ಹಂಪಿ ಅಂದು- ಇಂದು : ಪುಸ್ತಕ ಬರೆಯುತ್ತಿದ್ದಾರೆ ಟಿ.ಪಿ.ಇಸ್ಸಾರ್
ಬೆಂಗಳೂರು : ಬೆಂಗಳೂರು ನಗರಿಯ ಸೊಬಗು- ಗೋಜಲುಗಳ ಬಗ್ಗೆ ಪುಸ್ತಿಕೆ ಬರೆದು, ಉರ್ದು ಕವಿ ಮಿರ್ಜಾ ಘಾಲಿಬ್ ಕೃತಿಯನ್ನು ಇಂಗ್ಲಿಷಿಗೆ ಅನುವಾದಿಸಿರುವ ಕರ್ನಾಟಕದ ಮಾಜಿ ಮುಖ್ಯ ಕಾರ್ಯದರ್ಶಿ ಟಿ.ಪಿ.ಇಸ್ಸಾರ್ ಕಣ್ಣು ಇದೀಗ ಹಂಪಿ ಮೇಲೆ ನೆಟ್ಟಿದೆ. 2002 ಜೂನ್ ಹೊತ್ತಿಗೆ ಹಂಪಿ ಕುರಿತ ಕೃತಿಯಾಂದು ಇವರ ಮೂಸೆಯಿಂದ ಹೊಮ್ಮಿ, ಪ್ರಕಟವಾಗಲಿದೆ.
ರಾಜ್ಯ ಸರ್ಕಾರದ ಬಹು ದಿನಗಳ ಬಯಕೆ; ಯೋಜನೆ ಇದಾಗಿದ್ದು, ಹಂಪಿ ಕುರಿತ ಸಮಗ್ರ ವಿಷಯಗಳಿಗೆ ಪುಸ್ತಕದ ರೂಪ ಕೊಡುವ ಹೊಣೆಯನ್ನು ಇಸ್ಸಾರ್ ಹೊತ್ತಿದ್ದಾರೆ. ಎಕ್ಸ್ಪ್ಲೋಸಿಟಿ ಡಾಟ್ ಕಾಂಗೆ ಅವರು ಈ ವಿಷಯ ತಿಳಿಸಿದ್ದಾರೆ.
ಪುಸ್ತಕದ ಸಾಲುಗಳು ನನ್ನವಾದರೂ ಅದರಲ್ಲಿ ಛಾಯಾಚಿತ್ರಗಾರರ, ಸಂಶೋಧಕರ ಪಾಲು ಬಹು ಮುಖ್ಯವಾಗಿರುತ್ತದೆ. ಬರವಣಿಗೆ ಸಾಗಿದೆ. ಫೋಟೋಗಳನ್ನು ಕಲೆಹಾಕುತ್ತಿದ್ದೇನೆ. ಸಂಶೋಧಕರಿಂದ ಮಾಹಿತಿ ಹೆಕ್ಕುತ್ತಿದ್ದೇನೆ. ಸರ್ಕಾರ ವರ್ಷಗಳ ಹಿಂದೆಯೇ ಈ ಯೋಜನೆ ಬಗ್ಗೆ ಹೇಳಿತ್ತು. ಆದರೆ ಕಾರಣಾಂತರಗಳಿಂದ ಕೃತಿಯಾಗಲಿಲ್ಲ. ಈಗ ಎಲ್ಲಾ ಕೆಲಸಗಳನ್ನು ಬದಿಗೊತ್ತಿ, ಬೇಗ ಪುಸ್ತಕ ತರಬೇಕೆಂದು ನಿರ್ಧರಿಸಿದ್ದೇನೆ. ಹಂಪಿ ಅಂದು ಹೇಗಿತ್ತು. ಇಂದು ಹೇಗಾಗಿದೆ. ಇದು ಯಾತಕ್ಕೆ ಎಂಬಿತ್ಯಾದಿ ಮಾಹಿತಿಗಳ ಸಚಿತ್ರ ಕೃತಿ ಇದಾಗಲಿದ್ದು, 100 ಪುಟಗಳಲ್ಲಿ ಎಲ್ಲಾ ಮಾಹಿತಿಯೂ ಲಭ್ಯವಾಗಲಿದೆ. ಪೋರ್ಚುಗೀಸರು, ಸಾಹಿತಿಗಳು, ಅಬ್ದುಲ್ ರಜಾಕ್ರಂಥಾ ಪ್ರವಾಸಿಗರು ಹಂಪಿ ಬಗ್ಗೆ ಮಾಡಿರುವ ಉಲ್ಲೇಖಗಳನ್ನೂ ಕೃತಿಯಲ್ಲಿ ದಾಖಲಿಸಲಾಗುವುದು ಎಂದು ಇಸ್ಸಾರ್ ಹೇಳಿದರು.
(ಇನ್ಫೋ ವಾರ್ತೆ)