ಮಲೆನಾಡಿನಾ ಮಳೆಹಾಡಿನಾ ಪಿಸು ಮಾತಿನಾ ಹೊಸತನ... ಸವಿದೆನಾ...
ಮಳೆಗಾಲದ ನೈಜ ಸೊಬಗನ್ನು ಅನುಭವಿಸುವ ಮನಸ್ಸಿರುವವರು ಒಂದೇ ಒಂದು ಮಳೆಗಾಲ ಮಲೆನಾಡಿಗೆ ಹೋಗಬೇಕು. ಮಳೆ ಅಂದ್ರೆ ಬರೀ ನೀರಲ್ಲ, ಜೀವನ ಪ್ರೀತಿಯ ರಸಧಾರೆ ಎಂಬುದು ಅರ್ಥವಾಗುವುದು ಆಗಲೇ!
ಮಳೆ ಅಂದ್ರೆ ಬರೀ ನೀರಲ್ಲ, ಜೀವನ ಪ್ರೀತಿಯ ರಸಧಾರೆ ಎಂಬುದು ಅರ್ಥವಾಗಬೇಕಂದ್ರೆ ಮಲೆನಾಡಿನ ಮಳೆಗಾಲ ನೋಡಬೇಕು. ಮಳೆ ಋತುನಿಯಮದ ನೀರಸ ಪ್ರಕ್ರಿಯೆ ಅನ್ನಿಸದೆ, ಸೃಷ್ಟಿಯ ಅವಿಭಾಜ್ಯ ಅಂಗ ಅನ್ನಿಸೋದು ಆಗಲೇ.
ಮಲೆನಾಡು, ಕರಾವಳಿ, ಅರೆಮಲೆನಾಡಿನ ಪ್ರದೇಶಗಳಲ್ಲಿ ಮಳೆಗಾಲದ ಸ್ವಾಗತ ಅಂದ್ರೆ ಯಾವ ಅದ್ಧೂರಿ ಮದುವೆ ತಯಾರಿಗೂ ಕಡಿಮೆ ಇರೋಲ್ಲ. ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಆರಂಭವಾಗುವ ಮುಂಗಾರಿಗೆ ಮಾರ್ಚ್ ಅಂತ್ಯದಿಂದಲೇ ತಯಾರಿ ಶುರುವಾಗಿರುತ್ತೆ.
[ಮುಂಗಾರಿನ ಅಭಿಷೇಕಕ್ಕೆ ಕಾದಿದೆ ನನ್ನ ಮೈಮನ : ಮಲೆನಾಡ ಹುಡುಗಿ]
ಸೌದೆ ಸಂಗ್ರಹ, ಅಡಿಕೆ ಹಾಳೆಯನ್ನು ಸೋಗೆಯಿಂದ ಬೇರ್ಪಡಿಸಿ ಕಟ್ಟು ಕಟ್ಟಿ ಹಿತ್ತಲ ಮನೆಯಲ್ಲಿ ದಾಸ್ತಾನುಮಾಡುವುದು, ಮನೆಯ ಒಡೆದ ಹೆಂಚುಗಳನ್ನು ತೆಗೆದು ಹೊಸ ಹೆಂಚುಗಳನ್ನು ಹಾಕುವುದು, ಮನೆಯ ಹಿಂದಿರುವ ತೆಂಗಿನ ಮರದ ಕಾಯಿಗಳನ್ನೆಲ್ಲ ಕೀಳಿಸಿ, ಗಾಳಿಗೆ ತೆಂಗಿನ ಸೋಗೆಗಳು ಬೀಳದಂತೆ ಅವನ್ನೆಲ್ಲ ಮೊದಲೇ ಕಡಿದು ಹಾಕುವುದು, ಮನೆ ಸುತ್ತ-ಮುತ್ತಲ ಚರಂಡಿಗಳಲ್ಲಿ ನೀರು ಸರಿಯಾಗಿ ಹೋಗುತ್ತಿದೆಯೇ ಎಂದು ಪರೀಕ್ಷಿಸುವುದು, ನಾಲ್ಕು ತಿಂಗಳಿಗಾಗುವಷ್ಟು ದಿನಸಿ ಸಂಗ್ರಹ... ಈ ಎಲ್ಲ ಕೆಲಸಗಳೂ ಮೇ ಆರಂಭದ ಹೊತ್ತಿಗೇ ಮುಗಿದಿರುತ್ತವೆ.[ಮುದ್ದಾದ ನೆನಪುಗಳ ಬಿಚ್ಚಿಡುವ ಬೆಂಗಳೂರಿನ ಮಳೆ!]
ಮೇ ಅಂತ್ಯದೊಳಗೆ ಹೆಂಗಸರು ಕುರುಕುಲು ತಿಂಡಿ ಮಾಡುವುದರಲ್ಲಿ ಬ್ಯುಸಿ! ಮಳೆಗಾಲದ ಚಳಿಗೆ ಮನೆಯೊಳಗೆ ಬೆಚ್ಚಗೆ ಕೂತು ತರಹೇವಾರಿ ಕುರುಕುಲು ತಿಂಡಿ ತಿನ್ನುವ ಸೊಬಗೇ ಬೇರೆ! ಹೌದು, ಇವೆಲ್ಲ ಮಲೆನಾಡಿನ ಮಳೆಯ ಸೊಬಗು. ಆದರೆ ಈ ಸೊಬಗಿನಾಚೆ ಮಳೆಗಾಲದಲ್ಲಿ ಇಲ್ಲಿನ ಜನರ ಸಾಹಸದ ಬದುಕೊಂದಿದೆ.[ಜಗತ್ತಿನ ಅತ್ಯಂತ ರೋಮ್ಯಾಂಟಿಕ್ ಸಂಸ್ಥೆ ಅಂದ್ರೆ ನಮ್ಮ ಬೆಸ್ಕಾಂ!]
ಜೂನ್ ನಿಂದ ಆರಂಭವಾಗಿ ಬಹುಪಾಲು ಸೆಪ್ಟೆಂಬರ್ ಕೊನೆಯವರೆಗೂ ಬಿಡದೆ ಸುರಿಯುವ ಮಳೆಗೆ ವಿದ್ಯುತ್ ಹೇಳ ಹೆಸರಿಲ್ಲದಂತೆ ಮಾಯವಾಗಿರುತ್ತದೆ, ರಸ್ತೆಗಳು ವಾಹನ ಸಂಚಾರಕ್ಕೆ ಸಾಧ್ಯವೇ ಇಲ್ಲ ಎಂಬಷ್ಟು ಕೆಟ್ಟಿರುತ್ತವೆ. ರಸ್ತೆಯ ನಡುವಲ್ಲಿ ಹೊಂಡಗಳಲ್ಲ, ಹೊಂಡಗಳ ನಡುವಲ್ಲಿ ನಿಮ್ಮ ಅದೃಷ್ಟಕ್ಕೇನಾದರೂ ರಸ್ತೆ ಕಾಣಿಸಿದರೆ ಅದು ಸಾಧನೆಯೇ ಸರಿ ಎಂಬಂತಾಗಿರುತ್ತದೆ.[ಸೈಕ್ಲೋನ್ ಮೋರಾದಿಂದ ಮುಂಗಾರು ಮತ್ತೆ ಮುಂದಕ್ಕೆ]

ದ್ವೀಪದಂಥ ಬದುಕು
ಕಾಡಿನ ನಡುವಿನ ಕುಗ್ರಾಮದಲ್ಲಿ ಸರಿ ಸುಮಾರು ಮೂರು ತಿಂಗಳ ಕಾಲ ದ್ವೀಪದಂತೆ ಬದುಕಬೇಕಾದ ಪರಿಸ್ಥಿತಿಯಲ್ಲೂ ಮಳೆಗಾಲವನ್ನು ಸಂಭ್ರಮಿಸುತ್ತಾರೆ ಇಲ್ಲಿನ ಜನ. ಮಳೆಗಾಲ ಒಮ್ಮೆ ಆರಂಭವಾಯಿತಂದ್ರೆ ದಿನಬಳಕೆಯ ವಸ್ತುವನ್ನು ತರುವುದಕ್ಕೆ ಪೇಟೆ ಕಡೆ ಹೋಗುವುದಕ್ಕೂ ಸಾಧ್ಯವಿಲ್ಲದ ಸ್ಥಿತಿ ಅಲ್ಲಿ ನಿರ್ಮಾಣವಾಗುತ್ತದಾದ್ದರಿಂದ ಒಂದು ಬೆಂಕಿಪೊಟ್ಟಣವನ್ನೂ ಮರೆಯದೆ ತಂದಿಟ್ಟುಕೊಳ್ಳಬೇಕು!

ಆದರೂ ಮಳೆಯಂದ್ರೆ ಸಂಭ್ರಮ
ಇಷ್ಟೆಲ್ಲ ಅನಾನುಕೂಲತೆಗಳಿದ್ದರೂ, ಮಲೆನಾಡಿನ ಯಾರೊಬ್ಬರೂ ಮಳೆಯನ್ನು ತಮಾಷೆಗೂ ಬೈಯುವುದಿಲ್ಲ. ಯಾಕಂದ್ರೆ ಮಳೆ ಅನ್ನ ನೀಡುತ್ತಿರುವ ದೇವತೆ ಅನ್ನೋದು ಆ ಜನರಿಗೆ ಗೊತ್ತು. ಅತಿ ವೃಷ್ಠಿಗೂ, ಅನಾವೃಷ್ಠಿಗೂ ಮನುಷ್ಯನ ದುರಾಸೆಯನ್ನೇ ಬೈದಾರೇ ಹೊರತು ಮಳೆಯನ್ನುಶಪಿಸಿದವರಲ್ಲ.

ವರುಣ ದೇವನಿಗೆ ಶಾಪಹಾಕುವವರಲ್ಲ!
ವರುಣ ದೇವನಿಗೆ ಪೂಜೆ ಸಲ್ಲಿಸಿ, ಮಳೆಗಾಲವನ್ನು ಸ್ವಾಗತಿಸುವ ಇಲ್ಲಿನ ಜನರು, ಬಿತ್ತಿದ ಬೀಜಗಳೇ ಕೆಲವೊಮ್ಮೆ ಮಳೆಯಲ್ಲಿ ಕೊಚ್ಚಿಕೊಂಡು ಹೋಗಿರುತ್ತದೆ. ಅತಿ ವೃಷ್ಠಿಗೆ ನೆಟ್ಟ ಸಸಿಗಳೆಲ್ಲ ಕೊಳೆತುಹೋಗಿರುತ್ತವೆ. ಪ್ರತಿವರ್ಷ ಇಂಥ ಸನ್ನಿವೇಶಗಳನ್ನು ಎದುರಿಸಲೇಬೇಕಾದರೂ ಇಲ್ಲಿನ ಜನರು ವರುಣನಿಗೆ ಮಾತ್ರ ಕನಸಿನಲ್ಲಿಯೂ ಶಾಪ ಹಾಕುವವರಲ್ಲ.

ಹೊಳೆ ದಾಟುವ ಸಾಹಸ
ಊರಿನ ಸಾಲು ಮನೆಗಳ ಎದುರಿನಲ್ಲೊಂದು ದೊಡ್ಡ ಅಂಗಳ, ಅಂಗಳದಾಚೆ ಹೊಳೆ, ಹೊಳೆಯಾಚೆ ತೋಟ ಇದು ಮಲೆನಾಡಿನ ಬಹುಪಾಲು ಮನೆಗಳ ಚಿತ್ರಣ. ತೋಟಕ್ಕಾಗಲೀ, ಶಾಲೆಗಾಗಲೀ ಹೋಗಬೇಕಂದ್ರೆ ಹೊಳೆ ದಾಟಿಯೇ ಹೋಗಬೇಕು. ಮಳೆಗಾಲದಲ್ಲಿ ತುಂಬುವ ಹೊಳೆಯನ್ನು ದಾಟಿ ಹೋಗುವುದಂದ್ರೆ ಸಾಹಸವೇ ಸರಿ.

ಮಕ್ಕಳಿಗಂತೂ ರಜೆಯ ಮಜಾ..!
ಜೂನ್ ನಿಂದ ಹಿಡಿದು ಆಗಸ್ಟ್ ಅವರೆಗೂ ಶಾಲೆಗೆ ಹೋಗುವ ಮಕ್ಕಳಿಗೆ ಅರ್ಧಕರ್ಧ ದಿನ ರಜವೇ. ಶಾಲೆಗೆ ರಜಾ ಸಿಕ್ಕುತ್ತದೆಂಬ ಕಾರಣಕ್ಕೇ ಮಳೆ ಇನ್ನಷ್ಟು ಜೋರಾಗಿ ಬರಲಿ ಎಂದು ಹಾರೈಸುವ ಮಕ್ಕಳೂ ಸಿಗುತ್ತಾರೆ!

ಜಲಲ ಜಲಲ ಜಲಧಾರೆ...
ಜಲಪಾತಗಳು ತವರು ಎನ್ನಿಸಿರುವ ಉತ್ತರ ಕನ್ನಡ ಜಿಲ್ಲೆ, ಚಿಕ್ಕಮಗಳೂರು, ಶಿವಮೊಗ್ಗ, ಮಂಗಳೂರು ಎಲ್ಲವೂ ಮಳೆಗಾಲದಲ್ಲಿ ಮದುವಣಗಿತ್ತಿಯ ಕಳೆಯನ್ನು ಮೈಗಂಟಿಸಿಕೊಂಡು ನಲಿಯುತ್ತವೆ. ಇಲ್ಲಿನ ಜಲಪಾತಗಳಿಗೆ ಮರುಹುಟ್ಟು ನೀಡುವ ಮಳೆಗಾಲದಲ್ಲಿ ಪ್ರವಾಸಕ್ಕೆ ಹೋಗೋದೇ ಸೊಗಸು. ಆದರೆ ಆ ಸಮಯದ ಪ್ರವಾಸ ಅಷ್ಟೇ ಅಪಾಯಕಾರಿ ಎಂಬುದನ್ನೂ ಮರೆಯುವಂತಿಲ್ಲ.

ಎಲ್ಲೆಲ್ಲೂ ಹಸಿರು ತುಂಬಿ...
ಬೇಸಿಗೆಯ ಬಿಸಿಲಿಗೆ ಒಣಗಿ ನಿರ್ಜೀವವಾಗಿ ನಿಂತಿದ್ದ ಮರಗಳು, ಇದ್ದಕ್ಕಿದ್ದಂತೆ ಮಳೆಯ ಮಾಂತ್ರಿಕ ಸ್ಪರ್ಶದಿಂದ ಹಸಿರಂಗಿ ತೊಟ್ಟು ನಲಿಯುತ್ತವೆ ಪ್ರಕೃತಿಯ ರಮಣೀಯತೆಯ ನಡುವೆ, ಹಾವು, ಚೇಳು, ಜಿಗಣೆಯಂಥ ಕ್ರಿಮಿಕೀಟಗಳು ಮನೆಯೊಳಗೇ ಬಂದು ಪ್ರಾಣಘಾತುಕ ಸಂದರ್ಭಗಳು ಎದುರಾಗುವುದು ಮಳೆಗಾಲದಲ್ಲಿ ಇಲ್ಲಿ ಮಾಮೂಲು. ಇದಕ್ಕೆಲ್ಲ ಹೆದರದೆ ಮಳೆಗಾಲದ ಸಂಭ್ರವನ್ನಷ್ಟೇ ಅರಸುವ ಮಲೆನಾಡಿಗರದು ಗಟ್ಟಿ ಗುಂಡಿಗೆಯಲ್ಲದೆ ಮತ್ತೇನು?!
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
IMD Weather Forecast: ದೇಶದ ಈ ಭಾಗಗಳಲ್ಲಿ ಮಾರ್ಚ್ ಅಂತ್ಯದಲ್ಲಿ ಭಾರೀ ಮಳೆ ಮುನ್ಸೂಚನೆ: ಐಎಂಡಿ ಎಚ್ಚರಿಕೆ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ












Click it and Unblock the Notifications