ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್! ಹಳ್ಳಿಗರು ಪತ್ರಿಕೆ ಓದುತ್ತಿದ್ದಾರೆ,ನಿಶ್ಯಬ್ದತೆ ಕಾಪಾಡಿ

By Staff
|
Google Oneindia Kannada News


ಕರ್ನಾಟಕದ ಗ್ರಾಮಾಂತರ ಪ್ರದೇಶಗಳಲ್ಲಿ ಓದಿನ ದಾಹ ಉಳ್ಳವರು, ತಮ್ಮ ದಾಹ ನೀಗಿಸಿಕೊಳ್ಳಲು ಪರದಾಡುತ್ತಾರೆ. ಇಂತಹ ಕೆಲವು ಯುವಕರು ಸಾಗರ ತಾಲೂಕಿನಲ್ಲಿ ತಾವೇ ಸ್ವಾವಲಂಬನೆಯ ವಾಚನಾಲಯ ಆರಂಭಿಸಿದ್ದಾರೆ. ಇಲ್ಲಿ ಜನ ಕನ್ನಡ ಪತ್ರಿಕೆಗಳನ್ನು ಓದುತ್ತಾರೆ. ಅಕ್ಷರ ಪ್ರೀತಿಯನ್ನು ಜಾಗೃತವಾಗಿಟ್ಟಿದ್ದಾರೆ.

ಡಾ. ಮೋಹನ ತಲಕಾಲುಕೊಪ್ಪ

Into the Rural Library, Karnataka ನಮ್ಮ ಕನ್ನಡದಲ್ಲಿ ವೃತ್ತಪತ್ರಿಕೆಗಳನ್ನು ಬಿಟ್ಟು ವಾರಪತ್ರಿಕೆ, ಮಾಸಪತ್ರಿಕೆ, ತ್ರೈಮಾಸಿಕಗಳು ಎಷ್ಟು ಬರುತ್ತಿವೆ ಗೊತ್ತಾ? ಸಣ್ಣಪುಟ್ಟ ಪತ್ರಿಕೆಗಳೆಲ್ಲಾ ಸೇರಿ ಒಟ್ಟು ಐವತ್ತಕ್ಕಿಂತಲೂ ಹೆಚ್ಚು.ಲೆಕ್ಕ ಇಟ್ಟಿಲ್ಲ. ಈಗಂತೂ ಮಹಿಳಾ ಪತ್ರಿಕೆ, ಮಕ್ಕಳ ಪತ್ರಿಕೆ, ಸಿನಿಪತ್ರಿಕೆ, ಕೃಷಿಪತ್ರಿಕೆ, ಕ್ರೈಂ, ವಿಜ್ಞಾನ, ವೈದ್ಯಕೀಯ, ಪರಿಸರ, ಸಾಮಾನ್ಯ ಜ್ಞಾನ.. ಹೀಗೆ ಎಷ್ಟೊಂದು ವೈವಿಧ್ಯಮಯ ಪತ್ರಿಕೆಗಳು!ಯಾವುದನ್ನೂ ಬಿಡುವಂತಿಲ್ಲ, ಎಲ್ಲವೂ ಕೈಗೆ ಸಿಗುವುದಿಲ್ಲ. ಏನು ಮಾಡುತ್ತೀರಿ?

ಸಾರ್ವಜನಿಕ ಗ್ರಂಥಾಲಯಗಳಲ್ಲಿ ಪತ್ರಿಕೆಗಳು ಸುಸ್ಥಿತಿಯಲ್ಲಿ ಸಿಕ್ಕರೆ ನಿಮ್ಮ ಪುಣ್ಯ. ಬಿಡಿ, ನಿಮಗೆ ಅಂತರ್ಜಾಲದ ಸಂಪರ್ಕವಿದ್ದರೆ ಕೆಲವೊಂದನ್ನು ಉಚಿತವಾಗಿ ಓದಬಹುದು. ಕೆಲವಕ್ಕೆ ದುಡ್ಡುಕೊಟ್ಟು ಓದಬೇಕು. ಆದರೆ ನಿಮಗೆ ಹೀಗೆ ಓದುವ ಸೌಲಭ್ಯ, ಸಹನೆ, ಸಮಯ ಹಾಗೂ ದುಡ್ಡು ಇರಬೇಕಲ್ಲಾ?

ನಗರವಾಸಿಗಳು ಹೋಗಲಿ, ಹಳ್ಳಿಗರ ಕಥೆ? ಸಾರ್ವಜನಿಕ ಗ್ರಂಥಾಲಯಗಳು ಇದ್ದರೂ ಬಹುತೇಕ ಮೂರ್ನಾಲ್ಕು ಕಿಲೋಮೀಟರ್‌ಗಳ ಫಾಸಲೆಯಲ್ಲಿರುತ್ತವೆ. ಎಲ್ಲ ಹಳ್ಳಿಗಳಿಗೂ ಇವು ಹತ್ತಿರವಿರುವುದು ಅಸಾಧ್ಯ. ಕೃಷಿಕರು ದುಡಿದು ಸುಸ್ತಾಗಿರುವಾಗ ಅಲ್ಲಿಗೆ ಹೋಗುವುದು ಕಡಿಮೆ. ಹಾಗಾದರೆ ಏನು ಪರಿಹಾರ? ಪ್ರತಿ ಹಳ್ಳಿಯಲ್ಲಿ ಒಂದು ವಾಚನಾಲಯವಿದ್ದು ಅಲ್ಲಿ ಎಲ್ಲ ಪತ್ರಿಕೆಗಳು ಸಿಗುವಂತಿದ್ದರೆ? ರೆ.. ಅಲ್ಲ. ಇಂಥದೊಂದು ಸಾಧ್ಯವಾಗಿರುವುದು ಸಾಗರ ತಾಲ್ಲೂಕಿನ ವರದಳ್ಳಿ ಹತ್ತಿರದ ಎಡಜಿಗಳೇಮನೆ ಗ್ರಾಮದಲ್ಲಿ.

ಇದರ ಹೆಸರೇ ಸಂಘಟಿತ ಪ್ರಯತ್ನ ಎಂಬುದರ ಸೂಚಕ. ಮಾವಿನಸರ, ಜಿಗಳೇಮನೆ ಊರುಹೆಸರಿನ ಬುಡ ತುದಿಗಳ ಕಸಿ ಮಾಡಿ ವಾಚನಾಲಯಕ್ಕೆ 'ಮಾವಿನಮನೆ ವಾಚನಾಲಯ" ಎಂದರು! ಅಕಾಲಿಕ ಮರಣಕ್ಕೀಡಾದ ಊರ ಹೆಣ್ಣುಮಗಳ ನೆನಪಿಗೆ ಇದು 'ವೀಣಾ ಸ್ಮಾರಕ". ಇಲ್ಲಿಯ ಗ್ರಾಮಾಭಿವೃದ್ಢಿ ಸಮಿತಿ ವಾಚನಾಲಯಕ್ಕೆ ತಿಂಗಳಿಗೆ 50 ರೂ ಕೊಡುತ್ತದೆ. ಇದರ ಜೊತೆಗೆ ನಿರ್ವಹಣೆಗೆ 200 ರೂ ವಾರ್ಷಿಕ ಬಜೆಟ್‌ನ್ನು. ಈ ವರ್ಷ 800 ಕ್ಕೆ ಇದು ಏರಿದೆ. ಕೆಲವು ಪತ್ರಿಕೆಗಳ ಸಂಪಾದಕರು ಈ ಸದುದ್ದೇಶವನ್ನು ಗುರುತಿಸಿ ಉಚಿತವಾಗಿ ಪತ್ರಿಕೆಗಳನ್ನು ಕಳಿಸಿಕೊಡುತ್ತಿದ್ದಾರೆ.ನೀವೂ ನಿಮ್ಮ ಪತ್ರಿಕೆಯನ್ನು ಕಳಿಸಿಕೊಡುತ್ತೀರಾ?

ವೈದ್ಯಶ್ರೀ, ಹವ್ಯಕ,ಸುಜಾತ ಪತ್ರಿಕೆ, ವಿವೇಕಪ್ರಭ, ಶ್ರೀಧರ ಸಂದೇಶ ಮುಂತಾದ ಉಚಿತವಾಗಿ ಬರುವ ಪತ್ರಿಕೆಗಳ ಸಂಖ್ಯೆ 15. ಇಷ್ಟವಿದ್ದವರು ಒಂದು ಅಥವಾ ಅದಕ್ಕೂ ಹೆಚ್ಚಿನ ಪತ್ರಿಕೆಗಳನ್ನು ಪ್ರಾಯೋಜಿಸಬಹುದಾದ ವ್ಯವಸ್ಥೆಯೂ ಇಲ್ಲಿದೆ. ತಿಂಗಳಿಗೆ ಕನಿಷ್ಠ ಹದಿನೈದು ರೂಗಳನ್ನು ಕೊಡುವುದರ ಮೂಲಕ. ಹೀಗೆ ಪ್ರಾಯೊಜಿಸಿದವರ ಸಂಖ್ಯೆ ಈಗ 29. ಪತ್ರಿಕೆಗಳ ಮೇಲೆ ಪ್ರಾಯೋಜಕರ ಹೆಸರು ಸೀಲು ಹೊಡೆಯುವುದರ ಮೂಲಕ ಅವರ ಕೊಡುಗೆಯನ್ನು ಸ್ಮರಿಸಿಕೊಳ್ಳುತ್ತಾರೆ. ವಿಶೇಷವೆಂದರೆ ಪ್ರಾಯೋಜಕರಾರೂ ಇದುವರೆಗೆ ಪತ್ರಿಕೆ ನಿಲ್ಲಿಸಿಲ್ಲ. ಇನ್ನೂ ಹಲವಾರು ಜನ ಪ್ರಾಯೋಜನೆ ಮಾಡಲು ಮುಂದೆ ಬರುತ್ತಿದ್ದಾರೆ.

Into the Rural Library, Karnataka ಈಗ ಒಟ್ಟು ಹತ್ತು ವಾರಪತ್ರಿಕೆ, 5 ಪಾಕ್ಷಿಕ ಹಾಗೂ 27 ಮಾಸಿಕ ಮತ್ತು ತ್ರೈಮಾಸಿಕ ಪತ್ರಿಕೆಗಳು ಬರುತ್ತಿವೆ. ಇದರಲ್ಲಿ 2 ಇಂಗ್ಲೀಷ್ ವಾರಪತ್ರಿಕೆಗಳೂ ಸೇರಿವೆ. ಇತ್ತಿಚೆಗೆ ಹಲವು ಉತ್ತಮ ಕಾದಂಬರಿಗಳೂ ಈ ಲೈಬ್ರರಿ ಸೇರಿವೆ. ಈ ವಾಚನಾಲಯದ ಮಾಸಿಕ ಶುಲ್ಕ ರೂ 10. ಮತ್ತೆ ಯಾರೂ ಬೇಕಾದರೂ 20 ರೂಗಳನ್ನು ಕೊಟ್ಟು ಸದಸ್ಯರಾಗಬಹುದು. ಅಲ್ಲೇ ಓದುವವರಿಗೆ ಫೀ ಇಲ್ಲ. ಪ್ರತಿದಿನವೂ ಒಬ್ಬರು 2 ಪತ್ರಿಕೆಗಳನ್ನು ಮನೆಗೊಯ್ಯಬಹುದು ಹಾಗೂ ಪತ್ರಿಕೆಗಳನ್ನು ಬದಲಿಸಬಹುದು. ವಾರಕ್ಕೊಮ್ಮೆಯೂ ಒಯ್ಯುವ ಸೌಕರ್‍ಯ ಇದೆ. ಈ ವಾಚನಾಲಯ ವಾರದ ಎಳೂ ದಿನಗಳಲ್ಲಿ ತೆಗೆದಿರುತ್ತದೆ. ಮಧ್ಯಾಹ್ನ 4ರಿಂದ 6ರ ತನಕ. ವಾಚನಾಲಯದ ಮೇಲ್ವಿಚಾರಣೆಗೆ ಊರಿನ 14-15 ಕಾರ್ಯಕರ್ತರು ಕೆಲಸ ಮಾಡುತ್ತಾರೆ. ದಿನಕ್ಕೆ ಇಬ್ಬರಂತೆ.

'ರಾಜ್ಯದ ಎಲ್ಲ ನಿಯತಕಾಲಿಕೆಗಳು ನಮ್ಮಲ್ಲಿಗೆ ಬರಬೇಕು. ಇದು ರಾಜ್ಯಕ್ಕೇ ರೆಫೆರೆನ್ಸ್ ಗ್ರಂಥಾಲಯವಾಗಬೇಕು. ಇ-ಪತ್ರಿಕೆಗಳೂ ಸಿಗಬೇಕು. ಮೌಲಿಕ ಕೃತಿಗಳು ಸಿಗಬೇಕು. ಸ್ವಂತಕಟ್ಟಡವೊಂದು ಬೇಗ ಬೇಕು.. ' ಹೀಗೆ ಹಲವಾರು ಕನಸುಗಳನ್ನು ಮುಂದಿಡುತ್ತಾರೆ ಸಂಚಾಲಕ ಮಾವೆಂಸ ಪ್ರಸಾದ್.


ನನಗನ್ನಿಸುವಂತೆ ಈ ರೀತಿಯ ಓದು-ಕೇಂದ್ರಗಳು ಊರಿಗೊಂದು ಇರಲೇಬೇಕು. ಅಂತರ್ಜಾಲದ ಸೌಲಭ್ಯವೂ ಇದಕ್ಕೆ ಸೇರಿದರೆ, ಆ ಊರಿನ ಸಮಗ್ರ ಮಾಹಿತಿ ಕೇಂದ್ರವಾಗಿ ಬೆಳೆಯುವ ಎಲ್ಲ ಸಾಧ್ಯತೆಗಳಿವೆ. ನಿಮ್ಮ ಊರಿನಲ್ಲೂ ಇಂಥ ವಾಚನಾಲಯವೊಂದು ಬೇಕಲ್ಲ?

ನಿಮಗೆ ಸಹಾಯ ಮಾಡಬೇಕೆನಿಸಿದರೆ ಅಥವಾ ಮಾಹಿತಿಗೆ :

ವೀಣಾ ಸ್ಮಾರಕ ಮಾವಿನಮನೆ ವಾಚನಾಲಯ,
ಅಂಚೆ: ಎಡಜಿಗಳೇಮನೆ-577401,
ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
ಫೋನ್ : ಮಾವೆಂಸ ಪ್ರಸಾದ್ : [9886 407592],[08183 236068]
ಇ-ವಿಳಾಸ : [email protected]

ಲೇಖಕರ ವಿಳಾಸ :
Dr. Mohan Talakalukoppa
Scientist, Agricultural Research Station (ARS)
Ponnampet-571 216, South Coorg, Karnataka
Mobile: 9902273468, 08274 249156
Email: [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X