Get Updates
Get notified of breaking news, exclusive insights, and must-see stories!

ಇವರಿಗೆ ಕೊಳೆಗೇರಿ ನೋಡುವ ತವಕವಂತೆ!

A still from Slum Dog Millionaire
'ಸ್ಲಂಡಾಗ್ ಮಿಲಿಯನೇರ್' ಚಿತ್ರದ ಬಗ್ಗೆ ಫ್ರಾಂಕ್ವಾ ಗೋತಿಯೆ ಅವರು ಬರೆದು ಡಾ. ಮೈ.ಶ್ರೀ.ನಟರಾಜರು ಅನುವಾದಿಸಿದ ಲೇಖನವನ್ನು ಈ ಜಾಲತರಂಗದಲ್ಲಿ ಈಚೆಗಷ್ಟೇ ಓದಿದಿರಿ. ಸದರಿ ಚಿತ್ರದ ಬಗ್ಗೆ ನಟರಾಜರ ಇನ್ನೊಂದು ಬರಹವನ್ನೂ 'ಜಾಲತರಂಗ'ದಲ್ಲಿ ಹಾಗೂ ನನ್ನ ಲೇಖನವನ್ನೂ ಕೂಡ ನೀವೆಲ್ಲ ಓದಿದ್ದೀರಿ. ಇದೀಗ ನನ್ನ ಅನುಭವವೊಂದನ್ನು ಇಲ್ಲಿ ದಾಖಲಿಸಲಿಚ್ಛಿಸುತ್ತೇನೆ.

'ಸ್ಲಂಡಾಗ್ ಮಿಲಿಯನೇರ್' ಬಗ್ಗೆ ನನ್ನ ಬರಹವು ಈ ಜಾಲತರಂಗದಲ್ಲಿ ಪ್ರಕಟವಾದ ಆಸುಪಾಸಿನ ಒಂದು ದಿನ ನಾನು ತಮಿಳುನಾಡಿನ ತಿರುವಣ್ಣಾಮಲೈನಿಂದ 37 ಕಿ.ಮೀ. ದೂರದ ಜಿಂಜಿ ಎಂಬ ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಬೆಟ್ಟಗಳಮೇಲಿರುವ ರಾಜಗಿರಿ ಕೋಟೆ ಮತ್ತು ಕೃಷ್ಣಗಿರಿ ಕೋಟೆ ಎಂಬೆರಡು ಕೋಟೆಗಳನ್ನು ನೋಡಲು ಬೆಟ್ಟ ಹತ್ತುತ್ತಿದ್ದೆ. ಒಂದಷ್ಟು ಮಂದಿ ಬಿಳಿ ತೊಗಲಿನ ವಿದೇಶೀಯರೂ ಬೆಟ್ಟವೇರುತ್ತಿದ್ದರು. ಫ್ರೆಂಚರೇ ಬಹುಸಂಖ್ಯೆಯಲ್ಲಿದ್ದ ಅವರಲ್ಲಿ ಅಮೆರಿಕನ್ನರೂ ಮತ್ತು ಬ್ರಿಟಿಷರೂ ಇದ್ದರು. ಬಹುತೇಕ ಎಲ್ಲರ ಕೈಲೂ ಸ್ಥಿರಚಿತ್ರ ಕ್ಯಾಮೆರಾ/ವಿಡಿಯೊ ಕ್ಯಾಮೆರಾ ಇತ್ತು. ಕೋಟೆಕೊತ್ತಲಗಳಿಗಿಂತ ಹೆಚ್ಚಾಗಿ ಅವರೆಲ್ಲ ಸುತ್ತಮುತ್ತಲ ಭಿಕ್ಷುಕರನ್ನು, ಬೀದಿಮಕ್ಕಳನ್ನು ಮತ್ತು ರಸ್ತೆಬದಿಯಲ್ಲೋ ಗುಡಿಸಲ ಹೊರಗೋ ಸುಮ್ಮನೆ ಕುಳಿತಿದ್ದ ಬಡಜನರನ್ನು ತಮ್ಮ ಕ್ಯಾಮೆರಾಗಳಲ್ಲಿ ಚಿತ್ರೀಕರಿಸುತ್ತಿದ್ದರು.

ಅವರೊಡನೆ ನಾನು ಮಾತಿಗಿಳಿದಾಗ ತಿಳಿದುಬಂದ ಆಘಾತಕಾರಿ ಸಂಗತಿಯೆಂದರೆ ಅವರ ಪೈಕಿ ಹಲವರು ಕೊಳೆಗೇರಿಯನ್ನು ನೋಡಿ ಚಿತ್ರೀಕರಿಸಲೆಂದೇ ಮರುದಿನ ಚೆನ್ನೈಗೆ ಹೋಗುವವರಿದ್ದರು. 'ಸ್ಲಂಡಾಗ್..' ಚಿತ್ರ ನೋಡಿದ ನಂತರ ಅವರಿಗೆ ಈ 'ಬಯಕೆ' ಉಂಟಾಯಿತಂತೆ! ಚೆನ್ನೈನಲ್ಲಿ 'ಅದ್ಭುತ ಕೊಳೆಗೇರಿ' ತೋರಿಸುವುದಾಗಿ ಚೆನ್ನೈನ ಇವರ ಮಿತ್ರರ್ಯಾರೋ ಇವರಿಗೆ ಆಶ್ವಾಸನೆ ನೀಡಿದ್ದಾರಂತೆ. ತಮ್ಮ ದೇಶಕ್ಕೆ ಮರಳಿದಮೇಲೆ ಇವರು ತಾವಿಲ್ಲಿ ಚಿತ್ರೀಕರಿಸಿದ ಕೊಳೆಗೇರಿ ದೃಶ್ಯಗಳನ್ನು ತಮ್ಮ ಬಂಧು-ಮಿತ್ರರಿಗೆ ತೋರಿಸುತ್ತಾರಂತೆ. ಜಿಂಜಿಯಲ್ಲಿ ತೆಗೆದ ಭಿಕ್ಷುಕರ ಮತ್ತು ಬಡಜನರ ಫೋಟೋಗಳ ಸ್ಲೈಡ್ ಷೋವನ್ನು ತಮ್ಮ ದೇಶದಲ್ಲಿ ಏರ್ಪಡಿಸುತ್ತಾರಂತೆ!

ನನ್ನೆಡೆ ದಿಟ್ಟಿಸುತ್ತ, 'ನೀವು ಇನ್ನೂ ಉದ್ಧಾರ ಆಗಿಲ್ಲ ಅಲ್ವೆ, ಪಾಪ!' ಎಂಬ ಉದ್ಗಾರ ಬೇರೆ ಹೊರಡಿಸಿದರು ಈ ಧೂರ್ತರು. ಬೆಟ್ಟವೇರಿ ಮೊದಲೇ ಬೆವರಿದ್ದ ಇವರೊಡನೆ ಸಖ್ಖತ್ ವಾದಕ್ಕಿಳಿದ ನಾನು ಇನ್ನಷ್ಟು ಇವರ ಬೆವರಿಳಿಸಿದೆ. ಆದರೆ, ಇವರ 'ಚೆನ್ನೈ ಕೊಳೆಗೇರಿ ಕಾರ್ಯಕ್ರಮ'ದಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ!

ಮರುದಿನ ನಾನು ತಿರುವಣ್ಣಾಮಲೈನಲ್ಲಿ ರಮಣ ಮಹರ್ಷಿಗಳ ಸ್ಕಂದಾಶ್ರಮ ಮತ್ತು ವಿರೂಪಾಕ್ಷ ಗುಹೆಗಳನ್ನು ಸಂದರ್ಶಿಸಲು ಬೆಟ್ಟವೇರುತ್ತಿದ್ದಾಗ ಅಲ್ಲಿಯೂ ಸುತ್ತಮುತ್ತೆಲ್ಲ ವಿದೇಶೀಯರೇ ಕಂಡುಬಂದರು. ಬಹಳಷ್ಟು ಮಂದಿಯನ್ನು ನಾನು ಮಾತನಾಡಿಸಿದೆ. ಆಶ್ಚರ್ಯವೆಂದರೆ, ಅವರೆಲ್ಲರೂ 'ಸ್ಲಂಡಾಗ್..' ಚಿತ್ರವನ್ನು ನೋಡಿದ್ದರು, ಇಲ್ಲವೇ ಅದರ ಬಗ್ಗೆ ಸಾಕಷ್ಟು ಅರಿತಿದ್ದರು. ಆ ಚಿತ್ರವು ನೈಜ ಭಾರತವನ್ನು ಪ್ರತಿಬಿಂಬಿಸುತ್ತದೆಂಬುದು ಅವರ ಅಭಿಪ್ರಾಯವಾಗಿತ್ತು. ಅರವಿಂದ ಅಡಿಗನ 'ವೈಟ್ ಟೈಗರ್' ಕೃತಿಯನ್ನು ಅವರಲ್ಲಿ ಬಹುತೇಕರು ಓದಿದ್ದರು. 'ಇಂಥ ನರಕದಲ್ಲಿ ನೀವು ಅದು ಹೇಗೆ ಜೀವಿಸುತ್ತೀರಿ?' ಎಂದು ಅವರು ನನ್ನನ್ನು ಪ್ರಶ್ನಿಸಿದರು.

'ನರಕ ನಮ್ಮ ದೇಶವಲ್ಲ, ನಿಮ್ಮ ಮನಸ್ಸು', ಎಂಬುದನ್ನು ಅವರಿಗೆ ಮನದಟ್ಟು ಮಾಡಿಕೊಡಲು ನಾನು ಸಾಕಷ್ಟು ಹೆಣಗಾಡಿದೆ. ಅವರಿಗೆ ಗುಣಾತ್ಮಕ ಭಾರತದ ಬಗ್ಗೆ ತಿಳಿವಳಿಕೆ ನೀಡುವಲ್ಲಿ ನಾನು ಸಾಕಷ್ಟು ಯಶಸ್ವಿಯೇನೋ ಆದೆ. ಆದರೆ, ಮುಂಬೈನ ಧಾರಾವಿಯ 'ಕೊಳಕನ್ನು', ಮತ್ತು, ಅಲ್ಲಿ 'ಭಿಕ್ಷಾಟನೆಗೆ ಹಚ್ಚಲಿಕ್ಕಾಗಿ ಮಕ್ಕಳನ್ನು ಅಪಹರಿಸಿ ಅಂಗಾಂಗ ಊನಗೊಳಿಸುವ ಮಾಫಿಯಾವನ್ನು' ('ಸ್ಲಂಡಾಗ್..' ಚಿತ್ರದಲ್ಲಿ ಇಂಥದನ್ನೆಲ್ಲ ತೋರಿಸಲಾಗಿದೆ) ನೋಡಲು (ಸವಿಯಲು!) ಹಾಗೂ ಚಿತ್ರೀಕರಿಸಿಕೊಳ್ಳಲು ಮುಂಬೈಗೆ ಹಾರಲಿರುವ ಅವರಲ್ಲಿನ ಕೆಲವರ ನಿರ್ಧಾರವನ್ನು ತಿದ್ದುವಲ್ಲಿ ನಾನು ವಿಫಲನಾದೆ. 'ಸ್ಲಂಡಾಗ್..' ಮತ್ತು 'ವೈಟ್ ಟೈಗರ್'ಗಳು ಅವರ ಮನಸ್ಸಿನ ಮೇಲೆ ಅಂಥ ಭಾರೀ ಪರಿಣಾಮವನ್ನು ಉಂಟುಮಾಡಿದ್ದವು.

ಫ್ರೆಂಚರಾಗಿರಲೀ ಬ್ರಿಟಿಷರಾಗಿರಲೀ ಅಮೆರಿಕನ್ನರಾಗಿರಲೀ, ಅವರು ಜಿಂಜಿ ಕೋಟೆ ನೋಡಲು ಬಂದ ಇತಿಹಾಸಪ್ರಿಯರಾಗಿರಲೀ ರಮಣಾಶ್ರಮಕ್ಕೆ ಬಂದ ಅಧ್ಯಾತ್ಮಜಿಜ್ಞಾಸುಗಳಾಗಿರಲೀ, ಬಿಳಿದೊಗಲಿನ ಈ ವಿದೇಶೀಯರಿಗೆ ಭಾರತದ ಕೊಳೆಗೇರಿಯನ್ನು ನೋಡುವ ತವಕ. ಇಡೀ ಭಾರತವನ್ನೇ ಕೊಳೆಗೇರಿಯೆಂದು ತೀರ್ಮಾನಿಸಿಬಿಡುವ ತವಕ. ಪ್ರಪಂಚದ ಬಹುಪಾಲು ರಾಷ್ಟ್ರಗಳಿಗೆ ಹೋಲಿಸಿದಾಗ ಸ್ವರ್ಗಸಮಾನವೆನ್ನಿಸುವ ಈ ನಮ್ಮ ಭವ್ಯ ಭಾರತವನ್ನು ನರಕವೆಂದು ಕರೆಯುವ ಕುಹಕ. ಹೀಗಿರುವಾಗ 'ಸ್ಲಂಡಾಗ್ ಮಿಲಿಯನೇರ್' ಚಿತ್ರವನ್ನು ನಾವು (ಭಾರತೀಯರು) ತಲೆಮೇಲೆ ಹೊತ್ತುಕೊಂಡು ಕುಣಿಯಬೇಕೇ?

ಪೂರಕ ಓದಿಗೆ
'ಸ್ಲಂಡಾಗ್..': ನೋ ಆಸ್ಕರ್, ನೋ ಟೆಲ್ಲರ್!

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+