ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆದ್ದ ಕನ್ನಡಿಗಕ್ಯಾಮೆರಾ ಕಣ್ಣಿನ ‘ಪ್ರವೀಣ’
*ಪ್ರಸಾದ ನಾಯಿಕ
ಛಾಯಾಚಿತ್ರಕಲೆಯಲ್ಲಿ ತನ್ನ ಸ್ಥಾನ ಏನೆಂಬುದನ್ನು ಕರ್ನಾಟಕ ವಿಶ್ವಕ್ಕೆ ಮೇಲಿಂದ ಮೇಲೆ ತೋರಿಸಿಕೊಟ್ಟಿದೆ. ಈಗ ಈ ಕಲೆಗಾರಿಕೆಗೆ, ರಾಜ್ಯಕ್ಕೆ ಮತ್ತೊಮ್ಮೆ ಮನ್ನಣೆ ದೊರಕಿಸಿಕೊಟ್ಟಿದ್ದಾರೆ ಬೆಂಗಳೂರಿನ ಎಚ್. ವಿ. ಪ್ರವೀಣ್ ಕುಮಾರ್.
ಕ್ಯಾಮೆರಾ ಕಣ್ಣನ್ನು ಹೆಗಲಿಗೇರಿಸಿ, ಪ್ರಕೃತಿ ಸೌಂದರ್ಯವನ್ನು ಕಣ್ರೆಪ್ಪೆಯಲ್ಲಿ ತುಂಬಿಸಿ, ವಿಶ್ವದಾದ್ಯಂತ ಆ ಸೌಂದರ್ಯವನ್ನು ಬಿಂಬಿಸಿ, ಪ್ರಶಸ್ತಿ- ಗೌರವಗಳನ್ನು ಬಗಲಿಗಿಳಿಸಿ ದಾಪುಕಾಲಿಕ್ಕಿಕೊಂಡು ಸಾಗುತ್ತಿದ್ದಾರೆ ಪ್ರವೀಣ್. ಛಾಯಾಚಿತ್ರಕಲೆಯಲ್ಲಿನ ಐದು ವರ್ಷಗಳ ಅವಿರತ ಸಾಧನೆ, ಶ್ರದ್ಧೆ ಪ್ರವೀಣ್ಕುಮಾರ ಅವರಿಗೆ ಮೊತ್ತಮೊದಲ ಅಂತಾರಾಷ್ಟ್ರೀಯ ಗೌರವಕ್ಕೆ ಪಾತ್ರರನ್ನಾಗಿ ಮಾಡಿವೆ.
ಅಂತಾರಾಷ್ಟ್ರೀಯ ಛಾಯಾಚಿತ್ರ ಸಂಸ್ಥೆಯಾದ ಫೆಡರೇಷನ್ ಇಂಟರನ್ಯಾಷನಲ್ ಡಿ-ಲಾ ಆರ್ಟ್ ಫೋಟೋಗ್ರಫಿಕ್ (ಎಫ್ಐಎಪಿ) 2000ನೇ ಸಾಲಿನ ‘ಎಎಫ್ಐಎಪಿ’ (ಆರ್ಟಿಸ್ಟ್, ಫೆಡರೇಷನ್ ಇಂಟರನ್ಯಾಷನಲ್ ಡಿ-ಲಾ ಆರ್ಟ್ ಫೋಟೋಗ್ರಫಿಕ್) ಗೌರವನ್ನು ಪ್ರವೀಣ್ಕುಮಾರ ಅವರಿಗೆ ನೀಡಿದೆ. ಪ್ರಕೃತಿ ವಿಭಾಗದಲ್ಲಿ ಪ್ರವೀಣ್ ಅವರು ತೆಗೆದ ಅತ್ಯುತ್ತಮ ಛಾಯಾಚಿತ್ರಗಳನ್ನು ಗುರುತಿಸಿ ಲಕ್ಸಂಬರ್ಗ್ನಲ್ಲಿದ್ದ (ಈಗ ಬೆಲ್ಜಿಯಂನಲ್ಲಿದೆ) ಸಂಸ್ಥೆ ಈ ಗೌರವ (ಡಿಸ್ಟಿಂಕ್ಷನ್) ನೀಡಿದೆ. ಪ್ರಕೃತಿ - ಕಲರ್ ಪ್ರಿಂಟ್ ವಿಭಾಗದಲ್ಲಿ ಈ ಗೌರವ ಪಡೆದಿರುವ ಏಕಮಾತ್ರ ಭಾರತೀಯ ಪ್ರವೀಣ್.
ಪ್ಯಾಷನ್ ಆಗಿ ಬದಲಾದ ಫ್ಯಾಷನ್
ಪ್ರಸ್ತುತ ಕೇಂದ್ರ ಅಬಕಾರಿ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿರುವ ಪ್ರವೀಣ್ಕುಮಾರ್ ಛಾಯಾಚಿತ್ರಕಲೆಯನ್ನು ಹವ್ಯಾಸವಾಗಿ ಆಯ್ದುಕೊಂಡಿದ್ದೇ ಆಕಸ್ಮಿಕ. ಅವರನ್ನು ಬಾಲ್ಯದಿಂದಲೂ ಸೆಳೆದದ್ದು ಅಭಿನಯ ಕಲೆ. ಎಂಇಎಸ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ನಟನೆ, ನಿರ್ದೇಶನದಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದ ಪ್ರವೀಣ್ರನ್ನು ಛಾಯಾಚಿತ್ರಕಲೆ ಸೆಳೆದಿದ್ದು 1995ರ ನಂತರವಷ್ಟೆ . ಒಂದು ಕಲೆಯಲ್ಲಿ ಮುಳುಗಿದ್ದವರನ್ನು ಮತ್ತೊಂದು ಕಲೆ ಬಡಿದೆಬ್ಬಿಸಿದ್ದು ಆಶ್ಚರ್ಯವೇನೂ ಅಲ್ಲ. ಫ್ಯಾಷನ್ ಆಗಿ ಶುರುವಾದದ್ದು ಪ್ಯಾಷನ್ ಆದದ್ದು ಪ್ರಕೃತಿ ಶಕ್ತಿಯ ಒಂದು ನಮೂನೆ.
ಬೆಂಗಳೂರಿನಲ್ಲಿರುವ ಯೂಥ್ ಫೋಟೋಗ್ರಫಿಕ್ ಸೊಸೈಟಿಯ ಗೌರವ ಅಧ್ಯಕ್ಷರೂ ಆಗಿರುವ ಪ್ರವೀಣ್ಕುಮಾರ ಅವರು ದೇಶದ ಉದ್ದಗಲಕ್ಕೂ ಸಂಚರಿಸಿ ನೇಚರ್ (ಪ್ರಕೃತಿ) ಮತ್ತು ವೈಲ್ಡ್ಲೈಫ್ (ವನ್ಯಜೀವಿ) ಸೌಂದರ್ಯವನ್ನು ಸೆರೆಹಿಡಿದದ್ದಷ್ಟೆ ಅಲ್ಲ , ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಫೋಟೋಗ್ರಫಿಕ್ ಸೆಲಾನ್ಗಳಲ್ಲಿ ತಮ್ಮ ಛಾಯಾಚಿತ್ರಗಳನ್ನು ಪ್ರದರ್ಶಿಸುತ್ತ ಬಂದಿದ್ದಾರೆ. ಇಲ್ಲಿಯವರೆಗೆ ಅವರ 450ಕ್ಕೂ ಹೆಚ್ಚು ಚಿತ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ (ಎಕ್ಸೆಪ್ಟನ್ಸ್) ಪಡೆದಿವೆ ಮತ್ತು 50ಕ್ಕೂ ಹೆಚ್ಚು ಚಿತ್ರಗಳು ಪ್ರಶಸ್ತಿ ಗಳಿಸಿವೆ. ಪ್ರವೀಣ್ ಅವರ ಚಿತ್ರಗಳು ಫಿನ್ಲ್ಯಾಂಡ್ ಮತ್ತು ಆಸ್ಟ್ರಿಯಾದಲ್ಲಿ ಪ್ರದರ್ಶಿತವಾಗಿವೆ.
ಕರ್ನಾಟಕದಲ್ಲೇ ಮನ್ನಣೆ ಇಲ್ಲ
ವನ್ಯಜೀವಿ ಛಾಯಾಗ್ರಹಣದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಪ್ರವೀಣ್ ಅವರು ರಾಷ್ಟ್ರದ ಎಲ್ಲ ಅಭಯಾರಣ್ಯಗಳಿಗೆ ಭೇಟಿ ನೀಡಿ ವೈವಿಧ್ಯಮಯ ಚಿತ್ರಗಳನ್ನು ತೆಗೆದಿದ್ದಾರೆ. ಆದರೆ, ಕರ್ನಾಟಕದಲ್ಲೇ ವನ್ಯಜೀವಿ ಛಾಯಾಗ್ರಹಣಕ್ಕೆ ಪ್ರಾಶಸ್ತ್ಯ ನೀಡದಿರುವುದಕ್ಕೆ ಅವರು ವಿಷಾದ ವ್ಯಕ್ತಪಡಿಸುತ್ತಾರೆ.
ಇತರ ರಾಜ್ಯಗಳಂತೆ ಅರಣ್ಯ ಸಿಬ್ಬಂದಿಯಾಂದಿಗೆ ಖಾಸಗಿ ವಾಹನಗಳಲ್ಲಿ ಸಂಚರಿಸಿ ಛಾಯಾಚಿತ್ರ ತೆಗೆಯಲು ಕರ್ನಾಟಕ ಸರ್ಕಾರ ಅನುವು ಮಾಡಿಕೊಡದಿರುವುದು ತುಂಬಾ ಅನನುಕೂಲವಾಗಿದೆ. ಅರಣ್ಯ ವೀಕ್ಷಣೆಗೆಂದು ಬರುವ ಇತರ ಜನರೊಂದಿಗೆ ಹೋಗಿ ಚಿತ್ರಗಳನ್ನು ತೆಗೆಯಬೇಕು. ವನ್ಯಜೀವಿಗಳ ಚಿತ್ರ ತೆಗೆಯಬೇಕಾದರೆ ತಾಳ್ಮೆ, ಉದ್ವೇಗಗೊಳ್ಳದಿರುವಿಕೆ, ವೇಗ ತೀರ ಮುಖ್ಯ. ಕೊಂಚ ಗಲಿಬಿಲಿಯುಂಟಾದರೂ ಸೂಕ್ಷ್ಮಮತಿಗಳಾದ ಪ್ರಾಣಿಗಳು ಮಾಯವಾಗುತ್ತವೆ. ಆದರೆ, ಎಷ್ಟು ಜನರಲ್ಲಿ ತಾಳ್ಮೆ, ವನ್ಯಜೀವಿಗಳ ಬಗ್ಗೆ ಕಾಳಜಿ ಇರುತ್ತದೆ ಎಂದು ಪ್ರವೀಣ್ ಪ್ರಶ್ನಿಸುತ್ತಾರೆ.
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications