ಕಿಟೆಲ್ ಎಂಬ ಕನ್ನಡದ ದಾಸಯ್ಯ!
1853. ಜರ್ಮನಿಯ ಕ್ರೆೃಸ್ತ ಧರ್ಮ ಪ್ರಚಾರಕನೊಬ್ಬ ಕರ್ನಾಟಕಕ್ಕೆ ಕಾಲಿರಿಸಿದ್ದ. ಕ್ರಿಶ್ಚಿಯನ್ ಧರ್ಮ ಪ್ರಚಾರ, ತತ್ತ್ವ ಬೋಧನೆಯಷ್ಟೇ ಆತನ ಮುಖ್ಯ ಉದ್ದಿಶ್ಯ. ಹೊಸ ಊರು. ಗೊತ್ತಾಗದಿದ್ದರೂ ಭಾಷೆ ಸೊಗಸು. ಇದರ ಸೆಳಕಿಗೆ ಮೊದಲ ದಿನವೇ ಸೆರೆಯಾಗಿ, ತೊದಲು ಕನ್ನಡ ಶುರುವಾಯಿತು. ದಿನಗಳೆದಂತೆ ಕನ್ನಡದ ಸ್ಪಷ್ಟ ಉಚ್ಚಾರಣೆ ಮೂಡಿತು. ಮಾತು ಕವನವಾಯಿತು; ಕಥೆಯಾಯಿತು. ಆಮೇಲೆ ಹಾಡಾಯಿತು. ವರ್ಷಗಳೆದಂತೆ ಕನ್ನಡದ 70 ಸಾವಿರ ಪದಗಳು ಒಂದು ಪುಸ್ತಕ ಸೇರಿದವು. ಆ ಪದಗಳ ಪಕ್ಕದಲ್ಲಿ ಇಂಗ್ಲಿಷ್ ಅರ್ಥ. ಕನ್ನಡದಲ್ಲಿ ಪದ ವ್ಯಾಪ್ತಿ, ಮೂಲದ ವಿವರಣೆ.
ಹೀಗೆ ತೊದಲು ಮಾತು ಪ್ರಾರಂಭಿಸಿದ 21ರ ಹರೆಯದ ಯುವಕ ತಾನೇ ಸಿದ್ಧಪಡಿಸಿದ ಕೋಶ ಕೈಲಿ ಹಿಡಿದದ್ದು ತನ್ನ 52ನೇ ವಯಸ್ಸಿನಲ್ಲಿ ! ತನ್ನದಲ್ಲದ ಭಾಷೆಗೆ ಮರೆಯಲಾರದ ಕೊಡುಗೆ ಕೊಡುವ ಹೆಗ್ಗುರಿ ಹೊತ್ತು, ಅದನ್ನು ಸಾಧಿಸಿದ ಮಹಾನುಭಾವ ರೆವರೆಂಡ್ ಫರ್ಡಿನ್ಯಾಂಡ್ ಕಿಟೆಲ್.
ಕಿಟೆಲ್ ಪದಕೋಶ ಇವತ್ತಿಗೂ ಕನ್ನಡ ಸಾಹಿತ್ಯ ವಲಯದ ಹೆಗ್ಗುರುತು. 21 ವರ್ಷ ಕಾಲದ ಹೋಮ ಅದು. ಮೆಣಸು, ಏಲಕ್ಕಿಯನ್ನು ಜೇಬಿನಿಂದ ತೆಗೆದು, ಹಳ್ಳಿಗರ ಮನೆ ಬಾಗಿಲು ತಟ್ಟಿ, ‘ಇದಕ್ಕೆ ಕನ್ನಡದಲ್ಲಿ ಏನಂತೀರಿ?’ ಅಂತ ಕೇಳಿ, ಕಿಟೆಲ್ ಅದನ್ನು ಗುರುತು ಹಾಕಿಕೊಳ್ಳುತ್ತಿದ್ದರು. ಸಿಕ್ಕ ಪದದ ವ್ಯುತ್ಪತ್ತಿ, ವ್ಯಾಪ್ತಿಗೆ ಪ್ರಾಚೀನ ಗ್ರಂಥಗಳನ್ನು ಓದುತ್ತಿದ್ದರು. ಈ ನಿಟ್ಟಿನಲ್ಲಿ ಕೇಶೀರಾಜನ ಶಬ್ದಮಣಿದರ್ಪಣ ಕಿಟೆಲ್ ಅವರಿಗೆ ಅಂಗೈನೆಲ್ಲಿಯಾಗಿತ್ತು ! ಪ್ರಾಚೀನ ಕವಿಗಳ ಕವನದ ಸಾಲುಗಳು ನಾಲಗೆ ತುದಿಯಲ್ಲಿ ಕುಣಿಯುತ್ತಿದ್ದವು.
ಕರ್ನಾಟಕವೇ ನಮ್ಮನೆ
ಬೈಬಲ್ಲಿನ ಕಥಾವಳಿಗಳು ಮೈಸೂರು, ಧಾರವಾಡ, ಗದಗ ಮೊದಲಾದ ಹಳ್ಳಿಗಳ ಓಣಿಗಳಲ್ಲಿ ಪ್ರತಿಧ್ವನಿಸುತ್ತಿದ್ದುದು ಹಾಡಿನ ರೂಪದಲ್ಲೇ; ಅದೂ ಕನ್ನಡದಲ್ಲಿ ! ಕಿಟೆಲ್ ಆ ಹೊತ್ತಿಗೆ ಒಬ್ಬ ಒಳ್ಳೆಯ ಕನ್ನಡ ಕವಿ, ಅನುವಾದಕಾರ, ಸಾಹಿತಿಯಾಗಿ ರೂಪುಗೊಂಡಿದ್ದರು. 1872ರಲ್ಲೇ ಕಿಟೆಲ್ ಅವರಿಗೆ ಇಷ್ಟೆಲ್ಲಾ ಸಿದ್ಧಿಸಿತ್ತು. ಆದರೆ ಕನ್ನಡ ಭಾಷೆ ಅವರಿಂದ ಏನನ್ನೋ ಬಯಸುತ್ತಿತ್ತು. ಮನಸ್ಸಲ್ಲಿ ಆಗ ಅಂಕುರವಾದದ್ದೇ ಕನ್ನಡ- ಇಂಗ್ಲಿಷ್ ಕೋಶ ರಚಿಸುವ ಕನಸು. ಆ ಕನಸು ಬದುಕಿನ ಗುರಿಯಾಯಿತು.
ಮೊದಲ ಹೆಂಡತಿಯನ್ನು ಕಳಕೊಂಡ ನೋವು, ಎರಡನೇ ಹೆಂಡತಿಯ ಅಗಲಿಕೆ ಇವೆಲ್ಲವೂ ಕಿಟೆಲ್ರ ಗುರಿಗೆ ಸಮಸ್ಯೆಯಾಗಲೇ ಇಲ್ಲ. ಜರ್ಮನಿಗೆ ಹೋದರೂ ‘ಅದು ಸುಮ್ಮನೆ. ಕರ್ನಾಟಕವೇ ನಮ್ಮನೆ’. ಕಥಾಮಾಲೆ, ಪರಮಾತ್ಮನ ಜ್ಞಾನ, ಕರ್ನಾಟಕ ಕಾವ್ಯಮಾಲೆ ಎಂಬ ಕನ್ನಡ ಪುಸ್ತಕಗಳನ್ನು ಕಿಟೆಲ್ ಬರೆದದ್ದು ಈ ಕಾರಣಕ್ಕೇ.
ಕಿಟೆಲ್ ಹಾಗೂ ಪತ್ರಿಕೋದ್ಯಮ : ಸಾಹಿತಿಯ ಮನಸ್ಸು ಪತ್ರಿಕೋದ್ಯಮಕ್ಕೂ ವಾಲಿತು. ಕಿಟೆಲ್ ವಿಚಿತ್ರ ವಾರ್ತಾ ಸಂಗ್ರಹ ಎಂಬ ಪತ್ರಿಕೆ ಪ್ರಕಟವಾದದ್ದು ಕಡಿಮೆಯಾದರೂ, ಒಬ್ಬ ಭಾಷಾಂತರಕಾರರಾಗಿ ಕಿಟೆಲ್ ಸಾಕಷ್ಟು ಸಾಣೆಗೊಡ್ಡಿಕೊಂಡಿದ್ದರು. ಕೋಶ ರಚನೆಯ ಯೋಚನೆಯ ಜೊತೆಗೇ ಹುಟ್ಟಿಕೊಂಡಿದ್ದು ಇಂಡಿಯನ್ ಆ್ಯಂಟಿಕ್ವೆರಿ ಎಂಬ ವಿಭಿನ್ನ ಪತ್ರಿಕೆ. ಗತಕಾಲದ ಸಾಹಿತ್ಯ, ಚರಿತ್ರೆ, ಸಂಸ್ಕೃತಿಗಳ ಅಧ್ಯಯನದ ಹುರುಳು ಲೇಖನಗಳ ಸುರುಳಿಗಳಾಗಿ ಕಿಟೆಲ್ ಮೂಸೆಯಿಂದ ಹೊರಬಿದ್ದವು.
ಈ ನಡುವೆ ನಾಗವರ್ಮನ ಛಂದೋಬುಧಿಯನ್ನು ಸಂಪಾದಿಸಿ ಪ್ರಕಟಿಸಿದರು. ಈ ಕೆಲಸ ಮಾಡಿದ ಮೊದಲಿಗರೆಂಬ ಅಗ್ಗಳಿಕೆಯೂ ಇವರಿಗೆ ಸಂದಿತು. ಇಷ್ಟೆಲ್ಲಾ ಅಧ್ಯಯನ, ಸಂಶೋಧನೆಗಳ ನಡುವೆ ಹಳ್ಳಿಗಳ ಮುಳ್ಳು ದಾರಿಯಲ್ಲಿ ಪಯಣ ಸಾಗೇ ಇತ್ತು. ಕಿಟೆಲ್ ಉಸ್ಸಪ್ಪಾ ಅನ್ನಲಿಲ್ಲ. ಕನ್ನಡ ಭಾಷೆಯ ಸಂಶೋಧನಾ ಪಂಜರದಲ್ಲಿ ಅವರು ಅಕ್ಷರಶಃ ಬಂಧಿಯಾಗಿದ್ದರು. 1894ರಲ್ಲಿ ಕನ್ನಡ- ಇಂಗ್ಲಿಷ್ ನಿಘಂಟನ್ನು ಕೈಲಿ ಹಿಡಿದು, ಒಂದೈದು ನಿಮಿಷ ಸುಮ್ಮನೆ ನಿಂತುಬಿಟ್ಟಿದ್ದರು. ಮನಸ್ಸು ಕುಣಿಯುತ್ತಿತ್ತು !
ಈ ಕೆಲಸಕ್ಕೆ ಜರ್ಮನಿಯ ತೀಬೆಂಜನ್ ವಿಶ್ವವಿದ್ಯಾಲಯ 1896ರಲ್ಲಿ ಗೌರವ ಡಾಕ್ಟರೇಟ್ ನೀಡಿತು. ದೇಹದ ಮೇಲೆ ಗೆರೆಗಳು ಮೂಡಿದಾಗಲೂ, ಕಿಟೆಲ್ ಹಿಡಿದ ಪೆನ್ನು ಅವರನ್ನು ಬಿಡಲಿಲ್ಲ. ಇಳಿವಯಸ್ಸಿನಲ್ಲಿ ಕನ್ನಡ ವ್ಯಾಕರಣದ ಬಗ್ಗೆ ಇಂಗ್ಲಿಷಿನಲ್ಲಿ ಒಂದು ಪುಸ್ತಕ ಬರೆದರು. 1903, ಡಿಸೆಂಬರ್ 18 ಆ ಪುಸ್ತಕದ ಮುದ್ರಿತ ಮೊದಲ ಪ್ರತಿ ಕೈ ಸೇರಿತು. ನಿತ್ರಾಣ ಕಿಟೆಲ್ರಲ್ಲಿ ಕೆಲ ಕಾಲ ಜೀವಸಂಚಾರವಾದದ್ದು ಅದೇ ಕೊನೆ. ಮರುದಿನ ಬೆಳಗ್ಗೆ ಕಿಟೆಲ್ ಇಲ್ಲವಾಗಿದ್ದರು. ಬಗಲಲ್ಲೇ ಅವರ ಪುಸ್ತಕ ಹಾಗೇ ನಗುತ್ತಿತ್ತು !
(ಸೆಪ್ಟೆಂಬರ್ 6, ಬೆಂಗಳೂರಿನಲ್ಲಿ ಕಿಟೆಲ್ ಅವರ ಪ್ರತಿಮೆಯಾಂದು ಅನಾವರಣವಾಗಿದೆ. ಎಲ್ಲಿಂದಲೋ ಬಂದು ಇಲ್ಲಿ ಸಂದ ಒಬ್ಬ ಅನನ್ಯನನ್ನು ನೆನಪಿಸಿಕೊಳ್ಳುವಲ್ಲಿ ಇದು ಒಳ್ಳೆಯ ಹೆಜ್ಜೆ. ಅಲ್ಲವೇ?)
ನಿಮಗಿದು ಗೊತ್ತೆ ?
ಕಿಟೆಲ್ ಅಂತಿಮ ದಿನಗಳವು. ಹಾಸಿಗೆ ಹಿಡಿದಿದ್ದ ತಮ್ಮನ್ನು ನೋಡಲು ಬಂದ ಕನ್ನಡಿಗನನ್ನು ಕಂಡಾಗ ಕಿಟೆಲ್ರಿಗೆ ಜೀವ ಬಂದಷ್ಟು ಹಿಗ್ಗು . ಆ ಮನುಷ್ಯನೋ ಇಂಗ್ಲೀಷ್ನಲ್ಲಿ ಮಾತು ಪ್ರಾರಂಭಿಸಿದ. ದಯವಿಟ್ಟು ಕನ್ನಡದಲ್ಲಿ ಮಾತನಾಡಿ ಎಂದು ಕಿಟೆಲ್ ಆ ಮನುಷ್ಯನನ್ನು ಒತ್ತಾಯಿಸಿದರಂತೆ.












Click it and Unblock the Notifications