ನಾಲ್ಕು ಘಳಿಗೆ ಇದ್ದು ಹೋದೇವು, ಈ ನೆಲಕ್ಕೆ ಅಂಟಿ ನಿಲ್ಲಲು ಮನಸ್ಸಿಲ್ಲ

ವಿದೇಶ, ಹೋಗಬಯಸುವವರ ಮುಂದೆ ಕಾಮನಬಿಲ್ಲಿನ ಜಾಲವನ್ನೇ ಹರಡುತ್ತದೆ. ತಾಯ್ನಾಡಿನಲ್ಲಿ ಸಿಗದ ಸುಖ ಸವಲತ್ತುಗಳನ್ನು, ಭೋಗ ಭಾಗ್ಯಗಳನ್ನು ಗಳಿಸಿಕೊಡುವ ಭರವಸೆಯಾಗಿ ಬಯಸುವವರನ್ನು ಬರಸೆಳೆಯುತ್ತದೆ. ಬರುವುದಾದರೂ ಇಲ್ಲಿಗೆ ಯಾಕೆ ? ಆರಾಮವಾಗಿರಲಿಕ್ಕೆ ; ರೆಕ್ಕೆ ಸುಡದೆ ! ಸಾಧ್ಯವಾದಷ್ಟು ಗಳಿಸಿ ಉಳಿಸಲಿಕ್ಕೆ. ಸಿಕ್ಕಿಬಿದ್ದು ಉಳಿದರೆ ಈ ಇಲ್ಲಿ , ಹಿಂತಿರುಗಿದರೆ ಊರಲ್ಲಿ ಮಳೆಗಾಲಕ್ಕೆ
- ನಾನು ಪರಕೀಯ

ಇಂತಹ ಅವಕಾಶಗಳ ಕನಸು ಹೊತ್ತು ಬರುವವರು, ಹಪಹಪಿಸುವವರು, ಅಲ್ಲಿಗೆ ಹೋದರೆ ಸ್ವಾಭಿಮಾನ, ನೋವುಗಳನ್ನು ಬದಿಗಿಟ್ಟು ಹೊಂದಿಕೊಳ್ಳಬೇಕಾಗುತ್ತದೆ, ಹೊಂದಿಕೊಳ್ಳುವುದರಲ್ಲಿ ನಮ್ಮವರು ನಿಸ್ಸೀಮರೆಂಬುದನ್ನು ಗಮನಿಸಿದ ಧ್ವನಿಯಲ್ಲಿ ಮೆಚ್ಚುಗೆ, ವ್ಯಂಗ್ಯಗಳೆರಡೂ ಕಾಣುತ್ತವೆ. ಒಂದು ಪರಿಸರದಲ್ಲಿ ಹೊಂದಿಕೊಂಡು ಮೇಲೆ ಬರಬೇಕಾದರೆ, ಸ್ಪರ್ಧೆಯ ಓಟದಲ್ಲಿ ಮುಂದಾಗಬೇಕಾದರೆ ವೈಯಕ್ತಿಕ ಪ್ರತಿಭೆ, ಸಾಮರ್ಥ್ಯಗಳು ಅಗತ್ಯವಿದೆ - ಎನ್ನುವುದು ಕವಿಗೆ ಹೊಳೆದ ಸತ್ಯ.

ಅವಕಾಶಗಳ ಸ್ವರ್ಗ ಹೊಕ್ಕರೂ ತಲೆಯಿದ್ದರೇ
ಉಳಿವು ;
- ಎಂದು ?

ಈ ಸಂಕಲನದಲ್ಲಿ ವಿಷಯ ವೈವಿಧ್ಯವಿದೆ. ಅನಿವಾಸಿ ಭಾರತೀಯನ ಅನುಭವದ ಹಲವು ಮುಖಗಳು ಇಲ್ಲಿ ಕಾಣಸಿಗುತ್ತವೆ.

ವಿದೇಶಕ್ಕೆ ಹೋಗುವ ಬಯಕೆಯ ಹಿನ್ನೆಲೆಯಲ್ಲಿ ಹಲವು ಮನಃಸ್ಥಿತಿಗಳು ಕೆಲಸ ಮಾಡುತ್ತವೆ. ಹಣಕ್ಕಾಗಿ (ಸಂಪಾದನೆಗೆ) ಕೆಲವರಾದರೆ, ಪ್ರವಾಸದ ಆನಂದ, ಅದ್ಭುತ ಲೋಕದರ್ಶನಕ್ಕೆಂದು ಕೆಲವರು, ಮತ್ತೆ ಕೆಲವರು ವಸ್ತುಗಳನ್ನು ಕೊಂಡುಕೊಳ್ಳುವ, ಮಾರುವ ಉದ್ದೇಶಗಳಿಂದ ವಿದೇಶಕ್ಕೆ ಬರುತ್ತಾರೆ. ಇಂತಹ ಮನೋಕಾಂಕ್ಷೆಗಳನ್ನು ಒಂದು ಪುಟ್ಟ ಖಂಡ ಕಾವ್ಯದಂತೆ ಮೂರು ಘಟ್ಟಗಳಲ್ಲಿ ವಿವರಿಸುತ್ತಾರೆ. ಅವರ ದೃಷ್ಟಿಯಲ್ಲಿ, ಕೆಲವರಿಗೆ ಸಂತೆ, ಕೆಲವರಿಗೆ ಜಾತ್ರೆ, ಕೆಲವರಿಗೆ ಯಾತ್ರೆ! ಸಂತೆ ಭಾವದೊಂದಿಗೆ ಬರುವವರನ್ನು ಹೀಗೆ ವಿವರಿಸುತ್ತಾರೆ- ತಮ್ಮ ‘ವಿದೇಶಕ್ಕೆ ಬಂದವರು’ ಕವಿತೆಯಲ್ಲಿ,

ನಾಲ್ಕು ಘಳಿಗೆ ಇದ್ದು ಹೋದೇವು, ಈ ನೆಲಕ್ಕೆ
ಅಂಟಿ ನಿಲ್ಲಲು ಮನಸ್ಸಿಲ್ಲ ;
ಹಾಗೆಂದು ಹೋಗಲೊಲ್ಲ, ಈ ವ್ಯಾಪಾರ
ಕೊಳ್ಳುವವರೆಲ್ಲ ತಳ್ಳಿ ಹೋಗುವವರೆಗೆಂದು ಬಲ್ಲ
ಕುಶಲಮತಿ ಇಲ್ಲಿ ಸಿಗುವುದ ಕೊಂಡು
ತುಂಬಿ ಬಂದು,
ತಿರುಗಿ ಇವರಿಗೇ ಮಾರುವನಲ್ಲ ! - ಎಂದು ಅಚ್ಚರಿ ವ್ಯಕ್ತಪಡಿಸಿದರೆ, ಜಾತ್ರೆಯಾಗಿ ಭಾವಿಸುವವರು ನಡೆದುಕೊಳ್ಳುವ ರೀತಿಗೆ ವ್ಯಂಗ್ಯದ ಬಾಣವೆಸೆಯುತ್ತಾರೆ.

ಅವಕಾಶಗಳ ಅಮರಾವತಿಯಲ್ಲಿ ಆರ್ಥಿಕೋತ್ಸವ;
ಮುಂಚೆಯೇ ಕೊಂಚ ಸಿದ್ಧತೆ ಮಾಡಿಕೊಂಡವರು
ಯಾರೂ ಬರಬಹುದು ಜಾತ್ರೆಗೆ
--------------------
ಮನೆದೇವರಿಗಿದ್ದೇ ಇದೆ ನಮಸ್ಕಾರ
ಹೊತ್ತ ಹರಕೆಯ ದೇವತೆಗೆ ಮಿಗಿಲಾದ ಪುರಸ್ಕಾರ !
-------------------
ನೂಕು ನುಗ್ಗಲಿಗಂಜಿ
ಗುಡಿಯ ಹೊರಗೇ ಕಾಯಾಡೆದು,
ಸಿಕ್ಕ ಅಷ್ಟೇ ದರ್ಶನ ಸಾಕೆಂದು ಮರಳಿದವರುಂಟು.

ಈ ಕವಿತೆಯ ‘ಯಾತ್ರೆ’ ಭಾಗದಲ್ಲಿ ಪುರಾಣ ಪ್ರತಿಮೆಗಳನ್ನು ಧಾರಾಳವಾಗಿ ಬಳಸಿಕೊಳ್ಳುತ್ತಾರೆ. ಎಂದಾದರೂ ಒಮ್ಮೆ ನೋಡಿ ಬರಲೇಬೇಕೆಂಬ ಅಭೀಪ್ಸೆಯಾಂದಿಗೆ, ಸುತ್ತಿಬರುವ ಹಂಬಲ ಹೊತ್ತವರಿಗೆ ಈ ವಿದೇಶವೆಂಬ ತೋಟದಲ್ಲಿ,
‘ನೋಟದ ಹಸಿಬಿಸಿ ರಸದೂಟ’- ಇವರು ಮತ್ತು ಇವರ ಸ್ಥಿತಿ ಹೇಗೆಂದರೆ,

ಒಲ್ಲದ ಗಂಡನಲ್ಲಿಲ್ಲದ ಕಾವಿನ ನಲ್ಲನಿಗೆ ತಪಿಸಿ
ಬೃಂದಾವನದಲ್ಲೆಲ್ಲಾ ಅಲೆಯುವ ರಾಧೆಯರು
‘ನೀವು ಕಾಣಿರೇ, ನೀವು ಕಾಣಿರೇ’ ಚಡಪಡಿಸಿ
ನೆಮ್ಮದಿಯ ಸೌಗಂಧಿಕವು ಬೆನ್ನಟ್ಟಿ ಹೊರಟವರು

- ಹೀಗೆ ಹರಿಹರೇಶ್ವರ ಅವರು ವಿದೇಶಕ್ಕೆ ಬಂದವರನ್ನು ವರ್ಗೀಕರಿಸುತ್ತಾರೆ.

ಅವಕಾಶಗಳನ್ನು ಅರಸಿ ಬಂದವರಾದರೂ ಒಮ್ಮೊಮ್ಮೆ ‘ಅನಾಥ ಪ್ರಜ್ಞೆ ಮನಸ್ಸನ್ನು ಕಾಡುತ್ತದೆ. ನಿಸಾರ್‌ ಅಹಮದ್‌ ಅವರು ಹೇಳುವಂತೆ ನಿಮ್ಮೊಳಗಿದ್ದೂ ನಿಮ್ಮಂತಾಗದೆ’ ಎನ್ನುವ ಭಾವದಿಂದ ಪರಕೀಯತೆಯ ಅನುಭವದಿಂದ ತಲ್ಲಣಗೊಳ್ಳುತ್ತದೆ, ಮನಸ್ಸು. ತನ್ನ ಪರಕೀಯತೆಯ ಭಾವವನ್ನು ರೂಪಕದ ಮೂಲಕವಾಗಿ ಹೀಗೆ ವಿವರಿಸುತ್ತಾರೆ;

ತಾವು ಕಾಣದ ತಾಣ, ಸರಿಯಾಗಿ ಹುಲುಸಾಗಿ
ಕೇಳಿ ತಿಳಿಯದ ದೇಶದೆಲ್ಲಿಂದಲೋ ಬಂದವ, ಮಾಗಿ
ಇನ್ನೂ ಕರಗದ, ಮನೆ ತುಂಬಿದ ಕಿರಿಯ ಸೊಸೆ, ಹಸಿ ನಿಂಬೆ,
ಹಾಸ್ಟೆಲಿಗೆ ಈಗಷ್ಟೇ ಸೇರಿದ ಫ್ರೆಷ್‌ಮನ್‌ ತುಂಬೆ
ಎಂಬ ಆ ಅಮೆರಿಕನ್‌ ಅತ್ತೆಯರ ಮೊಸಳೆಗಣ್ಣಲ್ಲಿ
- ನಾನು ಪರಕೀಯ.

ಅತ್ತೆಮನೆಗೆ ಬರುವ ಸೊಸೆಗೆ ಎಲ್ಲವೂ ಅಪರಿಚಿತ. ಹೊಸ ಜಾಗ, ಹೊಸ ಪರಿಸರ. ಅವಳಿಗಿರುವುದು ತಾನು ‘ಪರಕೀಯ’ ಎಂಬ ಭಾವನೆಯಂತೆಯೇ ಕವಿಗೂ ಅನ್ಯ ಮತ್ತು ಅನ್ಯರ ನಾಡಿನಲ್ಲಿ ಪರಕೀಯತೆಯ ಅನುಭವ. ಇಂತಹ ಅನುಭವದ ಹಿನ್ನೆಲೆಯಲ್ಲಿ ಧುತ್ತನೆ ತನ್ನ ತಾಯ್ನಾಡಿನ ನೆನಪು ಮೂಡಿ ಮನಸ್ಸಿಗೆ ಇನ್ನಷ್ಟು ಕಸಿವಿಸಿಯಾಗುತ್ತದೆ. ಇಲ್ಲಿನ ಸ್ನೇಹಿತರು, ಬಂಧುಗಳು, ಸಂಸ್ಕೃತಿ, ಯಾರ ವಕಾಲತ್ತು, ಶಿಫಾರಸುಗಳು ಕೆಲಸ ಮಾಡುವುದಿಲ್ಲ.

ಮುಖಪುಟ / ಸಾಹಿತ್ಯ ಸೊಗಡು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+