ಒಡೆಯರ ಕಾಲದ ಮಟ್ಟುಗಾರರು

*ಮುಕುಂದ ತೇಜಸ್ವಿ, ಚೇತನ್‌ ನಾಡಿಗೇರ್‌

Dr.Meera Rajaram Praneshಪತನಗೊಂಡ ವಿಜಯನಗರ ಸಾಮ್ರಾಜ್ಯದ ಸಾಂಸ್ಕೃತಿಕ ವಾರಸುದಾರನಂತೆ ಮೈಸೂರು ಸಾಮ್ರಾಜ್ಯ ರೂಪುಗೊಂಡ ಇತಿಹಾಸ ಯಾರಿಗೆ ತಾನೇ ಗೊತ್ತಿಲ್ಲ . ಯದುರಾಯ ಮತ್ತು ಅವನ ಸಹೋದರನಾದ ಕೃಷ್ಣರಾಯ, ಒಡೆಯರ್‌ ಸಾಮ್ರಾಜ್ಯಕ್ಕೆ 1399ರಲ್ಲಿ ಜನ್ಮಕೊಟ್ಟರು. ಅವರ ನಂತರ ಎಷ್ಟೋ ರಾಜರು ಬಂದು ಹೋದರೂ ಸಂಗೀತ ಮತ್ತು ನೃತ್ಯವನ್ನು ಮೈಸೂರು ಸಾಮ್ರಾಜ್ಯದಲ್ಲಿ ಪುನರ್‌ ಸ್ಥಾಪಿಸಿದ ಕೀರ್ತಿ ರಾಜಾ ಒಡೆಯರ್‌ (1578-1617) ಗೆ ಸಲ್ಲುತ್ತದೆ. ವಿಜಯನಗರ ಸಾಮ್ರಾಜ್ಯದಲ್ಲಿ ಬಹಳ ವೈಭವದಿಂದ ಆಚರಿಸಲ್ಪಡುತ್ತಿದ್ದ ದಸರಾ ಹಬ್ಬವನ್ನು ಮೈಸೂರಿನಲ್ಲೂ ಆಚರಿಸುವ ಸಂಪ್ರದಾಯ ಪ್ರಾರಂಭವಾಯಿತು. ಅನೇಕ ಸಂಗೀತಗಾರರು ಮೈಸೂರಿನ ಅರಮನೆಯನ್ನು ಅಲಂಕರಿಸಿದ್ದರು.

ಕವಿ ಗೋವಿಂದ ವೈದ್ಯ ರಚಿಸಿರುವ ‘ಕಂಠೀರವ ನರಸರಾಜ ವಿಜಯ’ ಎಂಬ ಗ್ರಂಥದಲ್ಲಿ ರಣಧೀರ ಕಂಠೀರವ ನರಸರಾಜ ಒಡಯರ್‌ ಆಡಳಿತದಲ್ಲಿ ಸಂಗೀತ ಮತ್ತು ಅದರ ಪ್ರಾಶಸ್ತ್ಯದ ಬಗ್ಗೆ ತಿಳಿಯುತ್ತದೆ. ಆ ಪುಸ್ತಕ 17ನೇ ಶತಮಾನದ ಮೈಸೂರಿನ ಸಂಗೀತ, ಸಂಗೀತಗಾರರು, ಅವರು ಬಳಸುವ ಸಂಗೀತ ಸಾಧನಗಳು, ರಾಗ ತಾಳಗಳ ಬಗ್ಗೆ ಮತ್ತು ಅವರಿಗೆ ಮಹಾರಾಜ ರಣಧೀರ ಕಂಠೀರವ ನರಸರಾಜ ಒಡಯರ್‌ ನೀಡುತ್ತಿದ್ದ ಸತ್ಕಾರ, ಸನ್ಮಾನಗಳ ಸಂಪೂರ್ಣ ಚಿತ್ರಣ ನೀಡುತ್ತದೆ.

ನಂತರದ ರಾಜ ಚಿಕ್ಕ ದೇವರಾಜ ಒಡೆಯರ್‌ ಸಂಗೀತದ ಆಶ್ರಯದಾತ ಎಂದು ಪ್ರಸಿದ್ಧರಾದವರು. ಅವರೊಬ್ಬ ಶ್ರೇಷ್ಠ ವೈಣಿಕರೂ ಆಗಿದ್ದರು. ಒಡೆಯರ್‌ ಸಾಮ್ರಾಜ್ಯದ ರಾಜವಂಶದ ಮೊದಲ ಸಂಗೀತ ಸಂಯೋಜಕ ಎಂಬ ಅಗ್ಗಳಿಕೆ ಅವರದ್ದು. ವೈಷ್ಣವ ಪಂಥದ ವಿಚಾರಗಳನ್ನು ಪ್ರಚಾರ ಮಾಡುವ ಕನ್ನಡದ ಸಂಗೀತ ಗೀತರೂಪಕ ‘ಗೀತಗೋಪಾಲ’ವನ್ನು ಅವರು ರಚಿಸಿದ್ದರು.

ಮುಕ್ಕರಸು ಎಂದೇ ಗುರುತಿಸಿಕೊಂಡಿದ್ದ ಎರಡನೇ ಕಂಠೀರವ ನರಸರಾಜ ಒಡೆಯರ್‌ ಸಂಗೀತ, ನಾಟಕ ಮತ್ತು ನಾಟ್ಯಗಳನ್ನೊಳಗೊಂಡ ಯಕ್ಷಗಾನ ಸಂಯೋಜನೆ ಮಾಡಿದ್ದರು. ಮೈಸೂರು ಸಾಮ್ರಾಜ್ಯದ ರಾಜವಂಶದಲ್ಲಿ ಮಟ್ಟು ಹಾಕಿದ ಮೊದಲ ಮಹಿಳೆ ಚೆಲುವಾಂಬೆ. ಈಕೆ ಒಂದನೇ ಕೃಷ್ಣರಾಜ ಒಡೆಯರ ಪತ್ನಿ.

ಕರ್ನಾಟಕ ಸಂಗೀತದಲ್ಲಿ ಜಾವಳಿ

ಸಾಕಷ್ಟು ಸಾಹಿತ್ಯ ಕೃಷಿ ಮಾಡಿದ ಕಳಲೆ ನಂಜರಾಜರು ರಚಿಸಿದ ‘ಸಂಗೀತ ಗಂಗಾಧರ’ ಎಂಬ ಸಂಸ್ಕೃತ ಗೇಯ ಪ್ರಬಂಧದಲ್ಲಿ ಶಿವನ ಪ್ರಣಯ ಕಥೆ ಸುಂದರವಾಗಿ ಚಿತ್ರಿತವಾಗಿದೆ. ಕರ್ನಾಟಕ ಸಂಗೀತದಲ್ಲಿ ಜಾವಳಿಯನ್ನು ಮೊದಲ ಬಾರಿಗೆ ಪ್ರಯೋಗಿಸಿದ್ದು ಮುಮ್ಮಡಿ ಕೃಷ್ಣರಾಜ ಒಡೆಯರ್‌ ಕಾಲದಲ್ಲಿ . ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅವರು ರಚಿಸಿದ ‘ಸ್ವರ ಚೂಡಾಮಣಿ’ ಮತ್ತು ‘ಶ್ರೀ ತತ್ವನಿಧಿ’ ಎಂಬ ಸಾಹಿತ್ಯದಲ್ಲಿ ಸಂಗೀತ ಶಿಲ್ಪಶಾಸ್ತ್ರವನ್ನು ಅಳವಡಿಸಲಾಯ್ತು.

ಅಳಿಯ ಲಿಂಗರಾಜರು ಹಾಡು, ಜಾವಳಿ, ಸಾಂಗತ್ಯ, ಲಾವಣಿ, ಯಕ್ಷಗಾನ ಮತ್ತು ನಾಟಕಗಳನ್ನು ಸಂಯೋಜಿಸಿದ್ದರು. ಒಂಬತ್ತನೇ ಚಾಮರಾಜ ಒಡೆಯರ್‌ ಸಾಹಿತ್ಯ ಮತ್ತು ಸಂಗೀತದ ದೊಡ್ಡ ಆಶ್ರಯದಾತರು. ಅನೇಕ ಸಂಗೀತಗಾರರನ್ನು ತಮ್ಮ ವಿಲಾಸೀ ನಾಟಕ ಸಂಘಗಳಲ್ಲಿ ಅಭಿನಯಿಸುವಂತೆ ಪ್ರೋತ್ಸಾಹಿಸುತ್ತಿದ್ದರು.

ನಾಲ್ವಡಿ ಕೃಷ್ಣರಾಜ ಒಡೆಯರ್‌ ತಮ್ಮ ಆಸ್ಥಾನ ಸಂಗೀತಗಾರರನ್ನು ಹೊಸ ಹೊಸ ಸಂಗೀತ ಸಂಯೋಜನೆ ಮಾಡಲು ಪ್ರೋತ್ಸಾಹಿಸುತ್ತಿದ್ದರು. ಅವರ ಆಳ್ವಿಕೆಯಲ್ಲಿ ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತದ ವಾದ್ಯವೃಂದ ಬೆಳಕಿಗೆ ಬಂತು. ಅರಮನೆಯ ಆವರಣದಲ್ಲಿ ಜರುಗುವ ಸಾರ್ವಜನಿಕರ ಸಭೆಗಳಲ್ಲಿ ಮೈಕುಗಳನ್ನು ಆಗಲೇ ಉಪಯೋಗಿಸಲಾಗುತ್ತಿತ್ತು.

ಜಯ ಚಾಮರಾಜ ಒಡೆಯರ್‌ ಆಳ್ವಿಕೆಯಲ್ಲಿ ಮೈಸೂರು ಸಾಮ್ರಾಜ್ಯದ ಕೊನೆಯಾಯ್ತು. ಅವರು ಸ್ವತಃ ಸಂಗೀತಗಾರ ಮತ್ತು ಮಟ್ಟುಗಾರರಾಗಿದ್ದರು. ಮೈಸೂರು ಸಾಮ್ರಾಜ್ಯದ ಸಹಾಯದಿಂದ ಕರ್ನಾಟಕ ಸಂಗೀತ ದಕ್ಷಿಣ ಭಾರತದಲೆಲ್ಲಾ ಪ್ರಖ್ಯಾತವಾಯ್ತು.

ಮೈಸೂರು ಸದಾಶಿವರಾವ್‌, ವೀಣೆ ಶೇಷಣ್ಣ, ವೀಣಾ ಭಕ್ಷಿ ಸುಬ್ಬಣ್ಣ, ಮೈಸೂರು ಕರಿಗಿರಿ ರಾವ್‌, ಮೈಸೂರು ವಾಸುದೇವಾಚಾರ್‌, ಬೆಳಕವಾಡಿ ಶ್ರೀನಿವಾಸ ಐಯ್ಯಂಗಾರ್‌, ವೀಣಾ ಶಿವರಾಮಯ್ಯ ಮುಂತಾದ ಅನೇಕ ವಿದ್ವಾಂಸರು ಕರ್ನಾಟಕ ಸಂಗೀತಕ್ಕೆ ತಮ್ಮದೇ ಸೇವೆ ಸಲ್ಲಿಸಿದರು. ಡಾ ಎಲ್‌. ಮುತ್ತಯ್ಯ ಭಾಗವತರ್‌, ಚಿನ್ನಯ್ಯ ಮುಂತಾದ ಬೇರೆ ರಾಜರ ಆಳ್ವಿಕೆಯಲ್ಲಿದ್ದ ಸಂಗೀತ ವಿದ್ವಾಂಸರು ಕೂಡ ಮೈಸೂರು ಆಸ್ಥಾನ ವಿದ್ವಾಂಸರಾಗಿ ಸೇವೆ ಸಲ್ಲಿಸಿದ್ದಾರೆ.

ಸೋಸಲೆ ಅಯ್ಯ ಶಾಸ್ತ್ರಿ , ಬಸವಪ್ಪ ಶಾಸ್ತ್ರಿ , ಗಿರಿಭಟ್ಟ ತಮ್ಮಯ್ಯರಂತಹ ಸಂಗೀತ ವಿದ್ವಾಂಸರು ಅನೇಕ ನಾಟಕಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಜಯರಾಯಾಚಾರ್ಯ ಮತ್ತು ನಂಜುಂಡ ಸುಬ್ಬಾಶಾಸ್ತ್ರಿ ಸಂಯೋಜಿಸಿದ ಅನೇಕ ಸಾಂಪ್ರದಾಯಿಕ ಶೈಲಿಯ ಹಾಡುಗಳು ಇಂದು ಜನರ ಮನಸ್ಸಿನಿಂದ ಮಾಸಿವೆ.

*

ಮೇಲಿನ ವಿವರಗಳು ಡಾ.ಮೀರಾ ರಾಜಾರಾಂ ಅವರ ‘ಮೈಸೂರು ಒಡೆಯರ ಕಾಲದ ಸಂಗೀತ ಸಂಯೋಜಕರು’ ಕೃತಿಯಿಂದ ಆಯ್ದ ಮಾಹಿತಿಗಳು ಮಾತ್ರ. ಸಂಗೀತ ಹಾಗೂ ಸಂಸ್ಕೃತಿ ಗೆ ಅನೂಹ್ಯ ಕಾಣಿಕೆ ನೀಡಿರುವ ಮೈಸೂರು ಒಡಯರ್‌ ಕಾಲದ ಹುದುಗಿ ಹೋಗಿರುವ ಇನ್ನೂ ಎಷ್ಟೋ ಸಂಗತಿಗಳು ಹೊತ್ತಗೆಯಲ್ಲಿ ಪುಂಖಾನುಪುಂಖ ತೆರೆದುಕೊಂಡಿವೆ. ನೀವು ಸಂಗೀತ ಸಹೃದಯರಾದರೆ ಪುಸ್ತಕ ಕೊಂಡು ಓದಿ.


Click here to go to top
ಮುಖಪುಟ / ಸಾಹಿತ್ಯ ಸೊಗಡು


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+