ಕುಂ.ವೀರಭದ್ರಪ್ಪ ಅವರ ‘ಅರಮನೆ’ ಈಗ ನಿಮ್ಮ ಮನೆಗೆ ...
ಬೆಂಗಳೂರು : ಖ್ಯಾತ ಬರಹಗಾರ ಕುಂ.ವೀರಭದ್ರಪ್ಪ ಅವರ ಹೊಸ ಕಾದಂಬರಿ ‘ಅರಮನೆ’ ಲೋಕಾರ್ಪಣೆಗೊಂಡಿದೆ.
ನಗರದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್, ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು. ಕಾವ್ಯದ ಗೇಯತೆಯುಳ್ಳ ಈ ಕಾದಂಬರಿ ನಿಜಕ್ಕೂ ಗದ್ಯಕಾವ್ಯ. ಬಳ್ಳಾರಿ ಪರಿಸರವನ್ನು ‘ಅರಮನೆ’ ಕೃತಿಯಲ್ಲಿ ಕುಂ.ವೀ. ಬಿಂಬಿಸಿದ್ದಾರೆ ಎಂದು ಎಂ.ಪಿ.ಪ್ರಕಾಶ್ ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರೊ.ಸಿ.ಎನ್.ರಾಮಚಂದ್ರನ್ ಮಾತನಾಡಿ, ಕನ್ನಡ ಕಾದಂಬರಿ ಲೋಕ ಹೊಸ ದಾರಿಯಲ್ಲಿ ಸಾಗುತ್ತಿದೆ. ಈ ಮಧ್ಯೆ ‘ಅರಮನೆ’ಯಂತಹ ವಿನೂತನ ಕಾದಂಬರಿ ಹೊರಬಂದಿದೆ ಎಂದರು.
ಐತಿಹಾಸಿಕ, ಪೌರಾಣಿಕ, ಜಾನಪದೀಯ ಅಂಶಗಳು ಈ ಕಾದಂಬರಿಯಲ್ಲಿದ್ದರೂ, ವಾಸ್ತವದ ನೆಲೆಯನ್ನು ಅದು ದಾಟಿಲ್ಲ. ತಮ್ಮ ಜನಪ್ರಿಯ ಶೈಲಿಯನ್ನು ಪಕ್ಕಕ್ಕಿಟ್ಟು, ಕುಂ.ವೀ. ವಿನೂತನ ಶೈಲಿಯಲ್ಲಿ ಅರಮನೆಗೆ ರೂಪ ನೀಡಿದ್ದಾರೆ ಎಂದು ರಾಮಚಂದ್ರನ್ ಅಭಿಪ್ರಾಯಪಟ್ಟರು.
ಕುಂ.ವೀರಭದ್ರಪ್ಪ ಮಾತನಾಡಿ, ಬರೆಯುವುದನ್ನು ಬಿಟ್ಟು ನಾನು ಬೇರೇನೂ ಮಾಡಲಾರೆ . ಹೀಗಾಗಿ ಬರೆಯುತ್ತೇನೆ ... ಬರೆಯುತ್ತಲೇ ಇರುತ್ತೇನೆ ಎಂದರು.
ಅಗ್ರಹಾರ ಕೃಷ್ಣ ಮೂರ್ತಿ, ರಾಜ್ಯದ ಹೆಚ್ಚುವರಿ ಪೊಲೀಸ್ ಆಯುಕ್ತ ಸುಭಾಷ್ ಭರಣಿ. ಸಪ್ನಾ ಬುಕ್ ಹೌಸ್ನ ನಿತಿನ್ ಷಾ ಸಮಾರಂಭದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)












Click it and Unblock the Notifications