‘ಆಚೀಚೆಯ ಕತೆಗಳು’ ಬರಗೂರರಿಂದ ಈಚೆಗೆ...
- ದಟ್ಸ್ಕನ್ನಡ ಡೆಸ್ಕ್
ಕನ್ನಡ ಸಾಹಿತ್ಯ ರಂಗ ಪುಸ್ತಕ ಮಾಲೆಯ ಎರಡನೇ ಕೊಡುಗೆ -ಆಚೀಚೆಯ ಕತೆಗಳು. ಈ ಕೃತಿಯನ್ನು ಉದ್ಘಾಟನಾ ಅಧಿವೇಶನದಲ್ಲಿ ಸಮ್ಮೇಳನದ ಮುಖ್ಯ ಅತಿಥಿ ಬರಗೂರು ರಾಮಚಂದ್ರಪ್ಪ ಅವರು ಬಿಡುಗಡೆ ಮಾಡುವರು.
ಕೃತಿಯ ಪ್ರಧಾನ ಸಂಪಾದಕ ಮತ್ತು ಕಥೆಗಾರ ಗುರುಪ್ರಸಾದ್ ಕಾಗಿನೆಲೆ, ಪುಸ್ತಕವನ್ನು ಪರಿಚಯಿಸುವರು.
ಎನ್ಆರ್ಐ ಕನ್ನಡ ಕಥೆಗಾರರ ಪ್ರಾತಿನಿಧಿಕ ಸಂಕಲನವಾಗಿರುವ ಈ ಕೃತಿಯ ಸಂಪಾದಕ ಮಂಡಳಿಯಲ್ಲಿ ಆಹಿತಾನಲ, ಎಚ್.ಕೆ.ಚಂದ್ರಶೇಖರ್, ಎಚ್.ವೈ.ರಾಜಗೋಪಾಲ್, ಮೈ.ಶ್ರೀ.ನಟರಾಜ, ನಳಿನಿ ಮೈಯ, ಶಶಿಕಲಾ ಚಂದ್ರಶೇಖರ್ ಕಾರ್ಯನಿರ್ವಹಿಸಿದ್ದಾರೆ.
ಕನ್ನಡ ಸಾಹಿತ್ಯ ರಂಗ, ನ್ಯೂಜೆರ್ಸಿ, ಯುಎಸ್ಎ ಮತ್ತು ಬೆಂಗಳೂರಿನ ಅಭಿನವ ಪ್ರಕಾಶನ ಜಂಟಿಯಾಗಿ ಈ ಕೃತಿಯನ್ನು ಹೊರತಂದಿವೆ. ‘ಕಥೆ ಎನ್ನುವುದು ಅನುಭವಿಸುವ ಮನುಷ್ಯನ ಮನಸ್ಸಿಗೆ ತೀರ ಸಹಜವಾದ ಚಟುವಟಿಕೆಯಾಗಿದೆ. ನಮ್ಮ ಪ್ರತಿಯಾಬ್ಬರಲ್ಲೂ ಒಂದು ಕಥೆ ಇದೆ’ ಎನ್ನುವ ಭಾವ ಪುಸ್ತಕದ ಬೆನ್ನುಡಿಯಲ್ಲಿದೆ. ಕಥೆಗಾರ ಯಶವಂತ ಚಿತ್ತಾಲರ ಬೆನ್ನುಡಿ ಪುಸ್ತಕದ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
150ರೂ. ಮುಖಬೆಲೆಯ ಈ ಕೃತಿ, ಕಡಲಾಚೆಯ ಮತ್ತು ಈಚೆಯ ಕಥೆಗಾರರ ಮನಸ್ಥಿತಿಯನ್ನು ಬಿಂಬಿಸುವಂತಿದೆ.
ಕಳೆದ ವರ್ಷ ಮೈತಳೆದ ಕನ್ನಡ ಸಾಹಿತ್ಯ ರಂಗ, ಉತ್ತರ ಅಮೆರಿಕಾದ ಸಂಯುಕ್ತ ಸಂಸ್ಥಾನದಲ್ಲಿನ ಸಕ್ರಿಯ ಕನ್ನಡ ವೇದಿಕೆ. ಸಂಘಟನೆ, ಪುಸ್ತಕ ಪ್ರಕಟನೆಯ ಮೂಲಕ ಕನ್ನಡ ಜಾಗೃತಿಯಲ್ಲಿ ಮುಂಚೂಣಿಯಲ್ಲಿದೆ. ಕಳೆದ ವರ್ಷ ಮೇ.29ರಂದು ಫಿಲಡೆಲ್ಫಿಯ ಬಳಿಯ ವಿಲನೋವ ವಿಶ್ವವಿದ್ಯಾಲಯದಲ್ಲಿ ನಡೆದ ಸಾಹಿತ್ಯೋತ್ಸವದಲ್ಲಿ, ಸಾಹಿತ್ಯ ರಂಗ ‘ಕುವೆಂಪು ಸಾಹಿತ್ಯ ಸಮೀಕ್ಷೆ’ ಪುಸ್ತಕವನ್ನು ಹೊರತಂದಿತ್ತು.
ಕಥೆಗಾರರಾದ ಅಹಿತಾಲನ, ಜಯರಾಮ ಉಡುಪ, ಗುರುಪ್ರಸಾದ್ ಕಾಗಿನೆಲೆ, ರವಿ ಗೋಪಾಲರಾವ್, ಶಶಿಕಲ ಚಂದ್ರಶೇಖರ್, ಗೋಪಿನಾಥ ತಾತಾಚಾರ್, ಮೈ.ಶ್ರೀ.ನಟರಾಜ, ಶರತ್ ನೊಮಬೂರು, ಪ್ರಕಾಶ್ರಾವ್ ಪಯ್ಯಾರ್, ಸದಾಶಿವ ಫಡ್ನೀಸ್, ಇರ್ಶಾದ್ ಮೂಡಬಿದ್ರಿ, ನಳಿನಿ ಮೈಯ, ವೈ.ಆರ್.ಮೋಹನ್, ಸಂಧ್ಯಾ ರವೀಂದ್ರನಾಥ್, ವಿಮಲಾ ರಾಜಗೋಪಾಲ್, ಗೋಪಿನಾಥ ರಾವ್, ವಲ್ಲೀಶ ಶಾಸ್ತ್ರೀ, ಪ್ರವೀಣ ಶಿವಶಂಕರ್, ಗುಂಡು ಶಂಕರ್, ಶೈಲಾಜ ಶಂಕರ್, ತ್ರಿವೇಣಿ ಶ್ರೀನಿವಾಸ ರಾವ್, ನಂಡುಂಡ ಸ್ವಾಮಿ, ವಿಶ್ವನಾಥ ಹುಲಿಕಲ್ ಅವರ ಕಥೆಗಳು ಸಂಕಲನದಲ್ಲಿವೆ.