ಹವ್ಯಕ ಬ್ರಾಹ್ಮಣ ಬದುಕು ಮತ್ತು ವಿವಾಹ ಪದ್ಧತಿ
ದಕ್ಷಿಣ ಕನ್ನಡದ ಹವ್ಯಕರು ಸ್ಮಾರ್ಥರು, ಶಿವನ ಆರಾಧಕರು. ನಮ್ಮ ಕುಟುಂಬಕ್ಕೆ ಒಂದು ಗೋತ್ರವಿರುತ್ತದೆ. ವಶಿಷ್ಟ, ವಿಶ್ವಾಮಿತ್ರ, ಭಾರದ್ವಾಜ ಮುಂತಾದ ಋಷಿ ಮುನಿಗಳ ಹೆಸರುಗಳು ನಮ್ಮ ಗೋತ್ರವಾಗಿರುವುದು ಯಾಕೆ ಎಂಬ ಪ್ರಶ್ನೆ ನನ್ನನ್ನು ಕಾಡಿದ್ದಿದೆ? ಬಹುಷಃ ನಮ್ಮ ಕುಟುಂಬದ ಮೂಲ ಪುರುಷರು ಅವರಾಗಿರಬಹುದೇ? ಅಥವಾ ನಮ್ಮ ಹಿರಿಯರು ಅವರ ಶಿಷ್ಯರಾಗಿರಬಹುದೇ? ಇನ್ನು ಒಂದು ಸಂಶಯ ನನ್ನ ಮನದಲ್ಲಿ ಬರುತ್ತದೆ. ಏಕೆ ಆ ಮುನಿ ಪುಂಗವರು ಒಬ್ಬ ಅನಾಥ ಗಂಡು ಮಗುವನ್ನು ದತ್ತು ಪುತ್ರನಾಗಿ ಸ್ವೀಕರಿಸಿರಬಾರದು? ಅವನ ಪೀಳಿಗೆಯವರನ್ನು ಆ ದತ್ತ ಪಿತನ ಹೆಸರಿನಿಂದಲೇ ಕರೆಯುತ್ತಿರಬಹುದೇ?
ಹವ್ಯಕರಲ್ಲಿ ಸಗೋತ್ರ ವಿವಾಹಗಳು ನಡೆಯಲು ಸ್ವಾಮಿಗಳ ಒಪ್ಪಿಗೆ ಇಲ್ಲ. ಆದರೂ ಪ್ರಾಯಶ್ಚಿತ್ತವಿಲ್ಲದ ತಪ್ಪುಗಳೂ ಇಲ್ಲವಲ್ಲ! ಈ ಸಗೋತ್ರ ಮದುವೆಯು ಕಾನೂನು (ಹವ್ಯಕರ) ರೀತಿಯಲ್ಲಿ ಒಪ್ಪಿಗೆಯಾಗಬೇಕಾದರೆ- ವಧುವಿನ ಹೆತ್ತವರು ತಮ್ಮ ವಿವಾಹಯೋಗ್ಯಳಾದ ಕನ್ಯೆಯನ್ನು ಬೇರೆಯ ಗೋತ್ರದವರಿಗೆ ದಾನ ನೀಡಿ - ಅವರಿಂದ ತಮ್ಮ ಮಗಳ ಕನ್ಯಾದಾನವನ್ನು ಮಾಡಿಸಿದ್ದೂ ಇದೆ. ಆದರೂ ಸೋದರಿಕೆಯ (ಅಣ್ಣನ ಮಗಳು + ಅಕ್ಕನ ಮಗ) ಸಂಬಂಧಗಳಿಗಿಂತ ಸಗೋತ್ರ ವಿವಾಹ ಖಂಡಿತ ಒಳ್ಳೆಯದೇ ಎಂದು ಬುದ್ಧಿವಂತ ಎಳೆಯರು ಹೇಳುತ್ತಿದ್ದಾರೆ.
ನಮ್ಮ ವಿವಾಹಕ್ಕೆ ಬಳಸುವ ಮಂತ್ರಗಳ ರೀತಿಗಳಿಗೆ ಸೂತ್ರಗಳಿವೆ (ಸೂತ್ರ ಅಂದರೆ ಸ್ಟೆಪ್ಸ್- ರೀತಿ, ದಾರಿ, ಇತ್ಯಾದಿ)- ಅಶ್ವಲಾಯನ ಮತ್ತು ಬೋಧಾಯನ ಸೂತ್ರಗಳು. ನಾವು ಬೋಧಾಯನ ಸೂತ್ರದಲ್ಲೇ ವಿವಾಹ ವಿಧಿಗಳನ್ನು ನೆರವೇರಿಸುತ್ತೇವೆ. ಅಶ್ವಲಾಯನ ಮತ್ತು ಬೋಧಯನರು ವೈದಿಕ ವಿದ್ವಾಂಸರು. ನಮ್ಮ ವಿವಾಹಗಳು ನಡೆಸಲ್ಪಡುವಾಗ ನಮ್ಮ ವೈದಿಕರು ಬಳಸುವ ಮಂತ್ರಗಳನ್ನು ನಾವು ಕಿವಿಗೊಟ್ಟು ಆಲಿಸಬೇಕು. ನೀವೇ ಯೋಚಿಸಿ ಗೋತ್ರ, ಪ್ರವರ, ಆಸ್ತಿಯ ಹಕ್ಕು ಇತ್ಯಾದಿಗಳು ನಮ್ಮ ಜೀವನದಲ್ಲಿ ಪುರುಷನಿಂದಲೇ ಮುಂದಿನ ಪೀಳಿಗೆಗೆ ಹೋಗುತ್ತದೆಯಲ್ಲ. ಕನ್ಯಾದಾನವನ್ನು ಮಾಡಿದ ನಂತರ ನಿಮ್ಮ ಮಗಳು ತನ್ನ ಪತಿಯ ಗೋತ್ರ, ಕುಟುಂಬದ ಏಕವ್ಯಕ್ತಿಯಾಗಿ ಪತಿಗೃಹಕ್ಕೆ ಕಾಲಿಡುತ್ತಾಳೆ. ತಾನೇ ಕನ್ಯಾದಾನವನ್ನು ಕೊಟ್ಟ ನಂತರ ಅದನ್ನು ಪುನಃ ಆಕೆಯ ಹೆತ್ತವರಿಗೆ ಕಿತ್ತುಕೊಳ್ಳುವ ಅವಕಾಶ ಇದೆಯೇ- ಇಲ್ಲ, ಇಲ್ಲ ಖಂಡಿತವಾಗಿ ಇಲ್ಲ. [ಮುಂದಿನ ಭಾಗ : ವಿವಾಹ ವಿಧಿವಿಧಾನಗಳು]