರ್ನಲ್ Dec 2025ರ ಆವೃತ್ತಿಯಲ್ಲಿ ಈ ಬಗ್ಗೆ ಲೇಖನ (Patterns, Prevalence and Outcomes of STEMI without Traditional Factors ) ಪ್ರಕಟಗೊಂಡಿದೆ. ತಂಡದ ಭಾಗ ಆಗಿರುವ, ದೆಹಲಿಯಲ್ಲಿನ ಜಿ.ಬಿ. ಪಂತ್ ಆಸ್ಪತ್ರೆಯ ಹೃದ್ರೋಗ ವಿಭಾಗದ ಹಿರಿಯ ವೈದ್ಯರು ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವುದು ದೊಡ್ಡದಾಗಿ ಸುದ್ದಿ ಆಗಿದೆ.

2019 ಜನವರಿಯಿಂದ 2025 ಜನವರಿ ನಡುವೆ, ದಿಲ್ಲಿಯ ಸದ್ರಿ ಆಸ್ಪತ್ರೆಯಲ್ಲಿ ದಾಖಲಾದ 6139 ಉತ್ತರ ಭಾರತೀಯ ಹೃದ್ರೋಗಿಗಳನ್ನು ಒಳಗೊಂಡ ಸಂಶೋಧನೆ ಇದು. ರಕ್ತದೊತ್ತಡ, ಮಧುಮೇಹ, ಕೊಬ್ಬಿನಂಶ ಹೆಚ್ಚಿರುವಿಕೆ, ತಂಬಾಕು ಸೇವನೆಯಂತಹ ಹೃದಯದ ಸಮಸ್ಯೆಗಳಿಗೆ ಕಾರಣವಾಗಬಲ್ಲ ಅಪಾಯ ಪೂರಕ ಅಂಶಗಳು ಇಲ್ಲದಿದ್ದರೂ (standard modifiablecardiovascular risk factors - SMuRFs) ಮೊದಲ ಬಾರಿಗೆ ಹೃದಯದ ರಕ್ತನಾಳದಲ್ಲಿ ಹೃದಯದ ಸ್ನಾಯುವಿಗೆ ರಕ್ತ ಸರಬರಾಜು ಹಠಾತ್ ಆಗಿ ನಿಲ್ಲುವ ಗಂಭೀರ ತೊಂದರೆಯ ಕಾರಣಕ್ಕೆ ಹೃದಯಾಘಾತ (ST-segment elevation myocardial infarction - STEMI) ಆಗಿರುವ ರೋಗಿಗಳನ್ನು ಈ ಅಧ್ಯಯನ ಪರಿಗಣಿಸಿದೆ.

ಜನ ಹಾದಿಬೀದಿಗಳಲ್ಲಿ ಸಾಯುತ್ತಿರುವಾಗ, ಇಂತಹ ಯಾವುದೇ ಪ್ರಯತ್ನಗಳು ಸ್ವಾಗತಾರ್ಹ. ಅದರಲ್ಲಿ ಎರಡು ಮಾತಿಲ್ಲ. ಆದರೆ, ಸಂಶೋಧನೆಯ ಫಲಿತಾಂಶಗಳು ಮಾತಾಡಬೇಕೇ ಹೊರತು, ಅದರ ಇನ್ಫರೆನ್ಸ್‌ಗಳನ್ನು ರಾಜಕೀಯ ಭಾಷೆಯಲ್ಲಿ ಮಾತನಾಡಿದರೆ, ಸಂಶೋಧನೆಗೆ ಇರುವ ಮಹತ್ವ ಕಡಿಮೆ ಆಗುತ್ತದೆ ಎಂಬುದು ನನ್ನ ಕಳಕಳಿ. ನಾನು ವೈದ್ಯ ಅಲ್ಲ; ಆದರೆ 20 ವರ್ಷಗಳಿಂದ ವೈದ್ಯಕೀಯ ಪತ್ರಿಕೋದ್ಯಮದ/ಬರಹಗಳ ಭಾಗವಾಗಿ ಇರುವವನು. ಆ ನೆಲೆಯಲ್ಲಿ ನನಗೆ ಎದ್ದಿರುವ ಕೆಲವು ಪ್ರಶ್ನೆಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ನನ್ನ ಈ ಪ್ರಶ್ನೆಗಳು, ಈ ಸಂಶೋಧನೆ ಯಾಕೆ ರಾಜಕೀಯ ಭಾಷೆಯಲ್ಲಿ ಮಾತನಾಡುತ್ತಿವೆ ಎಂಬುದನ್ನು ಸ್ಪಷ್ಟಪಡಿಸುತ್ತವೆ ಎಂಬುದು ನನ್ನ ನಂಬಿಕೆ:

1. ಸದ್ಯಕ್ಕೆ ಈ ಸಂಶೋಧನೆ ತಲುಪಿರುವ ತೀರ್ಮಾನಕ್ಕೆ (ಭಾರತೀಯರು ಅಪಾಯ ಪೂರಕ ಅಂಶಗಳಿಲ್ಲದಿದ್ದರೂ ಹೃದಯಾಘಾತಕ್ಕೆ ಗುರಿ ಆಗುತ್ತಿದ್ದಾರೆ) ತಳಹದಿ ಏನು, 2019ಕ್ಕಿಂತ ಮೊದಲು ಕೂಡ ಇಂತಹ ಸ್ಥಿತಿ ಇತ್ತೆ, ಅಲ್ಲಿಂದ ಹಂತಹಂತವಾಗಿ ಈ ಸಮಸ್ಯೆ ಏರಿಕೆ ಕಂಡಿದೆಯೇ ಅಥವಾ 2019ರ ಬಳಿಕ ಹಠಾತ್ ಏರಿಕೆ ಕಂಡಿದೆಯೇ ಆ ಬಗ್ಗೆ ಮಾಹಿತಿ ಇಲ್ಲದೇ ಈ ತೀರ್ಮಾನಕ್ಕೆ ಬರುವುದು ಹೇಗೆ ಸಾಧ್ಯ ಆಯಿತು ?

2. ಕೋವಿಡ್ ಜಗನ್ಮಾರಿ ಮತ್ತದರ ವ್ಯಾಕ್ಸೀನುಗಳು (ಕೋವಿಡ್ ವೈರಸ್‌ಗೆ ರಕ್ತ ಹೆಪ್ಪುಗಟ್ಟಿಸುವ ಗುಣ ಇದೆ ಎಂಬ ಚಿರಪರಿಚಿತ ವಾಸ್ತವದ ಹೊರತಾಗಿಯೂ) ಈ ಅಧ್ಯಯನದ ಸಹಜ ಭಾಗ ಏಕೆ ಆಗಿಲ್ಲವೇ.

3. ಈ ಹಠಾತ್ ಹೃದಯಾಘಾತ ಭಾರತಕ್ಕೆ ಮಾತ್ರ ಸೀಮಿತ ಆಗಿಲ್ಲ. ವಿದೇಶಗಳಲ್ಲೂ ಇದೇ ಪ್ರಮಾಣದಲ್ಲಿ ಸಂಭವಿಸುತ್ತಿದೆ ಎಂಬ ಕಳವಳಗಳು ಅಲ್ಲಿ ನಡೆಯುತ್ತಿರುವ ವೈದ್ಯಕೀಯ ಸಂಶೋಧನಾ ಚಟುವಟಿಕೆಗಳಿಂದ ಎದ್ದು ಕಾಣಿಸುತ್ತಿದೆ. ಈ ಬಗ್ಗೆ ಒಂದು ಲ್ಯಾಟರಲ್ ಕಣ್ಣೋಟ, ಈ ಸಂಶೋಧನೆಯ ಭಾಗ ಆಗಿಲ್ಲ ಏಕೆ ?

4. ನಾಲ್ಕೈದು ದಶಕಗಳಿಂದ ಅನುಸರಿಸಿಕೊಂಡು ಬರುತ್ತಿರುವ, ಸಮಯದ ಪರೀಕ್ಷೆಯಲ್ಲೂ ಉತ್ತೀರ್ಣಗೊಂಡಿರುವ ಪಾಶ್ಚಾತ್ಯ ಹೃದ್ರೋಗ ತಪಾಸಣಾ ಪರಿಕರಗಳ ಬಗ್ಗೆ ಏಕಾಏಕಿ ಶಂಕೆ ಮೂಡುವುದಕ್ಕೆ ಕಾರಣ ಏನು ?

ಈ ನಾಲ್ಕು ಪ್ರಶ್ನೆಗಳು ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ನನಗೆ ಎದ್ದಂತಹವು. ಇದನ್ನು ವಿವರವಾಗಿ ನೊಡಿದರೆ, ವೈದ್ಯಕೀಯ ಸಮುದಾಯಕ್ಕೆ ಇನ್ನಷ್ಟು ಪ್ರಶ್ನೆಗಳು ಏಳಬಹುದು. ಆದರೆ, ಭಾರತ ಇಂದು ಪ್ರಶ್ನೆಗಳು ಏಳದ, ಏಳಬಾರದ ದೇಶವಾಗಿ ಕ್ಷಣಕ್ಷಣಕ್ಕೂ ಮಾರ್ಪಡುತ್ತಿದೆ. ಅದು ಈ ಕ್ಷಣದ ಆತಂಕ. ವೈದ್ಯಕೀಯ ಸಂಶೋಧಕರು ರಾಜಕೀಯ ಭಾಷೆಯಲ್ಲಿ, ಪ್ರಭುತ್ವದ ಇಷ್ಟಾರ್ಥಗಳಿಗೆ ಅನುಗುಣವಾಗಿ ಮಾತನಾಡತೊಡಗುವುದು ಒಳ್ಳೆಯ ಬೆಳವಣಿಗೆಯಂತೂ ಖಂಡಿತಾ ಅಲ್ಲ. ವೈದ್ಯ ಸ್ನೇಹಿತರು ದಯವಿಟ್ಟು ಈ ಬಗ್ಗೆ ಚರ್ಚಿಸಿ.

ರಾಜಾರಾಂ ತಲ್ಲೂರು, ಹಿರಿಯ ಪತ್ರಕರ್ತ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+