ಭಾನುವಾರ ಶ್ರೀನಿವಾಸ್ರ ‘ಸೆರೆ’ ಕಾದಂಬರಿಗೆ ಮುಕ್ತಿ
ಬೆಂಗಳೂರು : ನಗರದ ಪ್ರೆಸ್ ಕ್ಲಬ್ನಲ್ಲಿ ನಿರ್ದೇಶಕ ಮತ್ತು ಬರಹಗಾರ ಪಿ.ಎನ್.ಶ್ರೀನಿವಾಸ್ ಅವರ ‘ ಸೆರೆ’ ಕಾದಂಬರಿಯ ಬಿಡುಗಡೆ ಸಮಾರಂಭವನ್ನು ಭಾನುವಾರ(ಜು.3)ಏರ್ಪಡಿಸಲಾಗಿದೆ.
ಭಾನುವಾರ ಬೆಳಿಗ್ಗೆ 11ಗಂಟೆಗೆ ಆಯೋಜಿಸಲಾಗಿರುವ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ಪ್ರೊ. ಎಲ್. ಎಸ್. ಶೇಷಗಿರಿ ರಾವ್ಅವರು ವಹಿಸಿಕೊಳ್ಳುವರು.
ಪುರೋಗಾಮಿ ಪ್ರಕಾಶನದಿಂದ ಮಾವಿನಕೆರೆ ರಂಗನಾಥನ್ ಅವರು ಕಾದಂಬರಿಯನ್ನು ಹೊರತಂದಿದ್ದಾರೆ. ‘ಸ್ಪಂದನ’ ಹಾಗೂ ‘ಅಭಿಮಾನ’ದಂಥ ಒಳ್ಳೆಯ ಸಿನಿಮಾಗಳನ್ನು ನಿರ್ದೇಶಿಸಿ, ಕನ್ನಡ ಬೆಳ್ಳಿತೆರೆಯ ಮೇಲೆ ಹೆಗ್ಗುರುತುಗಳನ್ನು ಮೂಡಿಸಿರುವ ಪಿ.ಎನ್.ಶ್ರೀನಿವಾಸ್, ಸಾಹಿತ್ಯರಂಗದತ್ತ ವಾಲಿದ್ದಾರೆ.
2003ರಲ್ಲಿ ‘ನಡೆ’ ಎಂಬ ಕಾದಂಬರಿ ಹಾಗೂ ‘ಚಲನಚಿತ್ರ ನಿರ್ದೇಶಕ’ ಎಂಬ ಸಿನಿ ಪುಸ್ತಕಗಳನ್ನು ಅವರು ಪ್ರಕಟಿಸಿದ್ದರು. ತಮ್ಮ ‘ಮಾತುಗಳು’ ಎನ್ನುವ ಪ್ರಬಂಧ ಸಂಕಲನದಿಂದ ‘ಮಾತುಗಳ ಶ್ರೀನಿವಾಸ್’ ಎಂದೇ ಅವರು ಗುರ್ತಿಸಲ್ಪಟ್ಟಿದ್ದಾರೆ.
ಸಾವನ್ನು ಕುರಿತು ಚಿಂತಿಸುವ ‘ನಡೆ’ ಕಾದಂಬರಿಯ ಮೂಲಕ ಸಾಹಿತ್ಯಾಸಕ್ತರನ್ನು ಸೆಳೆದಿದ್ದ ಶ್ರೀನಿವಾಸ್ ಅವರ ‘ಸೆರೆ’ ಕಾದಂಬರಿಯತ್ತ ಸಹಜ ಕುತೂಹಲವಿದೆ. ಹೆಚ್ಚಿನ ವಿವರಗಳಿಗಾಗಿ [email protected] ಇ-ಅಂಚೆಯನ್ನು ಸಂಪರ್ಕಿಸಬಹುದು.
(ಇನ್ಫೋ ವಾರ್ತೆ)