ಧನ,ಕನಕ ಸಮೃದ್ಧಿಗೆ ಮತ್ತೆ ಬಂದಿದೆ ಅಕ್ಷಯ ತೃತೀಯ
ಮೇ 7 ರಂದು ಅಕ್ಷಯ ತೃತೀಯ ದಿನ. ಸುವರ್ಣ ವ್ಯವಹಾರದ ಶುಭ ದಿನವೆಂದು ಈ ದಿನವನ್ನು ಕರೆಯಲಾಗುತ್ತಿದೆ. ಈ ದಿನದಲ್ಲಿ ಏನೇ ಕೊಂಡರೂ ಮಂಗಳಕರ ಎನ್ನಲಾಗುತ್ತಿದೆ. ಮುಹೂರ್ತ ನೋಡುವಾಗಲಂತೂ ವರ್ಷದ ಮೂರುವರೆ ಶುಭಯೋಗಗಳಲ್ಲಿ ಇದು ಒಂದಾದರೂ ಇದಕ್ಕಿರುವ ಮಹತ್ವ ಉಳಿದವುಗಳಿಗಿಲ್ಲ. ಹಾಗಾದರೆ ಅಕ್ಷಯ ತೃತೀಯ ಏನಿದರ ಮರ್ಮ.
ವೈಶಾಖ ಶುಕ್ಲ ತೃತೀಯ, ಅಕ್ಷಯ ತೃತೀಯ ಎಂದೇ ಜನಜನಿತ. ಭಾರತೀಯ ಪರಂಪರೆಯಲ್ಲಿ ಯಾವುದೇ ಶುಭಾರಂಭಕ್ಕೆ ಯುಗಾದಿ ಹಾಗೂ ವಿಜಯದಶಮಿಯಷ್ಟೆ ಮಹತ್ವ ಪಡೆದಿರುವ ಇನ್ನೊಂದು ದಿನ ಈ ಅಕ್ಷಯ ತೃತೀಯ. ಕೃಷಿ ಚಟುವಟಿಕೆ ಆರಂಭಕ್ಕೂ ಇದೇ ದಿನ ಶ್ರೇಷ್ಠ. ಈ ದಿನದಂದು ಆಭರಣ, ವಾಹನ ಇನ್ನಿತರ ಸಿರಿ ಸಂಪತ್ತು ಖರೀದಿಸಿದರೆ ಭಾಗ್ಯದ ಬಾಗಿಲು ತೆರೆಯುತ್ತದೆ ಎಂಬ ಬಲವಾದ ನಂಬಿಕೆ. ಗೃಹ ಪ್ರವೇಶ, ಮದುವೆ ಇತ್ಯಾದಿ ಶುಭ ಕಾರ್ಯಗಳಿಗೆ ಪ್ರಶಸ್ತವಾದ ದಿನ. ಈ ದಿನದಲ್ಲಿ ತೈಲ ಮಜ್ಜನವನ್ನು ಮಾಡಲಾಗುತ್ತದೆ.
ಅಕ್ಷಯ ತೃತೀಯ ಸತ್ಯಯುಗದ ಆರಂಭದ ದಿನ. ಅಂದರೆ ಕ್ರಿಸ್ತ ಪೂರ್ವ 4ರ ಸುಮಾರಿಗೆ ಯುಗಾದಿಯಂದು ಸಂಭವಿಸುತ್ತಿತ್ತು. ಪ್ರಾಚೀನ ಗ್ರಂಥಗಳಲ್ಲಿ ಇದಕ್ಕೆ ಮನ್ನಣೆ ದೊರೆಯಲು ಅದು ಮುಖ್ಯ ಕಾರಣ. ಕ್ರಮೇಣ ಭೂಚಲನೆಯಿಂದ ಯುಗಾದಿ ಹಿಂದಕ್ಕೆ ಹೋಯಿತು. ಆದರೆ ಈ ದಿನದ ಮಹತ್ವ ಹಾಗೇ ಉಳಿಯಿತು. ಯಾವ ಕಾರಣದಿಂದಾಗಲೀ ಯುಗಾದಿ ಆಚರಣೆ ಕೈತಪ್ಪಿಹೋದರೆ ಈ ದಿನ ಆಚರಿಸಬಹುದೆಂದು ಧರ್ಮಸಿಂಧುಕಾರರು ಅಭಿಪ್ರಾಯಪಡಲು ಇದೇ ಕಾರಣವಾಗಿದೆ.
ಅಕ್ಷಯ ತೃತೀಯ ದಿನದಂದು ಚಿನ್ನ ಮತ್ತು ವಜ್ರ ವ್ಯಾಪಾರ ಬೃಹತ್ ಪ್ರಮಾಣದಲ್ಲಿ ನಡೆಯುತ್ತದೆ. ಈ ದಿನದಂದು ಆಭರಣ ಕೊಂಡರೆ ಶುಭಕರ ಎನ್ನುವುದು ವ್ಯಾಪಾರಕ್ಕೆ ಪುಷ್ಠಿ ನೀಡುತ್ತದೆ. ಈ ಕಾರಣದಿಂದ ನಗರಾದ್ಯಂತ ಇರುವ ಚಿನ್ನದ ಅಂಗಡಿಗಳು ಗ್ರಾಹಕರನ್ನು ಸೆಳೆಯಲು ರಿಯಾಯಿತಿ ಅಮಿಷಗಳನ್ನು ಒಡ್ಡುತ್ತವೆ. ಇತ್ತೀಚಿನ ದಿನಗಳಲ್ಲಿ ಚಿನ್ನವನ್ನು ಕೊಳ್ಳುವವರ ಸಂಖ್ಯೆ ಜಾಸ್ತಿಯಾಗತೊಡಗಿದ್ದು, ಅಂಗಡಿಯ ಮಾಲೀಕರು ಕೂಡಾ ಗ್ರಾಹಕರನ್ನು ಸೆಳೆಯಲು ಸ್ಪರ್ಧೆಗೆ ಇಳಿದಿದ್ದಾರೆ.
ಅಕ್ಷಯ ತೃತೀಯ ದಿನದಂದು ವಜ್ರಗಳ ಮಾರಾಟ ಭಾರೀ ಪ್ರಮಾಣ ನಡೆಯುವುದರಿಂದ ಕಡಿಮೆ ದರದಲ್ಲಿಯೂ ಕೂಡಾ ವಜ್ರ ದೊರೆಯುವ ವ್ಯವಸ್ಥೆಯನ್ನು ಮಾಡಲಾಗಿದೆ. ಜನಸಾಮಾನ್ಯರಿಗೂ ವಜ್ರಗಳು ತಲುಪಿಸುವ ಉದ್ದೇಶದಿಂದ ಕೇವಲ 2 ಸಾವಿರ ರೂಪಾಯಿಗೆ ಪುಟ್ಟ ವಜ್ರ ದೊರೆಯುವಂತೆ ಮಾಡಲಾಗಿದೆ ಎನ್ನುತ್ತಾರೆ ರಿಚ್ ಮಂಡ್ ರಸ್ತೆಯಲ್ಲಿರುವ ಕೀರ್ತಿಲಾಲ್ ಜ್ಯುವೆಲ್ಲರಿ ಬ್ರಾಂಚ್ ಮ್ಯಾನೇಜರ್ ರಾಮಕೃಷ್ಣ , ನಮ್ಮಲ್ಲಿ ಅಪರೂಪ ಎನ್ನುವ ಆಭರಣಗಳು ಲಭ್ಯವಿದ್ದು, 2 ಸಾವಿರದಿಂದ ಆರಂಭವಾಗುವ ವಜ್ರದ ದರ 10 ಲಕ್ಷದವರೆಗೊ ಇದೆ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಅಕ್ಷಯ ತೃತೀಯ ಹಬ್ಬ ಚಿನ್ನ ಕೊಳ್ಳುವವರಿಗೂ ವರದಾನ, ಮಾರಾಟಗಾರರಿಗೂ ಬಂಪರ್ ಬಹುಮಾನ ನೀಡಿರುವುದು ಸುಳ್ಳಲ್ಲ.
ಮಾಹಿತಿ: ದಟ್ಸ್ ಕನ್ನಡ ಡೆಸ್ಕ್












Click it and Unblock the Notifications